ಕಿಯಾಂಗ್ ನಾಂಗ್ಬಾ ಮೇಘಾಲಯದ ಸ್ವಾತಂತ್ರ್ಯದ ಅಮರ ಚೇತನ
Team Udayavani, May 20, 2018, 9:11 AM IST
ಅಂದು 1862ರ ದಶಂಬರ 30. 19ನೆಯ ಶತಮಾನದ ಆ ವರ್ಷ ಉರುಳಿ ಇನ್ನೊಂದು ವರುಷದ ಹರುಷ ತರಲು ಕೇವಲ ಇನ್ನೊಂದೇ ದಿನ ಬಾಕಿ ಉಳಿದಿತ್ತು. ಮೇಘಾಲಯದ ಗಿರಿ, ಕಂದರಗಳ ಮಧ್ಯೆ ಹರಡಿನಿಂತ ಹಳ್ಳಿಗಳ ಚರ್ಚ್ಗಳಲ್ಲಿ ಕ್ರಿಸ್ಮಸ್ ಆಚರಣೆಯ ಗಂಟೆಗಳು ಇನ್ನೂ ಮೊಳಗುತ್ತಲೇ ಇದ್ದವು. ಸೂರ್ಯ ಮುಳುಗದ ಸಾಮ್ರಾಜ್ಯದ ಕರಿಛಾಯೆ, ಮೇಘಗಳ ಆ ಸುಂದರ ರಾಜ್ಯದಲ್ಲಿ ಪಸರಿಸಿತ್ತು. ತಮ್ಮ ಮೂಲ ನಂಬಿಕೆಗಳಿಗೆ ಮಾತ್ರವಲ್ಲ , ಸಹಸ್ರಾರು ವರ್ಷಗಳಿಂದ ಬೆಳೆದು ನಿಂತಿದ್ದ ಪರಂಪರೆ, ಜೀವನ ಪದ್ಧತಿಯ ಎಲ್ಲಾ ಬೇರುಗಳೂ ಆಂಗ್ಲರ ಆಳ್ವಿಕೆ ತರಿಯುತ್ತಿದ್ದವು.
ಈ ತೆರನಾದ ಪರಕೀಯರ ದಬ್ಟಾಳಿಕೆ, ಸ್ವಂತಿಕೆಗೆ ಮರ್ಮಾಘಾತ ಆದಾಗ ಬಿಲ್ಲುಬಾಣ ಹೆಗಲಿಗೇರಿಸಿ ಹಗಲು ರಾತ್ರಿ ಹೋರಾಡಿದ ಬಿಸಿನೆತ್ತರ ಯುವಕ ಕಿಯಾಂಗ್ ನಾಂಗ್ಬಾ. ಪೂರ್ವ ಜೈಂತಿಯೊ ಬೆಟ್ಟಗುಡ್ಡಗಳಲ್ಲಿ ಈ ಸ್ವಾತಂತ್ರ್ಯ ಯೋಧನ ಹೋರಾಟದ ಸಿಂಹ ಘರ್ಜನೆ ಪ್ರತಿಧ್ವನಿಸಲಾರಂಭಿಸಿತು. “ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಈತ ದ್ರೋಹ ಎಸಗುತ್ತಿದ್ದಾನೆ; ಈತ ಶಿಕ್ಷಾರ್ಹ ಬಂಡುಕೋರ’ ಎಂದೆಲ್ಲ ಹಣೆಪಟ್ಟಿಯೊಂದಿಗೆ ಈತನ ಸೆರೆಗೆ ಸರಕಾರ ಮುಂದಾಯಿತು. ಆಗತಾನೇ ಈಸ್ಟ್ಇಂಡಿಯಾ ಕಂಪೆನಿಯಿಂದ ನೇರ ಅಧಿಕಾರ ಪಡೆದುಕೊಂಡ ಲಂಡನ್ ಕೇಂದ್ರೀಕೃತ ಬ್ರಿಟಿಷ್ ಸರಕಾರದ ಕದಂಬ ಬಾಹು ದೂರದ ಈಶಾನ್ಯ ಭಾರತದ ಪದರ ಪದರಕ್ಕೂ ಚಾಚಿತ್ತು! ಸಿಡಿದೇಳುವ ಸ್ವಾತಂತ್ರ್ಯ ಕಿಡಿಗಳನ್ನು ಅಡಗಿಸಲು ಗುಡ್ಡಗಾಡು ಜನಾಂಗದಿಂದಲೇ ಆಯ್ದ ಯುವಕರ ಅಸ್ಸಾಂ ರೈಫಲ್ಸ್ ಪಡೆ ಸಿದ್ಧಗೊಂಡಿತು. ಸ್ವಾತಂತ್ರ್ಯದ ಧ್ವನಿ ಎತ್ತಿದವರ ಹುಟ್ಟಡಗಿಸುವ ಕಾರ್ಯಕ್ಕೆ ವಿಷಾದನೀಯ ವಿಪರ್ಯಾಸ ಎಂಬಂತೆ ಮಣ್ಣಿನ ಮಕ್ಕಳದೇ ಪಡೆ ಸಿದ್ಧಗೊಂಡಿತು! ಈಶಾನ್ಯ ಭಾರತದ ಈಗಿನ ಮಣಿಪುರ, ನಾಗಾಲ್ಯಾಂಡ್, ಮಿಜೋರಾಮ್ ಇಲ್ಲೆಲ್ಲಾ ಆಂಗ್ಲ ಸೈನ್ಯಾಧಿಕಾರಿ ಆದೇಶ ಹೊತ್ತ ದೇಸೀ ಪಡೆಗಳೇ ನೆಲದ ಮುಕ್ತತೆಯ ಉಸಿರು ತಡೆಯಲಾರಂಭಿಸಿದವು.
ಅಪ್ರತಿಮ ದೇಶಭಕ್ತ
ಅಂತಹ ದಾರುಣ, ಪಾರತಂತ್ರ್ಯದ ದಿನಗಳಲ್ಲಿ ಚಾರಿತ್ರಿಕ ಎನಿಸುವ ವೀರಗಾಥೆ ಸೃಜಿಸಿದ ಕಿಯಾಂಗ್ ನಾಂKiang nangbahಗ್ಬಾ ಅಪ್ರತಿಮ ರಾಷ್ಟ್ರಭಕ್ತ; ಆಂಗ್ಲರಿಗೆ ಸಿಂಹಸ್ವಪ್ನವೂ ಆಗಿದ್ದ. ಆದರೇನು? ಬ್ರಿಟಿಷರು ಕುಟಿಲೋಪಾಯ ಬಲೆ ಬೀಸಿದರು. ಕೊನೆಗೊಂದು ದಿನ ತನ್ನ ಆಪ್ತರೇ ಈತನ ಚಲನವಲನದ ಸ್ಪಷ್ಟ ಮಾಹಿತಿ ಆಂಗ್ಲ ಅಧಿಕಾರಿಗೆ ರವಾನಿಸಿಬಿಟ್ಟರು. ಇದರ ಅರಿವೇ ಇಲ್ಲದ ತರುಣ ನಾಂಗ್ಬಾ ಬ್ರಿಟಿಷರ ಬಂಧಿಯಾದ; ತನ್ನವರ ವಿಶ್ವಾಸದ್ರೋಹದ ಫಲಶ್ರುತಿಯಾಗಿ ಶಿಲ್ಲಾಂಗ್ನಿಂದ ಬಹುದೂರದ ಜುವಾç ಎಂಬ ಸ್ಥಳದ ಸಮೀಪ ಬಂಧನಕ್ಕೊಳಗಾದ. ಮುಂದಿನ ಕಥೆ ಕರುಣಾಜನಕ ವ್ಯಥೆಯ ಪ್ರಸಂಗ. “ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ದ್ರೋಹ ಬಗೆದಾತ’ ಎಂಬ ಹಣೆಪಟ್ಟಿಯೊಂದಿಗೆ ಭಾರತದ ವೀರಪುತ್ರನಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಜುವಾಯಿ ಪಟ್ಟಣದ ಇವಾಮ್ಯುಸಿಯಾಂಗ್ ಎಂಬಲ್ಲಿ ಬಹಿರಂಗವಾಗಿ, ಸಾರ್ವಜನಿಕರ ಎದುರಿಗೇ ಮರಕ್ಕೆ ಕುಣಿಕೆ ಬಿಗಿದು ನೇತುಹಾಕಲಾಯಿತು. ನೇಣಿಗೆ ಶರಣಾಗುವ ಮೊದಲು ಅಲ್ಲಿ ಕಂಬನಿ ತುಂಬಿ ಮೂಕವಿಸ್ಮಿತರಾಗಿ ನಿಂತ ಸಹಸ್ರಾರು ಜನರನ್ನು ಉದ್ದೇಶಿಸಿ ಕಿಂಗ್ ನಾಂಗ್ಬಾ ಘೋಷಿಸಿದ ಅಮರವಾಣಿ ಇಂದಿಗೂ ಅಲ್ಲಿ ಜನಜನಿತ. “ತನ್ನ ಮೃತಶರೀರದ ಮುಖ ಪೂರ್ವಾಭಿಮುಖವಾಗಿ ನಿಂತರೆ ಕೇವಲ 100 ವರ್ಷಗಳೊಳಗೇ ನನ್ನ ಈ ಮಾತೃಭೂಮಿ ಸ್ವತಂತ್ರಗೊಳ್ಳುತ್ತದೆ. ಒಂದೊಮ್ಮೆ ನನ್ನ ನಿರ್ಜೀವ ಮುಖ ಪಶ್ಚಿಮಾಭಿಮುಖವಾಗಿ ತಿರುಗಿಬಿಟ್ಟರೆ ಆಗ… ನೀವೆಲ್ಲ ಶಾಶ್ವತವಾಗಿ ಗುಲಾಮಗಿರಿಯಲ್ಲೇ ಇರಬೇಕಾಗುತ್ತದೆ’. ಈ ಭವಿಷ್ಯವಾಣಿ ನೂರಕ್ಕೆ ನೂರು ಪ್ರತಿಶತ ನಿಜವಾಯಿತು. 1857ರಿಂದ ಅರ್ಥಾತ್ ಪ್ರಥಮ ಸಂಗ್ರಾಮದ ಬಳಿಕ ಕೇವಲ 9 ದಶಮಾನಗಳವರೆಗೆ ಅಂದರೆ 1947ರ ವರೆಗೆ ಮಾತ್ರ ಈ ನೆಲದ ಬಾನಲ್ಲಿ ಯೂನಿಯನ್ ಜ್ಯಾಕ್ ಬಾವುಟ ಹಾರಿತು. 1862ರಿಂದ ಕೇವಲ 85 ವರ್ಷಗಳೊಳಗೆ ತ್ರಿವರ್ಣ ಧ್ವಜ ಆ ಮಹಾನ್ ಚೇತನ ಅಮರವಾದ ಜಾಗದಲ್ಲೂ ಹಾರಿತು. ಕಿಯಾಂಗ್ ನಾಂಗ್ಬಾನ ಅಮರ ಚೇತನಕ್ಕೆ ಸಾಕ್ಷಿಯಾಗಿ ಜುವಾಯಿಯ ಪ್ರಶಾಂತ ಹಸಿರು ಪರಿಸರದಲ್ಲಿ ಸುಂದರ ಸ್ಮಾರಕ ಅಪಾರ ದೇಶಭಕ್ತರನ್ನು ಸೆಳೆಯುತ್ತಿದೆ; ರಾಷ್ಟ್ರಪ್ರೇಮದ ಸಿಂಚನ ಮೂಡುತ್ತಿದೆ.
ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ