ಈಗ ಅಮ್ಮನಿಂದ ಎರಡು ಮಾತುಗಳು! ಎಲ್ಲ ದಿನಗಳೂ ಅಪ್ಪನ ದಿನಗಳೇ!
Team Udayavani, Jun 23, 2017, 3:45 AM IST
ಹೌದು ಮಗನೇ ಅಪ್ಪ ಈಗ ಹಿಂದಿನಂತಿಲ್ಲ. ಬಹಳಷ್ಟು ಸೋತು ಹೋಗಿದ್ದಾನೆ. ನಾನೇನು ನಿನ್ನಪ್ಪನನ್ನು ಹೊಸದಾಗಿ ನೋಡ್ತಿಲ್ಲ. ಎಷ್ಟೊಂದು ವರ್ಷದಿಂದ ಕಂಡಿದ್ದೇನೆ ಗೊತ್ತಾ ! ನಿನ್ನಷ್ಟು ವಯಸ್ಸಿನಿಂದಲ್ಲ. ಅದಕ್ಕಿಂತಲೂ ಎಷ್ಟೋ ವರ್ಷಗಳ ಮುಂಚೆ. ಅಪ್ಪನೆಂಬ ಉಪಾಧಿಯನ್ನು ಪಡೆಯಲಿದ್ದೇನೆ ಎನ್ನುವ ಸಂಭ್ರಮ, ಭಯ, ಆತಂಕದ ಜೊತೆಗೆ ತರಾತುರಿಯ ಸಿದ್ಧತೆಗಳೆಡೆಗೆ ಮುಖ ಮಾಡಿದನಲ್ಲ… ಅಂದಿನಿಂದಲೇ. ನನ್ನಪ್ಪನನ್ನೂ ಹತ್ತಿರದಿಂದ ಕಂಡವಳು ನಾನು. ಆದರೆ, ನಿನ್ನಪ್ಪನಂತಲ್ಲ ನಮ್ಮಪ್ಪ. ಎಷ್ಟೋ ಮಕ್ಕಳಿಗೆ ಅಪ್ಪನೆನಿಸಿಕೊಂಡದ್ದೂ ಹೌದು. ಹಾಗಿದ್ರೂ, ನಿನ್ನಪ್ಪನಷ್ಟು ಹೊರೆ ನನ್ನಪ್ಪನಿಗೆ ಬಿದ್ದಿರಲಿಕ್ಕಿಲ್ಲವೇನೋ ಎಂದು ಕೆಲವೊಮ್ಮೆ ಅನಿಸುತ್ತಿದೆ; ಆರ್ಥಿಕ ಸಂಕಷ್ಟಗಳನ್ನು ಬಿಟ್ಟರೆ.
ಕೊನೆಯವಳಾದ ನನಗೆ ನನ್ನಪ್ಪ ಅಪ್ಪನೆನಿಸುವಾಗ ಅವನಿಗೆ ಐವತ್ತು ದಾಟಿದೆ. ಸಾಯುವಾಗ ತೊಂಬತ್ತರ ಆ ಇಳಿವಯಸ್ಸಿನಲ್ಲೂ ಅಪ್ಪನ ಮುಖದಲ್ಲಿ ಬಸವಳಿಕೆ ಕಂಡದ್ದಿಲ್ಲ. ಬಹುಶಃ ಬುದ್ಧಿ ಬೆಳೆದಂತೆ ತನ್ನ ಮಕ್ಕಳೂ ಆತನಿಗೆ ಹೆಗಲು ಕೊಡ್ತಾ ಇದ್ದಿದ್ರಿಂದ್ಲೋ ಏನೋ. ಆದರೆ, ನಿನ್ನಪ್ಪನಿಗೆ ಇಬ್ಬರೇ ಮಕ್ಕಳು. ನೀನೊಬ್ಬನೇ ಮಗ. ನಿನ್ನಪ್ಪ ಮೂವತ್ತರಲ್ಲೇ ಅಪ್ಪನಾಗಿದ್ದರೂ ಐವತ್ತರಲ್ಲೇ ಎಪ್ಪತ್ತೈದು ಆದಂತೆ ಕಂಗಾಲಾಗಿದ್ದಾನೆ.
ಕಾರಣ ಇಲ್ಲದಿಲ್ಲ. ವಿಪರೀತ ಒತ್ತಡದ ಈ ಆಧುನಿಕ ಬದುಕಿನಲ್ಲಿ ನೀನು ಹುಟ್ಟುವ ಮೊದಲೇ ಆತನ ಬೆನ್ನಿಗಂಟಿಕೊಂಡ ಅನಿವಾರ್ಯವೆನಿಸುವ ಹೊಣೆಗಾರಿಕೆಗಳು. ಒಳ್ಳೆಯ ಶಾಲೆಗಾಗಿ ಹುಡುಕಾಟ, ಅದರ ಅಡ್ಮಿಶನ್, ಬೆರಗಾಗಿಸುವ ಫೀಸು, ಅದನ್ನು ಹೊಂದಿಸುವ ಭರಾಟೆ, ಮುಂದೆ ಟ್ಯೂಶನ್, ಸ್ಪೆಷಲ್ ಕ್ಲಾಸ್, ಸ್ಪೆಷಲ್ ಕೋರ್ಸ್ಗಳ ಹಿಂದಿನ ಓಡಾಟ, ಮುಂದೆ ಕಾಲೇಜು ಮುಟ್ಟಿದಾಗ ವಿಷಯಗಳ ಆಯ್ಕೆ, ವೃತ್ತಿಪರ ಕೋರ್ಸ್ಗಳ ಆಯ್ಕೆ… ಹೀಗೇ ತಲೆಕೆಡಿಸಿಕೊಂಡದ್ದು ಒಂದೋ ಎರಡೋ.
ಅಪ್ಪನಾದ ಬಳಿಕ ತನಗಾಗಿ ಒಂದು ಗಳಿಗೆಯೂ ಆಲೋಚಿಸದ ಅಪ್ಪ ಪ್ರತಿಕ್ಷಣವೂ ನಿನ್ನ ಬೆಳವಣಿಗೆಯತ್ತಲೇ ಮನಸ್ಸನ್ನು ಹರಿಯಬಿಟ್ಟವನು. ನೀನು ಸಮಾಜಕ್ಕೊಂದು ಆಸ್ತಿಯಾಗಬೇಕೆನ್ನುವ ಸಹಜವಾದ ಆಸೆ. ಮಗ ಊರಿಗೆ ಉಪಕಾರಿಯಾಗದಿದ್ರೂ ಪರವಾಗಿಲ್ಲ; ಮಾರಿಯಾಗಿಬಿಡಬಾರದೆನ್ನುವ ಆತಂಕ. ಅದಕ್ಕಾಗಿಯೇ ಬಾಲ್ಯದಲ್ಲಿ ದೇವರಂತೆ, ಬಳಿಕ ವೈರಿಯಂತೆ, ನೀನು ಹರೆಯಕ್ಕೆ ಬಂದಾಗ ಗೆಳೆಯನಂತೆ ನೋಡಿಕೊಂಡದ್ದು. ಆದರೂ, ಹರೆಯ ನೋಡು… ಅಪ್ಪನ ಗೆಳೆತನವನ್ನು ಲೆಕ್ಕಿಸದೆ ನಿನ್ನಿಂದ ತುಂಟಾಟ, ಮೊಂಡಾಟ, ಹೊಡೆದಾಟ-ಬಡಿದಾಟ, ಕಳ್ಳಾಟ, ಕಣ್ಣು ಮುಚ್ಚಾಲೆಯಾಟಗಳನ್ನು ಮಾಡಿಸಿರಬಹುದು. (ಈಗಿನ ಕಾಲದಲ್ಲಿ ನೀನು ಹಾಗೆಲ್ಲ ಇಲ್ಲದಿದ್ದರೂ ಕಷ್ಟವೇ. ನಿನ್ನ ಗೆಳೆಯರು ನಿನ್ನನ್ನು ಗಾಂಧಿಯೆಂದು ಲೇವಡಿ ಮಾಡುತ್ತಾರೆ). ನಿನ್ನಪ್ಪ ಅದನ್ನು ಗಮನಿಸಿರಲೂಬಹುದು. ಆದರೂ, ಪಾಪ! ಆತ ಬೇಜಾರು ಮಾಡಿಕೊಳ್ಳಲೇ ಇಲ್ಲ. ಸಣ್ಣ ವಯಸ್ಸಲ್ವಾ… ಪ್ರಾಯದ ಗುಣ, ಸರಿಯಾಗ್ತಾನೆ ಅಂತ ಅರ್ಥಮಾಡಿಕೊಂಡು ನಿನ್ನ ಬೆನ್ನಿಗೇ ನಿಂತುಬಿಟ್ಟು ಒಳ್ಳೆಯ ಗೆಳೆಯನಂತೇ ವರ್ತಿಸಿದ.
ನೀನೂ ಅಪ್ಪನ ಮಾತನ್ನು ಮೀರಿ ಆತನ ಆಸೆಯನ್ನು-ನಿರೀಕ್ಷೆಯನ್ನು ಮೂಲೆಗೆ ತಳ್ಳಿ ನಿರಾಶೆ ಮಾಡಿದೆಯೆಂದಲ್ಲ. ಅಪ್ಪನ ಆಸೆಯನ್ನು ಈಡೇರಿಸಿದ ಮಗನೇ ಆಗಿದ್ದೀಯಾ. ಶಿಕ್ಷಣ ಮುಗಿಸಿ ಕೆಲಸವೂ ದೊರೆತು ಸೆಟಲ್ ಆಗಿಬಿಟ್ಟೆ. ಆದರೂ ಮಗನೇ, ಅಪ್ಪನ ಆಸೆ ಫಲಿಸಿದ ಲಕ್ಷಣ ಕಾಣಿಸುತ್ತಿಲ್ಲ. ಜವಾಬ್ದಾರಿಯ ತಲೆನೋವು ಇನ್ನೂ ನಿನ್ನ ಅರಿವಿಗೆ ಬಂದಂತಿಲ್ಲ. ನಿನ್ನ ನೂರೆಂಟು ಬೇಡಿಕೆಗಳು, ಉದಾಸೀನ, ಬೇಜವಾಬ್ದಾರಿಯ ನಡವಳಿಕೆಗಳಿಗೆ ಅಪ್ಪನೇ ಮುಂದೆ ನಿಂತು ಇ-ಮೇಲ್, ಕೊರಿಯರ್, ಮೊಬಾೖಲ್, ಆಧಾರ್ ಅಂತ ದಿನಾ ಅಲೆದಾಡೋದು ಇನ್ನೂ ತಪ್ಪಿಲ್ಲ. ಮಾತ್ರವಲ್ಲ , ನೀನು ಪ್ರಾರಂಭದಲ್ಲೇ ಐದಂಕೆಯ ಸಂಬಳ ಕಂಡರೂ, ಮೂವತ್ತು-ಮೂವತ್ತೆçದು ವರ್ಷಗಳ ಸುದೀರ್ಘ ಸೇವೆಯ ಬಳಿಕ ಐದಂಕೆಯ ಸಂಬಳ ಪಡೆವ ನಿನ್ನಪ್ಪನ ಜೇಬಿಗೆ ಕೈ ಹಾಕೋದು ನಿಂತಿಲ್ಲ. ಎಂಥ ವಿಪರ್ಯಾಸ ನೋಡು ಮಗನೇ.
ಹಾಗಂತ, ನಿನ್ನಪ್ಪನಿಗೇನು ಬೇಜಾರಿಲ್ಲ ಬಿಡು. ದುಡಿದದ್ದು ನಿಮಗೆಂದೇ ತಾನೆ ! ಆದರೂ, ರಿಕ್ಷಾ, ಬೈಕು, ಕ್ಯಾಬ್, ಕಾರು, ಟ್ರೈನ್, ಏರೋಪ್ಲೇನ್ ಅಂತ ದಿನನಿತ್ಯ ಬೇರೆ ಬೇರೆ ರೀತಿಯ ವಾಹನದಲ್ಲೇ ಓಡಾಡುವ ನೀನು ನಿನ್ನಪ್ಪ ಈಗಲೂ ಒಂದೊಂದು ಪೈಸೆಯನ್ನೂ ಲೆಕ್ಕ ಹಾಕಿ ಬಸ್ಸಲ್ಲೇ ಓಡಾಡೋದನ್ನು, ಅಳೆದೂ ಸುರಿದೂ ರಿಕ್ಷಾ ಹಿಡಿಯೋದನ್ನು ಗಮನಿಸ್ತಾನೇ ಇಲ್ಲ. ನಿನ್ನಪ್ಪ ಹಾಗೆ ಉಳಿಸಿದ್ರಿಂದಾನೇ ಆತನಿಗೆ ತನ್ನ ಸಣ್ಣ ಸಂಬಳದಲ್ಲೇ ಇದೆಲ್ಲಾ ಮಾಡಲು ಸಾಧ್ಯವಾಗಿದ್ದು. ಸೋದರಿಯರ ಮದುವೆ, ಹೆತ್ತವರ ಯೋಗಕ್ಷೇಮ, ಕುಟುಂಬಿಕರ ಕಷ್ಟಕ್ಕೆ ನೆರವು, ಊರವರ-ಬಂಧುಗಳ ಸಂತೋಷ ಕೂಟಗಳಿಗೆ ಉಡುಗೊರೆ, ಸಂಘಸಂಸ್ಥೆಗಳಿಗೆ ಸಹಾಯ, ನಿಮ್ಮ ವಿದ್ಯಾಭ್ಯಾಸ ಅದರ ಜೊತೆಗೇ ನಮ್ಮೆಲ್ಲರ ಲಾಲನೆ-ಪಾಲನೆ. ಅಬ್ಟಾ! ಹೀಗೂ ಸಾಧ್ಯಾನಾ ಅಂತ ಅನಿಸೋದಿಲ್ವಾ ನಿಂಗೆ?
ಮುಂದೆ ನಿಂಗೆ ಜವಾಬ್ದಾರಿ ಇಲ್ಲ ಅಂತ ಹೇಳಲ್ಲ. ಬದಲಾಗುವ ಕಾಲದಲ್ಲಿ ನಿನಗಿನ್ನೂ ಹೊಸಹೊಸ ಎಷ್ಟೊಂದು ಜವಾಬ್ದಾರಿಗಳಿವೆಯೋ ಏನೋ! ಅದಕ್ಕೆ ನೀನೀಗಲೇ ಸಜ್ಜಾಗಬೇಕು. ಕೂಸು ಹುಟ್ಟುವುದಕ್ಕೆ ಮುಂಚೆ ಕುಲಾವಿ ಹೊಲಿಸುವ ಕಾಲ ಇದು. ಮುಂದೆ ಹುಟ್ಟಲಿರುವ ನಿನ್ನ ಮಗುವಿಗೆ ಉತ್ತಮ ಶಾಲೆಯಲ್ಲಿ ಈಗಲೇ ಸೀಟು ಕಾಯ್ದಿರಿಸಬೇಕು, ಸಂದರ್ಶನ ಎದುರಿಸಲು ತಯಾರಿ ನಡೆಸಬೇಕು, ಜೊತೆಗೆ ರೇಶನ್ಕಾರ್ಡ್, ಬ್ಯಾಂಕ್ಅಕೌಂಟ್, ಡೆಬಿಟ್ಕಾರ್ಡ್, ಕ್ರೆಡಿಟ್ಕಾರ್ಡ್, ಎಟಿಎಂ, ಡ್ರೈವಿಂಗ್ ಲೈಸೆನ್ಸ್ , ಪಾಸ್ಪೋರ್ಟ್, ಪಾನ್ಕಾರ್ಡ್, ಆಧಾರ್ಕಾರ್ಡ್… ಹೀಗೆ ಇನ್ನೂ ಏನೇನು ಹೊಸದಾಗಿ ಹುಟ್ಟಿಕೊಳ್ತದೋ ಯಾರಿಗೆ ಗೊತ್ತು !
ಮಕ್ಕಳ ವಿಚಾರ ಬಿಡು, ಮನೆವಾರ್ತೆಯಲ್ಲೂ ನೀನಿನ್ನು ಪಳಗಬೇಕು ಮಗನೇ. ನಿಂಗಂತೂ ಗ್ಯಾಸ್ ಹಚ್ಚೋಕೂ ಗೊತ್ತಿಲ್ಲ. ಅಡುಗೆ ಮನೆಗೆ ಬಂದಿದ್ರೆ ತಾನೆ ಗೊತ್ತಾಗೋದಿಕ್ಕೆ. ಅದು ನಿನ್ನ ತಪ್ಪಲ್ಲ ಬಿಡು. ನಿನ್ನಲ್ಲಿ ಕೆಲ್ಸ ಮಾಡೊದಿಕ್ಕೆ ನಾನು ಬಿಟ್ಟಿದ್ರೆ ತಾನೆ! ನನ್ನ ಹಿಂದಿನ ಮನೋಧರ್ಮದಂತೆ ನೀನು ಗಂಡು ಮಗ ಎನ್ನುವ ಕಾರಣವಿರಲೂಬಹುದು. ಹಾಗಂತ, ನೀನಿನ್ನು ಸುಮ್ಮನಿದ್ದರೆ ಸಾಧ್ಯವಿಲ್ಲ. ಎಲ್ಲವನ್ನೂ ಆದಷ್ಟು ಬೇಗ ಕಲ್ತುಕೋಬೇಕು. ನಿನ್ನಪ್ಪನಲ್ಲಿ ನಾನು ಕೆಲಸ ಮಾಡಿಸಲಿಲ್ಲವೆಂದು ನಿನಗೆ ಬರುವ ಸಂಗಾತಿ ನಿನ್ನನ್ನು ಮಾಡಿಸದೇ ಬಿಡುವುದಿಲ್ಲ. ನಿನಗೆ ತಿಳಿಯದಿದ್ದರೆ ಆಕೆಯೇ ನೀನು ಕಲಿಯುವುದಕ್ಕೆ ಪ್ರೇರಕಳಾಗುತ್ತಾಳೆ. ಈಗಿನ ಪರಿಸ್ಥಿತಿಯಲ್ಲಿ ನೀನು ಮಾಡದೇ ಇರುವುದೂ ಸರಿಯಲ್ಲ. ಈಗ ಕಾಲ ಹಿಂದಿನಂತಲ್ಲ. ನಿನ್ನಂತೆಯೇ ಆಕೆಯೂ ದುಡಿದು ಬರುವಾಗ ಇಬ್ಬರಿಗೂ ದಣಿವು ಒಂದೇ ರೀತಿಯಲ್ವಾ… ಪರಸ್ಪರ ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡ್ಕೊಂಡು ಕೆಲಸ ಹಂಚೊಡು ಮಾಡಿದ್ರೇನೇ ಬದುಕು ನೆಮ್ಮದಿಯಿಂದ ಸಾಗೋದು.
ಅದು ಮುಂದಿನ ವಿಷಯ. ಬಿಡು. ಈಗ ಕೇಳು, ನಿನ್ನನ್ನೂ, ನಿನ್ನ ಜವಾಬ್ದಾರಿಗಳನ್ನೂ ಹೊತ್ತು ಹೊತ್ತು ನಿನ್ನಪ್ಪನ ಹೆಗಲು ಸವೆದಿದೆ ಕಣೊ. ಹೊರೆ ಭಾರದಿಂದ ನಿನ್ನಪ್ಪನ ಆತ್ಮವಿಶ್ವಾಸ ಕುಗ್ಗಿದೆ. ಅನ್ನದ ಹುಡುಕಾಟಕ್ಕಾಗಿ ಮಣ್ಣಿನಾಳಗಳಲ್ಲಿ ಕಣ್ಣನೂರಿದ ಜೀವ ಅದು. ನಿನ್ನಮ್ಮನಂತೆ ತನ್ನ ಬೇಜಾರು, ಅಸಹನೆ, ಆಯಾಸವನ್ನು ಹೇಳಿಕೊಂಡು ತಿರುಗುವ, ಆಯಾಯ ಕ್ಷಣಕ್ಕೇ ಹೊರಹಾಕಿಬಿಡುವ ಸ್ವಭಾವವೂ ಅಪ್ಪನದ್ದಲ್ಲ. ಅದಕ್ಕಾಗಿಯೇ ಹೇಳ್ತಾ ಇದ್ದೀನಿ ಮಗನೇ, ಇನ್ನು ಮುಂದೆ ಪ್ರತಿಯೊಂದಕ್ಕೂ ಅಪ್ಪನನ್ನೇ ಅವಲಂಬಿಸುವುದನ್ನು ಬಿಟ್ಟು, ಅಪ್ಪನ ಜವಾಬ್ದಾರಿಯ ಹೊರೆಯನ್ನು ಈಗಿಂದೀಗಲೇ ನಿನ್ನ ಹೆಗಲಿಗೇರಿಸಿಕೋ. ಅಪ್ಪನ ಎದೆಭಾರವನ್ನು ಇಳಿಸು. ಅಪ್ಪ ಒಮ್ಮೆ ಜೋರಾಗಿ ದೀರ್ಘಶ್ವಾಸವನ್ನು ಹೊರಬಿಟ್ಟು ನಿರಾಳವಾಗಲಿ. ಸರಿಯಾದ ವಯಸ್ಸಿಗೆ ಮದುವೆಯಾಗಿ ನೀನೂ ಒಮ್ಮೆ ಅಪ್ಪನಾಗಿ ಅಪ್ಪನಿಗೊಬ್ಬ ಅಪ್ಪನಾಗಿ ಬಿಡು. ಅಪ್ಪನ ಸಂಕಷ್ಟವನ್ನು ಅರಿತುಕೊಂಡು ಪ್ರೀತಿಯಿಂದ, ಕೊಂಡಾಟದಿಂದ ಯೋಗಕ್ಷೇಮವನ್ನು ವಿಚಾರಿಸಿಕೋ. ಆತನ ಮುಂದಿನ ಬದುಕಿಗೆ ಊರುಗೋಲಾಗು.
ಹಾಂ! ಹಾಂ!… ಕೇವಲ ಅಪ್ಪನ ಜಾಗ ತುಂಬಿದರೆ ಮುಗಿಯಲಿಲ್ಲ. ಅಪ್ಪನ ಹೆಂಡತಿ-ಮಕ್ಕಳ ಮೇಲಿನ ಪ್ರೀತಿ, ಕುಟುಂಬ ಪ್ರೀತಿ, ಸಹೋದರ ವಾತ್ಸಲ್ಯ, ಪರಹಿತಕಾಳಜಿ, ನೌಕರಪ್ರೇಮ, ಮಾನವೀಯತೆ, ಉದಾರತೆ, ಹೃದಯ ಶ್ರೀಮಂತಿಕೆ, ಸಮಯಪ್ರಜ್ಞೆ , ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ, ನೇರ ನಡೆ-ನುಡಿ, ರಾಷ್ಟ್ರಭಕ್ತಿ ಎಲ್ಲವನ್ನೂ ಒಗ್ಗೂಡಿಸಿಕೊಂಡು ಅದರಂತೆಯೇ ನಡೆದುಕೊಳ್ಳುವುದನ್ನು ಕಲಿತುಕೋ. ಮಾತ್ರವಲ್ಲ , ನಿನ್ನ ಮಕ್ಕಳಿಗೂ ಅದನ್ನು ದಾಟಿಸುವ ಕೆಲಸವನ್ನು ಮಾಡಬೇಕು. ಹೆಣ್ಣಿಗೆ ಗೌರವ ಕೊಡುವುದನ್ನು ಮರೆಯಬೇಡ. ತನ್ನ ಕಾಲ ಮೇಲೆ ತಾನು ನಿಲ್ಲುವ, ಯಾರನ್ನೂ ಅವಲಂಬಿತನಾಗದಂತೆ ತನ್ನ ಅಗತ್ಯಕ್ಕೆ ತಾನೇ ಸಜ್ಜಾಗುವ ಪರಿಯನ್ನು ಕಾಯ್ದುಕೋ. ಒಟ್ಟಿನಲ್ಲಿ ನಿನ್ನಪ್ಪನ ಪ್ರತಿರೂಪವಾಗಬೇಕು ನೀನು. ಸಮಾಜಮುಖೀಯಾಗಿ ಬೆಳೆಯಬೇಕು.
ನೀನು ಮುಂದೊಂದು ದಿನ ಅಪ್ಪನಾಗಿ, ನಿನ್ನಪ್ಪ ಅಜ್ಜನಾಗಿ, ತನ್ನ ಮಗ ತನ್ನಂತಹ ಅಪ್ಪನಾದ ಸಂತೃಪ್ತಿ ನಿನ್ನಪ್ಪನ ಮುಖದಲ್ಲಿ ಕಾಣುವುದನ್ನು ನೋಡಲು ನಿನ್ನಮ್ಮ ಕಡೆಗಣ್ಣಿನಿಂದ ಕಾಯುತ್ತಿದ್ದಾಳೆ. ಹೊರೆ ಇಳಿದ ಅಪ್ಪನ ಸಂತೋಷದ, ನೆಮ್ಮದಿಯ ಮುಖವನ್ನು, ನಿರಾತಂಕದ ನಿರಾಳ ಬದುಕನ್ನು ನೋಡಿ ಕಣ್ತುಂಬಿಸಿಕೊಳ್ಳುವ ಹಂಬಲ; ಅಂತೆಯೇ ಅಪ್ಪನಾದ ಬಳಿಕ ನಿನ್ನನ್ನೂ !
– ರೂಪಕಲಾ ಆಳ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ