ಹೋಲಿಕೆ ಯಾತಕೆ?
ಕೈ ತಪ್ಪಿ ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ...
Team Udayavani, Mar 4, 2020, 4:57 AM IST
ಹರೆಯದ ವಯಸ್ಸಿನಲ್ಲಿ, ದಿವ್ಯಾಗೆ ಜೀವದ ಗೆಳೆಯರೊಬ್ಬರಿದ್ದರು. ಮದುವೆಯಾಗಲು, ಗೆಳೆಯನ ತಂಗಿಯರ ಮದುವೆ ಆಗುವವರೆಗೂ ದಿವ್ಯಾ ಕಾಯಬೇಕಿತ್ತು. ದಿವ್ಯಾಳನ್ನು ಮದುವೆಯಾಗುತ್ತೇನೆಂದು ಹತ್ತು ವರ್ಷ ಕಾಲ ಕಾಯಿಸಿದ ಆತ, ಇದ್ದಕ್ಕಿದ್ದಂತೆ, ಅರ್ಥಪೂರ್ಣ ವಿದಾಯವನ್ನೂ ಹೇಳದೆ, ಬೇರೊಂದು ಹುಡುಗಿಯನ್ನು ಮದುವೆಯಾಗಿಬಿಟ್ಟರು.
ಎರಡು ತಿಂಗಳ ಹಿಂದೆ ದೆಹಲಿಯಲ್ಲಿ ಸ್ನೇಹಿತೆಯ ಮಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ಸು ಬಂದ ಮೇಲೆ, ದಿವ್ಯಾಗೆ ಮನಸ್ಸು ವಿಹ್ವಲಗೊಂಡಿದೆ. ಮದುವೆಯಲ್ಲಿ ತಿಂದದ್ದು ವ್ಯತ್ಯಾಸವಾಯಿತೋ ಏನೋ, ಅಲ್ಲಿಂದ ಬಂದಾಗಿನಿಂದ ಹೊಟ್ಟೆಯಲ್ಲಿ ಬುಗುಬುಗು ಉರಿ. ಎರಡು ತಿಂಗಳಿನಿಂದ ವೈದ್ಯರಿಗೆ ತೋರಿಸುತ್ತಲೇ ಇದ್ದರೂ, ಹೊಟ್ಟೆಯುರಿ ಕಡಿಮೆಯಾಗಿಲ್ಲ. ಜೊತೆಗೆ ತಲೆನೋವೂ ಸೇರಿಕೊಂಡು, ಎದೆಬಡಿತ ಜಾಸ್ತಿಯಾಗಿದೆ.
ದಿವ್ಯಾಗೆ ಐವತ್ತೆರಡು ವರ್ಷ. ಮುಟ್ಟು ನಿಲ್ಲುವ ಸಮಯದಲ್ಲಿ ಆಗುವ ವ್ಯತ್ಯಾಸಗಳಿಂದ ಮಾನಸಿಕ ಒತ್ತಡವಾಗಿರಬಹುದೆಂದು ವೈದ್ಯರು, ಆಕೆಯನ್ನು ನನ್ನ ಬಳಿ ಕಳಿಸಿದ್ದರು. ಮೊದಲ ಬಾರಿ ದಿವ್ಯಾ ನನ್ನನ್ನು ಭೇಟಿ ಮಾಡಲು ಬಂದಾಗ, ಅವರಿಗೆ ಮಿತಿಮೀರಿದ ಉದ್ವಿಗ್ನತೆ (ಠಿಛಿnsಜಿಟn/ಚnxಜಿಛಿಠಿy) ಉಂಟಾಗಿರುವುದು ಸ್ಪಷ್ಟವಾಗಿತ್ತು. ಕೌನ್ಸೆಲಿಂಗ್ ಜೊತೆಗೆ ಮನೋವೈದ್ಯರ ನೆರವು ಬೇಕಾಗಿತ್ತು.
ದಿವ್ಯಾ ಚಿಕ್ಕವರಿದ್ದಾಗಲೇ ಅವರ ತಂದೆ ತೀರಿಕೊಂಡಿದ್ದರು. ಐದೂ ಹೆಣ್ಣುಮಕ್ಕಳನ್ನು ತಾಯಿಯೇ ಧೃತಿಗೆಡದೆ ಬೆಳೆಸಿದ್ದರು. ಮದುವೆಯಾಗದ ದಿವ್ಯಾಗೆ ತಾಯಿಯೇ ಸರ್ವಸ್ವ. ಒಂದೂವರೆ ವರ್ಷದ ಹಿಂದೆ ತಾಯಿ ವಿಧಿವಶರಾದ ನಂತರ, ಅವರಲ್ಲಿ ಶೂನ್ಯಭಾವ ಆವರಿಸಿಕೊಂಡಿತ್ತು. ಅದರಿಂದ ಹೊರ ಬರಲೆಂದೇ ದಿವ್ಯಾ, ದೆಹಲಿಯ ಮದುವೆಗೆ ಹೋದದ್ದು.
ಅಲ್ಲಿಗೆ ಹೋದಾಗ, ಗೆಳತಿಯ ಜೀವನದ ಜೊತೆಗೆ ತನ್ನ ಜೀವನದ ಹೋಲಿಕೆಯೊಂದು ಮನದಲ್ಲಿ ಮೂಡಿದೆ. ತನಗೂ ಮದುವೆಯಾಗಿ, ಮಕ್ಕಳಾಗಿದ್ದರೆ, ಯಾವ ರೀತಿಯ ಮಕ್ಕಳು ಹುಟ್ಟುತ್ತಿದ್ದರು? ಎಂಬ ಪ್ರಶ್ನೆ ಮನಸ್ಸೆಲ್ಲಾ ತುಂಬಿಕೊಂಡು, ಗಂಡ-ಮಕ್ಕಳಿದ್ದರೆ ಬದುಕು ಚೆನ್ನ ಎನಿಸಿಬಿಟ್ಟಿದೆ. ಮರೆತಿದ್ದ ಗೆಳೆಯನ ಮಧುರ ನೆನಪು, ಜೊತೆಗೆ ಆತ ಮಾಡಿದ ಮೋಸ, ಎಲ್ಲವೂ ಆಕೆಯನ್ನು ಒಮ್ಮೆಲೆ ಹಿಂಡಿಹಿಪ್ಪೇಕಾಯಿ ಮಾಡಿದೆ. ತಾನು ಮದುವೆಯಾಗದೇ ಉಳಿದ ಬಗ್ಗೆ ದಿವ್ಯಾಗೆ ವಿಷಾದ ಕಾಡಿದೆ. ಯಾವಾಗಲೂ ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದ ತಾಯಿಯೂ ಈಗ ಬದುಕಿಲ್ಲ.
ಹರೆಯದ ವಯಸ್ಸಿನಲ್ಲಿ, ದಿವ್ಯಾಗೆ ಜೀವದ ಗೆಳೆಯರೊಬ್ಬರಿದ್ದರು. ಮದುವೆಯಾಗಲು, ಗೆಳೆಯನ ತಂಗಿಯರ ಮದುವೆ ಆಗುವವರೆಗೂ ದಿವ್ಯಾ ಕಾಯಬೇಕಿತ್ತು. ದಿವ್ಯಾಳನ್ನು ಮದುವೆಯಾಗುತ್ತೇನೆಂದು ಹತ್ತು ವರ್ಷ ಕಾಲ ಕಾಯಿಸಿದ ಆತ, ಇದ್ದಕ್ಕಿದ್ದಂತೆ, ಅರ್ಥಪೂರ್ಣ ವಿದಾಯವನ್ನೂ ಹೇಳದೆ, ಬೇರೊಂದು ಹುಡುಗಿಯನ್ನು ಮದುವೆಯಾಗಿಬಿಟ್ಟರು. ಆತನ ಮೇಲೆ ದಿವ್ಯಾ ಇಟ್ಟಿದ್ದ ಅದಮ್ಯ ನಂಬಿಕೆ ಸುಳ್ಳಾಗಿತ್ತು. ದಿವ್ಯಾರ ತಾಯಿ, ಆಗಿ ಹೋಗಿದ್ದನ್ನು ಲೆಕ್ಕಕ್ಕಿಡಬಾರದೆಂದು, ನೈತಿಕ ಬೆಂಬಲಕ್ಕೆ ನಿಂತಿದ್ದರು.
ದೆಹಲಿಗೆ ಹೋಗಿ ಬಂದ ನಂತರ, ಜೀವನದಲ್ಲಿ ಹುದುಗಿದ್ದ ನೋವು ಮರುಕಳಿಸಿದೆ. ಪ್ರೇಮದಲ್ಲಿ ಮೋಸವಾಯಿತಲ್ಲ ಎಂಬ ಮನೋಕ್ಲೇಷೆಯಿಂದ ದಿವ್ಯಾ ನರಳತೊಡಗಿದರು. ಆ ಆರದ ಗಾಯದಿಂದ ಉದ್ವಿಗ್ನತೆ ಹೆಚ್ಚಾಗಿ, ಶಾರೀರಿಕ ಸಮಸ್ಯೆ ಕಾಡತೊಡಗಿತು. ಜೊತೆಗೆ, ಮೆನೋಪಾಸ್ ಸಮಯದಲ್ಲಿ ದೇಹದಲ್ಲಾಗುವ ರಾಸಾಯನಿಕ ಬದಲಾವಣೆಯಿಂದ ಒಟ್ಟಾರೆ ಆರೋಗ್ಯವೂ ಹದಗೆಟ್ಟಿತು.
ಮನೋಕ್ಲೇಷೆಯಿಂದ ಈ ರೀತಿ ಆಗಬಹುದೆಂದು ಅರ್ಥವಾದಮೇಲೆ, ದಿವ್ಯಾಗೆ ಕೊಂಚ ಸಮಾಧಾನವಾಯಿತು. ತಾಯಿಯೊಡನೆಯೂ ಹೇಳದ ಕೆಲವು ಸಂಗತಿಗಳನ್ನು ನನ್ನೊಡನೆ ಹಂಚಿಕೊಂಡ ಮೇಲೆ, ತೀವ್ರ ಪ್ರತಿಕ್ರಿಯೆ ಕಡಿಮೆಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯನ ಬದುಕಿನ ಆಗುಹೋಗುಗಳು ತಿಳಿಯದ ಹಾಗೆ, ಅವರನ್ನು ಬ್ಲಾಕ್ ಮಾಡಲಾಯ್ತು. ಕ್ರಮೇಣ ದಿವ್ಯಾ ಅವರು ಚೇತರಿಸಿಕೊಳ್ಳತೊಡಗಿದರು.
ಡಾ. ಶುಭಾ ಮಧುಸೂದನ್
ಚಿಕಿತ್ಸಾ ಮನೋವಿಜ್ಞಾನಿ