ಹೊಸ ಸಂವತ್ಸರ
Team Udayavani, Mar 31, 2017, 3:45 AM IST
ಪ್ರತಿದಿನ ಬೆಳಗ್ಗೆದ್ದು ಕ್ಯಾಲೆಂಡರ್ ನೋಡುವ ಅಭ್ಯಾಸ ನನ್ನದು.ಇವತ್ತು ಕ್ಯಾಲೆಂಡರ್ ನೋಡಿದವನಿಗೆ ಅಚ್ಚರಿ ಕಾದಿತ್ತು. ಆಗಲೇ ನಾವು ಯುಗಾದಿಯನ್ನು ದಾಟಿ ಹೊಸ ಸಂವತ್ಸರದಲ್ಲಿದ್ದೆವು. ಇದರಲ್ಲೇನು ವಿಶೇಷ ? ವಿಶೇಷ ಏನಿಲ್ಲ, ಆದ್ರೆ ಅದಾಗಲೇ ಹೊಸ ವರ್ಷ ಹೊಸ್ತಿಲಲ್ಲಿ ಬಂದು ಕುಳಿತಿದೆ. ಭಾರತೀಯ ಸಂಸ್ಕೃತಿಯಲ್ಲಿ ಇದು ನಿಜವಾದ ಹ್ಯಾಪಿ ನ್ಯೂಇಯರ್ !
ಇವತ್ತಿಂದ ನಾನು ಬದಲಾಗಬೇಕು, ದಿನಾ 5 ಗಂಟೆಗೆ ಎದ್ದು ಜಾಗಿಂಗ್ಗೆ ಹೋಗ್ಬೇಕು, ಫೇಸ್ಬುಕ್-ವಾಟ್ಸಾಪಿನಲ್ಲಿ ಹೆಚ್ಚು ಕಾಲ ಕಳೀಬಾರ್ಧು, ಚಹಾ ಕುಡಿಯೋದು ಕಡಿಮೆ ಮಾಡ್ಬೇಕು, ಫ್ರೆಂಡ್ಸ್ ಜೊತೆ ಸುತ್ತಾಟ ಕಮ್ಮಿ ಮಾಡ್ಬೇಕು ಇತ್ಯಾದಿ ಇತ್ಯಾದಿ ಡೈಲಾಗ್ಗಳಿಗೆ ಮತ್ತೂಮ್ಮೆ ಜೀವ ಕಳೆ ಬಂದಿದೆ. ಕಳೆದ ಸಂವತ್ಸರದಲ್ಲಿ ನನಗೆ ಇಂಥ ಡೈಲಾಗ್ಗಳ ಹಾವಳಿ ಸ್ವಲ್ಪ ಜಾಸ್ತಿನೇ ಇತ್ತು. ಆದ್ರೆ ಹಿಂದಿರುಗಿ ನೋಡಿದ್ರೆ ಒಂದ್ ವರ್ಷ ಕಳೆಯಿತೇ ಹೊರತು ಹಳಸಲು ಡೈಲಾಗ್ಗಳು ನಾಲ್ಕೇ ದಿನದಲ್ಲಿ ತುಕ್ಕು ಹಿಡಿದು ಕರಗಿ ಹೋಗಿದ್ದವು. ಅಯ್ಯೊ! ಏನೇನೆಲ್ಲಾ ವಾಗ್ಧಾನ ತಗೊಂಡಿದ್ದಿಯಲ್ಲೋ? ಒಂದೂ ನೆರವೇರಿಸಿಲ್ಲವಲ್ಲೊ ಅಂತ ಯುಗಾದಿ ಮತ್ತೆ ಮತ್ತೆ ನೆನಪಿಸುತ್ತಿದೆ.
ಆವತ್ತು ತೆಗೆದುಕೊಂಡಿರೋ ನಿರ್ಣಯಗಳು ಒಂದೋ ಎರಡೋ? ಪಟ್ಟಿ ಮಾಡುತ್ತಾ ಹೋದ್ರೆ ಒಂದ್ ಲೇಖನ ಭರ್ತಿ ಅದೇ ತುಂಬಿಕೊಳ್ಳಬಹುದು. ಆವತ್ತು ಎಲ್ಲರ ಬಾಯಲ್ಲೂ ಬರುವ ಕಾಮನ್ಡೈಲಾಗ್ಅಂದ್ರೆ “ಇದೇ ಲಾಸ್ಟ್!’ ಕುಡಿತದ ಚಟ ಇರುವವರಂತೂ “ಇದೇ ಲಾಸ್ಟ್’ ಎಂದದ್ದಕ್ಕೆ ಲೆಕ್ಕವೇ ಇಲ್ಲ. ಪಾಪ! ನಶೆಯ ಅಮಲಲ್ಲಿ ಒದರಿದೋನಿಗೆ ಮರುದಿನ ಅಮಲು ಇಳಿದಾಗ ತಾನು ಇಂಥಾದ್ದೊಂದು ನಿರ್ಣಯಗೊಂಡಿರೋ ಬಗ್ಗೆ ಸಾಸಿವೆ ಕಾಳಿನಷ್ಟೂ ನೆನಪಿರುವುದಿಲ್ಲ ! ಮತ್ತದೇ ಹಳೇ ರಾಗ ಹಳೇ ಹಾಡು ಅನ್ನೋ ಹಾಗೆ ಮತ್ತೆ ಮದ್ಯದಂಗಡಿಯತ್ತ ಪಯಣ.
ಮೊನ್ನೆ ಯುಗಾದಿಯ ದಿನ ವಾಟ್ಸಾಪ್ ಓಪನ್ ಮಾಡಿದವನಿಗೆ ಸಾಲು ಸಾಲು ಮೆಸೇಜುಗಳ ಸುರಿಮಳೆ ಸುರಿಯತೊಡಗಿತು. ಎಲ್ಲದರಲ್ಲೂ ಶುಭಾಶಯಗಳದ್ದೇ ಕಾರುಬಾರು, ಒಂದೇ ರೀತಿಯ ಮೆಸೇಜುಗಳು, ಇಮೇಜಸ್ಗಳು ಮೊಬೈಲನ್ನು ತುಂಬತೊಡಗಿದವು.ಆಗಲೇ ಒಂದು ನಿರ್ಣಯ ಛಂಗನೇ ಮನಸ್ಸನ್ನು ಸವರಿ ಹೋಗಿತ್ತು.ಇನ್ನು ಮುಂದೆ ವಾಟ್ಸಾಪ್ ಬಳಕೆ ಕಡಿಮೆ ಮಾಡ್ಬೇಕು ಅಂತ ಶಪಥ ತಗೊಂಡಿದ್ದೆ. ನನ್ನಾಣೆ, ಇವತ್ತಿನವರೆಗೂ ವಾಟ್ಸಾಪ್ ಬಳಕೆ ಜಾಸ್ತಿಯಾಯಿತೇ ಹೊರತು ಜಪ್ಪಯ್ಯ ಅಂದ್ರೂ ಕಮ್ಮಿಯಾಗಿಲ್ಲ. ಫೇಸ್ಬುಕ್ಕಿನದ್ದೂ ಇದೇ ಹಣೆಬರಹ, ಬಳಕೆ ಕಡಿಮೆ ಮಾಡ್ಬೇಕು ಅಂದುಕೊಂಡಿದ್ದು ಒಂದು ದಿನ ಮಾತ್ರ. ಮರುದಿನದಿಂದ ಮತ್ತದೇ ಹಳೇ ಚಾಳೀ ಮುಂದುವರಿದಿತ್ತು. ಇನ್ನು ಬೆಳಗ್ಗೆದ್ದು ವ್ಯಾಯಾಮ ಮಾಡೋ ಹುಚ್ಚು ಒಂದೇ ವಾರದಲ್ಲಿ ಇಳಿದು ಹೋಗಿತ್ತು. ಹಾಗೆ ಹಣ ಉಳಿತಾಯ ಮಾಡುವ ಯೋಜನೆ, ಪ್ರತಿದಿನ ಓದುವ ಹವ್ಯಾಸ, ವಾರಕ್ಕೊಮ್ಮೆ ದೇವಸ್ಥಾನಗಳಿಗೆ ಭೇಟಿಕೊಡುವುದು, ದೂರದರ್ಶನ ವೀಕ್ಷಣೆ ಕಮ್ಮಿ ಮಾಡುವುದು ಅಬ್ಬಬ್ಟಾ ! ಇದನ್ನೆಲ್ಲ ನೆನೆಸ್ಕೊಂಡ್ರೆ ನಗು ಬರುತ್ತೆ! ನಾನೇನಾದ್ರೂ ಇಂತಹ ನಿರ್ಣಯಗಳ ಬೆನ್ನು ಹತ್ತಿದ್ದರೆ “ಅರ್ಧ ಮೋದಿ’ಯೇ ಆಗಿ ಬಿಡುತ್ತಿದ್ದೆನೇನೋ!
ಹೌದು, ಮನುಷ್ಯ ಅಂದ್ಮೇಲೆ ಒಂದು ಗುರಿ ಇರ್ಬೇಕು, ಆ ಗುರಿ ಸಾಧಿಸೋ ಛಲ ಇರ್ಬೇಕು. ಹಾಗೆಂದು ಸಿಕ್ಕ ಸಿಕ್ಕ ನಿರ್ಣಯಗಳನ್ನು ನಮ್ಮ ಮೇಲೆ ಹೇರಿಕೊಳ್ಳುವುದು ಮೂರ್ಖತನವೇ ಸರಿ. ವರ್ಷದಿಂದ ಜಡ್ಡುಗಟ್ಟಿದ ಮೈಯನ್ನು ಒಂದೇ ದಿನ ಜಿಮ್ಮಿನಲ್ಲಿ ವಕೌಟ್ ಮಾಡಿ ಕರಗಿಸ್ತೀನಿ ಅಂದ್ರೆ ಸಾಧ್ಯಾನಾ? ದಿನಕ್ಕೊಂದು ಪೇಜ್ ದಿನಪತ್ರಿಕೆ ಓದುವ ವ್ಯವಧಾನ ಇಲ್ಲದವನು ಒಂದಿಡೀ ಪುಸ್ತಕವನ್ನು ಒಂದೇ ದಿನದಲ್ಲಿ ಓದೋದು ಸಾಧ್ಯಾನಾ? ಓದಿದ್ದರೂ ಅದು ತಲೆಗೆ ಹತ್ತೋಕೆ ಸಾಧ್ಯಾನಾ? ಊಹೂಂ ಖಂಡಿತ ಸಾಧ್ಯವಿಲ್ಲ. ಕೆಲವು ಸಮಯದ ಹಿಂದೆ ಪ್ರಧಾನಿ 500 ಹಾಗೂ ಸಾವಿರದ ನೋಟುಗಳನ್ನು ನಿಷೇಧಿಸಿದ ನಂತರ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತು ನೋಟುಗಳ ಚಲಾವಣೆ ಮಾಡೋಕೆ ಬಂದ ಜನ “ಅಯ್ಯಪ್ಪಾ ಯಾರಿಗೆ ಬೇಕು ಈ ಬಿಸಿಲಿನಲ್ಲಿ ನಿಂತು ಕಾಯೋ ಕರ್ಮ’ ಅಂತಿದ್ರು. ಒಂದು ಬದಲಾವಣೆಗೆ ಜನ ಒಗ್ಗಿಕೊಳ್ಳೋಕೆ ಎಷ್ಟು ಅವಸ್ಥೆ ಪಡ್ತಾರೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್!
ಇದಕ್ಕೆಲ್ಲ ಕಾರಣ ಸಿಂಪಲ್, ಅದೇ ಮನಸ್ಸೆಂಬ ಮರ್ಕಟನ ಮಹಿಮೆ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಮನಸ್ಸು ನೀನು ನಾಳೆಯಿಂದ ಚೆೇಂಜ್ ಆಗು ಅಂದ್ರೆ ಅದು ಒಪ್ಪುತ್ತಾ? ಬೆಳಗ್ಗೆ ಐದು ಗಂಟೆಗೆ ಎದ್ದು ಜಾಗಿಂಗ್ಗೆ ಹೋಗು ಅಂದ್ರೆ ಅದು ಕೇಳುತ್ತಾ? ಊಹುಂ ಬೇಕಿದ್ರೆ ಇನ್ನೊಂದ್ ಅರ್ಧಗಂಟೆ ಹೆಚ್ಚು ನಿದ್ದೆ ಕೇಳುತ್ತೆ ಹೊರತು ಬೇಗ ಏಳ್ಳೋಕೆ ಸುತಾರಾಂ ಒಪ್ಪೋದಿಲ್ಲ. ಇನ್ನು ಮೊಬೈಲನ್ನು ಗಂಟೆಗಟ್ಟಲೆ ಕುಟ್ಟುತ್ತಿದ್ದವರಿಗೆ ಅದರ ಮೇಲೆ ನಿಯಂತ್ರಣ ಮಾಡೋಕು ಈ ಮನಸ್ಸೆಂಬ ಹಠಮಾರಿ ಬಿಡನು!
ಬದಲಾವಣೆ ಅಂದ್ರೇನು?
ಹೊಸ ವರ್ಷ ಬಂತು, ನಾನು ಅದನ್ನ ಮಾಡ್ತೀನಿ, ಚೇಂಜ್ ಆಗ್ತಿàನಿ ಅಂತ ಸಿಕ್ಕಾಪಟ್ಟೆ ಬದಲಾವಣೆಗಳನ್ನು ನಮ್ಮ ಮೇಲೆ ಹೇರಿಕೊಳ್ಳೋದು ದೊಡ್ಡ ತಪ್ಪು. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಪರಿಣಾಮ ಬೀರುವುದು ಖಂಡಿತ. ಉದಾಹರಣೆಗೆ ಒಬ್ಬ ಕಂಠಮಟ್ಟ ಕುಡಿಯೋ ವ್ಯಕ್ತಿ ಏಕಾಏಕಿ ಕುಡಿಯೋದು ಬಿಟ್ರೆ ಸತ್ತೇ ಹೋದಾನು. ಅದಕ್ಕೆ ಬದಲಾಗಿ ತೆಗೆದುಕೊಳ್ಳುವ ಮದ್ಯದ ಪ್ರಮಾಣವನ್ನು ನಿಧಾನವಾಗಿ ಕಡಿಮೆಗೊಳಿಸಿ ಕೊನೆಗೆ ಶೂನ್ಯಕ್ಕೆ ತಂದು ನಿಲ್ಲಿಸುವುದೇ ಬದಲಾವಣೆಯ ಜಾಣತನ.
ಆರೋಗ್ಯಕರ ಜೀವನ ಶೈಲಿಗೆ ವ್ಯಾಯಾಮ ಅತೀ ಅಗತ್ಯ. ಹಾಗಂತ ದಿನಕ್ಕೆ ನಾಲ್ಕು ಹೆಜ್ಜೆ ಸವೆಸದವನು ಏಕಾಏಕಿ ನಾಲ್ಕು ಗಂಟೆಗೆ ಎದ್ದು ಜಾಗಿಂಗ್ ಮಾಡೋದು ಖಂಡಿತಾ ಸರಿಯಲ್ಲ. ಅಂತಹ ಕಟ್ಟುನಿಟ್ಟಿನ ದೇಹದಂಡನೆ ನಿಮ್ಮ ದೇಹಕ್ಕೆ ಒಗ್ಗಿಕೊಳ್ಳಲು ಸಾಧ್ಯವೇ ಇಲ್ಲ. ನಿಧಾನವಾಗಿ ಆರಂಭಿಸಿ 15 ನಿಮಿಷ, 30 ನಿಮಿಷ, 45 ನಿಮಿಷ ಹೀಗೆ ದಿನದಿಂದ ದಿನಕ್ಕೆ ಅಥವಾ ವಾರದಿಂದ ವಾರಕ್ಕೆ ಸಮಯವನ್ನು ಹೆಚ್ಚಿಸಿಕೊಳ್ಳಿ. ವ್ಯಾಯಾಮ ದೇಹವನ್ನು ಸುಸ್ಥಿತಿಯಲ್ಲಿಡಲೋ ಅಥವಾ ಒಲಿಂಪಿಕ್ಸ್ಗೆ ತೆರಳಿ ಚಿನ್ನವನ್ನು ಗೆದ್ದು ತರಲೋ ಎಂಬ ಒಂದು ಸಣ್ಣ ಅಂಶ ನಮ್ಮ ತಲೆಯಲ್ಲಿರಬೇಕು.
ಇನ್ನು ಅಂತರ್ಜಾಲವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರೆ ನಾನು ಗೆದ್ದಂತೆ ಸರಿ ಎಂಬ ತಲೆಬುಡವಿಲ್ಲದ ಆಲೋಚನೆ ಕೈಬಿಡಬೇಕಾಗುತ್ತದೆ. ಅಂತರ್ಜಾಲದಿಂದ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಒಳ್ಳೆಯದರ ಉಪಯೋಗ ಪಡೆದುಕೊಳ್ಳಲು ಅಂತರ್ಜಾಲದ ಮೊರೆ ಹೋಗಿ. ಹೊಸ ವಿಷಯಗಳ ಹುಡುಕಾಟ, ಓದುವುದು, ಪತ್ರಿಕೆಗಳ ಮೇಲೆ ಕಣ್ಣಾಡಿಸಲು ಅಂತರ್ಜಾಲದ ಉಪಯೋಗ ಪಡೆದುಕೊಳ್ಳಿ. ಬೇಸರವೆನಿಸಿದರೆ ಫೇಸ್ಬುಕ್, ವಾಟ್ಸಾಪ್ಗ್ಳಲ್ಲಿ ಗೆಳೆಯರೊಂದಿಗೆ ಚಾಟ್ ಮಾಡಿ. ಹೊಸ ವಿಷಯಗಳನ್ನು ಶೇರ್ ಮಾಡಿಕೊಳ್ಳಿ , ಆಟ ಆಡಿ ಎಂಜಾಯ್ ಮಾಡಿಕೊಳ್ಳಿ. ಅಂತರ್ಜಾಲದ ವಿಪರೀತ ಬಳಕೆ ಮಾಡುತ್ತಿದ್ದರೆ, ಅದು ನಿಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದರೆ ಗಮನ ಹರಿಸಿ ಕಡಿಮೆಗೊಳಿಸಿ. ಅದು ಬಿಟ್ಟು ಅಂತರ್ಜಾಲದ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತೇನೆ ಅಂದರೆ ಹುಚ್ಚು ಹಿಡಿಯೋದು ಗ್ಯಾರಂಟಿ !
ಬದಲಾಣೆಗೊಂದು ಪ್ರತ್ಯೇಕ ದಿನ ಬೇಕೆ?
ಕೆಲವರದೊಂದು ವಿಚಿತ್ರ ಆಚರಣೆ. ಹೊಸವರ್ಷಕ್ಕೊ, ದೀಪಾವಳಿಗೋ ಅಥವಾ ಇನ್ನಿತರ ಶುಭಸಮಾರಂಭಕ್ಕೋ ಬದಲಾವಣೆಯ ಅಮಲು ತಲೆಗೆ ಏರಿ ಬಿಡುತ್ತೆ. ನಿಜಕ್ಕೂ ಬದಲಾವಣೆಗೆ ಇಂಥದ್ದೇ ಒಂದು ದಿನ ಅಂತ ನಿಗದಿ ಮಾಡುವ ಜರೂರತ್ತು ಏನಿದೆ? ಒಂದು ಕೆಟ್ಟ ಹವ್ಯಾಸ ನಿಮ್ಮ ಜೀವನವನ್ನು ಋಣಾತ್ಮಕ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದರೆ ಕೂಡಲೇ ಅಂತಹ ಹವ್ಯಾಸವನ್ನು ತೊರೆಯಲು ನಿರ್ಧರಿಸಬೇಕು.
ಹೊಸ ಸಂವತ್ಸರ ಎಲ್ಲರಿಗೂ ಹೊಸತು ತರಲಿ.
– ಅಕ್ಷಿತ್ ದೇವಾಡಿಗ ಎಲ್ಲೂರು