ನಾನೂ ಇಂಜಿನಿಯರ್ ಆಗುತ್ತೇನೆ !
Team Udayavani, May 25, 2018, 6:00 AM IST
ಪ್ರತಿವರ್ಷ ನಮ್ಮ ದೇಶದಲ್ಲಿ ಅದೆಷ್ಟು ಲಕ್ಷಗಟ್ಟಲೆ ಇಂಜಿನಿಯರ್ ತಯಾರಾಗುತ್ತಾರೆ. ಅದರಲ್ಲಿ ಅರ್ಧದಷ್ಟು ಜನ ನಿರುದ್ಯೋಗಿಗಳಾಗಿ ಉಳಿದರೆ, ಕಾಲು ಭಾಗ ಜನ ಓದಿರುವ ಇಂಜಿನಿಯರಿಂಗ್ಗೆ ಸಂಬಂಧವಿಲ್ಲದ ಮತಾöವುದೋ ಕೆಲಸ ಮಾಡುತ್ತ ಖುಷಿಯಾಗಿದ್ದಾರೆ. ಅಂಥ ಇಂಜಿನಿಯರ್ ಕತೆ ಇದು.
ಇಂದಿನ ಕಾಲಘಟ್ಟದಲ್ಲಿ ಇಂಜಿನಿಯರಿಂಗ್ ಓದುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಶಾಲಾಕಾಲೇಜು ಶಿಕ್ಷಣ ಮುಗಿದ ಮೇಲೆ, ಇಂಜಿನಿಯರಿಂಗ್ ಓದುವುದು ಕೂಡ ಕಡ್ಡಾಯವಾದಂತೆ ಕಂಡುಬರುತ್ತಿದೆ. ಕೆಲವರು ಕೇವಲ ಡಿಗ್ರಿಗೋಸ್ಕರ ಇಂಜಿನಿಯರಿಂಗ್ ಸೇರಿಕೊಂಡರೆ, ಹಲವಾರು ಮಂದಿ ಮೆಡಿಕಲ್ ಸೀಟ್ ಸಿಕ್ಕಿಲ್ಲವೆಂದು ಇಂಜಿನಿಯರ್ ಆಗಲು ಹೊರಟಿರುತ್ತಾರೆ. ಇನ್ನು ಸುಮಾರಷ್ಟು ಜನರಿಗೆ ಪಿಯುಸಿ ಮುಗಿದ ಮೇಲೆ ಏನು ಮಾಡುವುದು ಎಂದು ತೋಚದೆ ಇಂಜಿನಿಯರಿಂಗ್ ಕಾಲೇಜು ಬಾಗಿಲು ತಟ್ಟಿದರೆ, ಮನೆಯಲ್ಲಿ ಅಪ್ಪ-ಅಮ್ಮ, “ಇಂಜಿನಿಯರ್ ಆಗು, ಒಳ್ಳೆ ಸಂಬಳ ಬರುತ್ತೆ’ ಅಂತ ಹೇಳಿದ್ದಕ್ಕೆ “ಇಂಜಿನಿಯರ್ ಆಗಲು ಹೊರಟಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಇಷ್ಟೆಲ್ಲದರ ಮಧ್ಯೆ ನಾನು ದೊಡ್ಡ ಇಂಜಿನಿಯರ್ ಆಗಬೇಕು, ವಿಶ್ವೇಶ್ವರಯ್ಯ ನನ್ನ ರೋಲ್ಮಾಡೆಲ್’ ಅಂತ ಇಂಜಿನಿಯರಿಂಗ್ ಸೇರಿಕೊಂಡಿರುವ ವಿದ್ಯಾರ್ಥಿ ಸಮೂಹ ಒಂದಿದೆ.
ಕಾಲೇಜು ಸೇರಿಕೊಳ್ಳುವಾಗ ಸುಂದರ್ ಪಿಚೈ, ಸತ್ಯ ನಾದೆಳಾ, ವಿಶ್ವೇಶ್ವರಯ್ಯ, ಬಿಲ್ ಗೇಟ್ಸ್, ಮಾರ್ಕ್ ಜೂಕರ್ಬರ್ಗ್, ಸ್ಟೀವ್ ಜಾಬ್ಸ್ರಂತಹ ದೊಡ್ಡ ಇಂಜಿನಿಯರ್ ಆಗಬೇಕು ಅಂತೆಲ್ಲ ಕನಸು ಹೊತ್ತು ಬಂದವರಿಗೆ ಅದ್ಯಾಕೆ ಅಷ್ಟು ಬೇಗ ಸುದೀಪ್, ರಕ್ಷಿತ್ ಶೆಟ್ಟಿ, ವಿಜಯ್ಪ್ರಕಾಶ, ಅನಿಲ್ ಕುಂಬ್ಳೆ, ಚೇತನ್ ಭಗತ್, ರಮೇಶ ಅರವಿಂದ್, ರಘುರಾಮ್ರಾಜನ್, ಅರವಿಂದ ಕೇಜ್ರಿವಾಲಾ ಮಾದರಿಯಾಗಿ ಬಿಡುತ್ತಾರೋ ಗೊತ್ತಿಲ್ಲ. ಕೆಲವರು ಗೌರ್ಗೊàಪಾಲ್ದಾಸ್ ಗುರೂಜಿಯ ಮಾರ್ಗ ಹಿಡಿಯುವ ಆಲೋಚನೆ ಮಾಡುತ್ತಾರೆ.
ನಾನೊಬ್ಬ ಇಂಜಿನಿಯರ್ ಆಗುತ್ತೇನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರು ಸಿಗುವುದು ಬಹಳ ಅಪರೂಪ. ಒಂದು ಸೆಮಿಸ್ಟರ್ನಲ್ಲಿ 20-25 ಟೆಸ್ಟ್ಗಳು, 10-15 ಕ್ವಿಜ್, ಪ್ರಸೆಂಟೇಶನ್, ಪ್ರಾಜೆಕ್ಟ್ ವರ್ಕ್, ಬೇರೊಂದು ಭಾಷೆ ಅನ್ನಿಸುವಂಥ ವೈವಾಗಳು, ಮಾರ್ಕ್ ಸಮಸ್ಯೆ, ಅಟೆಂಡೆನ್ಸ್ ಪ್ರಾಬ್ಲಿಮ್, 2-3 ಬ್ಯಾಕ್ಲಾಗ್ಗಳು, ಯಾವುದೇ ಇಂಜಿನಿಯರಿಂಗ್ ವಿದ್ಯಾರ್ಥಿಗಾದರೂ ನಿದ್ದೆ ಹಾಳು ಮಾಡಿ, ಯಾಕಾದರು ಬೇಕಿತಪ್ಪ ಈ ಇಂಜಿನಿಯರಿಂಗ್ ಅನ್ನುವಂತೆ ಮಾಡುತ್ತದೆ.
ಪುಟ್ಟ ಪುಟ್ಟ ಹಳ್ಳಿಗಳಿಂದ ದೊಡ್ಡ ಕನಸುಗಳನ್ನು ಹೊತ್ತು ಮಹಾನಗರಿಗಳಿಗೆ ಇಂಜಿನಿಯರಿಂಗ್ ಓದಲು ಬರೋ ನಾವುಗಳು, ದಿನನಿತ್ಯ ನನ್ನ ಮಗ/ಮಗಳು ಒಂದು ದಿನ ದೊಡ್ಡ ಇಂಜಿನಿಯರ್ ಆಗುತ್ತಾನೆ/ಳೆ ಅಂತ ಆಸೆಯಿಂದ ಕಷ್ಟಪಟ್ಟು ದುಡಿಯುತ್ತಿರೋ ಅಪ್ಪ-ಅಮ್ಮನಿಗೆ ನಿರಾಸೆ ಮಾಡಬೇಕು, ನೋವು ಕೊಡಬೇಕು ಎಂಬ ಯಾವ ಉದ್ದೇಶವು ನಮ್ಮದಾಗಿರುವುದಿಲ್ಲ. ಆದರೆ, ನಮ್ಮ ಆಸೆ-ಆಕಾಂಕ್ಷೆಗಳು ನಮ್ಮನ್ನು ಇಂಜಿನಿಯರಿಂಗ್ನಿಂದ ದೂರಮಾಡಿ ಮತ್ತೂಂದೆಡೆ ಆರ್ಕಷಿಸುತ್ತವೆ. ಹಾಡುಗಾರನಿಗೆ ತಾನು ತನ್ನ ಪ್ರತಿಭೆಯಿಂದ ಜನರನ್ನು ಗೆಲ್ಲಬಹುದು, ಅದು ನನ್ನ ಜೀವನವಾಗಬಹುದು ಎಂಬುದು ತಿಳಿಯುತ್ತದೆ. ಒಬ್ಬ ಡಾನ್ಸರ್, ಫೋಟೊಗ್ರಾಫರ್, ಕಲಾವಿದನಿಗೂ ಹೀಗೆ ಅನ್ನಿಸುವುದಕ್ಕೆ ಆರಂಭವಾಗುತ್ತದೆ. ಆದರೆ, ಇವೆೆಲ್ಲ ಇಂಜಿನಿಯರಿಂಗ್ ಸೇರಿದ ಬಳಿಕವೇ ಯಾಕೆ ಆರಂಭವಾಯಿತು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟಸಾಧ್ಯ.
ಇಂಜಿನಿಯರಿಂಗ್ ನಮಗೇನೂ ಕಲಿಸದಿದ್ದರೂ ನಮ್ಮೊಳಗಿನ ಒಬ್ಬ ಕಲಾವಿದ, ಬರಹಗಾರ, ಕ್ರೀಡಾಪಟು, ಸಂಗೀತಗಾರನನ್ನು ಪರಿಚಯಿಸಿ ಕೊಡುತ್ತದೆ. ಇದೇ ಕಾರಣಕ್ಕೆ ಅದೆಷ್ಟೋ ಮಂದಿ ಇಂಜಿನಿಯರಿಂಗ್ ಸೇರಿಕೊಳ್ಳುತ್ತಾರೆ ಎಂಬುವುದನ್ನು ಕೇಳುವುದಕ್ಕೆ ಆಶ್ಚರ್ಯವೆನ್ನಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿಯೂ ನಮ್ಮದೇ ಹವಾ. ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿನ ಸಹಸ್ರಾರು ಟ್ರೋಲ್ ಪೇಜ್ಗಳಿವೆ, ಅದರಲ್ಲಿ ಎರಡರಲ್ಲಿ ಒಂದು ಪೇಜ್ ಅಡ್ಮಿನ್ ಇಂಜಿನಿಯರ್ ಆಗಿರುತ್ತಾನೆ ಹಾಗೂ ಆ ಪೇಜ್ಗಳ ಮೂರರಲ್ಲಿ ಒಂದು ಪೋಸ್ಟ್ ಇಂಜಿನಿಯರ್ನನ್ನು ಟ್ರೋಲ್ ಮಾಡುವುದೇ ಆಗಿರುತ್ತದೆ. ಆದರೂ ಯಾವುದೇ ಬೇಸರ, ಮುಜುಗರವಿಲ್ಲದೆ ಆ ಎಲ್ಲ ಪೋಸ್ಟ್ಗಳನ್ನು ಶೇರ್, ಲೈಕ್ ಮಾಡಿ ಆನಂದಿಸುವುದರಲ್ಲಿ ಸಿಗುವ ಖುಷಿ ಮತ್ತೆಲ್ಲೂ ಸಿಗದು.
ಬೆಂಗಳೂರಿನ ಯಾವುದೇ ದಿಕ್ಕಿನಲ್ಲಿ ನಿಂತು ಕಲ್ಲು ಎಸೆದರೂ ಅದು ಇಂಜಿನಿಯರರ ತಲೆಗೆ ಬೀಳುತ್ತದೆ ಎಂಬ ಮಾತು ಸುಳ್ಳಲ್ಲ. ನಮ್ಮ ತಲೆಗೂ ಒಂದು ದಿನ ಕಲ್ಲು ಬೀಳಲಿ ಎಂಬಂತೆ ಮತ್ತಷ್ಟು ಇಂಜಿನಿಯರ್ಗಳು ತಯಾರಾಗುತ್ತಿರುವ ಮಾತು ಕೂಡ ನಿಜ. ಇಂಜಿನಿಯರ್ಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಹೆಚ್ಚು ಹೆಚ್ಚು ಮಂದಿ ಕಲಾವಿದ, ನೃತ್ಯಗಾರ ಇತ್ಯಾದಿಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾದರೆ, ಇಂಜಿನಿಯರಿಂಗ್ ಗತಿ ಏನು ಎಂದು ಹೇಳುವುದು ಕಷ್ಟ .
ಶಶಾಂಕ ಹೆಗಡೆ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಮಂಗಳೂರು