“ಮೂರು ದಿನದ’ ನಳಪಾಕ
Team Udayavani, Feb 20, 2019, 12:30 AM IST
ರೀ, ನಾನು ಮೂರು ದಿನ ರಜಾ ಎಂದು ಹೆಂಡತಿ ಘೋಷಿಸಿ ಬಿಟ್ಟರೆ, ಆ ಕ್ಷಣದಿಂದಲೇ ಅಡುಗೆ ಮನೆಯ ಉಸ್ತುವಾರಿ ಗಂಡನ ಕೈಗೆ ಬರುತ್ತದೆ. ಅಂಥದೊಂದು ಸಂದರ್ಭದಲ್ಲಿ ತಂದೆಯೊಬ್ಬನಿಗೆ ಆದ ಅನುಭವದ ಮಾತುಗಳು ಇಲ್ಲಿವೆ…
ಗಂಡಸರು ಮನೆಯಲ್ಲಿ ಉಂಡು, ತಿಂದು ಹಾಯಾಗಿರುತ್ತಾರೆ ಎಂಬುದು ಎಲ್ಲರ ಮಾತು. ಆದರೆ ಸಂಪ್ರದಾಯಸ್ಥರ ಮನೆಗಳಲ್ಲಿ ಗಂಡಸರಿಗೂ ತಿಂಗಳಿನಲ್ಲಿ ಮೂರು ದಿನ ಅಡುಗೆ ಮನೆ ಡ್ನೂಟಿ ಕಡ್ಡಾಯ. ತಡರಾತ್ರಿ ಕಚೇರಿ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯೊಡತಿ, “ರೀ, ನಾನು ರಜಾ’ ಅಂದುಬಿಟ್ಟರೆ ಮುಗಿಯಿತು. ಕಾಲಡಿಯ ನೆಲ ಕಂಪಿಸಿದ ಅನುಭವ.
ಮರುದಿನ ಬೆಳಗ್ಗೆಯಿಂದ ಮುಂದಿನ ಮೂರು ದಿನ ನನಗೆ ಓವರ್ ಡ್ನೂಟಿ. ಬೆಳಗ್ಗೆ ಯಾವ ತಿಂಡಿ ಮಾಡಿದರೆ ಬೇಗ ಕೆಲಸ ಮುಗಿಯುತ್ತೆ, ಮಧ್ಯಾಹ್ನ ಊಟಕ್ಕೇನು ಮಾಡುವುದು? ರಾತ್ರಿಗೆ ಸಾಂಬಾರ್ ಏನು… ಹೀಗೆ ತಲೆಯಲ್ಲಿ ನೂರೆಂಟು ಯೋಚನೆಗಳು.
ಬೆಳಗ್ಗೆ 6ಕ್ಕೆ ಎದ್ದು ಹಾಲು, ತರಕಾರಿ ತರುವುದರೊಂದಿಗೆ, ನನ್ನ ಕೆಲಸ ಆರಂಭವಾಗುತ್ತದೆ. ಹಾಲು ಕಾಯಿಸಿ, ಕಾಫಿ ಫಿಲ್ಟರಿಗೆ ಡಿಕಾಕ್ಷನ್ ಹಾಕುತ್ತಿರುವಾಗ, ಮಕ್ಕಳಿನ್ನೂ ಮಲಗಿದ್ದಾರೆ ಅನ್ನೋದು ನೆನಪಾಗುತ್ತೆ. ಸುಖ ನಿದ್ರೆಯಲ್ಲಿರುವ ಅವರನ್ನು ಎಬ್ಬಿಸುವುದೇ ಒಂದು ಸವಾಲು. “ಹೋಗಪ್ಪ, ಇನ್ನೂ ಟೈಮೇ ಆಗಿಲ್ಲ, ಸುಳ್ಳು ಹೇಳ್ತೀಯ’ ಎಂದು ಗೊಣಗುತ್ತಲೇ ಏಳುವ ಮಕ್ಕಳು, “ಅಯ್ಯೋ, ಅಮ್ಮ ರಜಾ ಆದ್ಲಾ? ಯಾಕಮ್ಮಾ ರಜಾ ಆದೆ?’ ಅಳುಮೋರೆ ಮಾಡುತ್ತವೆ. ಇನ್ನೂ ನಿದ್ದೆಗಣ್ಣಲ್ಲೇ ಇರುವ ಅವರನ್ನು, “ಇವತ್ತು ಸ್ಕೂಲಿನಿಂದ ಬಂದಮೇಲೆ ಏನಾದ್ರೂ ತಗೊಳ್ಳುವಿರಂತೆ’ ಎಂದು ಪುಸಲಾಯಿಸಿದರೆ ಮಾತ್ರ ಹಲ್ಲುಜ್ಜಲು ಮನಸ್ಸು ಮಾಡುತ್ತಾರೆ. ಇಷ್ಟರನಡುವೆ ಶಾಲೆಯ ಹೋಂ ವರ್ಕ್, ಪ್ರಾಜೆಕ್ಟ್ ಏನಾದ್ರೂ ಬಾಕಿ ಇದ್ದರೆ ಮುಗಿಯಿತು. ಅದನ್ನು ಬೇಗ ಮುಗಿಸುವಂತೆ ಹುರಿದುಂಬಿಸಿ, ಅವರ ಸ್ಕೂಲ್ ಬ್ಯಾಗ್ ರೆಡಿ ಮಾಡಬೇಕು. ಈ ಬಡಪಾಯಿಯ ಕಷ್ಟವನ್ನು ಅರ್ಥವೇ ಮಾಡಿಕೊಳ್ಳದ ಸಮಯ “ಎಂಟೂವರೆ ಆಯ್ತು’ ಎಂದು ಹೆದರಿಸುತ್ತದೆ.
ಬೆಳಗ್ಗೆ ಮತ್ತು ಮಧ್ಯಾಹ್ನದ ಡಬ್ಬಿಗೆ ಎರಡು ಹೊತ್ತಿಗೂ ಆಗುವಂಥ ಪುಳಿಯೊಗರೆಯನ್ನೋ, ಟೊಮೇಟೋ ಚಿತ್ರಾನ್ನವನ್ನೋ ಮಾಡಿ, ಡಬ್ಬಿ ರೆಡಿ ಮಾಡಿದ್ದಾಯ್ತು. ಅಷ್ಟರಲ್ಲಿ, “ಅಪ್ಪಾ, ನನ್ನ ಯೂನಿಫಾರ್ಮ್ ಐರನ್ ಮಾಡಿಲ್ಲ, ನನ್ನ ಶೂ ಪಾಲಿಶ್ ಆಗಿಲ್ಲ, ನನ್ನ ಬೆಲ್ಟ್ ಸಿಗ್ತಿಲ್ಲ’ ಎಂಬ ವರಾತ ಶುರುವಾಗಿರುತ್ತದೆ. ಗಡಿಬಿಡಿಯಲ್ಲಿ ಇಸ್ತ್ರಿ ಉಜ್ಜಿ, ಪಾಲಿಶ್ ಮಾಡಿ ಬೆವರಿಳಿಸುತ್ತಾ ಮಕ್ಕಳ ಮುಂದೆ ನಿಂತರೆ, ಅಪ್ಪನ ಸ್ಥಿತಿ ನೋಡಿ, “ಅಪ್ಪಾ, ಇವತ್ತು ನೀನೇನು ಸ್ಕೂಲಿಗೆ ಬಿಡೋಕೆ ಬರೋದು ಬೇಡ, ನಾವೇ ಹೋಗ್ತಿವಿ’ ಅಂತ ನನ್ನ ಕೆಲಸವನ್ನು ಚೂರು ಕಡಿಮೆ ಮಾಡುತ್ತಾರೆ.
ಮಕ್ಕಳು ಸ್ಕೂಲಿಗೆ ತೆರಳಿದ ನಂತರ ಸ್ನಾನ ಮಾಡಿ, ಹೊಟ್ಟೆಗೊಂದಿಷ್ಟು ತಿಂಡಿ ಕಾಣಿಸಿದರೆ ಸ್ವಲ್ಪ ವಿರಾಮ ಸಿಕ್ಕಂತೆ. ಜಾಸ್ತಿ ಹೊತ್ತು ಆರಾಮಾಗಿ ಕೂರುವಂತಿಲ್ಲ. ಸಿಂಕ್ನಲ್ಲಿ ಬಿದ್ದಿರುವ ಪಾತ್ರೆ ರಾಶಿ ಕೈ ಬೀಸಿ ಕರೆಯುತ್ತದೆ. ಪ್ರತಿದಿನ ಮೂರು ಹೊತ್ತು, ಮೂರು ಬಗೆಯ ಅಡುಗೆ ಬೇಕಾದರೂ ಮಾಡಬಹುದು. ಆದರೆ, ಪಾತ್ರೆ ತೊಳೆಯುವುದೇ ದೊಡ್ಡ ಗೋಳು. ಹಾಗಂತ ಪಾತ್ರೆ ತೊಳೆಯದೇ ಇರಲಾದೀತೆ? ಪಾತ್ರೆ ತೊಳೆಯುತ್ತಲೇ ಮಧ್ಯಾಹ್ನ ಹಾಗೂ ರಾತ್ರಿಯ ಅಡುಗೆಯ ಬಗ್ಗೆ ಮಾನಸಿಕವಾಗಿ ರೆಡಿ ಆಗುತ್ತೇನೆ. ಅನ್ನ- ಸಾಂಬಾರ್ ಮಾಡಿ ಮುಗಿಸುವಾಗ ಗಂಟೆ 1. ಊಟ ಮಾಡಿ, ಬುತ್ತಿ ಕಟ್ಟಿಕೊಂಡು ಆಫೀಸಿಗೆ ಹೊರಟರೆ ಬರುವುದು ರಾತ್ರಿ 12 ಗಂಟೆಗೆ.
“ಅಪ್ಪಾ, ನಿನ್ನೆ ನೀನು ಮಾಡಿದ್ದ ಈರುಳ್ಳಿ-ಆಲೂಗಡ್ಡೆ ಪಲ್ಯ ಸೂಪರ್ ಆಗಿತ್ತು’, “ಈರುಳ್ಳಿ ಟೊಮೇಟೋ ಗೊಜ್ಜನ್ನು ಫ್ರೆಂಡ್ಸೆಲ್ಲಾ ತುಂಬಾ ಇಷ್ಟಪಟ್ರಾ, ಅವರ ಅಪ್ಪಂಗೆ ಅಡುಗೆ ಮಾಡೋಕೆ ಬರಲ್ಲಂತಪ್ಪಾ’ ಎಂದು ಮಕ್ಕಳು ಮೆಚ್ಚುಗೆಯ ಮಾತುಗಳನ್ನಾಡಿದರೆ, “ಪರವಾಗಿಲ್ಲಾರೀ, ನನಗಿಂತ ಚೆನ್ನಾಗಿಯೇ ಅಡುಗೆ ಮಾಡಿದ್ದೀರ’ ಎಂದು “ಅವಳೂ’ ಹೊಗಳಿಬಿಟ್ಟರೆ ಮುಗಿಯಿತು. ನಳ ಮಹಾರಾಜನನ್ನು ಬಿಟ್ಟರೆ ನಾನೇ ಎಂದು ಕೋಡು ಮೂಡುತ್ತದೆ. ಆ ಮೆಚ್ಚುಗೆಯೇ ಮುಂದಿನ ಎರಡು ದಿನಗಳ ಕೆಲಸಕ್ಕೆ ಸ್ಫೂರ್ತಿ. ಕೆಲವೊಮ್ಮೆ ಮಕ್ಕಳು, “ಅಪ್ಪಾ, ಎಷ್ಟು ರುಚಿಯಾಗಿ ಅಡುಗೆ ಮಾಡ್ತೀಯ, ಇನ್ಮುಂದೆ ಅಮ್ಮನ ಬದಲು ನೀನೇ ತಿಂಡಿ ಮಾಡು’ ಅಂದಾಗ, ತಿಂಗಳಿಡೀ ಅಡುಗೆ ಮಾಡುವುದನ್ನು ಊಹಿಸಿಕೊಂಡೇ ಬೆವರುತ್ತೇನೆ.
ಶ್ರೀಮತಿ ರಜೆಯಿಂದ ಒಳಗೆ ಬರುವ ಹಿಂದಿನ ದಿನಕ್ಕೂ, ನಲ್ಲಿಯಲ್ಲಿ ತಡರಾತ್ರಿ ನೀರು ಬರುವುದಕ್ಕೂ ದೊಡ್ಡ ನಂಟಿದೆ. ರಾತ್ರಿ 12ಕ್ಕೆ ಕೆಲಸದಿಂದ ಬಂದು 1ರವರೆಗೂ ನೀರು ತುಂಬಿ, ಬೆಳಗ್ಗೆ 6ಕ್ಕೆ ಎದ್ದು ಶ್ರೀಮತಿಗೆ ನೀರು ಹಾಕಿ ಒಳಗೆ ಕೆರದುಕೊಂಡರೆ ನನ್ನ ಜವಾಬ್ದಾರಿ ಮುಗಿದಂತೆ. ಮತ್ತೆ ಮುಂದಿನ ತಿಂಗಳವರೆಗೆ, ಮನೆ-ಮಕ್ಕಳ ಕೆಲಸವೆಲ್ಲಾ ಅವಳ ಕೈಯಲ್ಲಿ.
“ಅವಳು ಕೆಲಸಕ್ಕೆ ಹೋಗಲ್ಲ, ಹೌಸ್ವೈಫ್ ಅಷ್ಟೆ’ ಅಂತ ಹೇಳುವ ಎಲ್ಲ ಗಂಡಂದಿರೂ, ಕನಿಷ್ಠ ಆ ಮೂರು ದಿನಗಳಾದರೂ ಅಡುಗೆ ಮನೆಯ ಕೆಲಸ ನಿರ್ವಹಿಸಿ ನೋಡಿ. ಆಗ, ಹೆಂಡತಿ “ಹೌಸ್ವೈಫ್ ಅಷ್ಟೇ’ ಅಲ್ಲ ಅಂತ ಅರ್ಥವಾಗುತ್ತೆ. ತಿಂಗಳಿಡೀ ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಬಿಡುವಿಲ್ಲದೆ ದುಡಿಯುವ ಮನೆಯೊಡತಿಗೆ, ಆ ಮೂರು ದಿನಗಳಲ್ಲಾದರೂ ನೆರವಾಗಿ. ಏನೋ ತಿಳಿದ ಅಡುಗೆ ಮಾಡಿ ಬಡಿಸಿ, ಆಕೆಯ ಪಾತ್ರವನ್ನು ನಿರ್ವಹಿಸಿ.
ಎ.ಆರ್. ಗಿರಿಧರ