ನೋಟದಲ್ಲೇ ವೋಟು! : ಮಹಿಳೆಗಿಂತ ಸಮೀಕ್ಷೆ ಎಕ್ಸ್‌ಪರ್ಟ್‌ ಬೇಕೆ?

ಸ್ತ್ರೀ ಲೋಕ ಸಂಚಾರ

Team Udayavani, Apr 10, 2019, 9:48 AM IST

Avalu-Sameekshe

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ : Representative Image Used

ಹೆಣ್ಣಿಗಿಂತ ಸಮೀಕ್ಷೆ ಎಕ್ಸ್‌ಪರ್ಟ್‌ ಬೇರೆ ಇಲ್ಲ. ಎಲ್ಲ ಕೆಲಸಗಳ ಬಗ್ಗೆಯೂ ಅವರೊಳಗೊಂದು ಪೂರ್ವ ತಯಾರಿ, ಲೆಕ್ಕಾಚಾರ ಇದ್ದೇ ಇರುತ್ತೆ. ಅಳೆದು ತೂಗಿ, ನೂರಾರು ಬಾರಿ ಯೋಚಿಸಿಯೇ ಅವಳು ನಿರ್ಧಾರ ತಗೊಳ್ಳೋದು. ಬರೀ ಶಾಪಿಂಗ್‌ ಅಥವಾ ಮದುವೆಯ ವಿಷಯದಲ್ಲಿ ಮಾತ್ರ ಅಲ್ಲ, ನಿತ್ಯ ಜೀವನದ ಪ್ರತಿ ಕೆಲಸವನ್ನೂ ಅಳೆದು ತೂಗಿಯೇ ಮಾಡುವ ಜಾಯಮಾನ ನಮ್ಮದು…

ಒಂದು ಕೇಳಿದರೆ ಲಕ್ಷ ಲಕ್ಷ ವಸ್ತುಗಳನ್ನು ಎತ್ತಿ ತೋರಿಸುವ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ನಾನೊಂದು ಸಣ್ಣ ಮೂಗುತಿ ಆರಿಸುತ್ತಿದ್ದೆ. ಮೂಗು ಚುಚ್ಚಿಸಿಕೊಳ್ಳುವ ಎರಡು ವರ್ಷದ ಹಿಂದಿನ ಕನಸು ಈಡೇರಿದ್ದು ಮೊನ್ನೆ ಮೊನ್ನೆಯಷ್ಟೇ. ಅದೂ ಅಮ್ಮ, ಅತ್ತೆ, ಅತ್ತಿಗೆ, ಅಕ್ಕ, ಫ್ರೆಂಡ್ಸ್‌ ಗಳನ್ನೆಲ್ಲ ಕೇಳಿ, ಅವರು “ನಿಂಗೆ ಮೂಗುತಿ ಚೆನ್ನಾಗಿ ಕಾಣುತ್ತೆ’ ಅಂತ ಹೇಳಿದ ಮೇಲೆ. ಸ್ವಲ್ಪ ದಿನಗಳ ನಂತರ ಆ ಮೂಗುತಿಯನ್ನು ಬದಲಿಸಿ, ಬೇರೊಂದು ರೀತಿಯದ್ದನ್ನು ಧರಿಸುವ ಆಸೆಯಾಯ್ತು. ಒಂದಕ್ಕಿಂತ ಒಂದು ಚಂದ ಅನ್ನಿಸುವ ಸಾವಿರಾರು ಮೂಗುತಿಗಳಲ್ಲಿ ಯಾವುದನ್ನು ಖರೀದಿಸುವುದು ಅಂತ ಗೊಂದಲವಾಗಿ, ಎಲ್ಲ ಮೂಗುತಿಗಳೂ ಒಂದೊಂದಾಗಿ ನನ್ನ ಮೂಗಿನ ಮೇಲೆ ಬಂದು ಕೂತಂತೆ ಕಲ್ಪಿಸಿಕೊಂಡೆ. ಯಾವುದರಲ್ಲಿ ಹೇಗೆ ಕಾಣಿಸುತ್ತೇನೆ ಅಂತ ಮನಸ್ಸಿನೊಳಗೇ ಲೆಕ್ಕಾಚಾರ ಹಾಕತೊಡಗಿದೆ. ತಗೊಂಡಾದ ಮೇಲೆ ಯಾರಾದ್ರೂ, ಚೆನ್ನಾಗಿಲ್ಲ ಅಂದುಬಿಟ್ಟರೆ ಅಂತ, ಮನೆಯಲ್ಲಿ ಎಲ್ಲರನ್ನೂ ಕೇಳಿಕೊಂಡು ಬಂದೆ. ನನ್ನ ಈ ಪಡಿಪಾಟಲನ್ನು ನೋಡಿದ ಯಜಮಾನರು, “ಹೆಣ್ಮಕ್ಕಳಿಗೆ ಬೇರೆ ಕಸುಬಿಲ್ವಾ? ಇಷ್ಟು ಸಣ್ಣ ಸಣ್ಣ ವಿಷಯಕ್ಕೆಲ್ಲ ಅಷ್ಟೊಂದು ಸಮೀಕ್ಷೆ, ಲೆಕ್ಕಾಚಾರ ಹಾಕೋ ಅಗತ್ಯ ಇದ್ಯಾ?’ ಎಂದು ಕಿಚಾಯಿಸಿದರು. “ಹೌದು ಮತ್ತೆ. ಮೂಗುತಿ ಸೆಲೆಕ್ಟ್ ಮಾಡೋದು ಅಂದ್ರೆ ಕಮ್ಮೀನಾ? ಎಲ್ಲರ ಅಭಿಪ್ರಾಯ ಕೇಳಿ, ಲೆಕ್ಕಾಚಾರ ಹಾಕಿದ ಮೇಲೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯ’ ಅಂತ ಅವರ ಬಾಯಿ ಮುಚ್ಚಿಸಿದೆ.

ನಾನು ಮೊದಲಿನಿಂದಲೂ ಹಾಗೆಯೇ. “ಚೂಸಿ’ ಅಂತಾರಲ್ಲ, ಹಾಗೆ. ನನ್ನ ಆಯ್ಕೆಗಳು ಬೆಸ್ಟ್‌ ಆಫ್ ದ ಬೆಸ್ಟ್‌ ಆಗಿರಬೇಕು ಅಂತ ಬಯಸುವವಳು. ಬಟ್ಟೆ ಅಂಗಡಿಗೆ ಹೋದರೆ ನೂರು ಬಟ್ಟೆ ನೋಡಿ, ಒಂದನ್ನೂ ಖರೀದಿಸದೆ ಬಂದದ್ದಿದೆ. ನನ್ನ ಬಟ್ಟೆಯಂತೆ ಬೇರೆ ಯಾರ ಬಟ್ಟೆಯೂ ಇರಬಾರದು ಅನ್ನೋ ಹಠ. ಅಕ್ಕನಿಗೂ, ನನಗೂ ಒಂದೇ ರೀತಿಯ ಬಟ್ಟೆ ತಂದರೆ, ನಾನದನ್ನು ಹಾಕುತ್ತಿರಲಿಲ್ಲ. ಸಣ್ಣ ಪಿನ್‌ ಖರೀದಿಸಲೂ ನನಗೆ ಅರ್ಧ ಗಂಟೆ ಬೇಕಾಗುತ್ತಿತ್ತು. ಹಬ್ಬ- ಹರಿದಿನಗಳಲ್ಲಿ ಮನೆಮಂದಿಗೆಲ್ಲ ಬಟ್ಟೆ ಆರಿಸುವುದೂ ನನ್ನ ಜವಾಬ್ದಾರಿಯೇ ಆಗಿತ್ತು. “ನನ್ನ ಮಗಳ ಸೆಲೆಕ್ಷನ್‌ ಅಂದ್ರೆ ಸೆಲೆಕ್ಷನ್‌’ ಅಂತ ಯಾವಾಗಲೂ ಹೆಮ್ಮೆಯಿಂದ ಹೊಗಳುತ್ತಿದ್ದ ಅಪ್ಪನೂ ನನ್ನ ಸೆಲೆಕ್ಷನ್‌ ಹುಚ್ಚಿಗೆ ಬೇಸತ್ತು ಹೋಗುವ ಹಾಗಾಗಿದ್ದು ನನ್ನ ಮದುವೆಯ ವಿಷಯದಲ್ಲಿ.

ಅಪ್ಪ- ಅಮ್ಮ ತೋರಿಸುವ ಯಾವ ಹುಡುಗನನ್ನೂ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಕೆಲವರನ್ನು ಫೋಟೊ ನೋಡಿಯೇ ರಿಜೆಕ್ಟ್ ಮಾಡಿದರೆ, ಕೆಲವರನ್ನು ಭೇಟಿ ಮಾಡಿದ ನಂತರ “ಬೇಡ’ ಅನ್ನುತ್ತಿದ್ದೆ. ನನ್ನ ಹುಡುಗ ನೋಡೋಕೆ ಹೀರೋ ಥರ ಇರಬೇಕು, ಆರಡಿ ಎತ್ತರ ಇರಬೇಕು, ನಾನು ಹೈ ಹೀಲ್ಸ್‌ ಹಾಕಿ ಅವನ ಪಕ್ಕ ನಿಂತರೂ ಕುಳ್ಳಿ ಅನ್ನಿಸಬೇಕು, ಅವನನ್ನು ಅಪ್ಪಿಕೊಂಡಾಗ ಅವನ ಎದೆ ಬಡಿತ ಕಿವಿಗೆ ಕೇಳಿಸಬೇಕು ಅಂತೆಲ್ಲ ಫಿಲ್ಮಿ ಸ್ಟೈಲ್‌ನಲ್ಲಿ ಕನಸು ಕಾಣುತ್ತಿದ್ದೆ. ಹೀಗಿರುವಾಗ, ಒಂದು ಸಂಬಂಧ ಮನೆಯವರಿಗೆ ಬಹಳ ಹಿಡಿಸಿತ್ತು. ಹುಡುಗ ಒಳ್ಳೆಯ ಉದ್ಯೋಗದಲ್ಲಿದ್ದ. ನೋಡೋಕೂ ಚೆನ್ನಾಗಿದ್ದ. ಅವನನ್ನು ಬೇಡ ಅನ್ನೋಕೆ ಯಾವ ಕಾರಣವೂ ಇರಲಿಲ್ಲ. ಆದರೂ ನನಗೇಕೋ ಸಮಾಧಾನವಿಲ್ಲ. ನನ್ನ ಕನಸಿನ ರಾಜಕುಮಾರ ಅನ್ನಿಸಿಕೊಳ್ಳಲು ಇವನಲ್ಲಿ ಏನೋ ಕೊರತೆ ಕಾಣುತ್ತಿತ್ತು. ಯಾಕಂದ್ರೆ, ಹುಡುಗ ನನಗಿಂತ ಮೂರೇ ಇಂಚು ಎತ್ತರವಿದ್ದ. ಎಲ್ಲರಿಗೆ ಇಷ್ಟವಾಗಿದ್ದಾನೆ ಅಂತ ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲೇ ಇಲ್ಲ. ಕೊನೆಗೆ, ಆರಡಿ ಕಟೌಟ್‌ನ ಕೈ ಹಿಡಿಯುವ ಆಸೆಯನ್ನು ಅಕ್ಕನ ಮುಂದೆ ಹೇಳಿದೆ. ಅವಳು ತಲೆ ತಲೆ ಚಚ್ಚಿಕೊಳ್ಳುತ್ತಲೇ, ಅಪ್ಪನಿಗೆ ಅದನ್ನು ವಿವರಿಸಿದಳು. ಮುಂದೆ, ಹುಡುಗನ ಜಾತಕದ ಜೊತೆಗೆ ಅವನ ಎತ್ತರವೆಷ್ಟು ಅಂತ ಅಪ್ಪ ತಪ್ಪದೇ ಕೇಳುತ್ತಿದ್ದರು! ಆನಂತರವೂ ಒಂದೆರಡು ಹುಡುಗರನ್ನು ಬೇಡ ಅಂದಮೇಲೆ ಸಿಕ್ಕಿದ್ದು ನಮ್ಮ ರಾಯರು!

ನಾವು, ಹೆಣ್ಮಕ್ಕಳು ಇರೋದೇ ಹೀಗೆ ತಾನೇ? ಬರೀ ಶಾಪಿಂಗ್‌ ಅಥವಾ ಮದುವೆಯ ವಿಷಯದಲ್ಲಿ ಮಾತ್ರ ಅಲ್ಲ, ನಿತ್ಯ ಜೀವನದ ಎಲ್ಲ ಕೆಲಸವನ್ನೂ ಅಳೆದು ತೂಗಿಯೇ ಮಾಡುವ ಜಾಯಮಾನ ನಮ್ಮದು. ನಾಳೆ ಏನು ಅಡುಗೆ ಮಾಡೋದು, ತಂಗಿ ಮದುವೆಗೆ ಯಾವ ಸೀರೆ ಉಡೋದು, ಯಾವ ಡ್ರೆಸ್‌ಗೆ ಯಾವ ರೀತಿಯ ಹೇರ್‌ಸ್ಟೈಲ್‌ ಹೊಂದುತ್ತೆ, ಯಾವ ಡ್ರೆಸ್‌ನಲ್ಲಿ ತೆಳ್ಳಗೆ ಕಾಣುತ್ತೇನೆ, ಈ ಸೀರೆಗೆ ಈ ಬಣ್ಣದ ಬಳೆ ಓಕೇನಾ, ಅತ್ತೆ-ಮಾವ ಬಂದಾಗ ಹೇಗೆ ನಡೆದುಕೊಂಡರೆ ಅವರಿಗೆ ಇಷ್ಟವಾಗುತ್ತೆ, ಗಂಡನ ಸಿಟ್ಟನ್ನು ತಣಿಸಲು ಏನು ಮಾಡಬೇಕು, ಸಂಜೆ ಧಾರಾವಾಹಿ ನೋಡ್ತಾ ನೋಡ್ತಾ ಯಾವ ಕೆಲಸ ಮುಗಿಸಬಹುದು- ಹೀಗೆ ಎಲ್ಲ ಕೆಲಸಗಳ ಬಗ್ಗೆಯೂ ನಮ್ಮೊಳಗೊಂದು ಪೂರ್ವ ತಯಾರಿ, ಲೆಕ್ಕಾಚಾರ ನಡೆದಿರುತ್ತದೆ. ಗಂಡಸರಂತೆ ಹಿಂದು ಮುಂದು ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಲು, ನಾಳೆ ಏನಾಗುತ್ತೋ ಆಗಲಿ ಅಂತ ನಿರಾಳವಾಗಿ ಇರಲು ಸಾಧ್ಯವಿಲ್ಲ. ಈ ಗುಣಗಳೇ ತಾನೇ ನಮ್ಮ ಕೆಲಸದ ಅಚ್ಚುಕಟ್ಟುತನವನ್ನು, ಜೀವನಪ್ರೀತಿಯನ್ನು ಹೆಚ್ಚಿಸುವುದು?

ನಾನು ಬದುಕಿನ ಲೆಕ್ಕಾಚಾರಗಳನ್ನು ಕಲಿತಿದ್ದು ನನ್ನಮ್ಮನಿಂದಲೇ. ಎಲ್ಲ ವಿಷಯದಲ್ಲೂ ಅಮ್ಮನದ್ದು ಪರ್ಫೆಕ್ಟ್ ಲೆಕ್ಕಾಚಾರ. ಯಾವ ಅಂಗಡಿಯಲ್ಲಿ ಯಾವ ತರಕಾರಿ ಚೆನ್ನಾಗಿರುತ್ತದೆ ಅಂತ ಅಮ್ಮನಿಗೆ ಗೊತ್ತು. ಅಲ್ಲಿಂದಲೇ ತರಕಾರಿ ತರುವಂತೆ ಅಪ್ಪನಿಗೆ ಹೇಳುತ್ತಾಳೆ. ಅದರಲ್ಲೇನಾದರೂ ಮಿಸ್‌ ಆದ್ರೆ, ಅಮ್ಮನಿಗೆ ತಕ್ಷಣ ಗೊತ್ತಾಗಿ ಬಿಡುತ್ತದೆ. ದಿನಸಿ ಸಾಮಗ್ರಿಗಳನ್ನು ಕಣ್ಣಿನಲ್ಲಿ ನೋಡಿಯೇ, ಅವುಗಳ ಗುಣಮಟ್ಟ ಹೇಳಬಲ್ಲ ಅಮ್ಮ ಕೆಲವೊಂದು ಕಂಪನಿಗಳ ಬೇಳೆಕಾಳು, ಎಣ್ಣೆಯನ್ನು ಖರೀದಿಸುವುದೇ ಇಲ್ಲ. ಇನ್ನು, ಅಮ್ಮನ ಅಡುಗೆಯೂ ಅಷ್ಟೇ ಕ್ರಮಬದ್ಧವಾಗಿರುತ್ತದೆ. ಈ ವಾರದಲ್ಲಿ ಯಾವ ದಿನ, ಯಾವ ಅಡುಗೆ ಮಾಡಬೇಕು ಅಂತ ಮೊದಲೇ ತಯಾರಿ ಮಾಡಿಟ್ಟುಕೊಂಡಿರುತ್ತಾಳೆ. ತೋಟದ ಕೆಲಸ ನಡೆಯುವಾಗ, ಜಾಸ್ತಿ ಜನ ಕೆಲಸದವರು ಬಂದರೆ ರೊಟ್ಟಿ, ಚಪಾತಿಯಂಥ ಸಮಯ ಹಿಡಿಯುವ ತಿಂಡಿ ಮಾಡುವುದಿಲ್ಲ. ಹೊಟ್ಟೆ ತುಂಬುವ, ನೀರಡಿಕೆಯಾಗದಂಥ ತಿಂಡಿಗಳಿಗೆ ಆ ದಿನ ಹೆಚ್ಚು ಪ್ರಾಶಸ್ತ್ಯ. ಉಳಿದ ದಿನಗಳಲ್ಲಿ ಮನೆಯಲ್ಲಿ ಯಾರಿಗೆ, ಯಾವ ಅಡುಗೆ ಇಷ್ಟ ಅಂತ ಅರಿತುಕೊಂಡು, ಆ ಪ್ರಕಾರ ಅಡುಗೆ ಮಾಡುತ್ತಾಳೆ. ಮಕ್ಕಳು ಮುಂದಿನ ವಾರ ಊರಿಗೆ ಬರುತ್ತಾರೆ ಅಂತಾದರೆ, ಆ ದಿನದಿಂದಲೇ ವಿಶೇಷ ಅಡುಗೆಗೆ ತಯಾರಿ ಶುರುವಾಗುತ್ತದೆ.

ಮಾಡಿದ ಅಡುಗೆಯೇನಾದ್ರೂ ಮನೆಯವರಿಗೆ ಇಷ್ಟವಾಗದಿದ್ದರೆ, ಯಾಕೆ ಹಾಗಾಯ್ತು ಅಂತ ತಲೆಗೆ ಹುಳ ಬಿಟ್ಟುಕೊಂಡು, ಅದಕ್ಕೆ ಕಾರಣ ಹುಡುಕುವುದು ಅಮ್ಮನ ಜಾಯಮಾನ. ಅಡುಗೆ ರುಚಿಗೆಡಲು, ಹದ ಮೀರಿ ಹಾಕಿದ ನೀರು ಕಾರಣವೋ, ಹೆಚ್ಚು ಕುದಿಸಿದ್ದು ಕಾರಣವೋ ಅನ್ನೋ ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಕೆಗೆ ರಾತ್ರಿ ನಿದ್ದೆ ಬರುವುದಿಲ್ಲ. ಮತ್ತೂಮ್ಮೆ ಅದೇ ಅಡುಗೆಯನ್ನು ಮಾಡಿ, “ಇವತ್ತು ಹೇಗಾಗಿದೆ?’ ಅಂತ ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತಾಳೆ. ಸಮೀಕ್ಷೆಯಲ್ಲಿ ಜಾಸ್ತಿ ವೋಟು ಆಕೆಯ ಪರವಾಗಿ ಬೀಳಲೇಬೇಕು! ಇನ್ನು ಹೊಸರುಚಿ ಟ್ರೈ ಮಾಡಿದಾಗ, ನಾವ್ಯಾರೂ ಅದನ್ನು ತಿಂದು ಸುಮ್ಮನೆ ಕೂರುವಂತಿಲ್ಲ. ಅಡುಗೆ ಬಗ್ಗೆ ಲೈಕ್‌, ಕಮೆಂಟ್‌ ಮಾಡಲೇಬೇಕು. ಎಲ್ಲರ ಕಮೆಂಟ್‌ಗಳನ್ನು ಪರಿಗಣಿಸಿದ ಮೇಲೆ ಹೊಸ ರುಚಿಯನ್ನು ಇನ್ನೂ ಹೊಸದಾಗಿ ಟ್ರೈ ಮಾಡುತ್ತಾಳೆ. ಇನ್ನು, ಇಷ್ಟು ಅಡುಗೆಗೆ ಇಷ್ಟು ಉಪ್ಪು, ಇಷ್ಟು ಜನರಿಗೆ ಇಷ್ಟು ಪಾವು ಅನ್ನ ಅನ್ನೋ ಅಮ್ಮಂದಿರ ಲೆಕ್ಕಾಚಾರ ಎಂದಾದರೂ ತಪ್ಪುವುದುಂಟೇ?

ಶಿವನಿಗೆ ಮೂರನೇ ಕಣ್ಣು ಇರುವಂತೆ, ಹೆಣ್ಮಕ್ಕಳಿಗೆ “ದೂರದೃಷ್ಟಿ’ ಅನ್ನೋ ಒಂದು ಎಕ್ಸ್‌ಟ್ರಾ ಕಣ್ಣಿದೆ. ಬೇಕು- ಬೇಡಗಳ ತಕ್ಕಡಿಯನ್ನು ಬ್ಯಾಲೆನ್ಸ್‌ ಮಾಡುತ್ತಾ, ಏನು ಮಾಡಿದರೆ ಏನಾಗುತ್ತದೆ ಅಂತ ಅಳೆದು, ತೂಗಿ ನೋಡುವುದು ಅದರ ಕೆಲಸ. ಗಂಡಸರು ಒಂದು ವಿಷಯವನ್ನು ಎರಡು ಕಣ್ಣುಗಳಿಂದ ನೋಡಿದರೆ, ನಾವು ಅದನ್ನು ಮೂರನೇ ಕಣ್ಣಿನಿಂದ ನೋಡು ತ್ತೇವೆ. ಈಗ ಗೊತ್ತಾಯ್ತಲ್ಲ, ಹೆಂಗಸರ್ಯಾಕೆ ಹೀಗೆ ಅಂತ.

ಸ್ಲೀಪಿಂಗ್‌ ಬ್ಯೂಟಿ
ಪರೀಕ್ಷೆ ಎಂದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತಂಕ, ದುಗುಡ ಏಳುತ್ತದೆ. ಆದರೆ ಅಮೆರಿಕದ ರೋಡಾ ಎಂಬ ಕಾಲೇಜು ತರುಣಿಗೆ ಮಾತ್ರ ಪರೀಕ್ಷೆ ಎಂದರೆ ಒಂದಿನಿತೂ ಭಯವೇ ಇಲ್ಲ. ಪರೀಕ್ಷೆಗೆ ತಿಂಗಳಿರುವಂತೆಯೇ ನಿದ್ದೆ ಊಟ ಬಿಟ್ಟು ಎಲ್ಲರೂ ಓದುವುದರಲ್ಲಿ ಮುಳುಗುತ್ತಾರೆ. ಆದರೆ ಪರೀಕ್ಷೆಯ ದಿನವೇ ರೋಡಾ ಗಡದ್ದಾಗಿ ನಿದ್ದೆ ಮಾಡಿದ್ದಳು. ನಿಜ ಹೇಳಬೇಕೆಂದರೆ ಕಳೆದ 22 ಗಂಟೆಗಳಿಂದಲೂ ರೋಡಾ ನಿದ್ದೆ ಮಾಡುತ್ತಿದ್ದಳು. ನೋಡ ನೋಡುತ್ತಿದ್ದಂತೆಯೇ ಪರೀಕ್ಷೆಯ ಸಮಯವೂ ಆಗಿ ವಿದ್ಯಾರ್ಥಿಗಳೆಲ್ಲರೂ ಪರೀಕ್ಷೆ ಬರೆದೂ ಮುಗಿಸಿ ವಾಪಸ್ಸಾದರು. ಆದರೆ ರೋಡಾ ಮಾತ್ರ ಇನ್ನೂ ನಿದ್ದೆ ಮಾಡುತ್ತಲೇ ಇದ್ದಳು. ಅಲ್ಲಿಯ ತನಕ ಹಾಸ್ಟೆಲ್‌ನ ಅವಳ ಕೋಣೆಯತ್ತ ಸುಳಿಯದ ಗೆಳತಿಯರು ಆತಂಕದಿಂದ ಬಂದಾಗಲೂ ಆಕೆ ನಿದ್ದೆ ಮಾಡುತ್ತಿದ್ದಳು. ಭಯಗೊಂಡು ವೈದ್ಯರ ಬಳಿ ಕರೆದೊಯ್ದಾಗ ಗೊತ್ತಾಗಿದ್ದು ಆಕೆಗೆ “ಹೈಪರ್‌ ಇನ್‌ಸೋಮ್ನಿಯಾ’ ಇದೆ ಎಂದು. ಎಲ್ಲೆಂದರಲ್ಲಿ ದಿನಗಟ್ಟಲೆ ನಿದ್ದೆ ಹೋಗುವ ಕಾಯಿಲೆ ಅದು. ಆಕೆಯನ್ನು “ಸ್ಲೀಪಿಂಗ್‌ ಬ್ಯೂಟಿ’ ಎಂದು ಕರೆಯಬಹುದೋ ಅಥವಾ ಪರೀಕ್ಷೆ ಸ್ಕಿಪ್‌ ಮಾಡಿದ್ದಕ್ಕೆ “ಸ್ಕಿಪ್ಪಿಂಗ್‌ ಬ್ಯೂಟಿ’ ಎಂದು ಕರೆಯಬಹುದೋ, ನೀವೇ ನಿರ್ಧರಿಸಿ!

— ಕಾವ್ಯ ಎಂ.ಎಸ್‌.

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.