ವಿದಾಯ ಹೇಳುವ ಮುನ್ನ !
Team Udayavani, May 31, 2019, 6:00 AM IST
ಒಂದೇ ತಾಯಿಯ ಮಕ್ಕಳು ನಾವೆಲ್ಲ. ಆದರೂ ಅವರು ಮೂವರು ಸಹೋದರರಂತೆ, ಯಾವುದೋ ಜನ್ಮದ ಬಂಧುತ್ವದಂತೆ ನಮ್ಮ ಜೊತೆಗಿದ್ದರು.
ನಮ್ಮ ಸೀನಿಯರ್ ಇದ್ದದ್ದು ಮೂರೇ ಜನ. ಆದರೂ ಅವರು ನೂರು ಜನಕ್ಕೆ ಸಮ! ಮೂರೂ ಮಂದಿ ನಮ್ಮ ಹುಚ್ಚುಸಾಹಸಗಳಿಗೆ ಬೆನ್ನೆಲುಬಾಗಿದ್ದರು. ನಾವು ಹಠಕ್ಕೆ ಬಿದ್ದು ಹಿರಿಯ ರಾಜಕೀಯ ನಾಯಕರೊಬ್ಬರ ಸಂದರ್ಶನಕ್ಕೆ ಕೈ ಹಾಕಿದ್ದೆವು. ವಿಷಯ ತಿಳಿದವರೆಲ್ಲ ನಮ್ಮ ದುಸ್ಸಾಹಸದ ಬಗ್ಗೆ ಆಡಿಕೊಂಡವರೇ. ಆದರೆ, ನಮ್ಮ ಈ ಅಣ್ಣಂದಿರು ನಮ್ಮ ಉತ್ಸಾಹ ಕುಗ್ಗದಂತೆ ನೋಡಿಕೊಂಡರು. ಝಡ್ಪ್ಲಸ್ ರಕ್ಷಣೆ ನಡುವೆ ಇದ್ದ ಅಮಿತ್ ಶಾ ಅವರ ಸಂದರ್ಶನ ಮಾಡಲು ನಾವು ಮುನ್ನಡೆದಾಗ, ಈ ಮೂವರು ಬೆಂಬಲಕ್ಕೆ ನಿಂತರು. ವಿನೋದವಾಗಿ, “ಅವಿತ್ ಶಾ ಅವರ ಕಾರನ್ನಾದರೂ ಅಡ್ಡ ಹಾಕಿ ನಿಲ್ಲಿಸಿ ನಿಮಗೆ ಸಂದರ್ಶನ ಅವಕಾಶ ಮಾಡಿಕೊಡ್ತೀವಿ’ ಎಂದು ಧೈರ್ಯವನ್ನೂ ತುಂಬಿದ್ದರು. ಅಂತೂ ಕಾರನ್ನು ಅಡ್ಡ ಹಾಕುವ ಸಂದರ್ಭ ಬಂದಿಲ್ಲವೆನ್ನಿ.
ಎಂಸಿಜೆ ಆರಂಭವಾದಾಗಿನಿಂದ ನಾವೇ ಮೊದಲ ವಿದ್ಯಾರ್ಥಿನಿಯರು. ನಮ್ಮನ್ನು ಎಲ್ಲರೂ ತಮಾಷೆಗೆ “ಲೇಡಿ ರೌಡಿಗಳು’ ಎಂದೇ ಸಂಬೋಧಿಸುತ್ತಿದ್ದರು. ನಾವು ಯಾವ ಹುಡುಗರಿಗೂ ಕಮ್ಮಿ ಇರಲಿಲ್ಲ. ಒಂದು ವಾಕ್ಯದಲ್ಲಿ ಹೇಳಬೇಕಾದರೆ ಸೀನಿಯರ್ಗಳ ಕಾಲೆಳೆಯೋ ಕಿರಿಕ್ ಪಾರ್ಟಿ!
ಹಿರಿ ವಿದ್ಯಾರ್ಥಿಗಳ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ. ನಮ್ಮ ತಪ್ಪುಗಳನ್ನು ಮೃದು ಮಾತಿನಿಂದ ತಿದ್ದಿದ್ದಾರೆ. ಈಗ ಕೊನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿ, ಉದ್ಯೋಗ ಹುಡುಕುವ ತರಾತುರಿಯಲ್ಲಿದ್ದಾರೆ ಸೀನಿಯರ್. ಅವರ ಭವಿಷ್ಯದ ಹಾದಿಗೆ ನಮ್ಮ ಶುಭ ಹಾರೈಕೆ. ಮಿಸ್ ಮಾಡಿಕೊಳ್ಳುವುದು ಇದ್ದೇ ಇದೆಯಲ್ಲ!
ಸೀಮಾ ಪೋನಡ್ಕ
ಸ್ನಾತಕೋತ್ತರ ಎಂ. ಸಿ. ಜೆ , ವಿವೇಕಾನಂದ ಕಾಲೇಜು, ಪುತ್ತೂರು