ದ್ವಿತೀಯ ಚುಂಬನಂ ದಂತ ಭಗ್ನಂ
ಅಂತರ ಗಂಗೆ
Team Udayavani, May 1, 2019, 6:25 AM IST
ಹೆಣ್ಣು ಔದ್ಯೋಗಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಸಂತಾನೋತ್ಪತ್ತಿಯ ಫಲವತ್ತತೆಗೆ ಪ್ರಕೃತಿ ಸಹಜವಾದ ಸೀಮಾ ರೇಖೆ ಸ್ತ್ರೀಗೆ ಇದೆ. ಆ ಕಟ್ಟಳೆಯನ್ನು ಮೀರಲು ಸಾಧ್ಯವಿಲ್ಲ. ಈ ಸವಾಲನ್ನು ಸ್ತ್ರೀಯರು ಬುದ್ಧಿವಂತಿಕೆಯಿಂದ ಎದುರಿಸಬೇಕು.
ನಲವತ್ತೂಂದು ವರ್ಷದ ಸ್ವಾತಿ, ಸ್ತ್ರೀರೋಗ ತಜ್ಞರ ಬಳಿ ಅಂಡಾಶಯಗಳಿಗೆ ತಗುಲಿದ್ದ ಸೋಂಕಿಗೆ ಚಿಕಿತ್ಸೆ ಪಡೆದಿದ್ದಾರೆ. ಲೋಕಾರೂಢಿಯಂತೆ ವೈದ್ಯರು ಮದುವೆ- ಮಕ್ಕಳ ಬಗ್ಗೆ ಮಾತನಾಡಿದಾಗ ಸ್ವಾತಿಗೆ ದುಃಖ ಒತ್ತರಿಸಿಕೊಂಡು ಬಂದಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಇದ್ದಿದ್ದರಿಂದ, ಕೆಲಸದ ಒತ್ತಡದಲ್ಲಿ ಮದುವೆಯ ಬಗ್ಗೆ ಗಮನ ಕೊಟ್ಟೇ ಇರಲಿಲ್ಲ.
ಎಂಟು ವರ್ಷಗಳ ಹಿಂದೆ, ಮದುವೆ- ಮಕ್ಕಳು ಮಾಡಿಕೊಂಡು, ಕೆಲಸವನ್ನೂ ಮಾಡಿಕೊಂಡು, ಆದರ್ಶ ಗೃಹಿಣಿಯೆನಿಸಿಕೊಳ್ಳಬೇಕು ಎಂಬ ಆಸೆಯನ್ನು ಗೆಳೆಯನೊಬ್ಬ ಚಿವುಟಿಹಾಕಿದ್ದ. ಅವನು ಮೊದಲೇ ಮದುವೆಯಾಗಿರುವ ಸುದ್ದಿ ತಿಳಿಯುವಷ್ಟರಲ್ಲಿ ಏಳು ವರ್ಷಗಳು ಕಳೆದುಬಿಟ್ಟಿದೆ. ಈಗ ವಯಸ್ಸು ನಲವತ್ತು ದಾಟಿದೆ. ತನ್ನ time ಮುಗಿಯಿತು ಎಂದು ಸ್ವಾತಿ ಅಳುತ್ತಾರೆ.
ಕುಟುಂಬ ವಲಯದಲ್ಲಿ ಇವರ ಮದುವೆಯದ್ದೇ ಒಂದು ದೊಡ್ಡ ಚರ್ಚೆ. ಮದುವೆಯಾಗಿ ಮಕ್ಕಳಾದರೆ ಮಾತ್ರ ಜೀವನದಲ್ಲಿ ಸಾರ್ಥಕತೆ ಅನ್ನುವಂಥವರು ಸ್ವಾತಿಯನ್ನು ಕಂಡಾಗ ಕೊಂಕು ನುಡಿಯುತ್ತಾರೆ. ಇಲ್ಲವೇ “ಅಯ್ಯೋ ಪಾಪ’ ಅಂತ ಕರುಣೆ ಉಕ್ಕಿಸುತ್ತಾರೆ.
ಜನರು ಏನೇ ಮಾತಾಡಿದರೂ, ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ರೂಢಿಸಿಕೊಳ್ಳಲು ಸಾಧ್ಯವೇ ಎಂಬ ಸಂದೇಹವನ್ನಿಟ್ಟುಕೊಂಡು ನನ್ನ ಬಳಿ ಬಂದಿದ್ದರು; ಜೊತೆಗೆ ಮದುವೆ- ಮಕ್ಕಳು- ಸಂಸಾರ ಇದರ ಬಗ್ಗೆ ಅವರ ಅಭಿಪ್ರಾಯವನ್ನು ನನ್ನ ಬಳಿ ಮುಕ್ತವಾಗಿ ಹಂಚಿಕೊಳ್ಳಲು ಅವರು ಆಸಕ್ತಿ ತೋರಿದರು.
ಸ್ವಾತಿಯ ಇಪ್ಪತ್ತೈದನೇ ವಯಸ್ಸಿನಲ್ಲಿ, ಅಪ್ಪನ ಸ್ನೇಹಿತರ ಮಗ ಮದುವೆ ಮಾಡಿಕೊಳ್ಳುತ್ತೇನೆಂದು ಕೇಳಿಕೊಂಡು ಬಂದಿದ್ದರಂತೆ. ತಂದೆ ಇಲ್ಲದ ಕಾರಣ, ಅಮ್ಮ, ಮಗಳಿಗೆ ಜವಾಬ್ದಾರಿ ಕಳಕೊಳ್ಳುವ ಸಲುವಾಗಿ ಮದುವೆಯಾಗಲು ಒತ್ತಾಯಿಸಿದ್ದಾರೆ. ಆಗ ಸ್ವಾತಿಗೆ, ದೊಡ್ಡ ಹುದ್ದೆಗೆ ಏರಬೇಕೆಂಬ ಕನಸಿತ್ತು. ಮದುವೆಗೆ ಒಪ್ಪಲಿಲ್ಲ. ನಂತರ ಕೆಲಸದಲ್ಲಿ ಬೆಳೆದು ಮನೆಯ ಹಣಕಾಸು ಸ್ಥಿತಿ ಸುಧಾರಿಸಿದಾಗ ಸಂಗಾತಿಯ ಹುಡುಕಾಟ ಅಗತ್ಯ ಎನಿಸಿದೆ. ಆಗ ಅವರ ಸಹೋದ್ಯೋಗಿಯೇ ಇವರನ್ನು ಮದುವೆಯಾಗುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ. ಸಹೋದ್ಯೋಗಿಗೆ ಮೊದಲೇ ಮದುವೆಯಾಗಿದ್ದ ವಿಚಾರ ತಿಳಿಯುವಷ್ಟರಲ್ಲಿ ಕಾಲ ಕೈಯಿಂದ ತಪ್ಪಿಹೋದಂತೆ ಅನಿಸುತ್ತದೆ.
ಹೆಣ್ಣು, ಹದಿನೈದರಿಂದ ಮೂವತ್ತು ವರ್ಷಗಳಲ್ಲಿ ತನ್ನ ಭವಿಷ್ಯದ ನೆಲೆಗಟ್ಟನ್ನು ರೂಪಿಸಿಕೊಳ್ಳುವ ಚಿಂತನೆಯನ್ನು ಮೊದಲೇ ಮಾಡಿಕೊಳ್ಳಬೇಕು. ಔದ್ಯೋಗಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ಸಂತಾನೋತ್ಪತ್ತಿಯ ಫಲವತ್ತತೆಗೆ ಪ್ರಕೃತಿ ಸಹಜವಾದ ಸೀಮಾರೇಖೆ ಸ್ತ್ರೀಗೆ ಇದೆ. ಆ ಕಟ್ಟಳೆಯನ್ನು ಮೀರಲು ಸಾಧ್ಯವಿಲ್ಲ. ಈ ಸವಾಲನ್ನು ಸ್ತ್ರೀಯರು ಬುದ್ಧಿವಂತಿಕೆಯಿಂದ ಎದುರಿಸಬೇಕು.
ಸ್ವಾತಿ ಮೊದಲೇ, ಮನೆಯಲ್ಲಿ ಗಂಡು ಹುಡುಕುವ ಮುಂಚೆಯೇ, ಐ.ವಿ.ಎಫ್. ವೈದ್ಯರ ಸಹಾಯ ಪಡೆದುಕೊಂಡು ಅಂಡಾಣುಗಳನ್ನು ಶೇಖರಿಸಿಟ್ಟರು. ಅವರಿಗೆ ತಕ್ಕುನಾದ ಸಂಬಂಧವೂ ಕೂಡಿಬಂತು. ಈಗ ಮಕ್ಕಳಾಗಿ, ತಮ್ಮಿಚ್ಛೆಯಂತೆ ಕೌಟುಂಬಿಕ ಜೀವನವನ್ನು ಆನಂದಿಸುತ್ತಿದ್ದಾರೆ.
ವಿ.ಸೂ.:- ಹೆಣ್ಣು ಮಕ್ಕಳ ಮದುವೆಯನ್ನು ಜವಾಬ್ದಾರಿ ಕಳೆದುಕೊಳ್ಳುವ ಸಲುವಾಗಿ ಮಾಡಬೇಡಿ. ತಂದೆಯಿಲ್ಲದ ಹುಡುಗಿಯೆಂದು ಅನುಕಂಪ ಬೇಡ. ಹೆಣ್ಣು ಮಕ್ಕಳಿಗೆ ತಮ್ಮ ಆಶೋತ್ತರಗಳನ್ನು ಸಮಾನಾಂತರವಾಗಿ ಸಾಧಿಸಲು ಪ್ರೇರಣೆ ಕೊಡಿ.
– ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ