ಬುದ್ಧಿವಂತರ ಪೆಟ್ಟಿಗೆ ಎನ್ನಿ!


Team Udayavani, Dec 13, 2019, 5:11 AM IST

sa-12

ಟಿವಿ ಎಂಬ ಮಾಯಾಂಗನೆಯು ಮನುಷ್ಯನನ್ನು ಆವರಿಸಿಕೊಳ್ಳದ ಕಾಲದಲ್ಲಿ ನನ್ನ ವಿದ್ಯಾಭ್ಯಾಸ ಮುಗಿದಿತ್ತು ಎಂಬುದು ನನ್ನ ಪೂರ್ವಜನ್ಮ ಪುಣ್ಯದ ಫ‌ಲ. ಆಗಿನ ಹಳ್ಳಿಗಳ ಕೃಷಿಕರ ಮನೆಯ ನಿಶ್ಶಬ್ದ ಬೆಳಗುಗಳಲ್ಲಿ ತೋಟ, ಬೆಟ್ಟಗಳಿಂದ ಕೇಳಿ ಬರುವ ಪಕ್ಷಿಸಂಕುಲದ ಚಿಲಿಪಿಲಿ ನಾದ ಬಿಟ್ಟರೆ, ಕೊಟ್ಟಿಗೆಯ ಎಮ್ಮೆದನಗಳು “ಬನ್ನಿ ಹಾಲು ಹಿಂಡಿಕೊಂಡು ಹೋಗಿ’ ಎಂದು ಆಹ್ವಾನ ನೀಡುವ ಅಂಬಾ ಎಂಬ ಕರೆ, ಕರುವಿನ ಕೂಗು. ಜತೆಯಲ್ಲಿಯೇ ನನ್ನ ಪಾಲಿನ ಹಾಲನ್ನು ನನಗೆ ಕೊಟ್ಟು ಒಳಗೆ ಹೋಗಿ ಎಂದು ಹಠ ಹಿಡಿದು ಕಾಲು ಸುತ್ತುವ ಬೆಕ್ಕಿನ ಮಿಯಾಂವ್‌ ಸದ್ದು, ಬೆಕ್ಕಿನ ಸ್ವಾತಂತ್ರ್ಯವನ್ನು ಕಂಡು ಹೊಟ್ಟೆಕಿಚ್ಚಿಂದ ಎಂಬಂತೆ ಬೌಬೌ ಎನ್ನುವ ನಾಯಿಯ ಆರ್ಭಟದ ಕೂಗುಗಳು ಮನೆಯನ್ನು ಆವರಿಸಿಕೊಂಡಿರುತ್ತಿದ್ದವು. ಬಾವಿಯಿಂದ ನೀರನ್ನು ಎತ್ತುವ ಗಡಗಡೆಯ ಸದ್ದು, ಬಾಗಿಲು ಸಾರಿಸಿ ರಂಗವಲ್ಲಿ ಇಡುವವರ ಉದಯರಾಗದ ಗುನುಗು, ದೇವರಿಗೆ ಹೂ ಕೊಯ್ಯುವ ಸಂಭ್ರಮ… ಸ್ವಲ್ಪ ಸಮಯದ ಬಳಿಕ, “ಚಾ ಮಾಡಿಯಾಗಿದೆ. ತೆಳ್ಳೇವು ಎರೆಯುತ್ತಿದ್ದೇನೆ. ತಿಂಡಿಗೆ ಬನ್ನಿ’ ಎಂದು ಅಡುಗೆ ಮನೆಯಿಂದಲೇ ಆಹ್ವಾನಿಸುವ ಅಮ್ಮನ ಕರೆ. ಆಗ ಎಲ್ಲರೂ ಏಕಕಾಲಕ್ಕೆ ಅಡುಗೆ ಮನೆಗೆ ಧಾವಿಸುತ್ತಿದ್ದೆವಾದ್ದರಿಂದ, ಅಲ್ಲಿ ಗದ್ದಲ ಏರ್ಪಡುತ್ತಿತ್ತು. ಇದು ಟಿ.ವಿ. ನಮ್ಮ ಮನೆಯನ್ನು ಆಕ್ರಮಿಸುವ ತನಕವೂ ಮುಂದುವರಿದುಕೊಂಡು ಬಂದ ನಿರಾತಂಕ, ನಿಶ್ಶಬ್ದ ಬೆಳಗು.

ಮನೆಯೊಳಗಿನ ಜನಜಾತ್ರೆ
ದೇಶವನ್ನು ಪ್ರವೇಶಿಸಿದ ಟಿವಿ ಎಂಬ ಮೂರ್ಖರ ಪೆಟ್ಟಿಗೆ, ನಮ್ಮ ಹಳ್ಳಿಯನ್ನು ಆಕ್ರಮಿಸಿಕೊಳ್ಳಲು ಹೆಚ್ಚು ದಿನ ಹಿಡಿಯಲಿಲ್ಲ. ಮೊದಲಿಗೆ ಊರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಟಿ.ವಿ. ಇದ್ದುದರಿಂದ ರಾಮಾಯಣ, ಮಹಾಭಾರತ ಸೀರಿಯಲ್‌ಗ‌ಳು ಪ್ರಸಾರಾವಾಗುವಾಗ ಬೆಳಗ್ಗೆ ಏಳು ಗಂಟೆಗೆಲ್ಲ ಆಚೀಚೆ ಮನೆಯವರು ಬಂದು ಹಣಕುವುದು ಪ್ರಾರಂಭವಾಯಿತು. ಮಹಾಭಾರತ ಪ್ರಾರಂಭವಾಗುವ ಹೊತ್ತಿಗೆ ಇಡೀ ಮನೆ, ಜನರಿಂದ ಗಿಜಿಗಿಜಿಗೊಳ್ಳಲು ತೊಡಗಿ, ಬೆಳಗಿನ ಸದ್ದು ಅಡಗಿಯೇ ಹೋಯಿತು. ಜನ ಬರುವುದರೊಳಗೆ ತಿಂಡಿ ಮುಗಿಯಬೇಕು ಎಂಬ ಕಾರಣಕ್ಕೆ ಮಂಗಳೂರಿನ ಸಿಟಿಬಸ್ಸಿನ ವೇಗ ನಮ್ಮ ಬೆಳಗುಗಳಿಗೆ ಪ್ರಾಪ್ತವಾಗಿ, ಮುದ್ದು ಮಾಡಿಸಿಕೊಳ್ಳುತ್ತಿದ್ದ ಬೆಕ್ಕು, ನಾಯಿ, ಆಕಳುಗಳೆಲ್ಲ ಪಾಪ ದೀನ ವದನದಿಂದ ನಮ್ಮನ್ನು ನೋಡಿ ನಿಡುಸುಯ್ಯುವುದು ಕಾಣುತ್ತಿತ್ತಾದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಮ್ಮದು.

ಪೆಟ್ಟಿಗೆಯೊಳಗಿಂದ ಪ್ರತ್ಯಕ್ಷ
ಯಕ್ಷಗಾನದಲ್ಲಿ ಮಾತ್ರ ನೋಡಲು ಸಿಗುತ್ತಿದ್ದ ಭೀಷ್ಮ , ಅಶ್ವತ್ಥಾಮ, ಕೃಷ್ಣನಂಥ ಪಾತ್ರಗಳು ಈಗ ಪೆಟ್ಟಿಗೆಯೊಳಗೆ ಪ್ರತ್ಯಕ್ಷರಾದರು. ಮನೆಯ ಜಗುಲಿಯಲ್ಲೇ ಕೂತು ಚಹಾ ಕುಡಿಯುತ್ತ ನೋಡಬಹುದಾದ ಆ ವ್ಯವಸ್ಥೆಯನ್ನು ಹಳ್ಳಿಗರು ತುಂಬಾ ಸಂಭ್ರಮದಿಂದ ಸ್ವಾಗತಿಸಿದರು. ಮೊದ ಮೊದಲು ಅದರ ಗಂಭೀರತೆ ಅರ್ಥವಾಗಿರಲಿಲ್ಲ. ಸಂಜೆಯ ಸಮಯವನ್ನು ತಮ್ಮ ತಮ್ಮ ಮನೆಗಳಲ್ಲಿ ಮಹಾಭಾರತ-ರಾಮಾಯಣ ಓದುತ್ತ ಕಳೆಯುತ್ತಿದ್ದ ಗ್ರಾಮಸ್ಥರು, ಈಗ ಮನೆಯ ಜಗುಲಿಯಲ್ಲಿ ವಾರ್ತೆ, ಹವಾಮಾನ ವರದಿ, ದೆಹಲಿ ಕೇಂದ್ರದಿಂದ ಬರುತ್ತಿದ್ದ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನು ನೋಡುತ್ತ¤, “ಎಂಥ ಸುಡುಗಾಡು ಹೇಳಿದ?’ ಎಂದು ತಮ್ಮ ತಮ್ಮಲ್ಲಿ ವಿಮರ್ಶಿಸುತ್ತ ಕಾಲಹರಣಕ್ಕೆ ತೊಡಗಿಬಿಟ್ಟರು.

ಟಿ.ವಿ. ಹಾಕಲು ಸಮಯ ನಿಗದಿಪಡಿಸಿ ಎಂದು ನಾವು ಹೇಳಿದರೂ, ಇಂಥ ಸಮಯಕ್ಕೆ ಬರಬೇಡಿ. ಇಂಥ ಸಮಯಕ್ಕೇ ಬನ್ನಿ ಎಂದು ಹೇಳಿದರೆ ಊರವರು ಏನೆಂದುಕೊಳ್ಳುತ್ತಾರೋ ಎಂಬ ದಾಕ್ಷಿಣ್ಯಕ್ಕೆ ಬಿದ್ದ ತಂದೆ, ಜನ ಬಂದಾಗಲೆಲ್ಲಾ ಟಿವಿ ಹಚ್ಚತೊಡಗಿದರು. ಇದರಿಂದ ಉಪದ್ರವಕ್ಕೊಳಗಾಗಿದ್ದು ಮನೆಯ ಮಹಿಳಾ ವರ್ಗ. ಮನೆಯವರಿಗೆ ಮಾತ್ರ ಮಾಡಿಟ್ಟ ತಿಂಡಿ-ಚಹಾವನ್ನು ಪಕ್ಕದ ಮನೆಯವರಿಗೂ ಕೊಡಬೇಕಾಗಿ ಬರುತ್ತಿದ್ದರಿಂದ ಎಷ್ಟು ಹೇಗೆ ಅಡುಗೆ ಮಾಡಬೇಕೆಂದೇ ಗೊತ್ತಾಗದೆ, ಮುಜುಗರದ ಪ್ರಸಂಗಗಳು ಎದುರಾಗತೊಡಗಿದ್ದವು. ಕ್ರಮೇಣ ಎಲ್ಲರ ಮನೆಗಳಲ್ಲೂ ಟಿ.ವಿ ಅವತರಿಸಿದ್ದರಿಂದ ನಮ್ಮ ಮನೆಯಲ್ಲಿ ಅತಿಥಿ ಪ್ರೇಕ್ಷಕರು ಕಡಿಮೆಯಾದರೂ, ಹಳ್ಳಿಯ ಬದಲಾದ ದಿನಚರಿ ಮಾತ್ರ ಶೋಚನೀಯವಾಗತೊಡಗಿತು.

ನಗುವಾಗ ನಕ್ಕು, ಅಳುವಾಗ ಅತ್ತು…
ಸಂಜೆ ಬೀದಿಯಿಡೀ ಸುಂಯ್‌ ಸುಂಯ್‌ ಎಂದು ಸೈಕಲ್‌ ಹೊಡೆಯುತ್ತಿದ್ದ ಸ್ಕೂಲ್‌ ಮಕ್ಕಳು, ಮನೆಯೊಳಗೆ ಟಿ.ವಿ ಮುಂದೆ ಪ್ರತಿಷ್ಠಾಪನೆಗೊಂಡವು. ಧಾರಾವಾಹಿಗಳ “ರೋದನ ಪರ್ವ’ ಪ್ರಾರಂಭವಾದ ಮೇಲೆ ಮಹಿಳೆಯರು ಬೇಗ ಕೊಟ್ಟಿಗೆಯ ಹಾಲು ಕರೆದಿಟ್ಟು , ಏನೋ ಒಂದು ಸಾರು ಕುದಿಸಿ, ಅಡುಗೆ ಮುಗಿಸಿ, ಎಂದೂ ಮುಗಿಯದ ಧಾರಾವಾಹಿಗಳ ಪಾತ್ರಗಳ ಗೋಳಿಗೆ ತಲೆ ಆಡಿಸತೊಡಗಿದರು. ಅವರು ಅತ್ತಾಗ ತಾವೂ ಅತ್ತು, ನಕ್ಕಾಗ ನಕ್ಕು, ಧಾರಾವಾಹಿಗಳ ಕತೆಗಳನ್ನು ಪರಸ್ಪರ ಭೇಟಿಯಾದಾಗ ಮಾತನಾಡಿಸುವ ಮಟ್ಟಿಗೆ ಅಳವಡಿಸಿಕೊಂಡರು.

“ಛೇ, ಚಂದ್ರಿಕಾಗೆ ಹಾಗೆ ಆಗಬಾರದಿತ್ತು ಅಲ್ದನೇ ಪಾರ್ವತಕ್ಕ? ಪಾಪ, ಭಗವಂತ ಎಂಥ ಕಷ್ಟ ಬರೆದಿದ್ದಾನೆ ಅವಳ ಹಣೆಯಲ್ಲಿ… ಕರುಳು ಚುರುಕ್‌ ಎನ್ನುತ್ತದೆ’ ಎನ್ನುವುದು, ಏನಾದರೂ ಕಾರ್ಯಕ್ಕೆ ಹೋಗಿ ಒಂದು ದಿನದ ಧಾರಾವಾಹಿ ವೀಕ್ಷಣೆ ತಪ್ಪಿಹೋಯಿತೆಂದರೆ, ಪಕ್ಕದ ಮನೆಯವರಲ್ಲಿ ಅವತ್ತಿನ ಕಥೆ ಕೇಳುವುದು… ಹೀಗೆ ಮಹಿಳೆಯರ, ಮಕ್ಕಳ, ದಿನಚರಿಯೇ ಬದಲಾಗಿ ಹೋಯಿತು. ಸಂಜೆ ದೇವರಿಗೆ ದೀಪವಿಟ್ಟ ಬಳಿಕ ಮಕ್ಕಳು ಪಾಠಗಳನ್ನು, ಮಗ್ಗಿಯನ್ನು ಬಾಯಿಪಾಠ ಮಾಡುವ ಕ್ರಮ ಮೂಲೆಗುಂಪಾಯಿತು. ಭಜನೆಗಳು ಇಲ್ಲವಾದವು.

ಜಗಳಗಳು ನಿಂತವು!
ಅಪರೂಪಕ್ಕೆ ಟಿ.ವಿಯಿಂದಾದ ಲಾಭಗಳನ್ನೂ ಹೇಳದೆ ಬಿಡುವಂತಿಲ್ಲ, ಹೊತ್ತಲ್ಲದ ಹೊತ್ತಿನಲ್ಲಿ ಅತಿಥಿಗಳು ಬರುವುದು, ಅವರಿಗೆ ಊಟ ನೀಡುವುದು ಮೊದಲಾದ ಪೂರ್ವಪದ್ಧತಿಗಳು ಮಾಯವಾಗತೊಡಗಿದವು. ಎಲ್ಲರೂ ತಮ್ಮ ತಮ್ಮ ಮನೆಯ ಟಿವಿ ಪೆಟ್ಟಿಗೆಗಳ ಮುಂದೆ ಪ್ರತಿಷ್ಠಾಪನೆಗೊಂಡು, ಆಚೀಚೆ ಓಡಾಡುವುದನ್ನೇ ಬಿಟ್ಟರೆಂದರೆ ತಪ್ಪಿಲ್ಲ. ಕೆಲವು ಮನೆಗಳಲ್ಲಿ ಹಾವು-ಮುಂಗುಸಿಗಳಂತೆ ಕಿತ್ತಾಡುತ್ತಿದ್ದ ಅತ್ತೆ-ಸೊಸೆಯರು ಧಾರಾವಾಹಿ ಪ್ರಾರಂಭ ಆಗುತ್ತಿದ್ದಂತೆ ಹತ್ತಿರ ಹತ್ತಿರ ಕೂತು, ಜಾಹೀರಾತಿನ ಬಿಡುವಿನಲ್ಲಿ ತಮ್ಮ ಮಾಮೂಲು ವೈರವನ್ನು ಧುಮುಗುಡುವ ಮುಖ ಚಹರೆಯನ್ನು ಬದಲಿಸಿಕೊಂಡು “ನಾಳೆ ಬೆಳಿಗ್ಗೆ ತಿಂಡಿಗೆ ಏನು ಮಾಡುವುದು? ರಾತ್ರಿ ಊಟಕ್ಕೆ ಏನು’ ಎಂಬ ಉಭಯ ಕುಶಲೋಪರಿಯನ್ನೂ ಪ್ರಾರಂಭಿಸುತ್ತಿದ್ದರು. ಇನ್ನೇನು ಧಾರಾವಾಹಿ ಪ್ರಾರಂಭವಾಗಿ ಬಿಡುತ್ತದೆ, ಬೇಗ ಬೇಗ ಕೆಲಸ ಮುಗಿಸಿ ಬಿಡೋಣ ಎಂದು ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಟಿ.ವಿ. ಬಂದ ಮೇಲೆ ನಮ್ಮ ಮನೆಯಲ್ಲಿ ಸ್ವಲ್ಪ ಶಾಂತಿ ನೆಲೆಸಿದೆ ಮಾರಾಯ. ಅತ್ತೆ ಸೊಸೆಯರ ಜಗಳಕ್ಕೆ ಬ್ರೇಕ್‌ ಬಿದ್ದಿದೆ ಎಂದು ಗುಟ್ಟಾಗಿ ಸಂತಸ ಪಡುವ ಗಂಡಸರೂ ಇದ್ದರು. ಪರಿಸ್ಥಿತಿಯ ಪೂರ್ಣ ದುರಂತ ಎರಗಿದ್ದು ಮಾತ್ರ ಮಕ್ಕಳ ವಿದ್ಯಾಭ್ಯಾಸದ ಮೇಲೆ. ಶಾಲೆಯಲ್ಲಿ ಏನು ಕಲಿಸಿದರು? ನೀವೇನು ಓದಿದಿರಿ? ಪರೀಕ್ಷೆ ಯಾವಾಗ? ಓದಿ ಆಯಿತಾ? ಮಗ್ಗಿ ಬಾಯಿಪಾಠ ಕೊಡುತ್ತೀಯಾ? ಎಂಬ ಪ್ರಶ್ನೆಗಳನ್ನು ಕೇಳುವ ಹಿರಿಯರೇ ಮನೆಗಳಿಂದ ನಾಪತ್ತೆಯಾಗಿ ಹೋದರು. ಅವರವರ ಟಿ.ವಿ. ಪ್ರಪಂಚದಲ್ಲಿ ಅವರವರು. ಧಾರಾವಾಹಿ ವೀಕ್ಷಣೆಯ ತುರ್ತಿನಲ್ಲಿ ಮನೆಗೆ ಯಾರಾದರೂ ಬಂದರೆ ಚೂರು ಮುಗುಳುನಕ್ಕಂತೆ ಮಾಡಿ, ಕುಡಿಯಲಿಕ್ಕೆ ಬೇಕಾ ಎಂದು ಕೇಳಿ ಹೂಂ ಅಂದರಾ, ಊಹೂಂ ಅಂದರಾ ಎಂದು ಕೇಳಿಸಿಕೊಳ್ಳದೆ ಟಿ.ವಿ.ಯಲ್ಲಿ ಕಣ್ಣು ಕೀಲಿಸಿಕೊಂಡು ಕೂಡುವ ಮನೆಯೊಡತಿಯರು. ಒಟ್ಟಾರೆ ಕೌಟುಂಬಿಕ ಚಿತ್ರಣವೇ ಬದಲಾಗಿ ಹೋಯಿತು. ಇದಾಗಿ ಈಗ ಎರಡು-ಮೂರು ದಶಕಗಳೇ ಕಳೆದುಹೋಗಿವೆ.

ಟಿ.ವಿ. ಯೇ ಸಂಗಾತಿ
ಹಳ್ಳಿಗಳ ಮನೆಯಲ್ಲಿರುವ ಯುವಜನಾಂಗ ನೌಕರಿಯನ್ನರಸಿ ಪಟ್ಟಣಗಳಿಗೆ ಹೋಗಿ ಕುಳಿತಿವೆ. ವಿಶಾಲವಾದ ಮನೆಗಳಲ್ಲಿ ಅಜ್ಜ ಅಜ್ಜಿಯರು ಮಾತ್ರ. ಮಕ್ಕಳು-ಮೊಮ್ಮಕ್ಕಳ ಗದ್ದಲವಿಲ್ಲ. ಹಬ್ಬಹರಿದಿನಗಳಲ್ಲಿ ಬಂದು ಮುಖ ತೋರಿಸಿದರೆ ಅದೇ ಹೆಚ್ಚು. “ನವರಾತ್ರಿಗೆ ಬಂದಿದ್ದೇವಲ್ಲಮ್ಮ , ಇನ್ನು ದೀಪಾವಳಿಗೆ ಬರುವುದಿಲ್ಲ’ ಎಂದು ಹೇಳುವ ಸುಪುತ್ರರೇ ಜಾಸ್ತಿ. ಗತಕಾಲದ ವೈಭವವನ್ನು ನೆನಪಿಸಿಕೊಳ್ಳುತ್ತ ಕೂತಿರುವ ಅಸಹಾಯಕ ಸ್ಥಿತಿ ವೃದ್ಧ ತಂದೆತಾಯಿಗಳದ್ದು, ಕೈಲಾಗದ ದೈಹಿಕ ಸ್ಥಿತಿಯಿಂದಾಗಿ ಕೊಟ್ಟಿಗೆ, ದನ-ಕರುಗಳು, ಆಳುಕಾಳುಗಳು ಎಲ್ಲರಿಗೂ ವಿದಾಯ ಹೇಳಿ ಆಗಿದೆ. ನೀರವ ಮುಂಜಾನೆಗಳು ಹಗಲು ರಾತ್ರಿಗಳನ್ನು ಕಳೆಯುವುದು ಅವರಿಗೆ ಅಸಹನೀಯವಾಗದಂತೆ ನೋಡಿಕೊಳ್ಳುವ ಯಾಂತ್ರಿಕ ಕೆಲಸವನ್ನು ಈ ನಮ್ಮ ವಟವಟ ಪೆಟ್ಟಿಗೆ ವಹಿಸಿಕೊಂಡಿದೆ ಎಂಬುದು ವಿಚಿತ್ರವಾದರೂ ಸತ್ಯ. ದೇವರ ಪೂಜೆಗಳು, ಅಭಿಷೇಕಗಳು, ದೇವಸ್ಥಾನದ ದರ್ಶನದಂಥ ಬೆಳಗಿನ ಕಾರ್ಯಕ್ರಮಗಳನ್ನು ಅಜ್ಜಿ ಕೂತು ನೋಡಿದರೆ, ಸಂಜೆಯ ಧಾರಾವಾಹಿಗಳನ್ನು , ತಮ್ಮ ಮೊಮ್ಮಕ್ಕಳಂತೆ ಕಾಣುವ ಚಿಕ್ಕ ಮಕ್ಕಳ ರಿಯಾಲಿಟಿ ಶೋಗಳನ್ನು ಇಬ್ಬರೂ ಕೂತು ನೋಡುತ್ತಾರೆ. ಆ ಮಟ್ಟಿಗೆ ಟಿ.ವಿ. ಪೆಟ್ಟಿಗೆ ವೃದ್ಧ ದಂಪತಿಗಳನ್ನು ಅಷ್ಟಿಷ್ಟಾದರೂ ಲವಲವಿಕೆಯಿಂದ ಇಡಬಲ್ಲ ಪಾತ್ರವನ್ನು ವಹಿಸುತ್ತಿದೆ. ಇಷ್ಟೊಂದು ಬದಲಾವಣೆಗಳನ್ನು ತಿಳಿದ ಮೇಲೂ, ಅದಕ್ಕೆಲ್ಲ ಕಾರಣವಾದ ಟಿ.ವಿ.ಯನ್ನು ಮೆಚ್ಚದೇ ಇರಲಾದೀತೆ?

ಭುವನೇಶ್ವರಿ ಹೆಗಡೆ

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.