ಮಾತು ಮಾತು ಮಥಿಸಿ…


Team Udayavani, Feb 9, 2020, 12:05 PM IST

edition-tdy-1

ಸಾಂಧರ್ಬಿಕ ಚಿತ್ರ

ಶಬ್ದ ಎನ್ನುವುದಕ್ಕೆ ಸಾಮಾನ್ಯವಾಗಿ ಎರಡು ಅರ್ಥಗಳಿವೆ. ಒಂದು word ಇನ್ನೊಂದು sound. ಶಬ್ದ ಸಂಸ್ಕೃತ. ಅದರ ತದ್ಭವ ಸದ್ದು. ಆದರೆ, ಮೊದಲ ಅರ್ಥದಲ್ಲಿ ಸಂಸ್ಕೃತದ ಶಬ್ದ ಕನ್ನಡದಲ್ಲಿಯೂ ಶಬ್ದವೇ. ಒಂದೇ ಅಕ್ಷರದ ಶಬ್ದಗಳೂ ಇದ್ದಾವೆ. ಉದಾಹರಣೆಗೆ ಓ, ಬಾ, ಹಾ, ಹೂ, ತಾ ಇತ್ಯಾದಿ. ಎರಡಕ್ಷರಗಳ ಶಬ್ದಗಳು ಡಿಕ್ಷನರಿಯಲ್ಲಿ ನೂರಾರು ಸಿಗುತ್ತವೆ. ಶಬ್ದ ಎನ್ನುವುದೂ ಎರಡಕ್ಷರಗಳು ತಾನೆ? ಒಂದರಿಂದ ಹತ್ತು ಎಣಿಸುವಾಗ ಎರಡು ಮತ್ತು ಒಂಬತ್ತು ಬಿಟ್ಟರೆ ಉಳಿದುವೆಲ್ಲ ಎರಡಕ್ಷರದ ಅಂಕೆಗಳು. “ಹಾ’ ಎನ್ನುವುದು “ಹಾಂ’ ಆಗುವಾಗ ಎರಡಕ್ಷರಗಳು ಎಂದು ಪರಿಗಣಿಸಿದರೆ ಅಥವಾ ಬೇರೊಂದು ಅಕ್ಷರವನ್ನು ಅಡಿ ಒತ್ತು ಕೊಟ್ಟಾಗ ಅದನ್ನೂ ಪರಿಗಣಿಸಿದರೆ ಈ ಅಂಕೆಗಳಲ್ಲಿ ಒಂದು, ನಾಲ್ಕು, ಎಂಟು ಕೂಡ ಮೂರಕ್ಷರಗಳ ಶಬ್ದಗಳಾಗುತ್ತವೆ. ಒಂಬತ್ತು ಮಾತ್ರ ನಾಲ್ಕು ಅಥವಾ ಐದಕ್ಷರಗಳ ಒಂದು ಅಂಕೆಯಾಗಿ ಬೇರೆಯೇ ನಿಲ್ಲುತ್ತದೆ.

ಇಂಗ್ಲೀಷಿನಲ್ಲಿ a (=ಒಂದು) ಮತ್ತು i (=ನಾನು) ಎನ್ನುವುದು ಬಿಟ್ಟರೆ ಬೇರೆ ಒಂದಕ್ಷರದ ಶಬ್ದವಿಲ್ಲ. ಇಂಗ್ಲಿಷಿನಲ್ಲಿ ಚ ಮೊದಲಕ್ಷರ ಎನ್ನುವುದು ನಮಗೆಲ್ಲ ಗೊತ್ತು. ಹಾಗೆಯೇ ಐ (=ನಾನು) ಎನ್ನುವುದನ್ನು ಮೊದಲ ಅಂಕೆಗೂ ಸಂಕೇತವಾಗಿ ಉಪಯೋಗಿಸುತ್ತಾರೆ. ಸ್ವಾಭಿಮಾನದಿಂದ ಬೀಗುವ ಇಂಗ್ಲಿಷರು ಮೊದಲ ಸ್ಥಾನ ಪಡೆಯಲು ಹೇಗೆ ಭಾಷೆಯನ್ನೂ ಬಳಸುತ್ತಾರೆನ್ನುವುದು ಕುತೂಹಲದ ವಿಚಾರವಲ್ಲವೇ?

ಮನುಷ್ಯ ಭಾಷೆಗಳನ್ನು ಕಲಿಯುವ ಮೊದಲು ಬಹುಶಃ ಒಂದೊಂದೇ ಅಕ್ಷರಗಳ ಮೂಲಕ ಸಂವಹನ ಮಾಡುತ್ತಿದ್ದನೇನೋ. ಕ್ರಮೇಣ ಎರಡಕ್ಷರಗಳನ್ನು ಬಳಸುತ್ತಿದ್ದಿರಬೇಕು. “ಓ’ ಇದ್ದದ್ದು “ಓಡು’, “ಓಟ’ ಆಗಿರಬಹುದು. “ಬಾ’ ಇದ್ದದ್ದು “ಬಾಚು’, “ಬಾಗು’ ಆಗಿದ್ದಿರಬಹುದು. “ಹಾ’ ಎಂಬುದು “ಹಾರು’, “ಹಾಡು’ ಆಯಿತು. “ಹೂ’ ಎಂಬುದು “ಹೂಡಿ’ ಆಯಿತು. “ತಾ’ ಎಂಬುದು “ತಾನು’, “ತಾವು’ ಆಯಿತು. ಹೀಗೆ ಹಲವು ಶಬ್ದಗಳ ಸಮೂಹ ಸೇರಿಸಿ ವಾಕ್ಯವಾಗಿರಬಹುದು. ಇವನ್ನೇ ತೆಗೆದುಕೊಂಡರೆ ತಾನು/ವು, ಓಟ, ಹೂಡಿ, ಹಾರಿ, ಬಾಚಿಕೊಂಡೆನು/ವು ಎಂದು ತನ್ನ ಬೇಟೆಯ ಕೌತುಕವನ್ನು ಇನ್ನೊಬ್ಬರಿಗೆ ತಿಳಿಸಲು ವಾಕ್ಯರಚನೆಯನ್ನು ಅಳವಡಿಸಿಕೊಂಡಿರಬಹುದು. ಭಾಷೆಯ ಬೆಳವಣಿಗೆಯ ಇತಿಹಾಸದಲ್ಲಿ ಇಂಥ ಕುತೂಹಲದ ವಿಷಯಗಳು ಲೆಕ್ಕವಿಲ್ಲದಷ್ಟು ಇರಬಹುದಲ್ಲವೆ?

ಶಬ್ದಕ್ಕೊಂದು ಮಣಿದರ್ಪಣ :   ಶಬ್ದ = word ಬಗ್ಗೆ ಕುತೂಹಲ ಈಗಿನದ್ದಲ್ಲ. ನಮ್ಮ ಪೂರ್ವಸೂರಿಗಳು ಇದರ ಬಗ್ಗೆ ತುಂಬ ಸಂಶೋಧನೆಯನ್ನು ಮಾಡಿದ್ದಾರೆ. ಮೂವರು ಶ್ರೇಷ್ಠ ವೈಯಾಕರಣಿಗಳೆಂದರೆ, ನೃಪತುಂಗ, ಕೇಶಿರಾಜ ಮತ್ತು ಭಟ್ಟಾಕಳಂಕ. ಕೇಶಿರಾಜನ ಶಬ್ದಮಣಿದರ್ಪಣ ಒಂದು ಅಪೂರ್ವ ಕೃತಿ. ಮೊತ್ತಮೊದಲು ಇದನ್ನು 1897ರಲ್ಲಿ ಫ‌ರ್ಡಿನಾಂಡ್‌ ಕಿಟ್ಟೆಲ್‌ ಅವರು ಸಂಪಾದಿಸಿ ವ್ಯಾಖ್ಯಾನ ಬರೆದು ಪ್ರಕಟಿಸಿದರು. ಅದರ ಮುನ್ನುಡಿಯಲ್ಲಿ ಅವರು ಮೂಡಬಿದರೆಯ ನಿಷೂuರ ನಂಜಯ್ಯನವರ ಸಹಾಯವನ್ನು ನೆನೆಯುತ್ತಾರೆ. ಅದರ ಮೂರನೆಯ ಆವೃತ್ತಿಯನ್ನು ಪಂಜೆ ಮಂಗೇಶರಾಯರು 1920ರಲ್ಲಿ ಪ್ರಕಟಿಸಿದರು. ಆಮೇಲೆ ಹಲವರು ಅದನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅದರಲ್ಲಿ ಡಿ. ಎಲ್‌. ನರಸಿಂಹಾಚಾರ್‌ ಸಂಪಾದಿಸಿ ಪ್ರಕಟಿಸುವಾಗ, “ಇದು ಕಾವ್ಯವೂ ಹೌದು, ಶಾಸ್ತ್ರವೂ ಹೌದು, ಕಾವ್ಯಲೇಪವಿರುವ ಶಾಸ್ತ್ರವೆಂದರೂ ಸರಿಯೆ’ ಎನ್ನುತ್ತಾರೆ.

ಶಬ್ದಕ್ಕೆ ಪದ ಅನ್ನುವ ಅರ್ಥವೂ ಇದೆಯಲ್ಲವೇ? ಶಬ್ದಮಣಿದರ್ಪಣದ ಪೀಠಿಕೆಯಲ್ಲಿ ಕೇಶಿರಾಜ ಹೀಗೆ ಹೇಳುತ್ತಾನೆ: “ವ್ಯಾಕರಣದಿಂದ ಪದಸಿದ್ಧಿಯಾಗುತ್ತದೆ. ಆ ವ್ಯಾಕರಣದ ಪದದಿಂದ ಜ್ಞಾನವೃದ್ಧಿಯಾಗುತ್ತದೆ.

ಜ್ಞಾನದಿಂದ ತತ್ವ ಹುಟ್ಟುತ್ತದೆ. ತತ್ವದಿಂದ ಬಯಸುವ ಮುಕ್ತಿ ದೊರೆಯುತ್ತದೆ’. ಮನುಷ್ಯನ ಒಳಗೆ ಹುಟ್ಟುವ ಆಸೆಯು ನಾಭಿಯಿಂದ ಹೊರಡುವ ಸೂಕ್ತ ವಾಯುವಿನಿಂದ ಶಬ್ದದ ರೂಪದಲ್ಲಿ ಹೊರಹೊಮ್ಮಿದಾಗ ಅದು (ಧವಳವರ್ಣ) ಬೆಳ್ಳಗೆ ಹೊಳೆಯುತ್ತದೆ. ಇದನ್ನೇ ಕುವೆಂಪು ಅವರು, “ಶಬ್ದಗಳಿಗೆಮ್ಮುಸಿರೆ ಹರಿವಜ್ರ ಸಾಣೆ, ನಮ್ಮ ಲೇಖನಿಗಿಂತ ಬರಸಿಡಿಲ ಕಾಣೆ’ ಎಂದದ್ದು. ನಾವು ಶಾಲೆಯಲ್ಲಿ ಓದುತ್ತಿದ್ದಾಗ ವಾರಕ್ಕೊಂದು ವ್ಯಾಕರಣದ ಪಾಠವಿತ್ತು. ಅದು ನಾನು ದ್ವೇಷಿಸುತ್ತಿದ್ದ ಕ್ಲಾಸು. ವ್ಯಾಕರಣದ ಪಾಠವೆಂದರೆ ನನಗೆ ನಿದ್ರೆ. ನನಗೆ ಯಾವಾಗ ವ್ಯಾಕರಣದಲ್ಲಿ ಆಸಕ್ತಿ ಮೂಡಿತೋ ತಿಳಿಯದು.

ಆದರೆ, ಮಂಗಳೂರು ಸರಕಾರೀ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಜಿ.ಕೆ. ಚೆಟ್ಟೂರ್‌ ಎಂಬವರು ಬರೆದ ಕಾಲೇಜ್‌ ಕಾಂಪೊಸಿಶನ್ಸ್‌ ಎಂಬ ಒಂದು ಪುಸ್ತಕ ಓದುವ ಅವಕಾಶ ಒಮ್ಮೆ ಸಿಕ್ಕಿತು. ಅದೊಂದು ಅದ್ಭುತ ಕೃತಿ. ಚೆಟ್ಟೂರ್‌ರ ಕೃತಿಯ ಮೂರು-ನಾಲ್ಕು ಪ್ರತಿಗಳನ್ನು ಖರೀದಿಸಿ ನನ್ನ ಕೆಲವು ಗೆಳೆಯರಿಗೆ ಕೊಟ್ಟಿದ್ದೂ ಇದೆ. ಈಗ ಅದರ ಪ್ರತಿಗಳು ಲಭ್ಯವಿಲ್ಲವೆಂದು ಕಾಣುತ್ತದೆ. ಆ ಕಾಲೇಜಿನ ಈಗಿನ ಪ್ರಿನ್ಸಿಪಾಲರಾಗಿರುವ ಉದಯಕುಮಾರ್‌ ಇರ್ವತ್ತೂರು ಅವರನ್ನು ವಿಚಾರಿಸಿದಾಗ ಅವರ ಗ್ರಂಥಾಲಯದಲ್ಲಿ ಮೂರು ಪ್ರತಿಗಳಿದ್ದಾವೆಂದು ಹೇಳಿದರು.  ಚೆಟ್ಟೂರರ ಪುಸ್ತಕ ಓದಿದ ಮೇಲೆ ನನಗೆ ವ್ಯಾಕರಣ ಗ್ರಂಥಗಳನ್ನೂ ಓದುವ ಆಸಕ್ತಿ ಬೆಳೆಯಿತು. 1985ರಲ್ಲಿ ನಾನು ಬರೆದ ಅರ್ಜಿ ಎಂಬ ಕತೆಯಲ್ಲಿ ಮಾಬೆನ್‌ ಎಂಬವರು ಬರೆದ ವ್ಯಾಕರಣ ಬೋಧಿನಿ ಎಂಬ ಪುಸ್ತಕದ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದ್ದೆ.

ಹಲವು ಶಬ್ದಗಳ ಸಮೂಹ ವಾಕ್ಯವಾಗುತ್ತದೆ. ಅದು ಪ್ರಶ್ನಾರ್ಥಕವಾಗಿಯೂ ಇರಬಹುದು. ಆ ವಾಕ್ಯ ನಮ್ಮ ಬಾಯಿಯಿಂದ ಹೊರಗೆ ಬಿಟ್ಟಾಗ ಮಾತಾಗುತ್ತದೆ. ಮಾತಾಗುವಾಗ ಅದರಲ್ಲಿ ಶಬ್ದ (= ಸೌಂಡ್‌) ಹುಟ್ಟುತ್ತದೆ. ಮಾತಾಡದಿದ್ದರೆ ಅದು ಮೌನವಾಗುತ್ತದೆ. ಮಾತು ಬೆಳ್ಳಿ ಮೌನ ಬಂಗಾರ ಎಂದು ನಮ್ಮ ಹಿರಿಯರು ಹೇಳಿದರು. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯನ್ನೂ ಕೊಟ್ಟರು. ನಮ್ಮ ಹಿರಿಯರು ಹೇಳಿದ ಮಾತನ್ನು ನಾವು ಎಲ್ಲಿ ಕೇಳುತ್ತೇವೆ? ನಮಗೆ ಮಾತೇ ಮಂತ್ರ ಎಂದು ಅನಂತಮೂರ್ತಿಯವರು ಹೇಳಿದರು. ಬೇಂದ್ರೆಯವರು ಹೇಳಿದ್ದಾರಲ್ಲ ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು!

ಮಾತಾಡುವಾಗ ನಮಗೆ ಲೌಡ್‌ಸ್ಪೀಕರ್ಸ್‌ ಇದ್ದರೆ ಒಳ್ಳೆಯದೆಂದು ಕಂಡಿತು. ಯಾಕೆಂದರೆ, ನಮ್ಮ ಮಾತನ್ನು ಎಲ್ಲರೂ ಕೇಳಬೇಕೆಂಬ ವಾಂಛೆ ನಮ್ಮಲ್ಲಿದೆ. ನಮ್ಮ ದೇವಸ್ಥಾನಗಳಲ್ಲಿ ಮಂತ್ರ ಹೇಳುವಾಗ ಊರಿಗೆಲ್ಲ ಕೇಳಿಸುವಂತೆ ಮೈಕನ್ನು ಇಡುತ್ತಾರೆ. ಮಸೀದಿಗಳಲ್ಲಿ ಆಜಾನ್‌ ಕೊಡುವಾಗಲೂ ಮೈಕುಗಳನ್ನು ಹಾಕುತ್ತಾರೆ. ಚರ್ಚುಗಳಲ್ಲಿ ಮೌನಕ್ಕೆ ಹೆಚ್ಚು ಪ್ರಾಶಸ್ತ್ಯ. ಅಲ್ಲಿ ಹೆಚ್ಚಾಗಿ ಪ್ರಾರ್ಥನೆ ಮಾಡುವಾಗ ಮೌನವಾಗಿರುತ್ತಾರೆ. ಮೈಕು ಹಾಕಿದರೂ ಅದು ಹಾಲ್‌ನಲ್ಲಿ ಇದ್ದವರಿಗೆ ಮಾತ್ರ ಕೇಳಲಿ ಎಂಬುದಕ್ಕೆ ಹಾಕುವುದುಂಟು.

ಭಕ್ತರು ಹೆಚ್ಚಾಗಿ ಹಾಲ್‌ನ ಹೊರಗೂ ಇದ್ದರೆ ಅಲ್ಲಿಯೂ ಮೈಕಿನ ವ್ಯವಸ್ಥೆಯನ್ನು ಮಾಡುತ್ತಾರೇನೋ? ಮಾತು ಸಾಲದೆಂಬಂತೆ ಗಂಟೆಜಾಗಟೆ ಡೋಲು ಮೃದಂಗಗಳ ಸದ್ದೂ ಬೇಕು. ನಮ್ಮ ಈ ಶಬ್ದದ (= ಸೌಂಡ್‌) ಮೇಲಿನ ವ್ಯಾಮೋಹ ಎಷ್ಟಿದೆಯೆಂದರೆ ಸಿನೆಮಾ ಹಾಡುಗಳ ಸಂಗೀತ ನಮ್ಮ ಸರ್ವಾಂಗವನ್ನೂ ವ್ಯಾಪಿಸಿಬಿಟ್ಟಿದೆ. ಬರೇ ಹಾಡುಗಳಲ್ಲ, ಯಾವುದೇ ಸಿನೆಮಾ ನೋಡಿ, ಉದ್ದಕ್ಕೂ ಸಂಗೀತದ ಹೆಸರಿನಲ್ಲಿ ಕರ್ಣಕಠೊರ ಸದ್ದು ಕೇಳಿಸುತ್ತದೆ, ಹಾಗೂ ಅವು ನಮ್ಮನ್ನು ಮೈಮರೆಯಿಸುತ್ತವೆ. ಅದಕ್ಕೆ ಎಷ್ಟು ಒಗ್ಗಿ ಹೋಗಿವೆಯೆಂದರೆ ಎಲ್ಲ ಸಂಗೀತದ ಉಪಕರಣಗಳನ್ನು ಒಟ್ಟಿಗೆ ಉಪಯೋಗಿಸಿ ಕೇಳಿಸುವ ಸಂಗೀತವೇ, ನಿಜವಾದ ಸಂಗೀತ ಎನ್ನುವುದು ನಮ್ಮ

ಸಂವೇದನೆಯನ್ನು ಆವರಿಸಿಕೊಂಡುಬಿಟ್ಟಿದೆ. ಯಾವುದಾದರೂ ಸಿನೆಮಾದಲ್ಲಿ ಈ ರೀತಿಯ ಸಂಗೀತವನ್ನು ಅಳವಡಿಸಿಕೊಳ್ಳದೇ ಇದ್ದರೆ ಜನರಿಗೆ ಇಷ್ಟವೇ ಆಗುವುದಿಲ್ಲ. ಸಿನೆಮಾಗಳಲ್ಲಿ ಸಂಗೀತವೆನ್ನುವುದು, ಅಥವಾ ಸದ್ದು ಎನ್ನುವುದು, ಒಂದು ನಿಶ್ಚಿತ ದೃಶ್ಯದ value addition ಗಾಗಿ ಬಳಸುವ ಸಾಧನ ಎನ್ನುವುದನ್ನು ನಾವು ಮರೆತೇ ಬಿಟ್ಟಿದ್ದೇವೆ.

ಈ ಸದ್ದನ್ನು ಕೇಳುವ, ಶಬ್ದ (word)ಗಳಿಗೆ ಕಿವಿ ತೆರೆದಿರುವುದಷ್ಟೇ ನಮಗೆ ಅಭ್ಯಾಸವಾಗಿದೆಯೇ? ಇಲ್ಲ. ನಾವು ಮಾತಾಡುವುದು ಹೆಚ್ಚು. ಮೊಬೈಲ್‌ ಬಂದ ಮೇಲಂತೂ ನಮ್ಮಲ್ಲಿ ಮಾತು ಇನ್ನೂ ಹೆಚ್ಚಾಗಿದೆ ಅನ್ನಿಸುತ್ತದೆ. ನೊಬೆಲ್‌ ಪ್ರಶಸ್ತಿ ವಿಜೇತ ಅಮರ್ತ್ಯಸೇನ್‌ ಅವರ the argumentative Indian ಎಂಬ ಒಂದು ಒಳ್ಳೆಯ ಪುಸ್ತಕವಿದೆ. ಇಬ್ಬರು ಅಪರಿಚಿತ ಭಾರತೀಯರು ಬಸ್‌ಸ್ಟಾಪಿನಲ್ಲಿ, ಮಾರ್ಕೆಟಿನಲ್ಲಿ, ಎಲ್ಲಿಯೇ ಭೇಟಿಯಾಗಲಿ, ಮಾತಾಡಲು ಆರಂಭಿಸುತ್ತಾರೆ, ಮತ್ತು ಅವರು ಒಂದೇ ಸಹಮತದಲ್ಲಿರಲಿ, ಚರ್ಚೆ ಮಾಡುತ್ತಲೇ ಇರುತ್ತಾರೆ ಎನ್ನುತ್ತಾರವರು. ಮಾತು ಇಲ್ಲದೆಯೇ ನಮಗೆ ಬದುಕಲು ಸಾಧ್ಯವೇ? ಜಪಾನೀಯರು ಮಾತಾಡುವುದು ಬಹಳ ಕಮ್ಮಿ. ಅಲ್ಲಿಯ ಮೆಟ್ರೋದಲ್ಲಿ ಪ್ರಯಾಣಿಸುವಾಗ ಮಾನವಧ್ವನಿಗಳೇ ಕೇಳಿಸುವುದಿಲ್ಲ. ಎಲ್ಲರೂ ಮೊಬೈಲ್‌ನಲ್ಲಿ ಚಾಟ್‌ ಮಾಡುತ್ತಿರುತ್ತಾರೆ. ಅಲ್ಲಿ ಬಹುಶಃ ಮೆಟ್ರೋದಲ್ಲಿ ಮಾತಾಡಬಾರದೆಂದು ಕಾಯಿದೆ ಇದೆಯೇ ಎಂಬ ಅನುಮಾನ ಹುಟ್ಟುತ್ತದೆ. ನಮ್ಮಲ್ಲಿ ಹಾಗಲ್ಲ. ಮೊಬೈಲ್‌ ನಲ್ಲಿ ತಾವು ಮಾತನಾಡುತ್ತಿರುವ ವ್ಯಕ್ತಿ ಯಾವ ಊರಿನಲ್ಲಿ ಇದ್ದಾನೊ ಆ ಊರಿಗೇ ಕೇಳಿಸುವಷ್ಟು ದೊಡ್ಡ ಧ್ವನಿಯಲ್ಲಿ ಮಾತನಾಡುತ್ತೇವೆ !

ಮೌನ ಬಂಗಾರ ಎನ್ನಲಿ, ಮಾತು ಬಲ್ಲವನಿಗೆ ಜಗಳವಿಲ್ಲ ಅನ್ನುವುದೂ ಸರಿಯೇ. ಜಗಳ ಮಾಡಬೇಕಿದ್ದರೂ ಮಾತು ಬೇಕೇ ಬೇಕಲ್ಲ? ಮಾತು ಬಲ್ಲವನು ಮಾತ್ರ ಬದುಕಿನಲ್ಲಿ ಗೆಲ್ಲುತ್ತಾನೆ ಅನ್ನುವುದು ಶತಃಸಿದ್ಧ. ಮಾತಿನಿಂದಲೇ ಚುನಾವಣೆಗಳನ್ನು ಗೆಲ್ಲಬಹುದು, ಸಭಿಕರ ಮನಸ್ಸನ್ನು ಆಕರ್ಷಿಸಬಹುದು. ಸಂಭಾಷಣೆಗಳನ್ನು ಮುಂದುವರಿಸಬಹುದು. ನಮ್ಮ ಅಸ್ತಿತ್ವವನ್ನು ಪ್ರತಿಷ್ಠಾಪಿಸಬಹುದು. ಗೆಳೆತನವನ್ನು ಒದಗಿಸಬಹುದು. ಸಿಟ್ಟಾಗಿರುವ ಹೆಂಡತಿಯನ್ನು ಖುಷಿಪಡಿಸಬಹುದು. ಪ್ರೇಯಸಿಯನ್ನೂ ಪಡೆಯಬಹುದು.

 

-ಗೋಪಾಲಕೃಷ್ಣ ಪೈ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.