ಆರು ಹಿತವರು ಮೂವರೊಳಗೆ!
Team Udayavani, Feb 6, 2019, 12:30 AM IST
ಗೊಂಬೆಯಂಗಡಿಗೆ ಭೇಟಿ ನೀಡಿದ್ದಾಗ ನೆರಿಗೆ ಲಂಗವನ್ನು ಹರಡಿಕೊಂಡು ನಿಂತ ಒಂದು ಗೊಂಬೆ ನನ್ನ ಮಗಳನ್ನು ನೆನಪಿಸಿತು. ಮನೆಗೆ ಕೊಂಡು ತಂದೆ. ಅದನ್ನು ನೋಡುತ್ತಿರುವುದೇ ಕಾಯಕವಾಯಿತು. ಒಂದು ದಿನ ಎಂದಿನಂತೆ ಬೊಂಬೆ ನೋಡುತ್ತಿದ್ದ ನಾನು ಅದರ ಮೇಲೆ ಪ್ರೀತಿ ಕೊಂಚ ಹೆಚ್ಚಾಗಿ, ಬೊಂಬೆಯ ಗಲ್ಲ ನೇವರಿಸಿದೆ. ಬೆರಳುಗಳಿಗೆ ಏನೋ ತಾಕಿದಂತಾಯಿತು. ಹತ್ತಿರ ಸರಿದು ನೋಡಿದರೆ ಕಲ್ಲೊಂದು ಹುಣ್ಣಿನಂತೆ ಅಂಟಿಕೊಂಡಿದೆ!
ನನಗೆ ಒಬ್ಬ ಶಿಲ್ಪಿಯ ಪರಿಚಯವಿತ್ತು. ಅವನು ಜೇಡಿಮಣ್ಣುಗಳಿಂದ ಅದೆಷ್ಟು ಚಂದದ ಆಕೃತಿಗಳನ್ನು ಮಾಡುತ್ತಿದ್ದನೆಂದರೆ, ನೋಡುಗರು ಅದು ಆಕೃತಿಯೋ ನೈಜವಸ್ತುವೋ ಎಂದು ಕ್ಷಣ ಅವಕ್ಕಾಗುತ್ತಿದ್ದರು. ಅವನ ಕಲಾನೈಪುಣ್ಯಕ್ಕೆ ನಾನು ಸಹ ಮಾರುಹೋಗಿದ್ದೆ. ಹೀಗಿರುವಾಗ ಅದೊಂದು ದಿನ ಶಿಲ್ಪಿಯ ಮನೆಗೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟೆ.ಅವನು ತಯಾರಿಸಿದ್ದ ಅಷ್ಟೂ ಬೊಂಬೆಗಳು ನನ್ನನ್ನು ಸ್ವಾಗತಿಸಿದವು.ಅದರಲ್ಲಿದ್ದ ಒಂದು ಗೊಂಬೆ ನೆರಿಗೆ ಲಂಗವನ್ನು ಹರಡಿಕೊಂಡು ನಿಂತು ನನ್ನ ಮಗಳನ್ನು ನೆನಪಿಸಿತು. ಅದೇಕೋ ಏನೋ ಅದನ್ನು ಬಿಟ್ಟು ಬರಲಾಗದೆ ಶಿಲ್ಪಿಗೆ ಹಣ ಪಾವತಿಸಿ ಕೊಂಡುತಂದೆ. ಆ ಬೊಂಬೆ ನನ್ನ ಮನೆಯಲ್ಲಿ ಯಾವಾಗಲೂ ಕಾಣಿಸುವಂಥ ಜಾಗದಲ್ಲಿ ಸ್ಥಾನ ಪಡೆದುಕೊಂಡು ನೋಡಿದಾಗಲೆಲ್ಲಾ ಮನಸ್ಸಿಗೆ ಮುದ ನೀಡುತ್ತಿತ್ತು.
ಎರಡು ದಿನ ಕಳೆಯಿತು. ಎಂದಿನಂತೆ ಬೊಂಬೆ ನೋಡುತ್ತಿದ್ದ ನಾನು ಇಂದು ಅದರ ಮೇಲೆ ಪ್ರೀತಿ ಕೊಂಚ ಹೆಚ್ಚಾಗಿದೆ ಎನಿಸಿ, ಬೊಂಬೆಯ ಗಲ್ಲ ನೇವರಿಸಿದೆ. ಬೆರಳುಗಳಿಗೆ ಏನೋ ತಾಕಿದಂತಾಗಿ ಹತ್ತಿರಕ್ಕೆ ಸರಿದು ನೋಡಿದರೆ ಕಲ್ಲೊಂದು ಹುಣ್ಣಿನಂತೆ ಅಂಟಿಕೊಂಡಿದೆ..!! ಮನಸ್ಸಿಗೇನೋ ಪಿಚ್ಚೆನಿಸಿತು. ಇದಾದ ಮೇಲೆ ಬೊಂಬೆಯನ್ನು ಹಿಂದಿನಂತೆ ತುಂಬು ಪ್ರೀತಿಯಿಂದ ನೋಡಲು ಆಗುತ್ತಿರಲಿಲ್ಲ. ಕಾರಣ ಆ ಹುಣ್ಣು!! ಕಣ್ಣು ಅತ್ತ ಹರಿದಾಗಲೆಲ್ಲ ಮುಳ್ಳು ಮೆಟ್ಟಿದವಳಂತೆ ಅಲ್ಲಿಂದ ದೃಷ್ಟಿ ಬೇರೆಡೆಗೆ ಬದಲಿಸಿ ಬಿಡುತ್ತಿದ್ದೆ.
ಬೊಂಬೆಯನ್ನು ಎಸೆದುಬಿಡಲೂ ಮನಸ್ಸು ಬಾರದು. ಹಾಗೆಂದು ಇನ್ನು ಎಷ್ಟುದಿನ ಈ ವಿಚಿತ್ರ ವೇದನೆ ಅನುಭವಿಸುವುದು? ಕೊನೆಗೊಂದು ನಿರ್ಧಾರಕ್ಕೆ ಬಂದು ಬೊಂಬೆಯನ್ನು ತೆಗೆದುಕೊಂಡು ಶಿಲ್ಪಿಯ ಮನೆಗೆ ಹೋದೆ. ಅಲ್ಲಿ ಮತ್ತೂಂದಷ್ಟು ಬೊಂಬೆಗಳನ್ನು ಕಂಡು ವಾಹ್ ಎಂದು ಮನಸ್ಸು ಅರಳಿತು. ಏನು ವಿಷಯ ಬಂದದ್ದು? ಶಿಲ್ಪಿ ನನ್ನ ಕೈಯಲ್ಲಿದ್ದ ಚೀಲವನ್ನು ನೋಡುತ್ತಾ ಕೇಳಿದಾಗ ಚೀಲದಿಂದ ಬೊಂಬೆ ತೆಗೆದು ಬಂದ ಕಾರಣ ವಿವರಿಸಿದೆ. ಅಷ್ಟೇನಾ… ಜೇಡಿಮಣ್ಣಿನೊಳಗಿನ ಕಲ್ಲು ನಮ್ಮ ಕಣ್ಣಿಗೆ ಬಿದ್ದಿರದ ಕಾರಣ ಹಾಗೇ ಉಳಿದುಕೊಂಡಿದೆ.ಕೊಡ್ರಿ ಇಲ್ಲಿ ಎಂದ ಶಿಲ್ಪಿ ಬೊಂಬೆಯನ್ನು ತೆಗೆದುಕೊಂಡವನೇ ಸಣ್ಣ ಮೊಳೆಯನ್ನು ಕಲ್ಲಿಗೆ ಗುರಿ ಮಾಡಿ ಸುತ್ತಿಗೆಯಿಂದ ಸಣ್ಣ ಪೆಟ್ಟುಕೊಟ್ಟ ಕಲ್ಲು ಉದುರಿಬಿತ್ತು. ಜೊತೆಗೆ ನನ್ನ ಮನಸಿನ ಕಿರಿಕಿರಿಯೂ… ಈಗ ಆ ಬೊಂಬೆಯನ್ನು ಕೈಗೆ ತೆಗೆದುಕೊಂಡು ನೋಡಿದೆ. ಬಹಳ ಹಿಡಿಸಿತು. ಈ ಕೆಲಸವನ್ನು ನಾನೇ ಎಂದೋ ಮಾಡಬಹುದಿತ್ತಲ್ಲ. ಏಕಿಷ್ಟು ಹಿಂಸೆ ಪಟ್ಟೆ ಎನಿಸಿ ನನಗೆ ನಾಚಿಕೆಯಾಯಿತು.
ಬೊಂಬೆಯನ್ನು ಚೀಲದೊಳಗೆ ಇಟ್ಟುಕೊಂಡು ಹೊರಡಲು ಸಿದ್ಧಳಾದವಳನ್ನು ಮಣಿಗಳಿಂದ ಅಲಂಕೃತವಾದ ಬೊಂಬೆಯೊಂದು ಭಾರೀ ಸೆಳೆಯಿತು. ಅದನ್ನೂ ಕೊಂಡು ತಂದು ಮೊದಲನೆಯ ಬೊಂಬೆಯ ಪಕ್ಕದಲ್ಲಿ ಇರಿಸಿದೆ. ವಾರ ಕಳೆಯಿತು. ಅದೇನು ವಿಚಿತ್ರವೋ ಇಲ್ಲಿಯವರೆಗೂ ಚಂದವಾಗಿ ಕಾಣುತ್ತಿದ್ದ ಎರಡನೆಯ ಬೊಂಬೆಯಲ್ಲೂ ದೋಷವೊಂದು ಕಣ್ಣಿಗೆ ಬಿತ್ತು. ಕುತ್ತಿಗೆಯ ಬಳಿಯಲ್ಲಿ ತಂತಿಯ ಮೊನೆ ಗೋಚರಿಸಿ ಬಿಡಬೇಕೆ? ಮನದಲ್ಲಿ ಮತ್ತದೇ ಕುದಿಕುದಿ.
ಕುದಿಯನ್ನು ಒಮ್ಮೆಲೆ ಆರಿಸಿಕೊಳ್ಳಬಹುದೆಂಬ ಪಾಠವನ್ನು ಹಿಂದಿನ ಅನುಭವ ತಂದುಕೊಟ್ಟಿದ್ದರಿಂದ, ತಡಮಾಡದೆ ಎದ್ದು ಇಕ್ಕಳವನ್ನು ಹುಡುಕಿಕೊಂಡು ಬಂದೆ. ಬೊಂಬೆಯನ್ನು ಎದುರಿಗಿರಿಸಿಕೊಂಡು ಕುಳಿತೇಬಿಟ್ಟೆ. ಮೊದಲಿಗೆ ಮೆಲ್ಲನೆ ಆ ತಂತಿಯನ್ನು ಮೇಲಕ್ಕೇರಿಸಿದೆ. ನಂತರ ಇಕ್ಕಳದಿಂದ ಇರಿಯುವ ಪ್ರಯತ್ನ..!! ನಾಜೂಕಿನಿಂದ ಎಳೆದೆ. ಸುಲಭಕ್ಕೆ ಜಗ್ಗುವಂತಹದ್ದಲ್ಲ ಎನಿಸಿತು. ಬಲ ಒಗ್ಗೂಡಿಸಿ ಎಳೆದೆ. ಅಯ್ಯೋ…! ಬೊಂಬೆಯ ಕೊರಳಲ್ಲಿದ್ದ ಮಣಿಸರ ಹರಿಯುವುದರ ಜೊತೆಗೆ ಬೊಂಬೆ ಎರಡು ಭಾಗವಾಯಿತು. ಭಾರೀ ಸಂಕಟಕ್ಕೀಡಾದ ನಾನು ಅವನ್ನೆಲ್ಲಾ ಚೀಲದೊಳಗೆ ಇಟ್ಟುಕೊಂಡು ಶಿಲ್ಪಿಯ ಬಳಿಗೆ ಓಡಿದೆ.
ಎಲ್ಲವನ್ನೂ ಆಲಿಸಿದ ಶಿಲ್ಪಿ ಆ ತಂತಿಯೇ, ಸರ ಹಾಗೂ ಬೊಂಬೆಯ ದೇಹದ ಭಾಗಗಳಿಗೆ ಆಧಾರವಾಗಿತ್ತೆಂದೂ, ಅದನ್ನು ಬದಲಾಯಿಸಲು ಹೋಗಬಾರದು. ಅದು ಇರುವ ಹಾಗೆ ಒಪ್ಪಿಕೊಳ್ಳಬೇಕೆಂದು ಹೇಳಿದ. ಹಿಂದೆಯೇ ಬಹಳ ಅನುರೂಪವಾದ ಬೊಂಬೆ ತಂದಿತ್ತ. ನಾನು ಹಣ ಪಾವತಿಸಲು ಹೋದಾಗ ಅವನು ತೆಗೆದುಕೊಳ್ಳಲು ನಿರಾಕರಿಸಿದ. ನಾನು ಇನ್ನು ಮೂರು ತಿಂಗಳು ಊರಲ್ಲಿರುವುದಿಲ್ಲ. ಇವುಗಳ ಮಾರಾಟಕ್ಕೆ ಹೊರಡುತ್ತೇನೆ ಎಂದ. ಅವನಿಗೆ ಶುಭ ಕೋರಿ ನಾನು ಮನೆಗೆ ಮರಳಿದೆ. ಖುಷಿಯಿಂದ ಮೂರು ಬೊಂಬೆಗಳನ್ನು ಒಂದರ ಪಕ್ಕದಲ್ಲಿ ಮತ್ತೂಂದರಂತೆ ಜೋಡಿಸಿಟ್ಟುಕೊಂಡೆ.
ಸದಾ ಬೊಂಬೆಗಳನ್ನು ನೋಡುವ ಹವ್ಯಾಸವಂತೂ ಮುಂದುವರಿದಿತ್ತು. ಒಂದಷ್ಟು ದಿನಗಳು ಕಳೆದ ಮೇಲೆ ಅದೇನೋ ಬೆನ್ನು ಬಿಡದ ಶಾಪದಂತೆ ಮೂರನೆಯ ಗೊಂಬೆಯಲ್ಲಿ ಎರಡು ದೋಷಗಳು ಕಣ್ಣಿಗೆ ಬೀಳಬೇಕೆ..? ಅದರ ತಲೆಯಲ್ಲಿ ಗಂಟುಗಳೆದ್ದಿದ್ದವು. ಈ ಬಾರಿ ಯಾವ ನಿರ್ಧಾರಕ್ಕೂ ಬರದಾದೆ. ಶಿಲ್ಪಿಯನ್ನು ಕಂಡು ಅದರ ಬಗ್ಗೆ ತಿಳಿದುಕೊಳ್ಳುವ ತನಕ ಏನನ್ನೂ ಮಾಡಬಾರ¨ªೆಂದು ನಿರ್ಧರಿಸಿದ್ದೇನೆ. ಆದರೆ ಈಗಲೂ ಬೊಂಬೆಗಳನ್ನು ನೋಡುತ್ತೇನೆ. ನೋಡುತ್ತಾ ನೋಡುತ್ತಾ ಸೌಂದರ್ಯ ಗೌಣವಾಗಿ ಆ ಮೂರು ಬೊಂಬೆಗಳು ನನ್ನಲ್ಲಿ ಹೊಸ ಆಲೋಚನೆ ಹುಟ್ಟುಹಾಕುತ್ತಿವೆ. ಕೆಲವು ಪರಿಸ್ಥಿತಿ ಅಥವಾ ವ್ಯಕ್ತಿಗಳನ್ನು ಬದಲಿಸಬಹುದು. ಮತ್ತೆ ಕೆಲವನ್ನು ಇರುವ ಹಾಗೆಯೇ ಒಪ್ಪಿಕೊಳ್ಳಬೇಕು. ಮೂರನೆಯ ಗೊಂಬೆಯ ರೀತಿಯವೇ ನಮಗೆ ದೊಡ್ಡ ಸವಾಲು. ಆಗುತ್ತದೆ ಹಾಗೂ ಆಗುವುದಿಲ್ಲ- ಇವೆರಡರ ನಡುವಿನ ಜೋಕಾಲಿ, ಗೊಂದಲ. ಅದೇ ಬದುಕು…
ವಿದ್ಯಾ ಅರಮನೆ