ಅದೆಂತದೋ ಕ್ಯಾನ್ಸರ್ ಅಂಬ್ರಪ…
Team Udayavani, Apr 18, 2018, 5:06 PM IST
ಕೆಲಸ ರಾಶಿ ಬಿಜ್ಜು. ಅಡ್ಕೆ ಕೊಯ್ಯಲೆ ಹೋಗವ್ವು. ಸಂತೀಗೆ ಪಪ್ಪಾಯಿ ಹಣ್ಣು ತಗಂಡು ಹೋಗವ್ವು. ಇದರ ಮಧ್ಯೆ ಬಾಯಿ ಹುಣ್ಣು ಆಗೋಜು ಹೇಳಿ ಡಾಕ್ಟ್ರ ಹತ್ರ ಹೋದ್ರೆ ಅದೆಂತಧ್ದೋ ಕ್ಯಾನ್ಸರು ಹೇಳಿಗಿದ ಮಾರಾಯ…ಅಂದಳು!
ಬಾಯಿ ಕಿರಿದು ನಕ್ಕಾಗ ಮೂರು ನಾಲ್ಕು ಹಲ್ಲು ಕಂಡರೆ ಪುಣ್ಯ! ಅದನ್ನೆಲ್ಲ ಯೋಚಿಸುವವರ್ಯಾರು ಎಂಬಂತೆ ಬಾಯಿ ಬಿಟ್ಟು ನಗುತ್ತಾಳೆ. “ಅಪ್ಪಿ, ಯಾವಾಗ ಬಂದೀರಿ? ನಾಲ್ಕು ದಿನ ಆದ್ರೂ ಉಳ್ಕಂಲೆ? ಎಂತಾ ಸಾಲಿಯೇ ನಿಮ್ದು?’ ಎಂದು ಬೊಚ್ಚು ಬಾಯಿ ಅಗಲಿಸಿ ಮತ್ತೆ ತನ್ನ ಅಳಿದುಳಿದ ಹಲ್ಲುಗಳನ್ನು ಪ್ರದರ್ಶಿಸುತ್ತಾಳೆ. ಶಾಲೆ, ಕಾಲೇಜು ಎಂದು ಯಾವಾಗಲೂ ಹಾಸ್ಟೆಲಿನಲ್ಲಿದ್ದು ಅಪರೂಪಕ್ಕೊಮ್ಮೆ ಮನೆಗೆ ಹೋದರೆ ಅವಳ ಈ ಪ್ರಶ್ನೆ ಕಾದಿರುತ್ತದೆ.
“ನಾ ಅಕ್ಕನಾ? ತಂಗಿನಾ? ಹೇಳು ಕಾಂಬ’ ಎಂದು ಅವಳನ್ನು ಸತಾಯಿಸುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಅವಳು ಎಷ್ಟೋ ಬಾರಿ ನನ್ನನ್ನು ನನ್ನ ತಂಗಿಯೆಂದೂ, ನನ್ನ ತಂಗಿಯನ್ನು ನಾನೆಂದು ಯೋಚಿಸಿ ಮಾತನಾಡುವುದುಂಟು. “ಕಣ್ಣು ಸಮ ಹೊಳುದಿಲ್ಯೆ. ಅಕ್ಕ ಅಮಾಗದ್ಯಪ್ಪ. ಹಾಂಗೆ ಗೊತ್ತಾಪ್ಪುದಿಲ್ಯೆ ಅಂದ್ಕಂಡಿರ್ಯಾ? ಕಪ್ಪಾಯ್ತು. ಒಂದು ಕವಳಕ್ಕೆ ಕೊಡ್ರೆ’ ಎನ್ನುತ್ತಿರುತ್ತಾಳೆ. ಅವಳು ಕವಳ ಪ್ರಿಯೆ.
ಊರೆಲೆಗೆ ಸುಣ್ಣ ಹಚ್ಚಿ ಅಡಕೆ ಹೊಗೆಸೊಪ್ಪಿನ ಕವಳ ಕೊಟ್ಟರೆ, “ನಿಮ್ಮ ಅಜ್ಜಿ ಹೀಂಗೇ ಕವಳ ಕೊಡ್ತಿರು’ ಎಂದು ಅಜ್ಜಿಯ ನೆನಪಿಸುವಳು. “ಸುಣ್ಣ ಹಾಕಂಡು ಕವಳ ಹಾಕಕರೆ ಬಾಯಿ ಉರುದಿಲ್ಯೆ ಅಲಾ ನಿಂಗೆ ? ಹುಳಿ ಬಗೀಲ್ ಖಾರ ಆದ್ರೂ ಖಾರ ಖಾರ ಅಂತ್ಯಲೆ’ ಕವಳ ಕೊಡುವಾಗ ನನ್ನ ಈ ಮಾತು ಕೇಳಿ ಕೇಳಿ ಅವಳಿಗೂ ಅಭ್ಯಾಸವಾಗಿ ಹೋಗಿದೆ. “ಕವಳ ಒಂದಿದ್ರೆ ಕೆಲ್ಸ ಮಾಡ್ಲಕ್ಕು, ಇಲ್ದಿದ್ರೆ ಅಪ್ಪುದಿಲ್ಯೆ.
ಯಾರ್ ಅವ್ರೆ ನಂಗೆ? ಗಂಡ ಸಾರಾಯ್ ಕುಡುª ಕುಡುª ನಮ್ಮನ್ ಹಾದಿ ಮೇಲ್ ಹಾಕ್ದ. ಮಗ ಮದೀನೂ ಆಗ್ಲಿಲ್ಲ. ಅವ್ನೂ ಅಪ್ಪನಾಂಗೆ ಮಾಡಿ ಹೊಟ್ಟೆಗ್ ಬೆಂಕಿ ಹಾಕ್ದ. ಮಗ ಕುಡ್ಕಂದು ಬಂದು ನಂಗ್ ಬಯ್ತಿದ್ದ. ಆದ್ರೂ ಕಣ್¡ ಮುಂದಿದ್ದಿದ್ದ. ನಾನೇ ಕೂಳು ಹಾಕಿ ಸಾಕ್ತಿದ್ದೆ. ಅವ್ನೂ ಹೋದ. ಎಂತಾ ಮಾಡುದು? ನಾ ಒಬ್ಳು ಯಾವಾಗ ಹೋತೆ ಅಂತ್ ಕಾಂತವೆ°’ ಎಂದು ನಿಟ್ಟುಸಿರಿಡುವಳು.
ದಿನವೂ ಸಣ್ಣ ಸಣ್ಣ ವಿಷಯಕ್ಕೇ ಬೇಜಾರು ಮಾಡಿಕೊಳ್ಳುವ ನಾನೆಲ್ಲಿ? ಬಂದದ್ದನ್ನು ಅದೇ ರೀತಿ ಸ್ವೀಕರಿಸುವ ಅವಳೆಲ್ಲಿ? ಬದುಕಿನಲ್ಲಿ ಅತಿ ಘೋರವಾದ್ದೆಂದರೆ ಇದೇ ಇರಬಹುದು. ಆಕೆಗೆ ನನ್ನವರು ಎನ್ನುವವರು ಯಾರೂ ಇಲ್ಲ. ಜೀವನ ಪೂರ್ತಿ ಜೊತೆಯಲ್ಲಿರುತ್ತೇನೆಂದು ಬಂದಾತನ ಪಯಣ ಅರ್ಧಕ್ಕೇ ಮುಗಿದಿತ್ತು. ಹೆಣ್ಣು ಮಗಳು ಆಸ್ತಿಗಾಗಿ ಪೀಡಿಸಿದಳು ಎಂದು ತವರು ದೂರಾಯ್ತು.
ಕುಡುಕ ಗಂಡನ ಬಗ್ಗೆ ಚಿಂತಿಸದಿದ್ದರೂ ಹೆತ್ತ ಮಗನ ಹೊಟ್ಟೆಗೆ ಹಿಟ್ಟು ಬೇಯಿಸಬೇಕಿತ್ತಲ್ಲವೆ? ಹೆಣ್ಣು ಮಗಳು ಆಸ್ತಿಯಲ್ಲಿ ಪಾಲು ಕೇಳಿದ್ದು ತಪ್ಪೇ? ತನ್ನ ಮಗನ ಹಸಿವೆ ನೀಗಿಸಲು ಹುಟ್ಟಿ ಬೆಳೆದ ತವರೂರಿನ ಸಂಬಂಧ ಕಡಿದುಕೊಳ್ಳಲು ಸಿದ್ಧಳಾಗಿದ್ದಳೇ? ಮಾತೃ ಹೃದಯವೆಂದರೆ ಇದೇ! ಅವಳಿಗೆ ಗಂಡನ ಮೇಲಿನ ಪ್ರೀತಿ ಮರೆಯಾದದ್ದೇಕೆ? ಅವನು ಕುಡುಕನೆಂದೇ? ಕೆಲಸ ಮಾಡದ ಬೇಜವಾಬ್ದಾರಿಯೆಂದೇ ಅಥವಾ ಪ್ರೀತಿ-ಪ್ರೇಮ ಭಾವಗಳ ಬಗ್ಗೆ ಅವಳು ಯೋಚಿಸಿದ್ದಳೇ? ಕೆಲವೊಮ್ಮೆ ಇದೆಲ್ಲ ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ.
ಹಳತಾದ ಗಾಯಗಳ ಹುಡುಕಿ ಹುಡುಕಿ ಕೆರೆಯಬಾರದೆಂದು ಸುಮ್ಮನಾಗುತ್ತೇನೆ. “ಥೂ, ಕಪ್ ಕಪ್ ಆಪ್ಪತಿಗೆ ಎಂತ ಹಾಂಗೆಲ್ಲ ಮಾತಾಡ್ತೆ. ಬಾಯಿ ಹುಣ್ಣು ಡಾಕ್ಟ್ರಿಗೆ ತೋರ್ಸಿದ್ಯ?’ ಎಂದೆ. “ಹೌದೇ. ಹಂಬ್ಲೇ ಇಲ್ಯೆ ಹೇಳುಕೆ. ಅದೆಂತದೋ ಕ್ಯಾನ್ಸರ್ ಅಂಬ್ರಪ. ಒಂದು ತಿಂಗ್ಳೂ ಮಂಗಳೂರಿಗೆ ಹೂಬೇಕಂಬ್ರು. ಮುಂದನ್ ತಿಂಗ್ಳೂ ಹುಂಡಿಮನೆಗೆ ಅಡ್ಕೆ ಸೊಲುಕ್ ಹೋಬೇಕಿತ್ತು. ಡಾಕ್ಟ್ರು ಅಷ್ಟ್ರಲ್ಲಿ ಬಿಟ್ರ ಸಾಕೇ ನನ್ನ. ನಾಳೆ ಸಂತಿಗ್ ಪಪ್ಪಳೆಕಾಯಿ ತಕಂಡು ಹೋಬೇಕು.
ಬತ್ತೆ ಅಕಾ’ ಎನ್ನುತ್ತಾ ಹೊರಟೇ ಬಿಟ್ಟಳು ನಸುಗಪ್ಪಿನಲ್ಲಿಯೇ, ಪಪ್ಪಾಯಿ ಹಣ್ಣುಗಳನ್ನು ಕೊಯ್ದು ಭಾನುವಾರದ ಸಂತೆಗೆ ತೆಗೆದುಕೊಂಡು ಹೋಗುವ ತರಾತುರಿಯಲ್ಲಿ. ಅಷ್ಟು ಸುಲಭವಾಗಿ ಕ್ಯಾನ್ಸರ್ ಎಂದಳಲ್ಲವೇ. ಕ್ಯಾನ್ಸರ್ನ ಭೀಕರತೆ ಅವಳಿಗೆ ಗೊತ್ತಿಲ್ಲವೇ? ಯಾರೂ ಇಲ್ಲದ ಅನಾಥೆ, ಅತ್ತರೆ ಕೇಳುವವರ್ಯಾರು ಎಂಬ ಕಠೊರ ದುಃಖವೇ? ಆಶಾಜೀವಿ ಅವಳು, ವಿಧಿಚಿತ್ತವ ಹಲುಬದೇ ಪಾಲಿಸುವವಳೆ?….
* ವಾರಿಜಾ ಹೆಬ್ಟಾರ