ಲಾಕ್‌ಡೌನ್ ಕಲ್ಯಾಣ: ವಾಲಗವಿಲ್ಲ, ವೈಭೋಗವಿಲ್ಲ ಇದೆಂಥ ಮದುವೆ


Team Udayavani, May 6, 2020, 10:00 AM IST

ಲಾಕ್‌ಡೌನ್ ಕಲ್ಯಾಣ: ವಾಲಗವಿಲ್ಲ, ವೈಭೋಗವಿಲ್ಲ ಇದೆಂಥ ಮದುವೆ

ಸಾಂದರ್ಭಿಕ ಚಿತ್ರ

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಅಂತ ಹೇಳುತ್ತಾರಾದರೂ, ವಾಸ್ತವದಲ್ಲಿ ಅದು ನಡೆಯುವುದು ಭೂಮಿ ಮೇಲೇ. ಲೈಫ‌ಲ್ಲಿ ಒಂದೇ ಸಲ ಮದುವೆಯಾಗೋದು, ಹಾಗಾಗಿ ಅದ್ಧೂರಿಯಾಗಿ ಆಗ್ಬೇಕು ಅಂತ ಕೆಲವರು ಆಸೆಪಟ್ಟರೆ, ಒಂದು ದಿನದ ಸಂಭ್ರಮಕ್ಕೆ, ಅಷ್ಟೆಲ್ಲಾ ದುಂದುವೆಚ್ಚ ಮಾಡ್ಬೇಕಾ ಅನ್ನೋದು ಕೆಲವರ ಅಭಿಪ್ರಾಯ. ಊರವರನ್ನೆಲ್ಲಾ ಕರೆದು ಊಟ ಹಾಕುವ ಆಸೆ ಕೆಲವರಿಗಾದರೆ, ಹತ್ತಿರದ ಬಂಧುಗಳ ಸಮ್ಮುಖದಲ್ಲಿ ಸಪ್ತಪದಿ ತುಳಿಯುವ ಕನಸು ಉಳಿದವರದ್ದು. ಆದರೆ, ಕೊರೊನಾ ಲಾಕ್‌ಡೌನ್‌ ಕಾರಣದಿಂದ, ಮದುವೆಗಳು ಸರಳವಾಗಿವೆ. ವಧು- ವರ ಮತ್ತು ಅವರ ಮನೆಯವರಷ್ಟೇ ಸೇರುವ ಸಣ್ಣ ಸಮಾರಂಭವಾಗಿದೆ. ಹೀಗಿರುವಾಗ, ಸರಳ ಮದುವೆಯೇ ಸರಿ ಎನ್ನುವ ಒಬ್ಬ ಹುಡುಗನೂ, ತನ್ನ ಮದುವೆಯನ್ನು ಸಂಭ್ರಮದಿಂದ ಒಪ್ಪಿಕೊಳ್ಳಲು ಆಗುತ್ತಿಲ್ಲ ಎನ್ನುವ ಹುಡುಗಿಯೂ ತಂತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ…

“ಅಪ್ಪಾ, ನೀವ್‌ ಹುಡುಕಿದ ಹುಡುಗನ್ನೇ ಮದ್ವೆ ಆಗ್ತಿನಿ. ಆದ್ರೆ, ಮದ್ವೆ ಮಾತ್ರ ಎಷ್ಟು ಧಾಮ್‌ ಧೂಮ್‌ ಅಂತ ಆಗ್ಬೇಕು ಅಂದ್ರೆ, ನೋಡಿದವರೆಲ್ಲ ವಾರಗಟ್ಟಲೆ ನನ್‌ ಮದ್ವೆ ಬಗ್ಗೇನೆ ಮಾತಾಡ್ಬೇಕು…’ ಈ ಮಾತನ್ನ ನಾನು ಅಪ್ಪನ ಬಳಿ ಅದೆಷ್ಟು ಬಾರಿ ಹೇಳಿದ್ದೇನೋ ಲೆಕ್ಕವಿಲ್ಲ. ಪ್ರತಿ ಬಾರಿ ಇದನ್ನು ಹೇಳಿದಾಗಲೂ, ಅಪ್ಪ ನಗುತ್ತಾ- “ಅಲ್ವಾ ಮತ್ತೆ, ನಂಗಿರೋದು ಒಬ್ಬಳೇ ರಾಜಕುಮಾರಿ. ಅವಳ ಮದುವೆಗೆ ಇಡೀ ರಾಜ್ಯಕ್ಕೇ ಚಪ್ಪರ ಹಾಕಿಸ್ತೀನಿ’ ಅನ್ನುತ್ತಿದ್ರು. “ಹುಡುಗನ ಮನೆಯವ್ರಿಗಿಂತ ಇವಳ ಡಿಮ್ಯಾಂಡೇ ಜಾಸ್ತಿ ಇರುತ್ತೇನೋ’ ಅಂತ ಅಮ್ಮ ಗೊಣಗ್ತಾ ಇದ್ರು. ಆದರೆ ಅದನ್ನು ನಾವಿಬ್ಬರೂ ಕಿವಿಗೆ ಹಾಕಿಕೊಂಡಿದ್ದೇ ಇಲ್ಲ…

ಹುಡುಗಿಯರಿಗೆ, ತಾನು ಮದುವೆಯಾಗೋ ಹುಡುಗ ಹೀಗಿರಬೇಕು, ಹಾಗಿರಬೇಕು ಅಂತೆಲ್ಲಾ ಕನಸುಗಳು ಇರುತ್ತವಂತೆ. ಆದ್ರೆ, ನಂಗೆ ಮಾತ್ರ, ಮದುವೆ ಅದ್ಧೂರಿಯಾಗಿ ಆಗ್ಬೇಕು ಅಂತಷ್ಟೇ ಕನಸು. ಘಮಘಮಿಸುವ ಹೂಗಳಿಂದ ಶೃಂಗರಿಸಲ್ಪಟ್ಟ ಕಲ್ಯಾಣಮಂಟಪ, ಮಂಟಪದ ಸುತ್ತ ದೀಪಾಲಂಕಾರ, ಆಪ್ತರು, ನೆಂಟರು ಅಂತ ಕನಿಷ್ಠ ಸಾವಿರ ಜನ, ಅವರ ಭಾವ- ಭಂಗಿಗಳನ್ನೆಲ್ಲ ಸೆರೆ ಹಿಡಿಯಲು ಇಬ್ಬರು ಫೋಟೋಗ್ರಾಫ‌ರ್‌, ಒಬ್ಬ ವಿಡಿಯೋಗ್ರಾಫ‌ರ್‌, ಮದುವೆಯ ಕಳೆ ಹೆಚ್ಚಿಸುವ ಓಲಗದ ಸದ್ದು, ಬಾಯಿ ಚಪ್ಪರಿಸುವಂಥ ಭೋಜನ ವ್ಯವಸ್ಥೆ, ಆಗಾಗ ಪಾನಕ ವಿತರಣೆ, ಅತಿಥಿಗಳು ಹೊರಡುವಾಗ, ಎಲ್ಲರಿಗೂ ಚಂದದ ಗಿಫ್ಟ್, ಊಟ ಆದ್ಮೇಲೆ ತರಲೆ ಫ್ರೆಂಡ್ಸ್ ಗಳ ಜೊತೆಗೆ ಫೋಟೋಶೂಟ್ ಹೈಸ್ಕೂಲ್,  ಕಾಲೇಜಿನಲ್ಲಿದ್ದಾಗಲೇ ಹೀಗೆಲ್ಲಾ ಕನಸು ಕಂಡಿದ್ದೆ.

ಅದಾದ್ಮೇಲೆ ಅಕ್ಕನ ಮದುವೆ, ಗೆಳತಿಯರ ಮದುವೆಯಲ್ಲೆಲ್ಲಾ ಓಡಾಡಿ ಕನಸುಗಳೂ ಅಪ್‌ಡೇಟ್‌ ಆಗಿದ್ದವು. ಮೆಹಂದಿ, ಸಂಗೀತ್‌ ಅಂತೆಲ್ಲಾ, ಉತ್ತರ ಭಾರತೀಯ ಶೈಲಿಯನ್ನೆಲ್ಲ “ಮದುವೆ ಮೆನು’ವಿನಲ್ಲಿ ಸೇರಿಸಿಬಿಟ್ಟಿದ್ದೆ.

ನನ್ನ ಈ ಪ್ಲಾನ್‌ ಕೇಳಿ ತಂಗಿಯೂ (ಚಿಕ್ಕಪ್ಪನ ಮಗಳು) ಖುಷ್‌ ಆಗಿದ್ದಳು. “ಲೇ, ನಿನ್ನ ಮದುವೆ ದಿನ ನಾನು ಹೆಂಗ್‌ ರೆಡಿ ಆಗ್ತಿನಿ ನೋಡ್ತಿರು. ಮದುಮಗಳು ನೀನಾ, ನಾನಾ ಅಂತ ಹುಡುಗನಿಗೆ ಕನ್‌ಫ್ಯೂಸ್‌ ಆಗ್ಬೇಕು. ಸಂಗೀತ್‌, ಮೆಹಂದಿ ದಿನ ಫ್ಯಾಮಿಲಿ ಅಲ್ಲಿ ಎಲ್ಲರೂ ಡಾನ್ಸ್ ಮಾಡಲೇಬೇಕು. ನಾನೇ ಕೊರಿಯೋಗ್ರಫಿ ಮಾಡ್ತೀನಿ..’ ಅಂತೆಲ್ಲಾ ಕನಸಿನಲ್ಲಿ ಕುಣಿಯುತ್ತಿದ್ದಳು. ಹೀಗೆ, ನಮ್ಮಪ್ಪ ಅಮ್ಮ ನನ್ನ ಮದುವೆ ಬಗ್ಗೆ ಯೋಚಿಸೋ ಮೊದಲೇ, ನಾನು ಮದುವೆಗೆ ರೆಡಿ ಆಗಿಬಿಟ್ಟಿದ್ದೆ.

ಕಳೆದ ಡಿಸೆಂಬರ್‌ನಲ್ಲಿ, ಮನೆಯವರು ಹುಡುಗನನ್ನು ನೋಡಿದರು. ಜನವರಿಯಲ್ಲಿ ನಾವಿಬ್ಬರೂ ಭೇಟಿ ಆದೆವು. ಇಬ್ಬರಿಗೂ ಪರಸ್ಪರ ಒಪ್ಪಿಗೆ ಆಯಿತು. ಫೆಬ್ರವರಿ ಮೊದಲ ವಾರದಲ್ಲಿ
ನಿಶ್ಚಿತಾರ್ಥ ನಡೆದು, ಮೇ ಮೊದಲ ವಾರದಲ್ಲಿ ಮದುವೆ ಫಿಕ್ಸ್ ಆಯಿತು. ಮದುವೆ ದಿನ ಫಿಕ್ಸ್ ಆದ ಕೂಡಲೇ, ಫ್ರೆಂಲ್ಲಾ ಗಳಿಗೆಲ್ಲಾ ಫೋನ್‌ ಮಾಡಿ ತಿಳಿಸಿದೆ. ಎಲ್ಲರೂ ಒಂದು ವಾರ ಮೊದಲೇ ರಜೆಗೆ ಅರ್ಜಿ ಹಾಕಿ ಅಂತಲೂ ಹೇಳಿದೆ. ಮಾರ್ಚ್‌ನಲ್ಲಿ ಪ್ರಿ ವೆಡ್ಡಿಂಗ್‌ ಶೂಟ್‌ ಕೂಡಾ ಪ್ಲಾನ್‌ ಮಾಡಿದ್ದೆ. ಯಾವ ಅಡುಗೆಯವರಿಗೆ ಹೇಳುವುದು, ಎಷ್ಟು ಜನಕ್ಕೆ ಊಟ, ಊಟದಲ್ಲಿ ಏನೇನು ಇರಬೇಕು ಅಂತ ಅಪ್ಪ ಒಂದೊಂದಾಗಿ ಡಿಸೈಡ್‌ ಮಾಡತೊಡಗಿದರು. ಸೀರೆ ಶಾಪಿಂಗ್‌ ಎಲ್ಲಿ ಮಾಡುವುದು, ಧಾರೆ ಸೀರೆ ಯಾವ ಬಣ್ಣದ್ದು, ರಿಸೆಪ್ಷನ್‌ ದಿನ ಹುಡುಗನ ಔಟ್‌ಫಿಟ್‌
ಹೇಗಿರಬೇಕು ಅಂತೆಲ್ಲಾ ಪ್ಲಾನ್‌ ಮಾಡತೊಡಗಿದೆ. ನನ್ನ ಕನಸಿಗೆ ಸರಿಯಾಗಿ ತಣ್ಣೀರು ಎರಚಬೇಕು ಅಂತ ದೇವರೂ ಪ್ಲಾನ್‌ ಹಾಕಿದ್ದ ಅಂತ ಕಾಣುತ್ತೆ. ಅದೆಲ್ಲೋ ಹುಟ್ಟಿದ ಕೊರೊನಾ, ವಿಲನ್‌ ಥರ ಭಾರತಕ್ಕೆ ಬಂತು. ಎಲ್ಲರೂ ಮನೆಯೊಳಗೇ ಇರಿ, ಗುಂಪುಗುಂಪಾಗಿ ಒಟ್ಟಿಗೆ ಸೇರಬೇಡಿ, ಕಲ್ಯಾಣಮಂಟಪಗಳನ್ನು ಕ್ವಾರಂಟೈನ್‌ ವಾರ್ಡ್‌ ಮಾಡಿ ಅಂದುಬಿಟ್ಟಿತು ಸರ್ಕಾರ!
ಮದುವೆ-ಮುಂಜಿ ಮಾಡಂಗಿಲ್ಲ, ಮಾಡುವುದಾದರೂ 10-20 ಜನಕ್ಕೆ ಮಾತ್ರ ಅವಕಾಶ ಅಂದರು. ಇಂಥದ್ದೊಂದು ಪರಿಸ್ಥಿತಿ ಎದುರಾಗುತ್ತೆ ಅಂತ ಯಾರು ಊಹಿಸಿದ್ದರು? ಮದುವೆ ಮುಂದೂಡುವ ಮಾತು ಬಂದಾಗ, “ಒಂದು ವಾರ ಲಾಕ್‌ಡೌನ್‌ ತಾನೇ, ಆಮೇಲೆ ಎಲ್ಲಾ ಸರಿ ಹೋಗುತ್ತೆ…’ ಅಂದುಬಿಟ್ಟರು ಹಿರಿಯರು. ಮಾರ್ಚ್‌ 31ರವರೆಗೆ ಅಂದಿದ್ದ  ಲಾಕ್‌ಡೌನ್‌ ಏಪ್ರಿಲ್‌ 14ರಿಂದ ಮೇ ಅಂತ ಮುಂದೆ ಹೋಗುತ್ತಾ ಹೊಯ್ತು.

ಇನ್ನೇನು ಮಾಡೋಕಾಗುತ್ತೆ? ಹುಡುಗಿಯ ಮನೆಯಲ್ಲಿ, ವಧು- ವರರ ಅಪ್ಪ ಅಮ್ಮನ ಸಮ್ಮುಖದಲ್ಲೇ ಮದುವೆ ಮಾಡೋದು ಅಂತ ನಿರ್ಧರಿಸಲಾಯ್ತು. ಮದುವೆಯ ಅಂತಿಮ ತಯಾರಿಯಾಗಿ, ಡಿಸಿ, ಎಸ್‌ಪಿ ಬಳಿ ಹೋಗಿ ಅನುಮತಿ ಕೇಳಿ ಬಂದಿದ್ದಾರೆ ಅಪ್ಪ. ಕೇವಲ 20 ಜನಕ್ಕಷ್ಟೇ ಅವಕಾಶ ಅಂತ ಹೇಳಿದ್ದಾರಂತೆ. ಮದುವೆ ಬಗ್ಗೆ ಎಷ್ಟೊಂದು ಕನಸು ಕಂಡಿದ್ದೆ. ಎಲ್ಲವೂ ಚೂರು ಚೂರಾಯ್ತು. “ಎಲ್ಲಾ ಮುಗಿದಮೇಲೆ ರಿಸೆಪ್ಶನ್‌ ಇಟ್ಟುಕೊಳ್ತೀವಿ. ಆಗ ಎಲ್ಲರೂ ಬರಬೇಕು’ ಅಂತ ಫ್ರೆಂಡ್ಸ್ ಗೆ ಫೋನ್‌ ಮಾಡಿ, ಬೇಜಾರು ಕಡಿಮೆ ಮಾಡಿಕೊಳ್ಳುತ್ತಿದ್ದೇನೆ ಈಗ…

ನಿರ್ಮಲ ಸಿ.

ಟಾಪ್ ನ್ಯೂಸ್

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.