ಕತೆ: ಮೆಸೇಜ್‌


Team Udayavani, Jul 8, 2018, 6:00 AM IST

v-8.jpg

ಬೇರೆ ಏನನ್ನೂ ಮಾಡಲು ಮನಸ್ಸಿಲ್ಲದ ರವಿ ಮೊಬೈಲ್‌ ತೆಗೆದುಕೊಂಡು ವಾಟ್ಸ್‌ ಆಪ್‌ ನೋಡಿ, ಫೇಸ್‌ಬುಕ್ಕಿಗೆ ಹೋಗಿ ಹೆಚ್ಚು ಕಡಿಮೆ ಎಲ್ಲದಕ್ಕೂ ಲೈಕ್‌ ಕೊಡುತ್ತ, ಕೆಲವದ್ದಕ್ಕೆ ಮಳ್‌ ಮಳ್‌ ಕಾಮೆಂಟ್‌ ಹಾಕುತ್ತ ಕುಳಿತಿದ್ದ. ಆಗ ಒಂದು ಮೆಸೇಜು, ಫೋನ್‌ ಇನ್‌ ಬಾಕ್ಸಿಗೆ ಬಂತು. ಹೆಸರು ಇರಲಿಲ್ಲ, ಕೇವಲ ನಂಬರ್‌ ಮಾತ್ರ ಇತ್ತು. ಅದರಲ್ಲಿ, “ನನಗೆ ನಿಮ್ಮನೆಯ ಸತ್ಯನಾರಾಯಣ ಕತೆಗೆ ಬರುವ ಋಣ ಇಲ್ಲ ಎಂದು ಕಾಣುತ್ತದೆ, ಕ್ಷಮಿಸಿ’ ಎಂದಿತ್ತು. ಒಂದು ಕ್ಷಣ ಇದು ಎಂಥ ನಮನಿ ಎಂದು ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅದೇ ನಂಬರಿನಿಂದ ಮತ್ತೂಂದು ಮೆಸೇಜ್‌ ಬಂತು;  ನಾನು ನಾರಾಯಣ ಎಂದು. ಅರೆ! ಅವರ ನಂಬರ್‌ ನನ್ನ ಮೊಬೈಲಲ್ಲಿ ಇತ್ತಲ್ಲ, ಬಹುಶ‌ಃ ಸಿಮ್‌ ಬದಲಾಯಿಸಿರಬೇಕು ಎಂದುಕೊಂಡ. ಹಾಗೆಯೇ, “ಅದೇನು ಅಷ್ಟು ಮುಖ್ಯವಲ್ಲ, ನೀವು ಶೀಘ್ರ ಗುಣವಾಗಿ ಬನ್ನಿ’ ಎಂದು ಉತ್ತರಿಸಿದ. ಆಮೇಲೆ ಅವರ ಮೆಸೇಜ್‌ ಬರಲಿಲ್ಲ. 

ತುಸುಸಮಯದ ನಂತರ ಸಣ್ಣ ಆತಂಕ ಶುರುವಾಯಿತು. ಓ ನಾ ಹೀಗೆ ಬರೆಯಬಾರದಿತ್ತು.  ತಮಗೆ ಶೀಕಾಗಿದ್ದು ಆಚೆಈಚಿನ ಮನೆಯವರಿಗೆ ಗೊತ್ತಾಗಬಾರದು ಎಂದಿದೆಯಂತೆ ನಾರಾಯಣರಿಗೆ. ಈ ರವಿಗೆ ಅವನ ಹೆಂಡತಿ ಹೇಳಿದ್ದಳು, ಅದೂ ಅವರ ಹೆಂಡತಿ ಹೇಳಿ ಗೊತ್ತಾದದ್ದು ! ಅವರಿಬ್ಬರ ಹೆಂಡಂದಿರು ತೀರ ಹತ್ತಿರವಾಗಿದ್ದರು. ಈಗ ತಮಗೆ ಶೀಕಾಗಿದ್ದು ರವಿಗೆ ಹೇಗೆ ಗೊತ್ತಾಯಿತು ಎಂದು ಸ್ವಂತ ಹೆಂಡತಿಯ ಮೇಲೆ ಅನುಮಾನ ಬರುತ್ತದೆ. ಅವರು ಅವಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹಿಂದೊಮ್ಮೆ ಹೀಗೇ ಆಗಿತ್ತು; ಅವರಿಗೆ ಶೀಕು ಜೋರಾಗಿ ಹುಬ್ಬಳ್ಳಿಗೆ ಒಯ್ದಿದ್ದರು. ಆಗ ಇದನ್ನು ತಿಳಿದ ಹೆಂಡತಿ ಎಲ್ಲ ವಿವರಗಳನ್ನು ಹೇಳಿ, “ನೀವು ನಿಮ್ಮ ಆಫೀಸಿನಲ್ಲಿ ಯಾರಿಗೂ ಹೇಳ್ಬೆಡಿ ಮತ್ತೆ’ ಎಂದಿದ್ದಳು. ರವಿ, “ನಾ ಎಂಥ ಹೇಳೆ°, ಅಲ್ಲಿ ಯಾರಿಗೂ ಆ ಸುದ್ದಿ ಬೇಕಾಯ್ದಿಲ್ಲೆ’ ಎಂದಿದ್ದ. ತಾನು ಹಾಗೆ ಮಸೇಜ್‌ ಕಳಿಸಬಾರದಿತ್ತು ಎಂದು ಮತ್ತೆ ಮತ್ತೆ ಅನಿಸುತ್ತಿದ್ದಂತೆ, ನಾರಾಯಣರಾದರೂ ನನಗೆ ಋಣ ಇಲ್ಲ ಎಂದು ಯಾಕೆ ಹೇಳಬೇಕಿತ್ತು, ಬರಲಾಗಲಿಲ್ಲ ಬೇರೆ ಕೆಲಸವಿತ್ತು ಎಂದು ಬರೆಯಬಹುದಿತ್ತಲ್ಲವೆ? ಋಣ ಇಲ್ಲ ಎಂದೆಲ್ಲ ಹೇಳಿದ್ದಾರೆ ಎಂದರೆ, ಅವರಿಗೆ ಶೀಕಾಗಿದ್ದು ನನಗೆ ಗೊತ್ತಾಗಿದೆ ಎಂದು ಅವರಿಗೆ ಗೊತ್ತಾಗಿದೆ, ನಾ ತಲೆ ಕೆಡಿಸಿಕೊಳ್ಳುವ ಕಾರಣವಿಲ್ಲ ಎಂದು ಸಮಾಧಾನ ಮಾಡಿಕೊಂಡ.

ನಾರಾಯಣರಿಗೂ ರವಿಗೂ ಬಹಳ ಹಿಂದಿನಿಂದ ಸಂಬಂಧ. ಅವನು ಕುಮಟಾದಲ್ಲಿ ಇರುವಾಗ ಅವರೂ ಅಲ್ಲೇ ಇದ್ದರು. ರವಿ ಹೊಸದಾಗಿ ನೇಮಕವಾಗಿ ಸೇರಿದವನಾಗಿದ್ದ. ಆಫೀಸಿನ ಕೆಲಸಗಳು ಸರಿಯಾಗಿ ಬರುತ್ತಿರಲಿಲ್ಲ. ಬರವಣಿಗೆ ಎಲ್ಲ ನೀಟಾಗಿತ್ತು. ಆದರೆ ತಪ್ಪಿ ತಪ್ಪಿ ಹೋಗುತ್ತಿತ್ತು. ಮೇಲಧಿಕಾರಿಯ ಅವಗಣನೆಗೆ, ಸಹೋದ್ಯೋಗಿಗಳ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ. ಆದರೆ, ನಾರಾಯಣರಿಗೆ ಅವನಲ್ಲಿ ಸಾಮರ್ಥ್ಯ ಇದೆಯೆಂಬುದು ಗೊತ್ತಿದ್ದಂತಿತ್ತು. “ಹೌದಪ್ಪ ಮಾರಾಯಾ, ಎಲ್ಲರಿಗೂ ಮೊದಮೊದಲು ಹೀಗೇ ಆಗುತ್ತದೆ, ಅದನ್ನು ಯಾಕೆ ದೊಡ್ಡದು ಮಾಡುತ್ತಾರೋ’ ಎಂದು ಧೈರ್ಯ ತುಂಬುತ್ತಿದ್ದರು. ಅವರ ಇಂಥ ಸಣ್ಣ ಸಾಂತ್ವನವೂ ರವಿಗೆ ಹೊಸ ಚೈತನ್ಯವನ್ನು ನೀಡುತ್ತಿತ್ತು. ನಂತರ ಕೆಲವು ಕಾಲದ ಮೇಲೆ ನಾರಾಯಣರ ಮದುವೆಯಾಯಿತು, ಯಲ್ಲಾಪುರದಲ್ಲಿ. ಅದು ಅವರ ಊರು. ಆಗ ಎಲ್ಲರ ಜೊತೆಗೆ ಮದುವೆಗೆ ಹೋಗಿದ್ದ. ಕಲ್ಯಾಣ ಮಂಟಪವೊಂದರಲ್ಲಿ ಮದುವೆ. ಜನವೋ ಜನ. ಹೇಗೊ ಮಾಡಿ ಊಟ ಮಾಡಿಕೊಂಡು ಬಂದಿದ್ದ. ಆಮೇಲೆ, ರವಿಗೆ ಎಲ್ಲೆಲ್ಲೋ ವರ್ಗವಾಗಿ, ಈಗ ಯಲ್ಲಾಪುರಕ್ಕೆ ಬಂದಿದ್ದ. ಅವರೂ ಕುಮಟಾದÇÉೇ ಇದ್ದರೂ ಯಲ್ಲಾಪುರಕ್ಕೇ ಬಂದು ರವಿಯ ಮನೆಯ ಪಕ್ಕದಲ್ಲೇ ಸೈಟ್‌ ತೆಗೆದುಕೊಂಡು ಮನೆ ಕಟ್ಟಿದ್ದರು. ಸೈಟ್‌ ತೆಗೆದುಕೊಳ್ಳುವಾಗ ಅದರ ಮಾಲೀಕರನ್ನು  ಸಂಪರ್ಕಿಸುವಲ್ಲೆಲ್ಲ ಉತ್ಸಾಹದಿಂದ ಮುಂದಾಗಿದ್ದರು. ಹಳೆಯ ಮಿತ್ರರೊಬ್ಬರು ಪಕ್ಕದ ಮನೆಯವರಾಗುತ್ತಿರುವುದು ಉತ್ಸಾಹಕ್ಕೆ ಕಾರಣವಾಗಿತ್ತು. ಆದರೆ ಮುಂದೆ ಅನಿಸಿತು, ಅವನು ಹಚ್ಚಿಕೊಳ್ಳುವ ಹಾಗೆ ಅವರು ಹಚ್ಚಿಕೊಳ್ಳುವವರಲ್ಲ ಎಂದು.

ನಾರಾಯಣರು ಮನೆ ಕಟ್ಟಿಸುವಾಗಲೂ ರವಿ ಹೋಗಿ ಅದು ಇದು ಸಲಹೆ ಕೊಡುತ್ತಿದ್ದ. ಅವನು ಕೆಲವು ವರ್ಷಗಳ ಹಿಂದೆ ಕಟ್ಟಿಸಿದ್ದರಿಂದಲೊ ಏನೊ ಅದರ ವಿವರಗಳು ಸ್ವಲ್ಪ ಗೊತ್ತಿತ್ತು. ಅದನ್ನು ಹೇಳುವ ಉಮೇದಿಯೂ ಇರಬಹುದು! ನಾರಾಯಣರು ಹೆಂಡತಿ-ಮಕ್ಕಳ ಮಾತನ್ನೆಲ್ಲ ಕೇಳುತ್ತಿರಲಿಲ್ಲ. ಹಳೆ ಕಾಲದ ಯಜಮಾನನ ಧರ್ತಿಯವರು. ಅಡಿಗೆ ಮನೆ, ಯುಟಿಲಿಟಿಯನ್ನೆಲ್ಲ ಹೇಗೇಗೊ ಕಟ್ಟಿಸುತ್ತಿದ್ದರು. ಅವರ ಹೆಂಡತಿಗೆ ಹೇಳ್ಳೋ ಧೈರ್ಯವಿಲ್ಲದೇ ರವಿಯ ಹೆಂಡತಿಯಲ್ಲಿ ಹೇಳಿ, ಅವಳು ರವಿಯ ಹತ್ತಿರ, “ಅಡಿಗೆ ಮನೆ, ಯುಟಿಲಿಟಿಯೆಲ್ಲ ಹಾಗಿದ್ದರೆ ಅಡಿಗೆ ಮಾಡಲು, ಪಾತ್ರೆ ತೊಳೆಯಲು ಎಲ್ಲಾ ಬತ್ತಿಲ್ಲೆ. ನೀವು ಹೇಳಿದರೆ ಕೇಳ್ತರು ಅವರು’ ಎಂದಳು. ಹೇಳಿಯೂ ಆಯಿತು. ನಾರಾಯಣರು ಒಪ್ಪಿದ್ದರು.

ಮನೆ ಕಟ್ಟಿ ಮುಗಿಯಿತು. ಭರ್ಜರಿಯಾಗಿ ಗೃಹಪ್ರವೇಶವನ್ನೂ ಮಾಡಿದರು. ರವಿ ತನ್ನ ಮನೆಮಂದಿಯೇ ಎನ್ನುವ ಹಾಗೆ, ಬಿಳಿ ಲುಂಗಿ ಉಟ್ಟುಕೊಂಡು ಆಚೆ-ಈಚೆ ಓಡಾಡುತ್ತ ಬಂದವರನ್ನು ಮಾತಾಡಿಸಿದ್ದ. ಇದೆಲ್ಲ ಅವರ್ಯಾರಿಗೂ ಏನೂ ಅನಿಸಿದ ಹಾಗೆ ಕಾಣಲಿಲ್ಲ. ಆದರೆ, ನಾರಾಯಣರ ಹೆಂಡತಿಗೂ ಅವನ ಹೆಂಡತಿಗೂ ಅನ್ಯೋನ್ಯ ಇದ್ದಂತಿತ್ತು. ಇಬ್ಬರೂ ಆಗಾಗ ಮನೆಯ ಸುದ್ದಿಯನ್ನೆಲ್ಲ ಹಂಚಿಕೊಳ್ಳುತ್ತಿದ್ದರು. 

ಆಗಲೇ ನಾರಾಯಣರು ನಿವೃತ್ತಿಗೆ ಬಂದಿದ್ದರು. ಅಜಾನುಬಾಹುವಿನ ಹಾಗಿದ್ದರೂ ಮೈಯಲ್ಲಿ ಶಕ್ತಿ ಇದ್ದಂತಿರಲಿಲ್ಲ. ಒಂದು ಕಾಲದಲ್ಲಿ ಕಬಡ್ಡಿ ಗಿಬಡ್ಡಿಯನ್ನೆಲ್ಲ ಆಡುತ್ತಿದ್ದವರು. ಏನು ತಿಂದರೂ ದಕ್ಕಿಸಿಕೊಳ್ಳುವ ಹಾಗಿದ್ದವರು ಈಗ ನಾಲ್ಕು ಹೆಜ್ಜೆ ನಡೆಯಲಾರದಷ್ಟು ದುರ್ಬಲರಾಗಿದ್ದರು. ಅವರ ಕುಡಿತ ಗಿಡಿತ ವಿಪರೀತವಾಗಿದೆಯೆಂದು ರವಿಗೆ ಹೆಂಡತಿ ಹೇಳಿದ್ದಳು. ಆದರೆ ಅವರ ನೋಡಿದರೆ ಹಾಗೇನೂ ಕಾಣಿಸುತ್ತಿರಲಿಲ್ಲ ಅವನಿಗೆ. ಒಮ್ಮೆ ಇಲೆಕ್ಷನ್‌ ಕೆಲಸಕ್ಕೆಂದು ಜೋಯ್ಡಾ ಬದಿಗೆ ಹೋಗಿ ಬಂದಾಗ ಪೂರ್ತಿ ಅಪ್ಸೆಟ್‌ ಆಗಿದ್ದರು. ಅಲ್ಲಿ ಊಟ ಸರಿ ಇರಲಿಲ್ಲ, ನೀರು ಸರಿ ಇರಲಿಲ್ಲ…. ಎಂದು ಹೇಳಿದರು. ನಂತರ ಗೊತ್ತಾದದ್ದು, ಅಲ್ಲಿ ಅವರು ಸಿಕ್ಕಾಪಟ್ಟೆ ಡ್ರಿಂಕ್ಸು, ನಾನ್‌ವೆಜ್ಜು ಎಲ್ಲ ತಿಂದು ಹೀಗಾಗಿದೆ ಎಂದು. ಇದೂ ಅವರು ಹೇಳಿ ಗೊತ್ತಾಗಿದ್ದಲ್ಲ. 

ಅವರ ಹೆಂಡತಿ ಇರಲಿಲ್ಲ. ತವರು ಮನೆಗೆಲ್ಲೋ ಹೋಗಿದ್ದರು. ನಾರಾಯಣರು ಬಾಡಿದ ಮುಖ ಮಾಡಿಕೊಂಡು ಬಾಗಿಲ ಮೆಟ್ಟಿಲ ಮೇಲೆ ಕುಳಿತಿದ್ದನ್ನು ನೋಡಿ, “ಏನಾಗಿದೆ?’ ಎಂದು ರವಿ ಕೇಳಿದ. “ಏನೋ ತ್ರಾಸಾಗ್ತಿದೆ…. ಆಸ್ಪತ್ರೆಗೆ ಹೋಗಲು ಒಂದು ಆಟೊ ತಕಂಡ್‌ ಬತ್ರಾ?’ ಎಂದು ಕೇಳಿದರು. ಅವನಿಗೆ ಅವರ ಅನಾರೋಗ್ಯದ ತೀವ್ರತೆ ತುಸು ಗೊತ್ತಾದಂತಾಗಿ ಕೂಡಲೇ ಗಾಡಿ ತಂದು ಆಸ್ಪತ್ರೆಗೆ ಒಯ್ದು ಎಡ್ಮಿಟ್‌ ಮಾಡಿದ. ಅಲ್ಲಿ ಅವರಿಗೆ ಐ.ಸಿ.ಯು.ನಲ್ಲಿಟ್ಟು ಚೆಕ್‌ ಮಾಡಲು ತೊಡಗಿದರು. ಆಗ, ಬೇಕಾದ ಔಷಧಿ ಗುಳಿಗೆಯನ್ನೆಲ್ಲ ರವಿ ಹೋಗಿ ತಂದುಕೊಟ್ಟ. ಒಂದೆರಡು ತಾಸಿನ ಮೇಲೆ ಹೆಂಡತಿ ಬಂದಳು. ಮಗ ಮನೆಯಿಂದ ಬರುವಾಗ ಹೆದರಿಸುವ ಸುದ್ದಿ ತಂದಿದ್ದ, ಅವರು ವಾಂತಿ ಮಾಡಿದ ಬಾತ್‌ರೂಮಿನಲ್ಲಿ ರಕ್ತ ಎಂದು. ರವಿಗೆ ಇನ್ನೂ ಆತಂಕವಾಯಿತು, “ಓ ಇದು ರಾಶಿ ಸೀರಿಯಸ್ಸು’ ಎಂದು. ಆಮೇಲೆ ಗೊತ್ತಾಯಿತು, ಹೀಗೇ ಅವರಿಗೆ ಆಗಾಗ ಆಗುತ್ತಿತ್ತು ಎಂದು. 

ಕೆಲವು ದಿನಗಳ ಮೇಲೆ ಚೇತರಿಸಿಕೊಂಡರು. ಅವರ ಹೆಂಡತಿಯೇನೊ ಕೇಳಿದ್ದಳಂತೆ, “ಆಸ್ಪತ್ರೆಯಲ್ಲಿ ತಂದ ಔಷಧಿಯದ್ದೆಲ್ಲ ಎಷ್ಟಾಯಿತು?’ ಎಂದು. ಅವನು, “ಅದೆಲ್ಲ ಇರಲಿ, ಕಡೆಗೆ ನೋಡ್ವ’ ಎಂದು ತೇಲಿಸಿದ್ದ. ಅವರು ಮತ್ತೆ ಕೇಳಲು ಹೋಗಲಿಲ್ಲ. ಇದು ಸಾಯಲಿ! ಮನೆಗೆ ಕರೆದುಕೊಂಡು ಬಂದಮೇಲೆ ಬಹಳ ಆದರದಿಂದ ಮಾತಾಡಿಸಬಹುದು ಎಂದುಕೊಂಡಿದ್ದ. ಹಾಗೇನೂ ಇರಲಿಲ್ಲ. ನೋಡಲು ಬಂದ ಬೇರೆಯವರನ್ನು ಮಾತಾಡಿಸುವ ಹಾಗೇ ಮಾತಾಡಿಸಿದರು. ಅವರ ಸಂಬಂಧಿಗಳಲ್ಲೊಬ್ಬರು ಮಾತ್ರ, “ನೀವೊಂದು ಇಲ್ಲದಿದ್ದರೆ ಕಷ್ಟ ಆಗ್ತಿತ್ತು…’ ಎಂದು ಹೇಳಿದರು. 

ಇದಾದ ಮೇಲೆ ಆಗಾಗ ಸುದ್ದಿ ಬರುತ್ತಿತ್ತು; ಈಗ ಕುಡಿಯುವುದನ್ನು ಬಿಟ್ಟಿದ್ದಾರಂತೆ, ಮತ್ತೆ ತೆಗೆದುಕೊಳ್ಳಲು ಶುರು ಮಾಡಿದ್ದಾರಂತೆ ಎಂದೆಲ್ಲ. ಇದೆಲ್ಲ ಕುಡುಕರ ಚರಿತ್ರೆಯಲ್ಲಿ ಸಾಮಾನ್ಯವಾದವುಗಳೇ! ನಂತರ, ಎರಡು ಮೂರು ಬಾರಿ ಹುಬ್ಬಳ್ಳಿ, ಮಣಿಪಾಲ ಮೊದಲಾದ ಆಸ್ಪತ್ರೆಗೆ ಒಯ್ದು  ವಾರ, ಹದಿನೈದು ದಿನ ಇಟ್ಟುಕೊಂಡು ಸರಿಯಾದ ಮೇಲೆ ಕರೆದುಕೊಂಡು ಬಂದಿರುವುದು, ಬೆಳಿಗ್ಗೆ ಸಿಟ್‌ಔಟ್‌ನಲ್ಲಿ ಕುಳಿತು ಪೇಪರ್‌ ಓದುತ್ತಿರುವಾಗ ಕಾಣುತ್ತಿತ್ತು. ತಮ್ಮ ಆರೋಗ್ಯದ್ದಾಗಲಿ, ಇತರ ವಿಷಯವನ್ನಾಗಲಿ ರವಿಯಲ್ಲಿ ಬಾಯಿ ಬಿಡುತ್ತಿರಲಿಲ್ಲ. “ಎಲಾ! ನಾವು ಇಷ್ಟು ಹಚ್ಚಿಕೊಂಡರೂ ಅವರು ಮಾತ್ರ ಹೀಗಿರುತ್ತಾರಲ್ಲ’ ಎಂದು ಅನಿಸುತ್ತಿತ್ತು. ಸತ್ತಕಂಡ್‌ ಹೋಗ್ಲಿ! ಎಂದು ಸುಮ್ಮನಿದ್ದ.

ಇತ್ತೀಚೆಗೆ ರವಿ ಪ್ರತಿವರ್ಷದಂತೆ ಸತ್ಯನಾರಾಯಣ ಕತೆ ಇಟ್ಟುಕೊಂಡಿದ್ದ. ಆ ದಿನ ಅಕ್ಕ ಪಕ್ಕದವರನ್ನೂ ಸ್ನೇಹಿತರನ್ನೂ ಕರೆಯುವುದು. ಅವನ ಆಫೀಸಿನ ಎಲ್ಲರನ್ನು ಅಲ್ಲದಿದ್ದರೂ ಕೆಲವರನ್ನು ಬರಹೇಳುತ್ತಿದ್ದ. ಆದರೆ ಪ್ರತೀ ವರ್ಷವೂ ಯಾವುದಾದರೂ ಗಡಿಬಿಡಿ ಬಂದು ಅರ್ಜಂಟ್‌ ಅರ್ಜಂಟಾಗಿ ಎಲ್ಲರನ್ನೂ ಕರೆಯಲಾಗುತ್ತಿರಲಿಲ್ಲ. ಈ ಸಲವೂ ಹೀಗೇ ಆಯಿತು. ಕೇವಲ ನೆರೆಹೊರೆಯವರನ್ನು ಮತ್ತು ತೀರಾ ಹತ್ತಿರದವರನ್ನು ಮಾತ್ರ ಕರೆದಿದ್ದ. ಕರೆದಿದ್ದ ಎಂದರೆ, ಅವನೇನು ಎಲ್ಲರಿಗೂ ಹೇಳುತ್ತಿರಲಿಲ್ಲ, ಹೆಂಡತಿ ಹೇಳುತ್ತಿದ್ದಳು! ಯಥಾಪ್ರಕಾರ ನಾರಾಯಣರ ಮನೆಯವರಿಗೂ ಹೇಳಿದ್ದರು. ಅವರು ಮನೆಯಲ್ಲಿದ್ದರೂ ಬಂದಿದ್ದು ಬಹಳ ಕಡಿಮೆ. ಎಲ್ಲೋ ಒಂದೆರಡು ಸಲ ಮಾತ್ರ ಬಂದಿದ್ದರು. ಈ ಸಲ ಹೆಂಡತಿ ಹೋದಾಗ, “ನಾಳೆ ನಾನು ಮಗ ನಿಮ್ಮನೆಗೆ ಬರ್ತೇವೆ’ ಎಂದಿದ್ದರಂತೆ. ಆದರೆ ಬಂದಿರಲಿಲ್ಲ. ರವಿಗೆ ಗಡಿಬಿಡಿಯಲ್ಲಿ ಗಮನಕ್ಕೂ ಬಂದಿರಲಿಲ್ಲ. ಸಂಜೆ ಹೆಂಡತಿ ಹೇಳಿದಳು; “ಅವರಿಗೆ ಶೀಕು ಜೋರಾಗಿ ಆ್ಯಂಬ್ಯುಲೆನ್ಸ್‌ನಲ್ಲಿ ಮಣಿಪಾಲಿಗೆ ಕರ್ಕಂಡ್‌ ಹೋಯ್ದವಡ. ಅವರ ಮನೆಯಲ್ಲಿರುವ ಕೆಲಸದವಳು ಹೇಳಿದಳು, ಯಾರಿಗೂ ಹೇಳ್ಬೇಡಿ ಮತ್ತೆ’ ಎಂದು. 

ರವಿ ಗೊತ್ತೇ ಇಲ್ಲದವರ ಹಾಗೆ ಅವರ ಮನೆಯೆದುರು ಅಡ್ಡಾಡುತ್ತಿದ್ದ. ಆದರೆ, ನಿನ್ನೆ ಬಂದ ಮೆಸೇಜು ಅವನ ಅಲ್ಲಾಡಿಸಿತ್ತು. 
ಕೆಲವು ದಿನಗಳಾದವು. ಅವರು ಹೇಗಿದ್ದಾರೆ ಎಂದು ಕೇಳ್ಳೋಣವೆಂದರೆ, ಯಾರಿಗೂ ಹೇಳ್ಬೇಡಿ ಎನ್ನುವುದು ತಡೆಯಾಗಿತ್ತು! ಏನಾಗುವುದಿಲ್ಲ ಅವರಿಗೆ, ಹಿಂದೆಲ್ಲ ಹೀಗಾದಾಗ ಆರಾಮಾಗಿ ಬಂದಿದ್ದಾರೆ ಎಂದು ಕುತೂಹಲ ಬೆಳೆಸಿರಲಿಲ್ಲ. ಇದ್ದಕ್ಕಿದ್ದಂತೆ ಹೆಂಡತಿಯಿಂದ ರವಿಗೆ ಫೋನು; ಅವರು ಹೋಗಬುಟ್ರಂತೆ…. ಎಂದು.
   ನಿನ್ನೆ ಬಂದ ಮೆಸೇಜು ಅವನ ಕಾಡತೊಡಗಿತು.

ರಾಜು ಹೆಗಡೆ

ಟಾಪ್ ನ್ಯೂಸ್

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.