ಸ್ನೇಹಿತರೊಂದಿಗೆ ಪಾನಿಪುರಿ ಕಹಾನಿ
Team Udayavani, Mar 6, 2020, 3:31 AM IST
“ನಾಳೆ ಕ್ಲಾಸ್ ಟೆಸ್ಟ್ ನಡೆಸುತ್ತೇನೆ’ ಎಂದ ಇತಿಹಾಸ ಅಧ್ಯಾಪಕರ ಮಾತಿಗೆ ಹೆದರಿ ಮಾರನೇ ದಿನ ಚೂರುಪಾರು ಪುಸ್ತಕ ನೋಡಿಕೊಂಡು ಬಂದಿದ್ದೆ. ಆದರೆ, ಹೇಳಿದ ಮಾತಿನಂತೆ ಅವರು ಅಂದು ಪರೀಕ್ಷೆಯೇನೂ ನಡೆಸಲಿಲ್ಲ. ಸರಿಯಾಗಿ ಓದಿಲ್ಲದ ಕಾರಣ ಪರೀಕ್ಷೆ ನಡೆಯದೇ ಇದ್ದುದು ಒಂದು ರೀತಿಯಲ್ಲಿ ಖುಷಿಯೇ ಆಯಿತು.
ಅಂದು ಮಧ್ಯಾಹ್ನ ಹೀಗೆ ಸುಮ್ಮನೆ ಗೆಳತಿಯರೊಂದಿಗೆ ಪುಸ್ತಕ ಹಿಡಿದು ಗ್ರಂಥಾಲಯಕ್ಕೆ ಹೊರಟಿದ್ದಾಗ ಗೆಳತಿಯೊಬ್ಬಳು ಕೈಯಲ್ಲಿದ್ದ ಪುಸ್ತಕವನ್ನು ಗಮನಿಸಿ ಅದೇನೆಂದು ಕೇಳಿದಳು. “ಇದು ಫೆರಿಸ್ತಾ ಬರೆದ ಕೃತಿ’ ಎಂದು ನಾನು ಉತ್ತರಿಸಿದೆ. ಆ ಕೃತಿಯನ್ನು ಜ್ಞಾಪಿಸಿಕೊಂಡ ಆಕೆ “ಇದನ್ನು 1510ರಲ್ಲಿ ಬರೆದಿದ್ದು ತಾನೆ’ ಎಂದಾಗ “ಇಲ್ಲ 1610ರಲ್ಲಿ ರಚಿಸಿದ ಕೃತಿ ಇದು’ ಎಂದು ಉತ್ತರಿಸಿದೆ. ಫೆರಿಸ್ತಾ ಒಬ್ಬ ಇತಿಹಾಸಕಾರ. ಅವನ ಪೂರ್ತಿ ಹೆಸರು ಮೊಹಮ್ಮದ್ ಖಾಸಿಮ್ ಹಿಂದೂ ಷಾ. ಇರಾನ್ ಮೂಲದ ಈತ ಪರ್ಷಿಯನ್ ಇತಿಹಾಸಕಾರ. ಈತನ ತಂದೆ ಗೊಲಾಮ್ ಅಲಿ ಹಿಂದೂ ಷಾ. ಇರಾನ್ ರಾಜನು ಗೊಲಾಮ್ ಆಲಿಯನ್ನು ಕರೆದು, ಭಾರತಕ್ಕೆ ತೆರಳಿ, ಅಲ್ಲಿ ರಾಜಕುಮಾರ ಮಿರಾನ್ ಹುಸೇನ್ ನಿಝಮ್ ಶಾಗೆ ಪರ್ಷಿಯನ್ ಭಾಷೆ ಕಲಿಸುವಂತೆ ಸೂಚಿಸುತ್ತಾನೆ. ಹಾಗಾಗಿ ಚಿಕ್ಕಂದಿನಲ್ಲಿಯೇ ಫೆರಿಸ್ತಾ ಭಾರತಕ್ಕೆ ಬರಬೇಕಾಯಿತು. ಆದರೆ, ಅವನ ವಿದ್ಯಾಭ್ಯಾಸವೂ ರಾಜನ ಜೊತೆಗೇ ನಡೆಯಿತು. ಬಳಿಕ ಆತ ಬಿಜಾಪುರಕ್ಕೆ ಬಂದು ಇಬ್ರಾಹಿಂ ಆದಿಲ್ ರಾಜನ ಜೊತೆಗೆ ಕೆಲಸ ಮಾಡಿದ ಉಲ್ಲೇಖವೂ ಇದೆ. ಅದೇನೇ ಇರಲಿ. ನನ್ನ ಮಾತನ್ನು ಒಪ್ಪಿಕೊಳ್ಳದ ಅವಳೊಡನೆ ದೀರ್ಘ ಮಾತುಕತೆ ನಡೆಯಿತು.
ಕೊನೆಗೆ ವಾದಕ್ಕಿಳಿದ ಆಕೆ “40 ರೂಪಾಯಿಯ ಡೈರಿಮಿಲ್ಕ… ನೀಡುವುದಾಗಿ ಬೆಟ್ ಕಟ್ಟಿ ಹೇಳುತ್ತೇನೆ ಅದು 1510ರಲ್ಲಿಯೇ ರಚಿಸಿದ್ದು’ ಎಂದು ಕಡ್ಡಿ ತುಂಡರಿಸಿದಂತೆ ಹೇಳಿಬಿಟ್ಟಳು. ಆಕೆಯ ದೃಢತೆಯನ್ನು ಕಂಡು “ನಾನೆಲ್ಲೋ ತಪ್ಪು ಓದಿರಬೇಕು’ ಎಂದು ಅಳುಕಾಯಿತು. ಕಡಿಮೆ ಮೊತ್ತಕ್ಕೆ ಬೆಟ್ ಕಟ್ಟೋಣ ಎಂದು, “10ರ ಪಾನಿಪುರಿ ಬೆಟ್ ಕಟ್ಟೋಣ ಡೈರಿಮಿಲ್ಕ… ಬೇಡ’ ಎಂದುಬಿಟ್ಟೆ. ಆ ಮಾತಿಗೆ ಅವಳೂ ಒಪ್ಪಿಕೊಂಡು ಬೆಟ್ ಕಟ್ಟಿಯೇ ಬಿಟ್ಟೆವು.
ಅಂದು ಸಂಜೆಯ ಮನೆಗೆ ಹೊರಡುತ್ತಿದ್ದಂತೆ ಸಪ್ಪೆ ಮೋರೆ ಹಾಕಿಕೊಂಡು ಬಂದ ಗೆಳತಿ “ನೀನು ಹೇಳಿದ್ದೇ ಸರಿ ಅದು 1610ರಲ್ಲಿ ಬರೆದ ಕೃತಿ’ ಎಂದಳು. “ಛೇ 40ರ ಡೈರಿಮಿಲ್ಕ… ಕೈಚೆಲ್ಲಿಹೋಯಿತಲ್ಲ’ ಎಂದನಿಸಿತು. ಆದರೆ ಪಾನಿಪುರಿಯನ್ನು ನೆನೆದೊಡನೆ ಬಾಯಲ್ಲಿ ನೀರೂರುತ್ತಿತ್ತು. ದಾರಿಯಲ್ಲಿ ಹೋಗುತ್ತಾ ತನ್ನ ಮಾತನ್ನು ಉಳಿಸಿಕೊಂಡವಳೇ ಪಾನಿಪುರಿ ತೆಗೆಸಿಕೊಟ್ಟಳು.
ದೀಕ್ಷಾ
ತೃತೀಯ ಬಿಎ, ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ