ಮೆರವಣಿಗೆ
Team Udayavani, Feb 9, 2020, 5:27 AM IST
ಹೊರಗೆ ಹರಿದಿದೆ ಬೆಳಕು
ತೆರೆಯಬೇಕು ಮುಚ್ಚಿದ ಕಿಟಕಿ ಬಾಗಿಲು
ಬೇಸರದ ನೇಸರನ ಹಣೆಗೆ ಅಂಟಿಸಬೇಕು
ನನ್ನ ಚೇತನವನ್ನು ವಿಧಿಗೆ ನಂಟಿಸಬೇಕು
ಹೊರಬಂದೆ ಕಾಣಲು ಬೆಳಕು.
ಒಮ್ಮೆಲೇ ಗಾಬರಿ,
ಏನು ಈ ಬದಲಾವಣೆ?
ನಿನ್ನೆ ಹೊರಬಂದಿದ್ದೆ
ಬೆಳಗು ಹೀಗೆಯೇ ತೋರಿತ್ತು
ಭಾನುವಿನ ಬರವ,
ಹೂಹಾಸ, ಹಸಿವಿನ ಕುಣಿತ ಪವನದ ಚಲನ
ಬೆಳಕಿನ ಜೊತೆಗೆ ಸ್ಪರ್ಧಿಸುವ ಪ್ರೇರಕ ಚಿತ್ತ
ಸೆಳೆದಿತ್ತು ನಿನ್ನೆ ಸಂಪೂರ್ಣ ತನ್ನತ್ತ
ಈಗೆಲ್ಲಿ… ಈಗೆಲ್ಲಿ…
ಇಂದು ಬೆಳಕಿನ ಮುಖಕೆ
ಕರಿಮೋಡದೋಡ
ಎಲ್ಲಿ ಹೋಯಿತು ಸ್ಪಷ್ಟ ನಿಲುವಿನ ತಿಳಿವು
ಇಲ್ಲಿ ಸುತ್ತಲೂ ಎತ್ತೆತ್ತಲೂ
ಬರಿಯೆ ಅಂಧ ಮೇಘಗಳು,
ಕಪ್ಪು ನೆರಳುಗಳು
ಕೊಂಕು ಕೊರಳು, ಮುಖವಾಡ,
ಹುಸಿತು ಕೆಲೆದಾಟ,
ವಿಷ ಬೆರೆತ ಆ ಹಾರ ಭಾರಗಳು
ಮನಸಿರದ ಭಾರ ನಗೆ ಖಾರಗಳು.
ವಯಸ್ಸಾಗಿದೆ ಕಣ್ಣು ಮಂಜಾಗತೊಡಗಿವೆ
ಬೆಳಕು ನೋಡಲಾಗದೇ ಮೊಗ ಕವಾಟುಗಳನ್ನೆ
ಮುಖವಾಡ ಎಂದು ತಿಳಿದಿರಬೇಕು ನಾ
ಅಂದರೆ
ಇದು ನನ್ನ ಸ್ವಂತದ್ದೇ ಮುಖವಾಡವೇ?
ಬರುವದೇನುಂಟೋ ಅದು
ಬರುವುದು ಖಚಿತ
ಮಂಜುಗಣ್ಣಿನ ಜೊತೆಗೆ
ಮಬ್ಬುಗತ್ತಲೆ ಬಾಚಿ ತನ್ನಲ್ಲಿ ಅಡಗಿಸಿಕೊಳ್ಳಲು ಸದ್ಯ
ಬಾರಿಸುತಿದೆ ಕತ್ತಲದ ರಣಹಲಗೆ
ಬೆಳತನಕ ಆಟಾ ಆಡುವ
ಕಿಳ್ಳಿàಕ್ಯಾತರ ಹಾಡಿನ ನಾದ
ಮೋಹಕ ರಣವಾದ್ಯದ
ಮೈಮರೆಸುವ ವೇಷ ಅಗಾಧ
ಹಳೆಯ ಮೃದಂಗದ ಆ ಆ
ಹಾ ಹಾ ಹಾಹೂಹೂ
ಕತ್ತಲ ಹಾದಿಯ ಹಡದಿಯ ತುಂಬಾ
ಮಲ್ಲಿಗೆ ಸೇವಂತಿಗೆ ಹೂ ಪಕಳೆ
ನೆನಪಾಗಿದೆ
ಅಪ್ಪನ ಸಿದಿಗೆಯ ಸಿಂಗಾರದ ಮೆರವಣಿಗೆ
ಇನ್ನೆಲ್ಲಿದೆ ಸಾವಿನ ಹೊಸ ಉರವಣಿಗೆ…
– ಸಿದ್ಧಲಿಂಗ ಪಟ್ಟಣ ಶೆಟ್ಟಿ ; [email protected]