ಬೇಸಗೆ ರಜೆಯ ಸುರಂಗಯಾನ


Team Udayavani, May 4, 2018, 6:00 AM IST

s31.jpg

ಈಗ ಶಾಲಾ ಕಾಲೇಜುಗಳಿಗೆ ರಜಾ ಕಾಲ ಶುರುವಾಗಿದೆ. ನಗರಗಳಲ್ಲಿ ಅಲ್ಲಲ್ಲಿ  ನಡೆಸಲಾಗುವ ಬೇಸಗೆ ಶಿಬಿರಗಳ ಜಾಹೀರಾತು ಕಣ್ಣಿಗೆ ಬೀಳುತ್ತಿದೆ. ಬಿಸಿಲಿದ್ದರೂ ವಿಶಾಲವಾದ ಜಾಗ ಇರುವ ಮೈದಾನಗಳಲ್ಲಿ  ಕ್ರಿಕೆಟ್‌, ಫ‌ುಟ್‌ಬಾಲ್ ಆಡುವ ಮಕ್ಕಳ ಕಲರವ ಕೇಳಲು, ನೋಡಲು ಹಿತವಾಗಿದೆ. ಮೈದಾನ ಇಲ್ಲದ ಕೆಲವೆಡೆ ಮಕ್ಕಳು ಬೀದಿಯಲ್ಲಿಯೇ ಕ್ರಿಕೆಟ್‌ ಆಡುವರು. ಕ್ರಿಕೆಟ್‌ ಬಾಲ… ಪಕ್ಕದ ಮನೆಯವರ ಮನೆಯವರ ಕಿಟಿಕಿ ಗಾಜನ್ನು ಒಡೆಯುವುದು, ಹಿಂದಿನ ಮನೆಯ ತಾರಸಿಯ ಮೇಲೆ ಬಿದ್ದ ಬಾಲ್ ಅನ್ನು ಪಡೆದುಕೊಳ್ಳಲು ಅನುಮತಿ ಬೇಡುವುದು, ರಸ್ತೆಯಲ್ಲಿ  “ವಿಕೆಟ್‌ ರೂಪಿ’ಯಾಗಿ ಇರಿಸಲಾದ ಕಲ್ಲುಗಳಿಂದಾಗಿ ಕಾರು ಚಲಾಯಿಸುವವರಿಗೆ ಕಿರಿಕಿರಿಯಾಗಿ ಅವರು ಹಾರ್ನ್ ಮೊಳಗಿಸುವುದು… ಹೀಗೆ ವಿವಿಧ ವಿಘ್ನಗಳ ನಡುವೆಯೂ ಬಿಸಿಲಿನಲ್ಲಿ ಸ್ವತ್ಛಂದವಾಗಿ ಆಡುವ ಮಕ್ಕಳು ಒಂದೆಡೆಯಾದರೆ, ಮನೆಯವರ ಎಚ್ಚರಿಕೆಯಿಂದಲೋ, ತನ್ನ ಆಯ್ಕೆಯಾಗಿಯೋ  ಕಂಪ್ಯೂಟರ್‌, ಮೊಬೈಲ್ ಫೋನ್‌ಗಳ ಒಡನಾಟದಲ್ಲಿರುವವರು ಇನ್ನು ಕೆಲವರು. ಇನ್ನೂ ಚಿಕ್ಕ ವಯಸ್ಸಿನ ಮಕ್ಕಳು ತಮ್ಮ ಮನೆಯ ಸುತ್ತುಮುತ್ತಲು ಓರಗೆಯ ಸ್ನೇಹಿತರೊಂದಿಗೆ ದುಡುದುಡು ಓಡುತ್ತ ಐಸ್‌-ಪೈಸ್‌, ಜೂಟಾಟ, ಕಂಪ್ಯೂಟರ್‌ ಗೇಮ್ಸ… ಇತ್ಯಾದಿ ಮನೆಯ ಒಳಗೂ ಹೊರಗೂ ಆಡುತ್ತಿದ್ದಾರೆ.  ಸಂಗೀತ, ನೃತ್ಯ, ಅಬಾಕಸ್‌, ಡ್ರಾಯಿಂಗ್‌ ಇತ್ಯಾದಿ ಕಲಿಯಲು ಹೊರಡುವವರು ಕೆಲವರಾದರೆ, ಇಷ್ಟ ಇದ್ದರೂ, ಇಲ್ಲದಿದ್ದರೂ ಪೋಷಕರು ಸೇರಿಸಿದ ಬೇಸಿಗೆ ಶಿಬಿರಕ್ಕೆ ಹಾಜರಾಗುವ ಅನಿವಾರ್ಯತೆ ಇನ್ನು ಕೆಲವರದು.  

ಇವೆಲ್ಲ ಅನುಕೂಲತೆಯುಳ್ಳ ಇಂದಿನ ನಗರವಾಸಿ ಮಕ್ಕಳಿಗೆ ಅನ್ವಯ. 1980ರ ಆಸುಪಾಸಿನಲ್ಲಿ, ಕೇರಳದ ಕಾಸರಗೋಡು ಜಿಲ್ಲೆಯ  ಪುಟ್ಟಹಳ್ಳಿಯಲ್ಲಿ  ಶಾಲಾ ವಿದ್ಯಾರ್ಥಿಗಳಾಗಿದ್ದ ನಮಗೆ ಬೇಸಿಗೆ ಶಿಬಿರದ ಕಲ್ಪನೆಯೂ ಇದ್ದಿರಲಿಲ್ಲ. ರಜಾದಿನಗಳಲ್ಲಿ ಬರೆಯಲೆಂದೇ ಕೊಟ್ಟಿರುವ ಕಾಪಿ ಬರೆಯುವ ಕೆಲಸಗಳನ್ನು ಮುಗಿಸುತ್ತಿದ್ದೆವು. ದೊಡ್ಡವರೊಂದಿಗೆ ಎಡತಾಕುತ್ತ, ಅವರು ಮಾಡುತ್ತಿದ್ದ  ಹಪ್ಪಳ-ಸಂಡಿಗೆ ತಯಾರಿಯಂತಹ ಕೆಲಸಗಳಲ್ಲಿ  ನಮಗೆ ವಹಿಸಲಾದ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದರಲ್ಲಿ ಖುಷಿಯಿರುತ್ತಿತ್ತು. ಆಮೇಲೆ ಗೇರುಬೀಜ, ನೇರಳೆಹಣ್ಣು, ರೆಂಜೆಹೂವು, ಕೊಡಸಿಗೆ ಹೂವು- ಇತ್ಯಾದಿಗಳನ್ನು ಹುಡುಕುವ ನೆಪದಲ್ಲಿ  ಗುಡ್ಡಗಳಲ್ಲಿ ಸುತ್ತಾಡುವುದು, ಮರವೇರಿ ಕುಳಿತುಕೊಳ್ಳುವುದು, ಓರಗೆಯವರೊಂದಿಗೆ ಚೆನ್ನೆಮಣೆ, ಕುಂಟೆಬಿಲ್ಲೆ ಆಡುವುದು, ಹಬ್ಬ, ದೇವಸ್ಥಾನ, ಸಮಾರಂಭಗಳಿಗೆ ಹೋಗುವುದು, ನಮಗಿಂತ ಒಂದು ವರ್ಷ ಮೇಲಿನ ಕ್ಲಾಸಿನಲ್ಲಿರುವವರ ಪುಸ್ತಕಗಳನ್ನು ಕೇಳಿ ಪಡೆದು, ಹಳೆಯ ಕ್ಯಾಲೆಂಡರ್‌ ಹಾಳೆಯ ಬೈಂಡ್‌ ಮಾಡಿ ಇಡುವುದು, ಅಪರೂಪಕ್ಕೆ ಅಡಿಕೆ ಹೆಕ್ಕುವುದು… ಹೀಗೆ ಯಾವುದೇ ನಿಶ್ಚಿತ ರೂಪುರೇಖೆಗಳಿಲ್ಲದ ತರಾವರಿ ಕೆಲಸಗಳಲ್ಲಿ ಸಣ್ಣಪುಟ್ಟ ಪರಿಣತಿಯನ್ನು ನಮಗರಿವಿಲ್ಲದೆಯೇ  ಪಡೆಯುತ್ತಿದ್ದೆವು. ಹೀಗೆಲ್ಲ ಕಾಲಕ್ಷೇಪ ಆಗುತ್ತಿದ್ದಂತೆ ಎರಡು ತಿಂಗಳ ರಜಾ ಕಾಲ ಮುಗಿದೇ ಹೋಗುತ್ತಿತ್ತು. ಇವೆಲ್ಲದರೆ ಜೊತೆಗೆ ನನಗೆ ಮತ್ತು ನನ್ನ ಅಣ್ಣನಿಗೆ ವಿಶೇಷವಾಗಿ ಭೂಗರ್ಭದಲ್ಲಿರುವ ಸುರಂಗಯಾನವೂ ಲಭಿಸುತ್ತಿತ್ತು. ಅದರ ಹಿನ್ನೆಲೆ ಮತ್ತು ಅನುಭವಗಳು ಬಲು ರೋಚಕ.

ಆ ದಿನಗಳಲ್ಲಿ ಕೇರಳದ ಹಳ್ಳಿಗಳಲ್ಲಿ, ಮನೆ ಹಾಗೂ ಕೃಷಿಯ ನೀರಿನ ಅಗತ್ಯಗಳಿಗಾಗಿ ಬಾವಿ, ನದಿ ಅಥವಾ ಅಡ್ಡಸುರಂಗಗಳನ್ನು ಅವಲಂಬಿಸುತ್ತಿದ್ದರು. ಆಗಲೇ ಆಲ್ಲಲ್ಲಿ  ಬೋರ್‌ವೆಲ… ಕೊರೆಯುವ ಪದ್ಧತಿ ಆರಂಭವಾಗಿತ್ತಾದರೂ, ನಮ್ಮ ಅಜ್ಜನಮನೆ ಇದ್ದ ಹಳ್ಳಿಯಲ್ಲಿ ಇನ್ನೂ ಬೋರ್‌ವೆಲ… ಬಂದಿರಲಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲಿದ್ದ  ಬೆಟ್ಟದ ಬುಡದಲ್ಲಿ  ಅಡ್ಡ ಸುರಂಗವಿತ್ತು. ಮುತ್ತಾತ ಕೊರೆಸಿದ ಸುಮಾರು 500 ಮೀಟರ್‌ ಉದ್ದ ಇದ್ದಿರಬಹುದಾದ ಆ ಸುರಂಗದಲ್ಲಿ ವರ್ಷದ ಎಲ್ಲಾ ಋತುಗಳಲ್ಲೂ ಸಿಹಿ ನೀರಿನ ಒರತೆ ಲಭ್ಯವಿತ್ತು. ಸುರಂಗದ ಆರಂಭದಲ್ಲಿ ಒಂದೆರಡು ಕೊಡ ನೀರು ಸಂಗ್ರಹವಾಗುವಷ್ಟು ದೊಡ್ಡ ಹೊಂಡವಿತ್ತು.  ಅಡಕೆ ಮರಗಳನ್ನು ಉದ್ದಕ್ಕೆ ಸೀಳಿ, ಅರ್ಧಚಂದ್ರಾಕಾರದ ಕೊಳವೆಯಂತೆ  ಮಾಡಿ ಅವುಗಳನ್ನು ಉದ್ದಕ್ಕೂ ಜೋಡಿಸಿಟ್ಟ ಅಪ್ಪಟ ದೇಸಿ ವ್ಯವಸ್ಥೆಯಿತ್ತು.   ಹೀಗೆ ಕಾಡಿನ ಸುರಂಗದಿಂದ ಹರಿದುಬರುತ್ತಿದ್ದ ನಿಸರ್ಗದತ್ತ ಸಿಹಿನೀರು, ತೆರೆದ ಅಡಿಕೆ ಮರದ ದಂಬೆಯ ಮೂಲಕ ಹರಿದು ಬಂದು ಮನೆಯಂಗಳದಲ್ಲಿ ಅಖಂಡ  ಜಲಧಾರೆ ಸೃಷ್ಟಿಸುತ್ತಿತ್ತು. ಇದಕ್ಕೆ “ಅಬ್ಬಿ’ ಎಂಬ ಹೆಸರಿತ್ತು. ಈಗಿನಂತೆ ಪೈಪ್‌, ನಲ್ಲಿ, ಸಂಸ್ಕರಿಸಿದ ಬಾಟಲಿ ನೀರು ಇತ್ಯಾದಿಗಳ ಕಲ್ಪನೆಯೇ ಇಲ್ಲದಿದ್ದ ಆ ಕಾಲದಲ್ಲಿ, ಅಬ್ಬಿ ನೀರಿಗೆ ಕೈಯೊಡ್ಡಿ ಕುಡಿಯುತ್ತಿದ್ದರೂ, ತಲೆ ಮೈ ಒ¨ªೆ ಮಾಡಿಕೊಂಡು ಆಟವಾಡುತ್ತಿದ್ದರೂ ಅದರಿಂದಾಗಿ ಅಸೌಖ್ಯತೆ ಬಂದ ನೆನಪಿಲ್ಲ.

ಮಳೆಗಾಲದಲ್ಲಿ ಅಂತೂ ಸುರಂಗದ ಪಕ್ಕ ಭೋರ್ಗರೆಯುವ ಜಲಪಾತವೇ ಸೃಷ್ಟಿಯಾಗುತ್ತಿತ್ತು. ಈ ಸುರಂಗದ ನೀರು ನಮ್ಮ ಅಜ್ಜನಮನೆಯವರಿಗೆ ಮಾತ್ರವಲ್ಲದೆ, ಅಕ್ಕಪಕ್ಕದ ಕೆಲವು ಮನೆಯವರಿಗೂ ನೀರಿನ ಮೂಲವಾಗಿತ್ತು.  ಹೊಂಡದಲ್ಲಿ ಸಂಗ್ರಹವಾಗಿ ಹರಿದು ಹೋಗುತ್ತಿದ್ದ ಹೆಚ್ಚುವರಿ ನೀರನ್ನು ಕುಡಿಯಲೆಂದು ಮೇಯಲು ಹೋಗಿದ್ದ ಹಸು-ಕರುಗಳು, ಕಾಡಿನ ಅಸಂಖ್ಯಾತ ಪ್ರಾಣಿ-ಪಕ್ಷಿಗಳೂ ಬರುತ್ತಿದ್ದುವು. ಇಂತಿಪ್ಪ ಸುರಂಗ ನೀರಿನ ಒರತೆ ಎಪ್ರಿಲ್-ಮೇ ತಿಂಗಳಲ್ಲಿ  ಕಡಿಮೆಯಾಗಿ, ಅಬ್ಬಿಯ ಜಲಧಾರೆ ಕ್ಷೀಣವಾಗುತ್ತಿತ್ತು.  ಕೃಷಿಯ ಬಗ್ಗೆ ಅಪಾರ ಕಾಳಜಿಯಿದ್ದ  ನಮ್ಮ ಅಜ್ಜನವರು ತೋಟಕ್ಕೆ  ನೀರು ಕಡಿಮೆ ಆಗಬಾರದೆಂದು ಬೇಸಗೆಯಲ್ಲಿ ಸುರಂಗದ ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿದರು. ಸುರಂಗದ ಒಳ ಹೊಕ್ಕು ಅಲ್ಲಲ್ಲಿ ಕಪ್ಪೆ, ಏಡಿಗಳು ಮಾಡಿರಬಹುದಾದ ಬಿಲಗಳ ಮೂಲಕ ನೀರು ಹರಿಯುವುದನ್ನು ತಡೆಯುವುದು, ಮಣ್ಣು ಕುಸಿದು ಹೂಳು ತುಂಬಿದ್ದರೆ ಅದನ್ನು ಸರಿಪಡಿಸುವುದು, ನೀರು ಹರಿದು ಬರುವ ದಾರಿಯಲ್ಲಿ ತುಂಬಿರುವ ಕಸಕಡ್ಡಿ, ಒಣಗಿದ ಎಲೆಗಳನ್ನು ತೆಗೆದು ನೀರಿನ ಹರಿವನ್ನು  ಸುಗಮಗೊಳಿಸುವುದು ಇವಿಷ್ಟು ಸುರಂಗಯಾನದ ಉದ್ದೇಶಗಳಾಗಿದ್ದುವು. 

ಅಜ್ಜನವರು ಇಬ್ಬರು ಕೃಷಿಕಾರ್ಮಿಕರನ್ನು ಕರೆದುಕೊಂಡು, ತಾವೂ ಸೊಂಟಕ್ಕೊಂದು ಬೈರಾಸು ಸುತ್ತಿಕೊಂಡು ಹಾರೆ, ಗುದ್ದಲಿ, ಕತ್ತಿ, ಬಾಲ್ದಿ, ಪೈಪ್‌ ಮೊದಲಾದ ಸಲಕರಣೆಗಳು, ಸುರಂಗದ ಒಳಗೆ ಬೆಳಕಿಗಾಗಿ ಒಂದು ಟಾರ್ಚ್‌ಲೈಟ್‌, ಉರಿಸಿದ ಲಾಟೀನು, ಬೆಂಕಿಪೊಟ್ಟಣ ಇವಿಷ್ಟನ್ನು ಸಿದ್ಧಗೊಳಿಸುತ್ತಿದ್ದಂತೆ  ಸುರಂಗಕ್ಕೆ ಹೋಗಲು ಅಣಿಯಾಗುತ್ತಿ¨ªಾರೆ  ಎಂದು ನನಗೂ ಅಣ್ಣನಿಗೂ ಅರ್ಥವಾಗುತ್ತಿತ್ತು. “ನಾವೂ ಬರಲೇ’ ಎಂದು ಕೇಳುತ್ತಿದ್ದೆವು. ಕಾರಣವಿಷ್ಟೆ. ಹೊರಗಿನ ಬಿಸಿಲಿನ ಝಳವಿದ್ದರೆ ಸುರಂಗದೊಳಗೆ ಬಹಳ ತಂಪಿರುತ್ತಿತ್ತು, ಮಕ್ಕಳಾದ ನಮಗೆ ಒಬ್ಬರಿಗೆ  ಟಾರ್ಚ್‌ ಮೂಲಕ ಬೆಳಕು ಬೀರುವ ಕೆಲಸವಾದರೆ, ಇನ್ನೊಬ್ಬರಿಗೆ ಲಾಟೀನನ್ನು ಹಿಡಿಯುವ ಕೆಲಸವಿರುತ್ತಿತ್ತು. ಸುರಂಗದ ಒಳಗೆ ಹರಿಯುತ್ತಿದ್ದ ನೀರಿನ ಮೇಲೆ ಬರಿಗಾಲಿನಲ್ಲಿ  ನಡೆಯುವಾಗಿನ ಚಳ-ಪಳ ಸಪ್ಪಳ , ನಮ್ಮ ಆಗಮನದಿಂದ ಗಾಬರಿಗೊಂಡು  ತಟ್ಟೆಂದು ಹಾರುವ ಕಪ್ಪೆ, ಒಮ್ಮೊಮ್ಮೆ ಹಾರಾಡುವ ಬಾವಲಿ, ಎಲ್ಲಿಂದಲೋ ಬರುವ ಒರತೆ ನೀರಿನ ಸೆಲೆಗಳ ಸದ್ದು, ಇವೆಲ್ಲಾ ನಮಗೆ ಪುಳಕದ ವಿಷಯಗಳಾಗಿದ್ದುವು. ಪ್ರತಿ ಬಾರಿಯೂ ಚಾಲಾಕಿತನದಿಂದ ನನ್ನ ಅಣ್ಣ ಟಾರ್ಚ್‌ ಅನ್ನು ತಾನೇ ಮೊದಲಾಗಿ ಹಿಡಿದುಕೊಂಡು ಬೆಳಕನ್ನು ಝಳಪಿಸುತ್ತ ಇದ್ದರೆ, ಅನಿವಾರ್ಯವಾಗಿ ಲಾಟೀನು ಹಿಡಿದುಕೊಳ್ಳಬೇಕಾಗಿದ್ದ ನನಗೆ ಕೋಪ ಬರುತ್ತಿತ್ತು. ಅವನನ್ನು ಕಾಡಿ, ಬೇಡಿ, ನಾನೂ ಸ್ವಲ್ಪ ಸಮಯದ ಕಾಲ ಟಾರ್ಚ್‌ನಲ್ಲಿ ಆಟವಾಡುವ ಸಂತಸ ಪಡೆಯುತ್ತಿದ್ದೆ.  

ಒಂದಾಳು ಎತ್ತರದ, 3-4 ಅಡಿ ಅಗಲವಿದ್ದ ಆ ಸುರಂಗದ ಮೇಲ್ಭಾಗದಲ್ಲಿ ಗಟ್ಟಿಯಾದ ಕಲ್ಲಿನ ಚಪ್ಪರವಿದ್ದು, ಭೂ ಕುಸಿತದ ಭಯವಿರಲಿಲ್ಲ ಎಂದು ಕೇಳಿದ್ದೆ . ಒಂದೆರಡು ಕಡೆ ಮಾತ್ರ ದೊಡ್ಡವರು ಬಾಗಿ ಹೋಗುವಷ್ಟು  ಎತ್ತರವಿತ್ತು. ಸುಮಾರು 500 ಮೀಟರ್‌ ಇದ್ದಿರಬಹುದಾದ ಆ ಸುರಂಗದಲ್ಲಿ  ಸರಾಸರಿ 100 ಮೀಟರ್‌ಗೆ ಒಂದರಂತೆ ತೆರೆದ ಬಾವಿಗಳಿದ್ದುವು. ಸುರಂಗ ಕೊರೆಯುವ ಸಂದರ್ಭದಲ್ಲಿಯೇ ಆಮ್ಲಜನಕದ ಸರಬರಾಜಿಗಾಗಿ ಈ ಬಾವಿಗಳನ್ನು ಕೊರೆಸಿರಬಹುದು. ಸುರಂಗದ ಅಂತ್ಯ ಭಾಗದಲ್ಲಿ ಪುಟ್ಟ ಮೈದಾನದಂತಹ ಜಾಗವಿತ್ತು ಹಾಗೂ ಅಲ್ಲಿ  ಅರ್ಧ ಗಂಟೆಗೂ ಹೆಚ್ಚು  ಕಾಲ ದುರಸ್ತಿ ಕೆಲಸ ಮಾಡುತ್ತಿದ್ದರು. 

ಬಹುಶಃ  ನೆಲದ ಮೇಲ್ಮಟ್ಟದಿಂದ 20 ಅಡಿ ಆಳದಲ್ಲಿ ಇದ್ದಿರಬಹುದಾದ ಆ ಸುರಂಗದಲ್ಲಿ  ತಂಪು ವಾತಾವರಣವಿರುತ್ತಿತ್ತು.  ಗವ್ವೆನ್ನುವ ನಿಶ್ಶಬ್ದವಾಳುತ್ತಿದ್ದ ಸುರಂಗದಲ್ಲಿ  ಹಾರೆ, ಗುದ್ದಲಿಗಳ ಸದ್ದು, ಪಾದ ಮುಳುಗುವಷ್ಟಿರುತ್ತಿದ್ದ ನೀರಿನಲ್ಲಿ ನಡೆಯುವ ಸಪ್ಪಳ, ಅಜ್ಜನವರು ಸಹಾಯಕರಿಗೆ ಕೊಡುತ್ತಿದ್ದ ನಿರ್ದೇಶನಗಳು ಪ್ರತಿಧ್ವನಿಗೊಂಡು ದೊಡ್ಡದಾಗಿ ಕೇಳಿಸುತ್ತಿದ್ದುವು, ಬೆಳಕು ಹಾಗೂ ನಮ್ಮೆಲ್ಲರ ಆಗಮನದಿಂದ ಗಲಿಬಿಲಿಗೊಳಗಾಗುತ್ತಿದ್ದ ಅಲ್ಲಿನ ನಿವಾಸಿಗಳಾದ ಅಲ್ಲಿದ್ದ  ಕಪ್ಪೆ, ಬಾವಲಿ, ಏಡಿಗಳು ಆತ್ತಿತ್ತ ಓಡಾಡಿ ಇನ್ನಷ್ಟು ರೋಚಕ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದುವು. 

ಅಜ್ಜನವರು ಆಗಾಗ “ಲಾಟೀನು ಧಗಭಗ ಅನ್ನುವಷ್ಟರಲ್ಲಿ ನಾವು ಇಲ್ಲಿಂದ ಹೊರಡಬೇಕು’ ಅನ್ನುತ್ತಿದ್ದರು. ಲಾಟೀನಿನ ಆರೋಗ್ಯಕ್ಕೂ, ನಾವು ಹೊರಡುವುದಕ್ಕೂ ಸಂಬಂಧವೇನೆಂದು ಅವರಾಗಿ ಹೇಳಿರಲಿಲ್ಲ. ಹತ್ತು, ಹನ್ನೆರಡು ವಯಸ್ಸಿನವರಾಗಿದ್ದ ನನಗೂ ಅಣ್ಣನಿಗೂ ಕಾರಣ ಕೇಳಬೇಕೆಂದು ಅನಿಸಿರಲಿಲ್ಲ. ಲಾಟೀನು ಆರಿದರೇನಾಯಿತು, ಟಾರ್ಚ್‌ ಇದೆಯಲ್ಲ, ಅದಕ್ಕೇಕೆ ಅಷ್ಟು ಮಹತ್ವ ಕೊಡಬೇಕು ಅಂದುಕೊಳ್ಳುತ್ತಿ¨ªೆವು. ಮುಂದಿನ  ದಿನಗಳಲ್ಲಿ, ಇಂಧನಗಳು ಉರಿಯಲು ಆಮ್ಲಜನಕ ಬೇಕು, ಉರಿಯುವಿಕೆಯಿಂದಾಗಿ ಕಾರ್ಬನ್‌ ಡಯೋಕ್ಸೆ„ಡ್‌ ಬಿಡುಗಡೆಯಾಗುತ್ತದೆ, ಸೀಮಿತ ಜಾಗದಲ್ಲಿ ಆಮ್ಲಜನಕದ ಕೊರತೆಯುಂಟಾದಾಗ ವಿಷಪೂರಿತವಾದ ಕಾರ್ಬನ್‌ ಮೊನೋಕ್ಸೆ„ಡ್‌  ಆಗಿ ಪರಿವರ್ತನೆಯಾಗಿ ಮನುಷ್ಯರಿಗೆ ಅಪಾಯ ಎಂಬ ವಿಚಾರ ತಿಳಿದಾಗ ಅಜ್ಜನವರು ಲಾಟೀನು  ಧಗಭಗ ಅನ್ನುವುದನ್ನು ಯಾಕೆ ಗಮನಿಸುತ್ತಿದ್ದರು ಎಂದು ಮನವರಿಕೆಯಾಯಿತು. ನಮ್ಮ ಅಜ್ಜನವರು ಸ್ವಾತಂತ್ರ್ಯಪೂರ್ವ ಕಾಲದಲ್ಲಿ ನಾಲ್ಕನೆಯ ತರಗತಿವರೆಗೆ ಕಲಿತವರಾದರೂ, ಅವರಿಗಿದ್ದ ಬಹುಮುಖ ಪ್ರತಿಭೆ, ಪ್ರಯೋಗಶೀಲತೆ ಹಾಗೂ ದೇಸಿ ಜ್ಞಾನ ಅಪಾರ. 

ಅಂತೂ ದುರಸ್ತಿ ಕೆಲಸ ಮುಗಿಸಿ ಎಲ್ಲರೂ ಸುರಂಗದಿಂದ ಹೊರಬಂದಾಗ ನಮ್ಮ ಬಟ್ಟೆಗಳಿಗೆ ಕೆಸರು ಮಣ್ಣಿನ ಲೇಪನವಿರುತ್ತಿತ್ತು. ಆಮೇಲೆ ಸ್ನಾನದ ನೆಪದಲ್ಲಿ , ತೋಟದ ಆಳವಿಲ್ಲದ ಕೆರೆಯ ನೀರಿನಲ್ಲಿ ಮನಸಾರೆ ಆಟವಾಡಿದರೆ ನಮ್ಮ ಮಟ್ಟಿಗೆ ಒಂದು ದಿನದ ಕೆಲಸ ಮುಗಿದಂತೆ. ಟ್ಯಾಂಕ್‌, ಸಂಪ್‌ಗ್ಳಲ್ಲಿ ಸಂಗ್ರಹವಾಗುವ ನೀರು, ಕೊಳಾಯಿಗಳಲ್ಲಿ ಹರಿದುಬರುವ ನೀರನ್ನು ನಲ್ಲಿಯ ಮೂಲಕ  ನಿಯಂತ್ರಿಸುವ  ವಿಧಾನಗಳನ್ನು ಮಾತ್ರ ನೋಡಿರುವ, ನಗರಗಳಲ್ಲಿ ಬೆಳೆವ ಹೆಚ್ಚಿನ ಮಕ್ಕಳಿಗೆ ಅಡ್ಡಸುರಂಗಗಳ ಒರತೆ, ಅಡಕೆ ಮರದ ದಂಬೆಗಳಲ್ಲಿ ಹರಿದು ಬರುವ, ನಲ್ಲಿಯೇ ಇಲ್ಲದ ಅಖಂಡ ಜಲಧಾರೆಯನ್ನು ಕಲ್ಪಿಸಿಕೊಳ್ಳಲೂ ಕಷ್ಟವೆನಿಸಬಹುದು. ಮೇಲಾಗಿ, ಬಹಳಷ್ಟು ಆಳಕ್ಕೆ  ಬೋರ್‌ವೆಲ್‌ ಕೊರೆದರೂ ನೀರು ಸಿಗದ ಇಂದಿನ ದಿನಗಳಲ್ಲಿ  ಇಂತಹ  ಕೃಷಿ ಸಂಬಂಧಿ ಕೆಲಸಗಳು ಅಪ್ರಸ್ತುತ. ಕೃಷಿಕೆಲಸದಲ್ಲಿ ಆಸಕ್ತಿ ತೋರುವ ಜನರೂ ಕಡಿಮೆ, ಹಾಗಾಗಿ ಈಗಿನ ಮಕ್ಕಳಿಗೆ ಸುರಂಗಯಾನದ ನೈಜ ಅನುಭವವು ಬಹುತೇಕ ಸಿಗಲಾರದು.

ಹೇಮಮಾಲಾ  ಬಿ.

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.