ಹೈದರಾದ್‌ನ ರೇಪ್‌ ಪ್ರಕರಣ : ಭಾರತೀಯ ಸಮಾಜದ ಆತ್ಮಸಾಕ್ಷಿ ಗೆ ಅವಮಾನ !


Team Udayavani, Dec 6, 2019, 5:26 AM IST

ws-25

ಹೈದರಾಬಾದ್‌ನಲ್ಲಿ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ ಗಂಡುಹುಡುಗರು ಕಲಿತ ಶಾಲೆ ಯಾವುದು? ಅವರು ಯಾಕೆ ಹಾಗೆ ಬೆಳೆದರು? ಅವರನ್ನು ಹಾಗೆ ಬೆಳೆಸಿದ ಪರಿಸರ ಯಾವುದು?

ವಾತ್ಸ್ಯಾಯನನಂಥ ತಣ್ತೀಜ್ಞಾನಿಗಳು ವಿರಚಿಸಿದ ಕಾಮಸೂತ್ರವನ್ನು ಕೊಟ್ಟಂಥ ಭಾರತದಲ್ಲಿ ಇಷ್ಟೊಂದು ಅತ್ಯಾಚಾರ ಪ್ರಕರಣಗಳು ಹೇಗೆ ನಡೆಯುತ್ತವೆ- ಎಂಬ ಪ್ರಶ್ನೆಯನ್ನು ಹಿಂದೊಬ್ಬರು ಕೇಳಿದ್ದರು. ಕಾಮ ಎಂಬುದರ ಸರಳ ಅರ್ಥ ಬಯಕೆ. ದೇಹದ ವಾಂಛೆಯನ್ನು ಪೂರೈಸಿಕೊಳ್ಳುವುದು ಕೂಡ ಹೇಗೆ ಜೀವನ ಶಿಸ್ತಿನ ಭಾಗ ಎಂಬುದನ್ನು ವಾತ್ಸ್ಯಾಯನನ ಕೃತಿ ಬೋಧಿಸುತ್ತದೆ. ಅದು ಎಂದಿಗೂ ಮುಕ್ತ ಅಥವಾ ಸಾಮೂಹಿಕ ಕಾಮವನ್ನು ಪ್ರೇರೇಪಿಸುವುದಿಲ್ಲ. ಕವಿಗಳು ಬರೆದ ಕಾಮ ಶಾಸ್ತ್ರವನ್ನಾಗಲಿ, ದೇವಾಲಯಗಳಲ್ಲಿರುವ ಕಾಮಶಿಲ್ಪಗಳನ್ನಾಗಲಿ- ನಾವು ತಾತ್ವಿಕತೆಯಾಗಿಯೋ, ಕಲೆಯಾಗಿಯೋ ಗ್ರಹಿಸುತ್ತೇವೆಯೇ ವಿನಾ ಹಸಿಹಸಿಯಾಗಿ ಸ್ವೀಕರಿಸುವುದಿಲ್ಲ. ಇವು ಜೀವನ ಪ್ರೀತಿಯನ್ನು ಉದ್ದೀಪಿಸುವ ಪ್ರೇರಕ ಶಕ್ತಿಗಳು ಮಾತ್ರ. ಅಲ್ಲದೆ, ಅವುಗಳ ಲಭ್ಯತೆಯೂ ಬಹಳ ವಿರಳವಾದುದು. ಕಾಮಶಾಸ್ತ್ರ ಎಲ್ಲರಲ್ಲಿಯೂ ಇಲ್ಲ , ಕಾಮಶಿಲ್ಪಗಳನ್ನು ನೋಡಬೇಕಾದರೆ ದೂರದ ಖಜುರಾಹೋದಂಥ ದೇವಾಲಯಕ್ಕೆ ಹೋಗಬೇಕು. ಒಂದು ಬಗೆಯ “ವಿರಳ ಲಭ್ಯ’ ಸ್ಥಿತಿಯೇ ಇವುಗಳ ಸ್ವಾರಸ್ಯವನ್ನು ಹೆಚ್ಚಿಸುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಋಷಿ-ಮುನಿಗಳು ಅಪ್ಸರೆಯ ರೊಂದಿಗೆ ಕೂಡಿಕೊಳ್ಳುವ ಸಂದರ್ಭಗಳಿವೆ. ಅಲ್ಲೆಲ್ಲ ಪರಸ್ಪರವಾದ ಒಲವುಗಳಿರುತ್ತವೆ. ಸ್ತ್ರೀಯರನ್ನು ಬಲವಂತವಾಗಿ ಹಿಡಿದೆಳೆದು ಬಲಾತ್ಕಾರ ಮಾಡಿದ ಪ್ರಕರಣಗಳಿರುವುದು ರಾಕ್ಷಸರ ಕತೆಗಳಲ್ಲಿ ಮಾತ್ರ. ಅಂಥವರನ್ನು ನಿಗ್ರಹಿಸುವುದು ಧರ್ಮ ಸ್ಥಾಪನೆಯ ಭಾಗವೇ ಆಗಿತ್ತು. ಸ್ತ್ರೀಯರ ರಕ್ಷಣೆ ರಾಜ್ಯಭಾರ ಮಾಡುವವನ ಮುಖ್ಯ ಹೊಣೆಯಾಗಿತ್ತು. ಸ್ತ್ರೀಯರು ಅತಂತ್ರರಾದಾಗ ಅವರನ್ನು ಅವರ ಇಚ್ಛೆಗನುಸಾರವಾಗಿಯೇ ಮಡದಿಯರನ್ನಾಗಿ ಮಹಾರಾಜ ಸ್ವೀಕರಿಸುತ್ತಿದ್ದ. ಚಕ್ರವರ್ತಿಯ ಆಶ್ರಯದಲ್ಲಿ ನಾರಿಯರು ಇರುವುದು ಸಾಮಾನ್ಯ ಸಂಗತಿಯಾಗಿತ್ತು.

ಲೈಂಗಿಕತೆ ಎಂಬುದು ಜೀವನಸಂಸ್ಕಾರದ ಭಾಗವೇ !
ಇವತ್ತು ಲೈಂಗಿಕ ಪಾಠಗಳನ್ನು ಶಾಲೆಗಳಲ್ಲಿ ಅಳವಡಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ, ಈ ಪಾಠಗಳನ್ನು ಹೇಗೆ ಮಾಡುವುದು, ಏನನ್ನು ಹೇಳಿಕೊಡುವುದು ಎಂಬ ಬಗ್ಗೆ ಖಚಿತತೆ ಇಲ್ಲ. ಹಸಿವು, ತೃಷೆಗಳಂತೆಯೇ ಮೈಥುನವೂ ಸಹಜವಾಗಿ ಉಂಟಾಗುವಂಥಾದ್ದು. ಅದನ್ನು ತೀರಿಸಿಕೊಳ್ಳುವ ಬಗೆಯೂ ಅಷ್ಟೇ ಸಹಜವಾಗಿ ನಡೆಯಬೇಕು. ಅದು ಒತ್ತಾಯದಿಂದ ಅಥವಾ ಒತ್ತಾಯಿಸುವುದರಿಂದ ಸಂಭವಿಸುವಂಥಾದ್ದೂ ಅಲ್ಲ. ಸನಾತನ ಸಂಸ್ಕೃತಿಯಲ್ಲಿ ಇದನ್ನು “ಸಂಸ್ಕಾರ’ ಎಂದು ಕರೆಯುತ್ತೇವೆ.

ಮೂಲಭೂತವಾಗಿ ಸಮಾಜದಲ್ಲಿ ಪ್ರತಿಯೊಬ್ಬರು “ಗೌರವ’ವನ್ನು ನಿರೀಕ್ಷಿಸುತ್ತಾರೆ. ಅದರಲ್ಲೂ ಇವತ್ತು ಹೆಣ್ಣುಮಕ್ಕಳು ನಿರೀಕ್ಷಿಸುವುದು ಗೌರವವನ್ನೇ. ಪುಟ್ಟ ಹುಡುಗಿಯರಿಂದ ತೊಡಗಿ, ವೃದ್ಧೆಯರವರೆಗೆ ಮೊದಲು ಗೌರವಭಾವದಿಂದ ಕಾಣಲು ಸಮಾಜ ಕಲಿಯಬೇಕು. ಸ್ನೇಹ-ಪ್ರೀತಿ ಅವೆಲ್ಲ ಆಮೇಲಿನ ವಿಷಯಗಳು. ಇಂಥ ಭಾವಗಳು ನಿರಂತರ ಸಾಮೀಪ್ಯದಿಂದ ಮೂಡುವಂಥಾದ್ದು. ಇದ್ದಕ್ಕಿದ್ದಂತೆ ಸ್ನೇಹ-ಪ್ರೀತಿ-ಪ್ರೇಮ ಉಂಟಾಗುವುದಿಲ್ಲ. ಅವೆಲ್ಲಕ್ಕಿಂತ ಪೂರ್ವದಲ್ಲಿ ಗೌರವಭಾವ ಮೂಡಬೇಕು. ಯಾರಲ್ಲಾದರೂ ಸ್ನೇಹವನ್ನಾಗಲಿ, ಪ್ರೀತಿಯನ್ನಾಗಲಿ ಬಯಸುವುದು ತಪ್ಪಲ್ಲ. ಆದರೆ, ಅದು “ಮ್ಯೂಚುವಲೀ ಇಂಪಾಸಿಬಲ್‌’ ಎಂದೆನ್ನಿಸಿದಾಗ ಅವರೊಡನೆ ಗೌರವಭಾವದಿಂದಿರಲು ಕಲಿಯುವುದು ಅಷ್ಟೇ ಮುಖ್ಯ.

ಸಾಮಾನ್ಯವಾಗಿ ಹುಡುಗಿಯರು ಎಂದ ಕೂಡಲೇ ತಾತ್ಸಾರದ ಭಾವನೆ ಇರುತ್ತದೆ. ಇವತ್ತು ಕಾರ್ಪೊರೇಟ್‌ ಆಫೀಸ್‌ಗಳಲ್ಲಂತೂ ಕೆಲವು ಮೇಲಧಿಕಾರಿಗಳಿಗೆ ಸ್ತ್ರೀಉದ್ಯೋಗಿಗಳ ಬಗ್ಗೆ “ಟೇಕನ್‌ ಫಾರ್‌ ಗ್ರ್ಯಾಂಟೆಡ್‌’ ಎಂಬ ಭಾವವಿರುತ್ತದೆ. “ಎಲ್ಲರಿಗೆ’ ಹೀಗಿದೆ ಎಂದು ಹೇಳಲಾಗದು. ಕೆಲವರಿಗಂತೂ ಇದ್ದೇ ಇದೆ. ಅಂಥ ಮೇಲಧಿಕಾರಿಯ ಕೈಕೆಳಗೆ ದುಡಿಯುವ ಸ್ಥಿತಿ ಬಂದರೆ ಹೆಣ್ಣುಮಕ್ಕಳಿಗೆ ಅದೊಂದು ಬಗೆಯ ಹಿಂಸೆಯೇ ಸರಿ. ಸಣ್ಣ ಫ್ಯಾಕ್ಟರಿಗಳಿಂದ ತೊಡಗಿ, ದೊಡ್ಡ ಕಂಪೆನಿಗಳವರೆಗೆ ಮೇಲಧಿಕಾರಿ ಪುರುಷರು ತಮ್ಮ ಕೈಕೆಳಗೆ ಕೆಲಸ ಮಾಡುವ ಹುಡುಗಿಯರನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಳ್ಳುವುದು ತೀರಾ ಸಾಮಾನ್ಯ. ಇಂದು ಎಚ್‌ಆರ್‌ ವಿಭಾಗಗಳಲ್ಲಿ ಹೆಣ್ಣುಮಕ್ಕಳ ದೌರ್ಜನ್ಯದ ದೂರುಗಳನ್ನು ನಿರ್ವಹಿಸುವ ವಿಭಾಗವೇ ಆರಂಭವಾಗಿದೆ. ಹೆಣ್ಣು ಉದ್ಯೋಗಿಗಳು ಆತ್ಮೀಯರಲ್ಲಿ ತಮ್ಮ ಸಂಕಟವನ್ನು ಹೇಳಿಕೊಂಡರೆ, “ಇರಲಿ, ಅದರಿಂದೇನಾಯ್ತು?’ ಎಂಬ ಮಾತು ಬರುವುದಿದೆ. ಕೆಲವೊಮ್ಮೆ ಹೆಣ್ಣುಮಕ್ಕಳು ಸ್ವಯಂಸಾಧನೆಯಿಂದ ಮೇಲೇರಿದರೂ “ಬಹುಶಃ ಆಕೆ ಚಾಲಾಕಿ ಇದ್ದಾಳೆ. ಹಾಗಾಗಿ, ಎಚೀವ್‌ ಮಾಡಿದ್ದಾಳೆ’ ಎಂದು ಹೀಗಳೆಯುವ ಮಾತುಗಳನ್ನು ಕೇಳಿದ್ದೇವೆ.

ಸೋಶಿಯಲ್‌ ಮೀಡಿಯಾಗಳ ರಾದ್ಧಾಂತ
ಇದಕ್ಕೆಲ್ಲ ಮೂಲ ಕಾರಣ ಇವತ್ತಿನ ಸೋಶಿಯಲ್‌ ಮೀಡಿಯಾಗಳೇ. ಲೈಂಗಿಕ ಸಂಗತಿಗಳ ಅರಿವು ಇರಬೇಕು. ಆದರೆ, ಲೈಂಗಿಕತೆ ಎಂಬುದು ಕೇವಲ ದೇಹದ ಪ್ರಕ್ರಿಯೆಯಲ್ಲ, ಅದೊಂದು ಮಾನಸಿಕ ಸ್ಥಿತಿ. ಹಸಿವು ಎಂಬುದು ಹೊಟ್ಟೆಯಲ್ಲಿ ಉಂಟಾಗುವ ಒಂದು ಪ್ರಕ್ರಿಯೆ ಎಂಬುದು ನಿಜವೇ, ಜೊತೆಗೆ ಅದೊಂದು ಬಗೆಯ ಮಾನಸಿಕ ಸ್ಥಿತಿಯೂ ಹೌದು. ಹಸಿವಿಲ್ಲದೆ ಊಟ ರುಚಿಸುವುದಿಲ್ಲ. ಆದರೆ, ಹೊಟ್ಟೆ ಹಸಿವು ಮತ್ತು ಕಾಮದ ಹಸಿವು ಬೇರೆ ಬೇರೆ. ಅವೆರಡನ್ನು ತೀರಿಸಿಕೊಳ್ಳುವ ವಿಧಾನಗಳೂ ಬೇರೆ, ಶಿಷ್ಟಾಚಾರಗಳೂ ಬೇರೆ.

ಆದರೆ, ಈ ಶಿಷ್ಟಾಚಾರವನ್ನು ಮೀರುವ ಮನೋಸ್ಥಿತಿಯನ್ನು ಇಂದಿನ ಸೋಶಿಯಲ್‌ ಮೀಡಿಯಾಗಳು ಪ್ರಚೋದಿಸುತ್ತವೆ. “ಗಂಡು-ಹೆಣ್ಣು ಹಗಲು ಕೂಡಬಾರದು’ ಎಂಬುದು ಶಾಸ್ತ್ರ ನಿಯಮ. ಹಾಗಾಗಿ, ಕಾಮಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕಲ್ಪಿಸುವುದು, ಕನಸು ಕಟ್ಟುವುದು, ಅನುಭವಿಸುವುದು ಎಲ್ಲವೂ ರಾತ್ರಿ ಕಾಲದಲ್ಲಿ ಮಾತ್ರ. ನಿದ್ರಿಸುವ ಸ್ಥಿತಿಯ ಒಂದು ಭಾಗವಾಗಿಯೇ ಇದು ಇದೆ. ಆದರೆ, ಈ ದಿನದ ಸ್ಥಿತಿ ಹೇಗಿದೆ ಎಂದರೆ ಸೋಶಿಯಲ್‌ ಮೀಡಿಯಾಗಳಲ್ಲಿ ಹೊತ್ತು-ಗೊತ್ತಿಲ್ಲದೆ ಹಳದಿ ಚಿತ್ರಗಳನ್ನು ನೋಡಬಹುದು. ಎಲ್ಲ ಪ್ರಾಯದವರಿಗೂ ಇದು ಲಭ್ಯ. ಆನ್‌ಲೈನ್‌ ಮೂಲಕ ಇವತ್ತು ಎಗ್ಗಿಲ್ಲದೆ ಲಭ್ಯವಿರುವ ಮೀಡಿಯಾಗಳು ಸಾಮಾಜಿಕ ಶಿಷ್ಟಾಚಾರವನ್ನು ಹಾಳುಗೆಡವುತ್ತಿವೆ. ಇದರ ಪರಿಣಾಮವಾಗಿಯೇ ಹೆಣ್ಣುಮಕ್ಕಳಿಗೆ ಅಗೌರವ ತೋರಿಸುವ ಸಂದರ್ಭಗಳನ್ನು ಅಲ್ಲಲ್ಲಿ ಕಾಣುತ್ತಿದ್ದೇವೆ. ಕೆಲವೆಡೆ ರೇಪ್‌ಗ್ಳು ಸಂಭವಿಸುತ್ತವೆ. ಕೆಲವು ಸುದ್ದಿಯಾಗುತ್ತವೆ. ಕೆಲವು ಸುದ್ದಿಯಾಗದೆ ಹಾಗೇ ಮುಗಿದುಹೋಗುತ್ತವೆ.

ಹೈದರಾಬಾದ್‌ನ ಪ್ರಕರಣ
ದೆಹಲಿಯ “ನಿರ್ಭಯಾ’ ಪ್ರಕರಣದಿಂದಾಗಿ ಇಡೀ ದೇಶಕ್ಕೆ ತಲೆತಗ್ಗಿಸುವ ಸಂದರ್ಭ ಒದಗಿ ಬಂದಿತ್ತು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಗ್ಯಾಂಗ್‌ರೇಪ್‌ ಮತ್ತು ಅತ್ಯಾಚಾರ ಪ್ರಕರಣ ಇಡೀ ದೇಶದ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ. ಆಕೆ ಇಪ್ಪತ್ತಾರೋ ಇಪ್ಪತ್ತೇಳೊ ವರ್ಷದ ಹೆಣ್ಣುಮಗಳು. ಆಕೆ ಟೋಲ್‌ಗೇಟ್‌ನ ಬಳಿಯಲ್ಲಿ ತನ್ನ ಸ್ಕೂಟರ್‌ ನಿಲ್ಲಿಸಿ ಹೋಗಿದ್ದಳು. ಟೋಲ್‌ಗೇಟ್‌ ಎಂದರೆ ವಾಹನಗಳು ಆಗಾಗ ಓಡಾಡುವ ಮತ್ತು ಕ್ಷಣಕಾಲ ನಿಲ್ಲುವ ಪರಿಸರ. ಹಾಗಾಗಿ, ಅದೊಂದು ಬಗೆಯ ಸುರಕ್ಷಿತ ತಾಣವೆಂಬ ಮನೋಭಾವ ಅವಳಲ್ಲಿತ್ತು.

ಅಲ್ಲಿ ಸ್ಕೂಟರ್‌ ಇತ್ತು. ವೈದ್ಯರಲ್ಲಿಗೆ ಯಾವುದೋ ಚಿಕಿತ್ಸೆಗಾಗಿ ಹೋಗಿ ಮರಳಿದಾಗ ಅವಳ ಸ್ಕೂಟರ್‌ ಟಯರ್‌ಗಳು ಪಂಕ್ಚರ್‌ ಆಗಿದ್ದವು. ಯಾರೋ ಪಂಕ್ಚರ್‌ ಮಾಡಿದ್ದರು ಎಂಬುದೇ ಸರಿ. ಆಕೆ ಹೇಳಿಕೇಳಿ ಹಳ್ಳಿಯ ಹೆಣ್ಣುಮಗಳಲ್ಲ , ಅಶಿಕ್ಷಿತೆಯಲ್ಲ. ಪಶುವೈದ್ಯೆ! ಆದರೆ, ಅವಳೇ ದುಷ್ಟರ ವಶಕ್ಕೊಳಗಾದಳು. ಪಂಕ್ಚರ್‌ ಆದ ಸ್ಕೂಟರ್‌ನ ಬಳಿ ನಿಂತು ಮುಂದೇನು ಮಾಡುವುದು ಯೋಚಿಸುತ್ತಿದ್ದವಳ ಹತ್ತಿರ ಸಹಾಯ ಮಾಡಲು ಬಂದ ಕೆಲವು ಟ್ರಕ್‌ ಚಾಲಕರು ಅವಳನ್ನು ಎಳೆದೊಯ್ದರು. ಬಾಯಿಗೆ ವಿಸ್ಕಿ ಸುರಿದು ಬೊಬ್ಬಿಡದಂತೆ ಮಾಡಿದರು. ಅತ್ಯಾಚಾರ ಮಾಡಿದರು. ಪ್ರಜ್ಞಾಹೀನಳನ್ನಾಗಿಸಿದರು. ಕೊನೆಗೆ ಪಾಪದ ಹೆಣ್ಣುಮಗಳನ್ನು ಕೊಂದೇ ಬಿಟ್ಟರು! ಅವಳ ಹೆಣವನ್ನು ಟ್ರಕ್‌ನಲ್ಲಿ ಸಾಗಿಸಿ 27 ಕಿ.ಮೀ. ದೂರದ ಫ್ಲೈಓವರ್‌ನ ಕೆಳಗೆ ಸುಟ್ಟು ಹಾಕಿದರು.

ಇಂದು “ಸಾಮೂಹಿಕ’ ಎಂಬ ಪದವೇ ಅಸಹ್ಯ ಹುಟ್ಟಿಸುವಂಥ ಸ್ಥಿತಿಗೆ ಬಂದಿದೆ. “ಸಾಮೂಹಿಕ ಅತ್ಯಾಚಾರ’ ಎಂಬ ಜೋಡಿಪದವನ್ನು ಪತ್ರಿಕೆಗಳಲ್ಲಿ ಓದಿದ ಬಳಿಕ, “ಸಾಮೂಹಿಕ ಪೂಜೆ’ ಎಂದು ಹೇಳುವುದನ್ನು ಕೇಳಿದಾಗಲೂ ಏನೋ ಅನ್ನಿಸುತ್ತದೆ.

ಬೆಳ್ಳಂಬೆಳಗ್ಗೆ ಇಡೀ ತೆಲಂಗಾಣದಲ್ಲಿ ಈ ಪ್ರಕರಣ ಧ್ವನಿಸಿತು. ದೇಶದೆಲ್ಲೆಡೆ ಪ್ರತಿಧ್ವನಿಸಿತು. ಪೊಲೀಸರು ಅತ್ಯಾಚಾರಿಗಳನ್ನು ಬಂಧಿಸಿದರು. ಈ ಪ್ರಕರಣ ಲೋಕಸಭೆಯಲ್ಲಿಯೂ ಚರ್ಚೆಗೊಳಗಾಯಿತು. ಜಯಾ ಬಚ್ಚನ್‌ರಂಥವರು ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಹೊಡೆದು ಕೊಲ್ಲಬೇಕು ಎಂಬರ್ಥದ ಹೇಳಿಕೆ ಇತ್ತರು.

ಆರೋಪಿಗಳು ಮತ್ತೆ ಕೋರ್ಟು ಕಟ್ಟೆಯನ್ನು ಹತ್ತುತ್ತಾರೆ. ಸಾಕ್ಷಿಗಳನ್ನು ಕೊಟ್ಟು ಜಾರಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಅಂತೂ ಅವರಿಗೆ ಶಿಕ್ಷೆ ಆದರೂ ಆದೀತು, ಆಗದೆಯೂ ಹೋದೀತು. ಹೇಳುವುದು ಕಷ್ಟ. ಆದರೆ, ಈ ಪ್ರಕರಣಕ್ಕೆ ನಾವು ತೆರಬೇಕಾದ ಬೆಲೆಯಾದರೂ ಎಂಥದು? ವಿದೇಶದ ಮಂದಿ ನಮ್ಮನ್ನು ಹೇಗೆ ನೋಡುತ್ತಾರೆ? ಹೆಣ್ಣುಮಕ್ಕಳು ಹೆದರಿಕೊಂಡು ಬದುಕುವ ಸ್ಥಿತಿ ಬಂದರೆ ನಮ್ಮ ಸಂಸ್ಕೃತಿಯ ಕುರಿತು ಹೆಮ್ಮೆಯಿಂದ ಹೇಳಿಕೊಳ್ಳುವುದು ಹೇಗೆ? ಈ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಬಹುದು, ಆದರೆ, ಇಂಥ ದುಷ್ಟಕೃತ್ಯಗಳು ನಡೆಯದಂತೆ ತಡೆಗಟ್ಟುವುದು ಹೇಗೆ?

ಶಿಷ್ಟಾಚಾರವನ್ನು ಬೋಧಿಸುವ ಶಿಕ್ಷಣ
ಮುಖ್ಯವಾಗಿ ಸೌಜನ್ಯದ ಕುರಿತ ಶಿಕ್ಷಣ ಈ ಕಾಲದ ಅಗತ್ಯವೆಂದು ತೋರುತ್ತದೆ. ನಾವು ವಿಶ್ವವಿದ್ಯಾನಿಲಯಗಳ ಡಿಗ್ರಿಯನ್ನು ಪಡೆಯುತ್ತೇವೆ. ಒಬ್ಬ ಹೆಣ್ಣುಮಗಳನ್ನು ಹೇಗೆ ನಡೆಸಿಕೊಳ್ಳಬೇಕೆಂಬುದು ನಮಗೆ ತಿಳಿದಿರುವುದಿಲ್ಲ. ಹೆಣ್ಣುಮಗಳು ಕಂಡಕೂಡಲೇ ಗಂಡಸರು ಅವಳ ದೇಹದ ಭಾಗಗಳನ್ನು ದಿಟ್ಟಿಸಿ ನೋಡುವುದು ತಮ್ಮ ಹಕ್ಕು ಎಂಬಂತೆ ಭಾವಿಸುತ್ತಾರೆ. ಹಾಗೆ ನೋಡುವುದರಿಂದ ಆ ಹೆಣ್ಣುಮಗಳು ಎಂಥ ಮುಜುಗರವನ್ನು ಅನುಭವಿಸುತ್ತಾಳೆ ಎಂಬ ಅರಿವು ಇಂದು ಕಡಿಮೆಯಾಗುತ್ತಿದೆ.

ಸಮಾಜದಲ್ಲಿ ಮೇಲುಜಾತಿ-ಕೀಳುಜಾತಿ ಎಂಬ ಶ್ರೇಣೀಕರಣದ ಸ್ಥಿತಿ ಇತ್ತು. ಮೇಲುಜಾತಿಗಳ ಮಂದಿ ಅಸ್ಪೃಶ್ಯರನ್ನು ಕೀಳಾಗಿ ಕಾಣುತ್ತಿದ್ದರು. ಅದು ಈಗ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಅದೇ ರೀತಿ ಗಂಡಸರು, ಹೆಂಗಸರನ್ನು ಕೇವಲ “ಬಳಸಿಕೊಳ್ಳಬಹುದಾದ ಉಪಕರಣಗಳು’ ಎಂದು ಭಾವಿಸುವ ಸ್ಥಿತಿ ದೂರವಾಗಬೇಕು. ಆಧುನಿಕ ಶಿಕ್ಷಣ ಎಲ್ಲರಿಗೂ ಲಭ್ಯವಾಗಿರುವ ಈ ಕಾಲದಲ್ಲಿ ಸಾಮಾಜಿಕ ಸೌಜನ್ಯ ಎಂದರೇನು ಎಂಬುದು ಯುವಸಮುದಾಯಕ್ಕೆ ತಿಳಿದಿಲ್ಲ. ಹೈದರಾಬಾದ್‌ನಲ್ಲಿ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ ಗಂಡುಹುಡುಗರು ಕಲಿತ ಶಾಲೆ ಯಾವುದು? ಅವರು ಯಾಕೆ ಹಾಗೆ ಬೆಳೆದರು? ಅವರನ್ನು ಹಾಗೆ ಬೆಳೆಸಿದ ಪರಿಸರ ಯಾವುದು?

ಗಂಡು-ಹೆಣ್ಣು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಶಾಲೆಗಳಲ್ಲಿ “ನೀತಿ ಶಿಕ್ಷಣ’ ನೀಡುವುದು ಇಂದಿನ ಅಗತ್ಯ ಎಂದು ತೋರುತ್ತದೆ. ಹುಡುಗರು ಹುಡುಗಿರೊಡನೆ ಸಭ್ಯತೆಯಿಂದ ಹೇಗೆ ವ್ಯವಹರಿಸಬೇಕು ಎಂದು ಹೇಳಿಕೊಡಬೇಕಾದ ಕಾಲವಿದು. ಮೊಬೈಲ್‌ಗ‌ಳು ಸಮಾಜದಲ್ಲಿ ವಿಷ ಹರಡುತ್ತಿರುವಂತೆಯೇ ಮತ್ತೂಂದೆಡೆಯಿಂದ ಅಮೃತದ ಪ್ರಭಾವವನ್ನು ಪಸರಿಸುವುದು ಕೂಡ ಅಗತ್ಯವಲ್ಲವೆ? ಅದರಿಂದ ಮಾತ್ರ ಹೈದರಾಬಾದ್‌ನಂಥ ಪ್ರಕರಣಗಳು ಮತ್ತೆ ಸಂಭವಿಸದಂತೆ ತಡೆಯಬಹುದು !

ಸುಮಿತ್ರಾ ಪಾಂಡೆ

ಟಾಪ್ ನ್ಯೂಸ್

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.