ಶುಭವಾಗುತೈತಮ್ಮೋ …
Team Udayavani, Jul 8, 2018, 1:48 PM IST
ವಿನೋದ್ ಪ್ರಭಾಕರ್ ಒಂದರಹಿಂದೊಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ “ರಗಡ್’ ಮತ್ತು “ಕಾಮನ್ ಮ್ಯಾನ್’ ಚಿತ್ರಗಳ ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ಅವರ ಹೊಸ ಚಿತ್ರದ “ಫೈಟರ್’ ಇತ್ತೀಚೆಗಷ್ಟೇ ಆಗಿದೆ. ಆ ನಂತರ ದೇವರಾಜ್ ಎನ್ನುವವರಿಗೊಂದು ಚಿತ್ರ, ಶೈಲಜಾ ನಾಗ್ ಮತ್ತು ವಿ. ಹರಿಕೃಷ್ಣ ಅವರ ಹೊಸ ಚಿತ್ರ … ಹೀಗೆ ಅವರು ಅಡ್ವಾನ್ಸ್ ಪಡೆದಿರುವ ಚಿತ್ರಗಳ ಪಟ್ಟಿ ಬೆಳೆಯುತ್ತದೆ.
ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿನೋದ್ ಪ್ರಭಾಕರ್ಗೆ ಹಣಕಾಸಿನ ಟೆನ್ಶನ್ ಸ್ವಲ್ಪ ಕಡಿಮೆಯಾಗಿದೆಯಂತೆ. “ನಾಳೆ ಏನು ಎನ್ನುವ ಚಿಂತೆ ಸ್ವಲ್ಪ ಕಡಿಮೆಯಾಗಿದೆ. ಕೆಲವು ವರ್ಷಗಳ ಹಿಂದೆ 100 ರೂಪಾಯಿಗೂ ಒದ್ದಾಡುವಂತಹ ಪರಿಸ್ಥಿತಿ. ಯಾರಾದರೂ ಸ್ನೇಹಿತರು ಮದುವೆಗೆ ಕರೆದರೆ ಹೋಗುವುದಕ್ಕೆ ಹಿಂಜರಿಯುತ್ತಿದ್ದೆ. ಏಕೆಂದರೆ, ಮದುವೆಗೆ ಹೋದರೆ ಏನಾದರೂ ಉಡುಗೊರೆ ಕೊಡಬೇಕು. ನನ್ನ ಹತ್ತಿರ ಹಣ ಇರುತ್ತಿರಲಿಲ್ಲ.
ಹಾಗಾಗಿ ಏನಾದರೂ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ನಾನು ಬಾಡಿ ಬಿಲ್ಡ್ ಮಾಡುವುದಕ್ಕೆ ಸಾಕಷ್ಟು ಹಣವಿರಲಿಲ್ಲ. ಫಿಟ್ ಆಗಿರುವುದಕ್ಕೆ ನಾನ್-ವೆಜ್ ಬೇಕು. ಒಂದು ಕೆಜಿ ಚಿಕನ್ನ ಕಟ್ ಮಾಡಿ, ನಾಲ್ಕು ದಿನಗಳ ಕಾಲ ತಿಂದಿದ್ದೂ ಇದೆ. ಅಂತಹ ಸಮಯ ನೋಡಿದ್ದೇನೆ. ಈಗ ಸಾಕಷ್ಟು ಜನ ಬಂದು ಅಡ್ವಾನ್ಸ್ ಕೊಡುತ್ತಿದ್ದಾರೆ. ಎಷ್ಟೋ ಬಾರಿ ಕಥೆ ಮತ್ತು ತಂಡವೇ ಪಕ್ಕಾ ಆಗಿರುವುದಿಲ್ಲ.
ಮೊದಲು ಡೇಟ್ಸ್ ಕೊಡಿ ಅಂತ ಕೇಳಿಕೊಂಡು ಬಹಳಷ್ಟು ಜನ ಬರುತ್ತಿದ್ದಾರೆ’ ಎನ್ನುತ್ತಾರೆ ವಿನೋದ್ ಪ್ರಭಾಕರ್. ಇನ್ನು ವಿನೋದ್ಗೆ ತಮ್ಮ ಮಾರ್ಕೆಟ್ ಏನು ಎಂಬುದು ಗೊತ್ತಾಗಿದೆಯಂತೆ. ಹಾಗಾಗಿ ಬರುವ ನಿರ್ಮಾಪಕರಿಗೆಲ್ಲಾ ಅಷ್ಟರಲ್ಲಿ ಚಿತ್ರ ಮಾಡಿ, ಸೇಫ್ ಆಗುವುದನ್ನು ನೋಡಿ ಎನ್ನುತ್ತಿದ್ದಾರಂತೆ. “”ಟೈಸನ್’ ನಂತರ ನನಗೆ ಸ್ವಲ್ಪ ಬಿಝಿನೆಸ್ ಅರ್ಥವಾಯಿತು. ನನ್ನ ಮಾರ್ಕೆಟ್ ಏನು ಎಂಬುದು ಗೊತ್ತಾಯಿತು.
ಹಾಗಾಗಿ ನಿರ್ಮಾಪಕರಿಗೆ ಸೇಫ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತೀನಿ. ಒಬ್ಬ ನಿರ್ಮಾಪಕ ಗೆದ್ದರೆ 10 ಸಿನಿಮಾ ಮಾಡ್ತಾರೆ. ನೂರಾರು ಜನರಿಗೆ ಊಟ ಹಾಕುತ್ತಾರೆ. ಹಾಗಾಗಿ ಅವರು ಮೊದಲು ಸೇಫ್ ಆಗಬೇಕು ಎಂದು ಬಯಸುತ್ತೇನೆ’ ಎನ್ನುತ್ತಾರೆ ವಿನೋದ್. ಇನ್ನು ವಿನೋದ್ ಅವರ “ಸಿಎಂ’ ಚಿತ್ರಕ್ಕೆ ದರ್ಶನ್ ಬಂದು ಕ್ಲಾಪ್ ಮಾಡಿದ್ದರು. ಈಗ “ಫೈಟರ್’ ಚಿತ್ರಕ್ಕೂ ಕ್ಲಾಪ್ ಮಾಡಿದ್ದಾರೆ.
ಅಷ್ಟೇ ಅಲ್ಲ, ವಿನೋದ್ರ ಎಲ್ಲಾ ಚಿತ್ರಗಳಿಗೂ ಬಂದು ಕ್ಲಾಪ್ ಮಾಡುತ್ತೀನಿ ಎಂದು ಹೇಳಿದ್ದಾರಂತೆ. ಈ ಕುರಿತು ಮಾತನಾಡುವ ವಿನೋದ್, “ದರ್ಶನ್ ಅವರನ್ನು ಆಹ್ವಾನಿಸೋಕೆ ಅಂತ “ಯಜಮಾನ’ ಸೆಟ್ಗೆ ಹೋಗಿದ್ದೆ. ಫೋನ್ನಲ್ಲಿ ಹೇಳಿದ್ದರೆ ಸಾಕಾಗಿತ್ತು, ಯಾಕೆ ಬರೋಕೆ ಹೋದಿರಿ ಅಂತ ಕೇಳಿದರು ದರ್ಶನ್. ಅಷ್ಟೇ ಅಲ್ಲ, ನಿಮ್ಮ ಎಲ್ಲಾ ಚಿತ್ರದ ಮುಹೂರ್ತಗಳಿಗೂ ಬಂದು ಕ್ಲಾಪ್ ಮಾಡುತ್ತೀನಿ ಎಂದರು.
ಅಂದು ಇನ್ನೂ ಒಂದು ವಿಷಯ ಆಯ್ತು. ನಿರ್ಮಾಪಕರೊಬ್ಬರು ಚೆಕ್ ಕೊಟ್ಟಿದ್ದರು. ಅದರಲ್ಲಿ ಒಂದು ಸಣ್ಣ ತಪ್ಪಾಗಿತ್ತು. ಅವರಿಗೆ ಹೇಳಿದಾಗ, ಅವರು ಹೊಸ ಚೆಕ್ ತೆಗೆದುಕೊಂಡು ಶೂಟಿಂಗ್ ಸ್ಪಾಟ್ಗೆ ಬಂದರು. ಆ ಸಂದರ್ಭದಲ್ಲಿ, ಅದನ್ನು ದರ್ಶನ್ ಅವರಿಂದ ಕೊಡಿಸಿ ಎಂದೆ. ದರ್ಶನ್ ಅವರು ನನಗೆ ಚೆಕ್ ಕೊಟ್ಟರು. ಅವರಿಂದ ಚೆಕ್ ಪಡೆದಿದ್ದು ಮರೆಯೋಕೆ ಸಾಧ್ಯವಿಲ್ಲ. ಅಷ್ಟೊಂದು ಖುಷಿಯಾಯಿತು’ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ ವಿನೋದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಗಾಡ್ ಪ್ರಾಮಿಸ್ಗೆ ಸ್ಕ್ರಿಪ್ಟ್ ಪೂಜೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ