ತೋಟದಲ್ಲಿ ಕೈಗುಣ
Team Udayavani, Oct 25, 2019, 5:00 AM IST
ಇತ್ತೀಚೆಗೆ ನಾನೊಂದು ಎರೆಹುಳು ಸಾಕಾಣಿಕೆಯ ಕಾರ್ಯಾಗಾರದಲ್ಲಿ ಭಾಗವಹಿಸಿದೆ. ಅದ್ಭುತವಾದ ಒಳನೋಟಗಳುಳ್ಳ ಈ ಕಾರ್ಯಕ್ರಮದಲ್ಲಿ ಸಾವಯವ ಆಹಾರವನ್ನು ನಾವೇ ಬೆಳೆದುಕೊಳ್ಳುವ ಅಗತ್ಯವನ್ನು, ಎರೆಹುಳುಗಳನ್ನು ಬಳಸಿಕೊಂಡು ತ್ಯಾಜ್ಯದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳಬಹುದಾದ ಸಾಧ್ಯತೆಗಳನ್ನು ವಿವರಿಸಿದರು.ಇತ್ತೀಚೆಗೆ ಎರೆಹುಳು ಸಾಕಣೆ, ಪಾಟ್ಟು ಪ್ಲೇಟ್ ಈ ರೀತಿಯ ಆಂದೋಲನಗಳು ಹೆಚ್ಚುತ್ತಿವೆ. ಸ್ಕೂಲು ಕಾಲೇಜುಗಳಲ್ಲಿನ ಮಳೆಕೊಯ್ಲು ಯೋಜನೆಗಳು, ಇಕೋ ಕ್ಲಬ್, ಹಸಿರು ಹೊದಿಕೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಜಾಗೃತಿ ಮೂಡಿಸುವಅಭಿಯಾನ ಸಾಗುತ್ತಿದೆ.ಈ ನಿಟ್ಟಿನಲ್ಲೊಂದು ಪುಟ್ಟ ಹೆಜ್ಜೆಯೆಂದರೆ ಗಾರ್ಡನಿಂಗ್ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಕೃಷಿಯ ಬಗ್ಗೆ ಪ್ರೀತಿ ಹೆಚ್ಚಿಸುವುದು. ಇದರಿಂದಾಗುವ ಪ್ರಯೋಜನವೆಂದರೆ ಎಳವೆಯಿಂದಲೇ ಮಕ್ಕಳು ಗಿಡಗಳ ಬಗ್ಗೆ ನಂಟು ಬೆಳೆಸಿಕೊಂಡು ಶುದ್ಧ ನೆಲ ಜಲಗಾಳಿಯ ಬಗ್ಗೆ ನೈಜ ಅನುಭವ ಪಡೆಯುತ್ತಾರೆ.
ತಾವೇ ಗಿಡ ನೆಟ್ಟು ಬೆಳೆಸುವುದರಿಂದ ಲಾಭವೆಂದರೆ ಮಕ್ಕಳು ಹಣ್ಣು, ತರಕಾರಿಗಳನ್ನು ತಿನ್ನಲು ಶುರುಮಾಡುತ್ತಾರೆ ಹಾಗೂ ಅವರನ್ನು ನಿಧಾನವಾಗಿ ಜಂಕ್ಫುಡ್ನಿಂದ ದೂರವಿರಿಸಬಹುದು. ಅದೂ ಅಲ್ಲದೆ ಆಗಸದ ನೀಲಿ, ಗಿಡಮರಗಳ ಹಸಿರು ಕಣ್ಣಿಗೂ, ಮನಸಿಗೂ ಹಿತ. ಎನ್ಎಸ್ಎಸ್, ರೆಡ್ಕ್ರಾಸ್, ಇಕೋ ಕ್ಲಬ್ಎಂದೆಲ್ಲ ಯುವಕರು ನೆಲವನ್ನು ಅಗೆದು ಗಿಡ ನೆಡುವಾಗ, ಗದ್ದೆಯಲ್ಲಿ ನೇಜಿ ನೆಟ್ಟು ಸಂಭ್ರಮಿಸುವಾಗ ಅವರಲ್ಲಿನ ಕಾಯಕ ಸಂಸ್ಕೃತಿಗೆ ಹೆಮ್ಮೆ ಪಡುವಂತಾಗುತ್ತದೆ. ಹಾಗೆಯೇ ಈ ಪಠ್ಯೇತರ ಚಟುವಟಿಕೆ ಗಳು ಅವರಲ್ಲಿ ಹುಟ್ಟು ಹಾಕುವ ಕತೃತ್ವ ಶಕ್ತಿಯ ಬಗ್ಗೆ ಕೂಡ. ಇದರಿಂದ ವಿವಿಧ ಬೆಳೆಗಳನ್ನು ಬೆಳೆಯುವ, ಸಂರಕ್ಷಿಸುವ ಕೊಯ್ಲು ಮಾಡುವ ಅಂತೆಯೇ ತಳಿಗಳನ್ನು ನೀರನ್ನು ಸಂರಕ್ಷಿಸುವ ವಿಧಾನವೂ ಅವರಿಗೆ ಅರಿವಾಗುತ್ತದೆ.
ಇವಲ್ಲದೆ ಈಗ ಹೆಚ್ಚುತ್ತಿರುವ ಟ್ರೆಂಡ್ಎಂದರೆ ಟೆರೇಸ್ ಕೃಷಿ ಹಾಗೂ ಕಿಚನ್ ಗಾರ್ಡನಿಂಗ್. ವಿಷಪೂರಿತ ಹಣ್ಣು ತರಕಾರಿಗಳನ್ನು ತಿಂದು ಸಾಕಾದ ಜನರು ತಮ್ಮ ಪಾಡಿಗೆ ಆರೋಗ್ಯಕರ ಆಹಾರವನ್ನು ಬೆಳೆದುಕೊಳ್ಳುವ ವಿಧ. ಮಾರುಕಟ್ಟೆಯಲ್ಲಿ ಕಾಣುವಂತೆ ಚಂದವಾಗಿ ಈ ತರಕಾರಿಗಳಿರದಿದ್ದರೂ ಅವುಗಳ ಆರೋಗ್ಯ ಲಾಭವನ್ನು ಮನಗಂಡು ಪಾಟ್ಗಳಲ್ಲಿಯೋ ಗೋಣಿಚೀಲಗಳಲ್ಲಿಯೋ ಬಸಳೆ, ಬೀನ್ಸ್, ಅಲಸಂಡೆ, ಹೆಚ್ಚೇಕೆ ಕಬ್ಬು, ದಾಳಿಂಬೆ ಇತ್ಯಾದಿಗಳನ್ನೂ ತಾರಸಿ ಮೇಲೆ ಬೆಳೆಯುತ್ತಿರುತ್ತಾರೆ. ಇದಲ್ಲದೆ ಸಮಾನ ಮನಸ್ಕರು ಒಂದಷ್ಟು ಜನ ಸೇರಿ ಹಳ್ಳಿಯಲ್ಲೊಂದಷ್ಟು ಜಾಗ ಪಡೆದು ತಮಗೆ ಬೇಕಾದ ಉತ್ಪನ್ನಗಳನ್ನು ತಾವೇ ಬೆಳೆದುಕೊಳ್ಳುತ್ತಿರುತ್ತಾರೆ. ಇವೆಲ್ಲವೂ ಆರೋಗ್ಯಕರ ಬೆಳವಣಿಗೆಗಳೇ.
ಇನ್ನು ನೆಲದ ಮೇಲೆ ಸ್ವಂತ ಮನೆ ಇದ್ದು ಸ್ವಲ್ಪ ಜಾಗ ಇದ್ದರೂ ಅಲ್ಲೊಂದು ಪುಟ್ಟತೋಟ ನಿರ್ಮಿಸಿರುತ್ತಾರೆ. ಹೂವಿನ ಗಿಡಗಳು, ಕರಿಬೇವು, ಪಪ್ಪಾಯಿ, ಸಪೋಟಾ, ದುಂಡು ಮಲ್ಲಿಗೆ ಬಳ್ಳಿ ಹೀಗೆ. ನಿವೃತ್ತಿ ಹೊಂದಿರುವವರು, ವಯಸ್ಸಾದವರು ಈ ಗಿಡಗಳೊಂದಿಗೆ ಅದೊಂದು ರೀತಿಯ ಭಾವನಾತ್ಮಾಕ ನಂಟು ಕೂಡ. ನಮ್ಮ ಕೆಲವು ಕವಯಿತ್ರಿಯರಂತೂ ಹಿತ್ತಿಲಿನಲ್ಲಿರುವ ಮಲ್ಲಿಗೆ ಬಳ್ಳಿಯ ಬಗ್ಗೆ, ಪಾರಿಜಾತದ ಕಂಪಿನ ಬಗ್ಗೆ ಕವಿತೆಗಳನ್ನೇ ಬರೆಯುತ್ತಿರುತ್ತಾರೆ.
ನಾನೊಮ್ಮೆ ಮುಂಬಯಿಗೆ ಹೋಗಿದ್ದಾಗ ಅಲ್ಲಿನ ರೈಲು ಹಳಿಗಳ ಪಕ್ಕ, ಬ್ರಿಡ್ಜ್ಗಳ ತಳಭಾಗದಲ್ಲಿ ಹರಿವೆ, ಪಾಲಕ್, ಮೆಂತೆ ಸೊಪ್ಪು ಎಂದೆಲ್ಲ ನೋಡಿ ನಿಬ್ಬೆರಗಾಗಿ ಬಿಟ್ಟೆ. ಒಂದು ಚೂರು ಮಣ್ಣನ್ನೂ ಇವರು ಹಾಳು ಮಾಡುವುದಿಲ್ಲವಲ್ಲ ಎಂದು ಅಭಿಮಾನ ಪಟ್ಟಣಕ್ಕೆ ವ್ಯಾಪಕವಾಗಿ ವಲಸೆ ಬಂದಿರುವವರೆಲ್ಲ ಆಗಿಂದಾಗ ತಮ್ಮ ಬೇರುಗಳನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿಯೇ ನಡುಪೇಟೆಯಲ್ಲಿ ಮನೆ ಮುಂದೆ ಅಡಿಕೆ ಮರಗಳನ್ನು ಆಲಂಕಾರಿಕ ಮರಗಳಂತೆ ಬೆಳೆಸುವುದಿದೆ. ಒಂದು ಮನೆಯ ಎದುರಿನಲ್ಲಂತೂ ಉಪ್ಪಳಿಕ, ದಾರೆ ಹುಳಿಯ ಮರ ಕೆಂಪು, ಹಳದಿ ಹಣ್ಣುಗಳಿಂದ ತೊನೆಯುವ ವೈಭವವನ್ನೂ ನೋಡಿದೆ.
ವಾಣಿಜ್ಯ ಉದ್ದೇಶವಿಲ್ಲದೆ ಆಹಾರದ ಸ್ವಾವಲಂಬನೆಗೋಸ್ಕರ ಬೆಳೆಸುವ ಈ ಪುಟ್ಟ ತೋಟಗಳು ಒಂದು ರೀತಿಯ ನಿಸ್ವಾರ್ಥತೆಯಿಂದ ಕೂಡಿದ್ದು ಬಡಾವಣೆಗಳಲ್ಲಿ ತಾವು ಬೆಳೆದ ಕರಿಬೇವು, ಕೊತ್ತಂಬರಿ ಸೊಪ್ಪು ಎಂದು ಹಂಚುತ್ತಿರುವಾಗ, ದೇವರ ಪೂಜೆಗೆ ಬೇಕಾದಷ್ಟು ದಾಸವಾಳವೋ, ಮಾವಿನ ಎಲೆಗಳ್ಳೋ ನಮ್ಮ ಮನೆಯ ಮುಂದೆಯೂ ಇದೆ ಸಣ್ಣದಾಗಿ ಹೆಮ್ಮೆಪಟ್ಟುಕೊಳ್ಳುತ್ತಿರುವಾಗ ಗಾರ್ಡನಿಂಗ್ಎನ್ನುವುದು ಇನ್ನಷ್ಟು ವ್ಯಾಪಕವಾಗಬೇಕು ಎಂದೆನಿಸುತ್ತದೆ.
ಜಯಶ್ರೀ ಬಿ. ಕದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್