ಬುಟ್ಟಿಯಿಂದ ಬಾಳ ಬುತ್ತಿ
Team Udayavani, Jul 3, 2019, 5:00 AM IST
“ಬಿದಿರು ನೀನಾರಿಗಲ್ಲದವಳೂ…’ ಹಾಡನ್ನು ಕೇಳಿದ್ದೀರಲ್ಲ. ಅದೇ ಬಿದಿರು, ಇಲ್ಲೊಬ್ಬ ಮಹಿಳೆಯ ತುತ್ತಿನ ಚೀಲಕ್ಕೂ ಆಧಾರವಾಗಿದೆ. ವಿಜಯಪುರದ ಶಾಸ್ತ್ರಿ ಮಾರುಕಟ್ಟೆಯ ಬಳಿ ಸಕುಬಾಯಿ ಎಂಬಾಕೆ, ಸುಮಾರು 30 ವರ್ಷಗಳಿಂದ ಬಿದಿರಿನ ಬುಟ್ಟಿ ವ್ಯಾಪಾರದಲ್ಲಿ ತೊಡಗಿದ್ದಾಳೆ.
ಮನೆಯಲ್ಲಿ ಬಡತನವಿದ್ದುದರಿಂದ, ಆಕೆ ದುಡಿಯುವುದು ಅಗತ್ಯವಾಗಿತ್ತು. ಏನು ಕೆಲಸ ಮಾಡುವುದೆಂಬ ಹುಡುಕಾಟದಲ್ಲಿದ್ದಾಗ, ಪರಿಚಯಸ್ಥರಿಂದ ಬಿದಿರಿನ ಬುಟ್ಟಿಯ ವ್ಯಾಪಾರದ ಬಗ್ಗೆ ತಿಳಿಯಿತು. ಆಗ ಜನ ಬಿದಿರಿನ ಬುಟ್ಟಿಗಳನ್ನೇ ಹೆಚ್ಚಾಗಿ ಬಳಸುತ್ತಿದ್ದುದರಿಂದ, ವ್ಯಾಪಾರದಲ್ಲಿ ದುಡಿಮೆ ಕಂಡುಕೊಳ್ಳಬಹುದು ಅಂತ ಸಕುಬಾಯಿಗೂ ಅನ್ನಿಸಿತು.
ಪ್ರಾರಂಭದಲ್ಲಿ, ಹತ್ತಿರದ ಮಾರುಕಟ್ಟೆಯಿಂದ ಬಿದಿರಿನ ಬುಟ್ಟಿಗಳನ್ನು ಖರೀದಿಸಿ, ಮಾರಾಟ ಮಾಡತೊಡಗಿದರು. ನಂತರ ಸ್ವತಃ ತಾವೇ ಎರಡು-ಮೂರು ತಿಂಗಳಿಗೊಮ್ಮೆ ರಾಮದುರ್ಗ, ಬನಹಟ್ಟಿ, ಬಾಗಲಕೋಟೆ ಜಿಲ್ಲೆಗಳಿಗೆ ಹೋಗಿ ಬುಟ್ಟಿಗಳನ್ನು ತಂದು, ವಿಜಯಪುರದ ವಾರದ ಸಂತೆಗಳಿಗೆ ಹೋಗಿ ಮಾರತೊಡಗಿದರು. ಈಗ ಸ್ವತಃ ಹೋಗಲು ಆಗದಿದ್ದರೆ, ಅಲ್ಲಿಂದ ಬುಟ್ಟಿಗಳನ್ನು ತರಿಸಿಕೊಳ್ಳುತ್ತಾರೆ.
ಸೊಸೆಯ ಸಾಥ್
ಸಕುಬಾಯಿಯ ವ್ಯಾಪಾರದಲ್ಲಿ ಸೊಸೆ ಲಕ್ಷ್ಮಿ ಕೂಡಾ ಕೈ ಜೋಡಿಸುತ್ತಾರೆ. ಮೂವತ್ತು ವರ್ಷಗಳ ಹಿಂದೆ 2-3 ರೂ. ಇದ್ದ ಬುಟ್ಟಿಗಳ ಬೆಲೆ ಈಗ 30-60 ರೂ. ಆಗಿದೆ. ಬುಟ್ಟಿಗಳನ್ನಷ್ಟೇ ಅಲ್ಲದೆ, ಬಿದಿರಿನ ಮೊರ, ಕಸಬರಿಗೆಯನ್ನೂ ಇವರು ಮಾರುತ್ತಾರೆ. ಸಾಮಾನ್ಯ ದಿನಗಳಲ್ಲಿ ಕೇವಲ ನಗರವಾಸಿಗಳು ಮಾತ್ರ ಬಿದಿರಿನ ಬುಟ್ಟಿ ಖರೀದಿಸುವುದರಿಂದ ದಿನಕ್ಕೆ 1 ಸಾವಿರ ರೂ. ಸಂಪಾದನೆಯಾಗುತ್ತದೆ. ಆದರೆ, ಮಾರ್ಚ್-ಮೇವರೆಗಿನ ಬೇಸಿಗೆಯಲ್ಲಿ ಗ್ರಾಮ, ಹಳ್ಳಿ, ತಾಲೂಕುಗಳ ಜನ ಬಿದಿರಿನ ಬುಟ್ಟಿ ಖರೀದಿಸುವುದರಿಂದ ವ್ಯಾಪಾರ ಜೋರಾಗಿರುತ್ತದೆ ಎನ್ನುತ್ತಾರೆ ಸಕುಬಾಯಿ.
“ಪರಿಚಯಸ್ಥರಿಂದ ಬಿದಿರಿನ ವ್ಯಾಪಾರದ ಬಗ್ಗೆ ಕೇಳಿದ ನಂತರ, ಸಣ್ಣ ಪ್ರಮಾಣದ ಸಾಲ ಮಾಡಿ ವ್ರಾಪಾರ ಪ್ರಾರಂಭಿಸಿದೆ. ಬಂದ ಆದಾಯದಲ್ಲಿ ಸ್ವಲ್ಪ ಉಳಿಸಿ, ಅದರಿಂದ ಬಿದಿರಿನ ಬುಟ್ಟಿ, ಮೊರಗಳನ್ನು ತಂದು ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದೇನೆ’
-ಸಕು ಬಾಯಿ, ವ್ಯಾಪಾರಸ್ಥೆ
-ವಿದ್ಯಾಶ್ರೀ ಹೊಸಮನಿ