ಬಸ್ಸಿನಲ್ಲಿಯೂ ಬದುಕಿನಲ್ಲಿಯೂ “ರೈಟ್‌ ರೈಟ್‌’


Team Udayavani, Feb 21, 2020, 5:12 AM IST

chitra-7

ಉಡುಪಿ -ಕುಂದಾಪುರ ನಡುವೆ ಓಡಾಡುವ ಎಕ್ಸ್‌ಪ್ರೆಸ್‌ ಬಸ್‌ “ಭಾರತಿ’ಯಲ್ಲಿ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರೇಖಾ, ಮೂಲತಃ ಬಾಗಲಕೋಟೆಯವರು. ಆದರೆ, ಸುಮಾರು ಹದಿನೈದು ವರ್ಷಕ್ಕೂ ಹೆಚ್ಚುಕಾಲ ಉಡುಪಿಯಲ್ಲಿಯೇ ಕೆಲಸ ನಿರ್ವಹಿಸುತ್ತಿರುವ ಅವರು ಈಗ ಕರಾವಳಿಯವರಾಗಿದ್ದಾರೆ. ತುಳುವಿನಲ್ಲಿ ಟಿಕೆಟ್‌ ಕೇಳಿದರೆ ತಬ್ಬಿಬ್ಟಾಗುವುದಿಲ್ಲ. ಬಸ್ಸನ್ನು ನಿರ್ವಹಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಬದುಕಿನ ಪ್ರಯಾಣಕ್ಕೆ ಆಸರೆಯಾದ ಬಸ್ಸಿನ ಬಗ್ಗೆ ಅವರಿಗೆ ಪ್ರೀತಿಯಿದೆ. ಗಂಡಸರೇ ನಿಭಾಯಿಸುವ ವೃತ್ತಿ ಎಂಬ ನಂಬಿಕೆಯನ್ನು ಸುಳ್ಳು ಮಾಡಿರುವ ರೇಖಾ ಬಾಗಲಕೋಟೆ, ತಮ್ಮ ಜೀವನ ಪ್ರಯಾಣದ ಬಗ್ಗೆ ಇಲ್ಲಿ ಮಾತನಾಡಿದರು.

ಬಸ್ಸು, ಲಾರಿ ಎಂದರೆ ಎಲ್ಲ ಮಕ್ಕಳಿಗೂ ಅಚ್ಚುಮೆಚ್ಚು. “ದೊಡ್ಡವರಾದ ಮೇಲೆ ಏನಾಗುತ್ತೀರಿ?’ ಎಂದು ಶಾಲೆಯ ತರಗತಿಯೊಂದರಲ್ಲಿ ಕೇಳಿದರೆ, ಹೆಚ್ಚಿನ ಮಕ್ಕಳು ಬಸ್‌ ಡ್ರೈವರ್‌ ಆಗುವ ತಮ್ಮ ಕನಸನ್ನು ಹೇಳಿಕೊಳ್ಳುತ್ತಾರೆ. ಬಹಳ ಚಿಕ್ಕಂದಿನಲ್ಲಿ ಕನಸು ಕಾಣುವಾಗ ಹೆಣ್ಣು -ಗಂಡು ಎಂಬ ಭೇದ ಇರುವುದಿಲ್ಲ, ನೋಡಿ. ಆರು ಚಕ್ರದ ಭಾರೀ ಬಸ್ಸನ್ನು ನಿರ್ವಹಿಸುವ ಡ್ರೈವರ್‌ ಆಗಲಿ, ಕಂಡಕ್ಟರ್‌ ಆಗಲಿ ಆಗಬೇಕು ಎಂದು ನಾನೂ ಕನಸು ಕಂಡಿದ್ದೆ.

ನಮ್ಮೂರು ಬಾಗಲಕೋಟೆ. ಆಗೆಲ್ಲ ಹೆಣ್ಣುಮಕ್ಕಳಿಗೆ ಬೇಗನೆ ಮದುವೆ ಮಾಡುವ ಪದ್ಧತಿಯೇ ರೂಢಿಯಲ್ಲಿತ್ತು. ಹಾಗಾಗಿ, 9ನೆಯ ತರಗತಿಯಲ್ಲಿದ್ದಾಗಲೇ ನನಗೆ ಮದುವೆ ಮಾಡಿದರು. ಬಾಳಸಂಗಾತಿಯಾಗಿ ಬಂದ ಹೊಳೆಬಸವಣ್ಣ ಸಿಆರ್‌ಪಿಎಫ್ನಲ್ಲಿ ಯೋಧ. ಅವರಿಗೆ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ಆಶಯವೂ ಇತ್ತು. ಹಾಗಾಗಿ, ನಾನು ಶಿಕ್ಷಣ ಮುಂದುವರೆಸಿದೆ. ದ್ವಿತೀಯ ಪಿಯುಸಿವರೆಗೆ ಶಿಕ್ಷಣ ಪಡೆಯುವುದು ಸಾಧ್ಯವಾಯಿತು. ಶಿಕ್ಷಣ ಮಾತ್ರವಲ್ಲ, ಆರ್ಥಿಕ ಸ್ವಾವಲಂಬನೆಯ ಬಗ್ಗೆಯೂ ನನಗೆ ಕನಸಿತ್ತು. ಹಾಗಾಗಿ, ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಕಂಡಕ್ಟರ್‌ ಆಗಿ ಸರ್ಕಾರಿ ಕೆಲಸ ಸಿಗಬಹುದೇನೋ ಎಂದು ನಾನು ಪರೀಕ್ಷೆಗಳನ್ನು ಬರೆದು ಪ್ರಯತ್ನಿಸಿದೆ. ಆದರೆ, ನಾನು ಸ್ವಲ್ಪ ಗಿಡ್ಡ ಇದ್ದುದರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ. ಪೊಲೀಸ್‌ ಕೆಲಸವಾದರೂ ಸಿಗಬಹುದೇನೋ ಎಂದು ಪ್ರಯತ್ನಿಸಿದೆ. ಅಲ್ಲಿಯೂ ಇದೇ ಸಮಸ್ಯೆ ಎದುರಾಯಿತು.

ಅಷ್ಟರಲ್ಲಿ ಉಡುಪಿ ಜಿಲ್ಲೆಯಲ್ಲಿ ಕೃಷ್ಣ ಪ್ರಸಾದ್‌ ಬಸ್‌ನ ಮಾಲೀಕರಾದ ರಾಜೇಶ್‌ ಶೆಟ್ಟಿ ಅವರು “ಬಸ್‌ ನಿರ್ವಾಹಕರು ಬೇಕಾಗಿದ್ದಾರೆ’ ಎಂದು ಪ್ರಕಟಣೆಯೊಂದನ್ನು ಕೊಟ್ಟಿದ್ದರು. ಅದನ್ನು ನೋಡಿ ಖಾಸಗಿ ಕ್ಷೇತ್ರದಲ್ಲಾದರೂ ಕೆಲಸ ಮಾಡುವ ಉತ್ಸಾಹದಿಂದ ನಾನು ಅರ್ಜಿ ಸಲ್ಲಿಸಿದೆ. ಉಡುಪಿ ಜಿಲ್ಲೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದ ನಂತರ ತರಬೇತಿಯನ್ನೂ ಕೊಟ್ಟರು. ಬಾಗಲಕೋಟೆಯಿಂದ ನನ್ನೊಂದಿಗೆ ಆರು ಮಂದಿ ಮಹಿಳೆಯರು ತರಬೇತಿಗಾಗಿ ಬಂದಿದ್ದರು. ಸ್ವಲ್ಪ ಸಮಯ ಕೃಷ್ಣ ಪ್ರಸಾದ್‌ ಬಸ್ಸಿನಲ್ಲಿ ಕೆಲಸ ಮಾಡಿದ ನಾನು, ಆ ಬಳಿಕ ಭಾರತಿ ಬಸ್‌ನಲ್ಲಿ ಕೆಲಸಕ್ಕೆ ಸೇರಿದೆ. ಈಗ ಉಡುಪಿ-ಕುಂದಾಪುರ ನಡುವೆ ಸಂಚರಿಸುವ ಈ ಬಸ್ಸೇ ನನ್ನ ಎರಡನೆಯ ಮನೆ ಎಂಬಂತಾಗಿದೆ.

ಬಸ್ಸು ನಿರ್ವಹಣೆ ಎನ್ನುವುದು ತುಂಬ ಆಕರ್ಷಕವಾದ ಕೆಲಸವೇನೂ ಅಲ್ಲ. ಈ ಕೆಲಸವನ್ನು ನಾನು ಮಾಡಬಲ್ಲೆ ಎಂಬ ದೃಢ ಮನಸ್ಸು ಇರಬೇಕಷ್ಟೆ. ಮುಂಜಾನೆಯಿಂದ ರಾತ್ರಿಯವರೆಗೆ ಕೆಲಸ ನಿರ್ವಹಿಸುವುದು ಅನಿವಾರ್ಯ. ಎಲ್ಲೆಂದರಲ್ಲಿ ಊಟ-ತಿಂಡಿ ಮಾಡುವುದು, ಎಲ್ಲ ರೀತಿಯ ಜನರೊಡನೆ ವ್ಯವಹರಿಸುವುದು ಅಗತ್ಯ. ಒಳ್ಳೆಯವರು, ಕೆಟ್ಟವರು ಎಲ್ಲರೂ ಬಸ್ಸಿನಲ್ಲಿ ಪ್ರಯಾಣಿಸುವವರೇ. ಕೆಲವೊಮ್ಮೆ ಬಸ್ಸಿನಲ್ಲಿ ಪ್ರಯಾಣಿಕರ ನಡುವೆಯೇ ಜಗಳಗಳಾಗುತ್ತವೆ. ಅವುಗಳೂ ತಾರಕಕ್ಕೇರದಂತೆ ನಾವು ನಿಯಂತ್ರಿಸಬೇಕಾಗುತ್ತದೆ. ಇನ್ನು ಕೆಲವರು, ನಾನು ಮಹಿಳೆ ಎಂಬ ಕಾರಣಕ್ಕಾಗಿಯೇ ಕೀಳಾಗಿ ಮಾತನಾಡುವ, ಕಾಲುಕೆರೆದು ಜಗಳಕ್ಕಿಳಿಯುವ ಸ್ವಭಾವದವರು. ಹೆಚ್ಚಿನ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕಿಂತ ದೊಡ್ಡ ಪರಿಹಾರವಿಲ್ಲ.

ಬಸ್ಸಿನಲ್ಲಿ ಭಾರೀ ದೊಡ್ಡ ಜಗಳ ಆಗುವುದು ಯಾವುದಕ್ಕೆ ಅಂದುಕೊಂಡಿದ್ದೀರಿ? ಅದು ಬರೀ ಚಿಲ್ಲರೆ ವಿಷಯಕ್ಕೆ ಆಗುವ ಜಗಳ. ಬಸ್‌ ನಿರ್ವಾಹಕರು ತಕ್ಕ ಚಿಲ್ಲರೆ ವಾಪಸ್‌ ಕೊಡುವುದು ಎಲ್ಲ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಪ್ರಯಾಣಿಕರ ಬಳಿಯೂ ಸರಿಯಾದ ಮೊತ್ತ ಇರುವುದಿಲ್ಲ. ಆ ಸಂದರ್ಭವನ್ನು ಅರ್ಥಮಾಡಿಕೊಳ್ಳಬೇಕೇ ಹೊರತು, ಮತ್ತೇನೊ ಕಾರಣವೊಡ್ಡಿ ಜಗಳ ಬೆಳೆಸುತ್ತ ಹೋಗುವುದು ಸರಿಯಲ್ಲ. ಆದರೂ ಜಗಳಗಳು ಆಗಿಯೇ ಆಗುತ್ತದೆ. ಆದರೆ, ಹಿಂದಿನ ಕಾಲದಂತೆ ಈಗ, “ಸೀಟು ಕೊಡಿ’ ಎಂಬ ಕಾರಣಕ್ಕೆ ಹೆಚ್ಚು ಜಗಳ ಆಗುವುದಿಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸಗಳ ದೃಷ್ಟಿಯಿಂದ ಬ್ಯುಸಿ ಇರುವಾಗ ಇಂತಹ ಜಗಳಗಳು ಸೃಷ್ಟಿಯಾಗುವುದು ಬಹಳ ಕಡಿಮೆ.

ಸಂಜೆಯಾಯಿತೆಂದರೆ ಕುಡಿದ ಅಮಲಿನಲ್ಲಿ ಇರುವವರೂ ಬಸ್ಸು ಹತ್ತುತ್ತಾರೆ. ಅವರದ್ದೇ ಗುಂಗಿನಲ್ಲಿ ಇರುವವರು ಕೆಲವರಾದರೆ, ತೋಚಿದ್ದೆಲ್ಲ ಮಾತನಾಡುತ್ತ ಬೊಬ್ಬೆ ಹೊಡೆಯುವವರು ಹಲವರು. ಸುಮಾರು 20 ವರ್ಷಗಳ ನನ್ನ ಅನುಭವದಲ್ಲಿ ಇಂತಹ ಹಲವಾರು ಪ್ರಸಂಗಗಳನ್ನು ನಿಭಾಯಿಸಿದ್ದೇನೆ. ಆರಂಭದಲ್ಲಿ ಎಲ್ಲ ಸಂದರ್ಭಗಳನ್ನೂ ಎದುರಿಸುವ ಧೈರ್ಯವಿರಲಿಲ್ಲ. ಆದರೆ, ಬರಬರುತ್ತ ಮನಸ್ಸನ್ನು ಗಟ್ಟಿಮಾಡಿಕೊಂಡು ಧೈರ್ಯವಾಗಿ ಮಾತನಾಡಲು ಶುರು ಮಾಡಿದೆ. ಹಲವಾರು ಸಂದರ್ಭಗಳಲ್ಲಿ ಬಸ್ಸಿನ ಚಾಲಕರೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಈ ಭಾರತಿ ಬಸ್ಸಿನಲ್ಲಿ ಡ್ನೂಟಿಗೆ ಬರುವ ಡ್ರೈವರ್‌ಗಳು ಸಹೃದಯಿಗಳು. ಆದರೆ, ಬಸ್‌ ನಿಲ್ದಾಣಗಳಲ್ಲಿ ಎಲ್ಲರೂ ಮಹಿಳೆಯರ ಪರವಾಗಿಯೇ ನಿಲ್ಲುತ್ತಾರೆ ಎಂದೇನಿಲ್ಲವಲ್ಲ. ಬಾಗಲಕೋಟೆಯಿಂದ ನನ್ನೊಡನೆ ಉಡುಪಿಗೆ ಬಂದಿದ್ದ ಉಳಿದ ಹುಡುಗಿಯರು ಸ್ವಲ್ಪ ಕಾಲ ಕೆಲಸ ಮಾಡಿದರು. ಚುಡಾಯಿಸುವಿಕೆ, ಕೆಟ್ಟ ಮಾತುಗಳನ್ನು ಹೇಳುವುದು, ಅಪಹಾಸ್ಯ ಮಾಡುವುದು, ಹೆಣ್ಣು ಎಂಬ ಕಾರಣಕ್ಕೇ ನಿಂದಿಸುವ ಅನೇಕ ಪ್ರಕರಣಗಳು ನಡೆಯುತ್ತಿದ್ದವು. ಅವರೆಲ್ಲರೂ ಈ ಉಸಾಬರಿಯೇ ಬೇಡ ಎಂದು ತಮ್ಮೂರಿಗೆ ವಾಪಸು ಹೋದರು.

ಕಂಡಕ್ಟರ್‌ ಎಂದರೆ ಬರೀ ಟಿಕೇಟ್‌ ಕೊಟ್ಟು ಹಣ ಸಂಗ್ರಹಿಸುವುದಷ್ಟೇ ಅಲ್ಲವಲ್ಲ. ಮನುಷ್ಯರೆಂದ ಮೇಲೆ ತಪ್ಪುಗಳಾಗುತ್ತವೆ. ಯಾವುದೋ ಕಾರಣಕ್ಕೆ ಬಸ್ಸು ಅಪಘಾತ ಆದಾಗ, ಪರಿಸ್ಥಿತಿ ನಿಭಾಯಿಸುವುದು ಸವಾಲೇ ಸರಿ. ಘಟನೆ ನಡೆದಾಗ, ಜನರೆಲ್ಲರೂ ಆತಂಕಗೊಳ್ಳುತ್ತಾರೆ. ಸಿಟ್ಟಿನಿಂದ ಡ್ರೈವರ್‌ ಮೇಲೇರಿ ಹೋಗುತ್ತಾರೆ. ಯಾರದ್ದು ತಪ್ಪು, ಸರಿ ಎಂದು ವಿವೇಚನೆಯಿಂದ ವರ್ತಿಸುವಷ್ಟು ತಾಳ್ಮೆ ಆ ಪರಿಸ್ಥಿತಿಯಲ್ಲಿ ಯಾರಿಗೂ ಇರುವುದಿಲ್ಲ. ಆಗೆಲ್ಲ ಕಂಡಕ್ಟರ್‌ ಮತ್ತು ಡ್ರೈವರ್‌ ನಿಜವಾಗಿಯೂ ಬಹಳ ತಾಳ್ಮೆಯಿಂದ ಇರಬೇಕಾಗುತ್ತದೆ. ನಾವು ಕೆಲಸ ಮಾಡುವ ಬಸ್ಸು ಮಾತ್ರವಲ್ಲ, ರಸ್ತೆ ಮೇಲೆ ನಡೆದ ಘಟನೆಗೂ ನಾವು ಸ್ಪಂದಿಸುವುದು ಧರ್ಮ ಅಲ್ಲವೆ?

ಕೆಲವು ಸಂದರ್ಭಗಳಲ್ಲಿ ನಾನು ಗಾಯಗೊಂಡವರಿಗೆ ನೆರವಾಗಿ, ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದೇನೆ. ನಮ್ಮ ಬಸ್ಸಿನ ಚಾಲಕರೂ ಎಷ್ಟೋ ಪರಿಸ್ಥಿತಿಗಳನ್ನು ನಿಭಾಯಿಸಲು ನನಗೆ ನೆರವಾಗಿದ್ದಾರೆ.

ಈ ಕೆಲಸ ಕಷ್ಟವಾದರೆ ಬಿಟ್ಟು ಬಾ- ಅಂತ ಈಗಲೂ ಅಮ್ಮ ಶಿವಲೀಲಾ ಮತ್ತು ಅಪ್ಪ ಗುರುಬಸವ ಹೇಳುತ್ತಾರೆ. ಮಗ ವಿನಾಯಕ ಈಗಾಗಲೇ ಬಸವೇಶ್ವರ ಕಾಲೇಜಿನಲ್ಲಿ 9ನೆಯ ತರಗತಿ ಓದುತ್ತಿದ್ದಾನೆ. ನನ್ನ ಅಪ್ಪ-ಅಮ್ಮ ಅಪ್ಪಟ ಕೃಷಿಕರು. ನಾನಂತೂ ಈ ವೃತ್ತಿಯ ಕಾರಣಕ್ಕಾಗಿ ಉಡುಪಿಯಲ್ಲಿಯೇ ಇದ್ದೇನೆ. ಬೆಳಗ್ಗೆ 6.40ಕ್ಕೆ ಬಸ್ಸನ್ನೇರಿದರೆ ಮತ್ತೆ ರಾತ್ರಿ 8 ಗಂಟೆಗೆ ಮನೆಬಾಗಿಲಿನಲ್ಲಿಯೇ ಬಸ್ಸಿನಿಂದ ಇಳಿಯುತ್ತೇನೆ. ರಜೆಗಳನ್ನು ಪಡೆದುಕೊಂಡು ಊರಿಗೆ ಹೋಗುವುದು, ಊರಿನಿಂದಲೂ ಮಗ, ಅಪ್ಪ, ಅಮ್ಮ, ಗಂಡ ಉಡುಪಿಗೆ ಬರುವುದು ಇದ್ದೇ ಇದೆ. ದೈನಂದಿನ ಪಯಣದ ಜೊತೆಗೆ ಬದುಕಿನ ಪಯಣವೂ ನಡೆದಿದೆ.

ರೇಖಾ ಬಾಗಲಕೋಟೆ

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.