ಇನ್ನೇನು ಕಾಲೇಜು ಶುರುವಾಗಿಯೇ ಬಿಟ್ಟಿತು!
Team Udayavani, Jun 23, 2017, 3:45 AM IST
ಕಾಲೇಜಿನ ಮೆಟ್ಟಿಲನ್ನು ಪ್ರಥಮ ಬಾರಿಗೆ ಏರುತ್ತಿರುವ ಹಲವರ ಮನಸ್ಸು ಒಡೆದ ಅಣೆಕಟ್ಟಿನಂತಿರುತ್ತದೆ. ಭಾವನೆಗಳ ಪ್ರವಾಹವೇ ಅಲ್ಲಿ ಹರಿಯುತ್ತಿರುತ್ತದೆ. ಇದುವರೆಗೂ ಮನೆಯಲ್ಲೂ ಶಾಲೆಯಲ್ಲೂ ಸಾಕಷ್ಟು ಸ್ವಾತಂತ್ರ್ಯ ಸಿಕ್ಕಿಲ್ಲ. ಯಾವಾಗಲೂ ಓದು, ಕಲಿ, ಹೋಮ್ವರ್ಕ್ ಮಾಡು, ಒಳ್ಳೆಯ ಸ್ಕೋರ್ ಮಾಡು ಇಂತಹ ಮಾತುಗಳನ್ನೇ ಕೇಳುತ್ತಿದ್ದೆವು.
ಈಗ ಹೇಗೂ ಫಲಿತಾಂಶ ಬಂದಿದೆ. ಕಾಲೇಜು ಮೆಟ್ಟಿಲೇರುವ ಸಮಯ ಬಂದಿದೆ. ಏನೇ ಬರಲಿ ಮಜಾ ಮಾಡಿಯೇ ತೀರುವೆ ಎಂಬ ಆಲೋಚನೆಗಳು ಮನಸ್ಸಲ್ಲಿ ತುಂಬಿರುತ್ತವೆ. ಮೊಬೈಲ್ ಕೊಟ್ಟರಷ್ಟೇ ನಾನು ಕಾಲೇಜಿಗೆ ಹೋಗುತ್ತೇನೆ ಎಂದು ಹೆತ್ತವರಿಗೆ ಧಮಕಿ ಹಾಕಿ ತಮ್ಮಿಷ್ಟದ ಕಂಪೆನಿಯ ಮೊಬೈಲ್ ಗಿಟ್ಟಿಸಲು ಪಣ ತೊಟ್ಟವರು, ಬೈಕ್, ಸ್ಕೂಟರ್ ಹೀಗೆ ವಾಹನಬೇಕೆಂದು ಹಠಕ್ಕೆ ಬಿದ್ದವರು, ಇನ್ನೇನೋ ಆಸೆಗಳನ್ನು ಸಾಕಾರಗೊಳಿಸಲು ಬಯಸಿದವರಿಗೆ ಹೆತ್ತವರು ತಮ್ಮ ಬೇಡಿಕೆ ಈಡೇರಿಸುತ್ತಾರೆಂಬ ಖಚಿತ ವಿಶ್ವಾಸವಿರುತ್ತದೆ. ಮಕ್ಕಳೇ ಸರ್ವಸ್ವವೆನ್ನುವ ಹೆತ್ತವರು ಸಾಲ ಮಾಡಿಯಾದರೂ ಮಕ್ಕಳು ಬಯಸಿದ್ದನ್ನು ಕೊಡಿಸುತ್ತಾರೆ.
ಬಯಸಿದ್ದೆಲ್ಲವನ್ನೂ ಪಡೆದುಕೊಂಡು ಕಾಲೇಜಿಗೆ ಹೋಗಲು ತುದಿಗಾಲಲ್ಲಿ ನಿಂತವರು ಒಂದು ಕ್ಷಣ ಯೋಚಿಸಿ. ಕಾಲೇಜಿಗೆ ಹೋಗುತ್ತಿರುವುದರ ಉದ್ದೇಶವೇನು ಎಂದು ಚಿಂತಿಸಿ. ಶಿಕ್ಷಣ ಪಡೆಯುವುದು, ಮುಂದೆ ಉದ್ಯೋಗ ಗಳಿಸುವುದು, ಅಥವಾ ಯಾವುದಾದರೊಂದು ವಿಧದ ಸಾಧನೆ ಮಾಡುವುದು ಉದ್ದೇಶವಾಗಿದ್ದರೆ ಪ್ರಾಮಾಣಿಕವಾಗಿ ಕಲಿಯುವುದಲ್ಲದೇ ಅನ್ಯ ಮಾರ್ಗವಿಲ್ಲ. ಕಾಲೇಜ್ ಕ್ಯಾಂಪಸ್ಸಿನೊಳಗೆ ಫೋನಿಗೆ ಪ್ರವೇಶವಿಲ್ಲದಿದ್ದರೆ ಕಾಲೇಜಿನ ಹೊರಗಡೆ ಕೆಲವು ಅಂಗಡಿಗಳಲ್ಲಿ ದಿನಕ್ಕೆ ಇಂತಿಷ್ಟು ಬಾಡಿಗೆ ನೀಡಿ ಫೋನನ್ನು ಇಟ್ಟು, ಸಂಜೆ ಹಿಂತಿರುಗುವಾಗ ಮರಳಿ ಪಡೆದುಕೊಂಡು ಹೋಗುವ ಪ್ಲಾನನ್ನು ವಿದ್ಯಾರ್ಥಿಗಳು ಕಂಡುಕೊಂಡಿರುತ್ತಾರೆ. ಮನೆಯಿಂದ ಕಾಲೇಜಿನವರೆಗೂ, ಕಾಲೇಜಿನಿಂದ ಮನೆಯವರೆಗೂ ಇರುವ ಪ್ರಯಾಣದ ಸಮಯದಲ್ಲಿ ವಾಟ್ಸಾಪ್ ಚಾಟ್ ಮಾಡುತ್ತಲೋ, ಇಯರ್ ಫೋನ್ ಕಿವಿಗೆ ಸಿಕ್ಕಿಸಿ ಯಾರೊಂದಿಗಾದರೂ ಫೋನಲ್ಲಿ ಮಾತನಾಡುತ್ತಲೋ ಇರುವುದನ್ನು ಕೆಲವು ವಿದ್ಯಾರ್ಥಿಗಳು ಹವ್ಯಾಸ ಮಾಡಿಕೊಂಡಿರುತ್ತಾರೆ. ಹುಟ್ಟುವಾಗಲೇ ಜೊತೆಗೆ ಬಂದ ಅವಿಭಾಜ್ಯ ಅಂಗ ಫೋನ್ ಎಂಬಂತೆ ವರ್ತಿಸುತ್ತಾರೆ. ಸ್ಮಾರ್ಟ್ಫೋನಿನ ಮಿತಿಮೀರಿದ ಬಳಕೆಗೆ ಕಾಲೇಜು ಜೀವನ ಒಂದು ಲೈಸೆನ್ಸ್ ಎಂದು ಇವರು ತಿಳಿದುಕೊಂಡಿರುವರೋ ಏನೋ!
ಕಾಲೇಜು ಲೈಫ್ ಅಂದರೆ ಲವ್ ಲೈಫ್ ಎಂಬಂತಹ ಒಂದು ನಂಬಿಕೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಬೇರೂರಿರುತ್ತದೆ. ವಿವಿಧ ರೀತಿಯ ಫ್ರೆಂಡ್ಶಿಪ್, ಲವ್ ಇತ್ಯಾದಿಗಳಿಂದ ಸದಾ ಬೇರೆಯೇ ಲೋಕದಲ್ಲಿ ಮುಳುಗಿರುವಾಗ, ಸದಾ ಕಾಲಿಂಗ್, ಟೆಕ್ಸಿ$rಂಗ್ ಅಂತ ಕಾಲ ಕಳೆಯುವಾಗ ಕಾಲೇಜು ಸೇರಿದ ಮುಖ್ಯ ಉದ್ದೇಶ ಮರೆತು ಹೋಗಿ ಮೂಲೆಗುಂಪಾಗುತ್ತದೆ. ಉಪನ್ಯಾಸಕರನ್ನೂ ಬಿಡದೆ ಸಿಕ್ಕಿದ ಎಲ್ಲರಿಗೂ ಅಡ್ಡ ಹೆಸರಿಡುವುದು, ಸಾಧ್ಯವಿದ್ದರೆ ಸಣ್ಣ ಮಟ್ಟಿನ ರ್ಯಾಗಿಂಗ್ ಮಾಡುವುದು, ಚುಡಾಯಿಸುವುದು, ಸಿನೆಮಾಕ್ಕೆ ಹೋಗುವುದು, ಪಿಕ್ನಿಕ್, ಟ್ರೆಕ್ಕಿಂಗ್ ಎಂದು ಅಲೆಯುವುದರÇÉೇ ಜೀವನದ ಸುಖ ಅಡಗಿದೆಯೆಂದು ಭಾವಿಸುತ್ತಾರೆ. ಗುಂಪುಸೇರಿ ವಾರಕ್ಕೊಮ್ಮೆಯೋ ಅಥವಾ ತಾವು ನಿಗದಿಪಡಿಸಿದ ಅವಧಿಗೆ ಸರಿಯಾಗಿಯೋ ಐಸ್ಕ್ರೀಮ್ ಪಾರ್ಲರ್, ಹೊಟೇಲ…, ಪಬ್ಗಳಿಗೆ ಭೇಟಿ ಕೊಟ್ಟು ಮೋಜು ಮಾಡುವುದು, ಅಪಾಯಕಾರಿ, ಸಾಹಸಮಯ ಅಥವಾ ಸುಂದರವಾದ ಸ್ಥಳಗಳಿಗೆ ಹೋಗಿ ಸೆಲ್ಫಿ ತೆಗೆಯುವುದು, ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು, ಮಾದಕ ವಸ್ತುಗಳನ್ನು ಬಳಸಲು ಅಭ್ಯಾಸ ಮಾಡುವುದು ಇತ್ಯಾದಿ ಸಾಹಸಗಳಿಗೆ ಕೈಹಾಕುತ್ತಾರೆ.
ಇದೊಂದು ಕಪೋಲಕಲ್ಪಿತ ಬರಹವಲ್ಲ. ಸುತ್ತಮುತ್ತ ನಡೆದಂತಹ, ನಡೆಯುತ್ತಿರುವಂತಹ ಘಟನೆಗಳ ಅನುಭವದ ಮೇಲೆ ಇದನ್ನು ಬರೆದಿದ್ದೇನೆ. ವಿದ್ಯಾರ್ಥಿ ಜೀವನವೆಂದರೆ ಅದು ಸ್ವರ್ಣದಂತಹ ಬದುಕು. ನೆನಪಿನ ಬಿತ್ತಿಯಲ್ಲಿ ಉಳಿಯುವಂತಹ, ಸದಾಚಾರ, ಸಚ್ಚಾರಿತ್ರ್ಯಗಳ ಮಿತಿಯನ್ನು ಮೀರದಂಥ, ದುರ್ನಡತೆ ಎಂದು ಪರಿಗಣಿತವಾಗದ, ಅಪಾಯಕಾರಿಯಲ್ಲದ ಮೋಜುಗಳಲ್ಲಿ ವಿರಳವಾಗಿಯಾದರೂ ವಿದ್ಯಾರ್ಥಿಗಳು ತೊಡಗಿಕೊಂಡು ಈ ಸ್ಮರಣೆಗಳನ್ನು ಎಂದೂ ಹಸಿರಾಗಿ ಮನಸ್ಸಲ್ಲಿ ಉಳಿಸಬೇಕು. ಮಜಾ ಮಾಡುವುದೊಂದೇ ಕಾಲೇಜು ಸೇರಿದ್ದರ ಹಿಂದಿನ ಉದ್ದೇಶವಾಗಿರಬಾರದು. ಕಲಿಕೆಗೆ ಪ್ರಥಮ ಆದ್ಯತೆ ನೀಡಿ. ಹೆತ್ತವರ ಕನಸುಗಳಿಗೆ, ಗೌರವಕ್ಕೆ ಧಕ್ಕೆ ತರುವ ಕೆಲಸಗಳಿಂದ ದೂರವಿರಿ. ಯುವಜನರಲ್ಲಿ ಸಾಹಸ ಪ್ರವೃತ್ತಿ ಅವರ ಮೂರ್ಧನ್ಯಾವಸ್ಥೆಯಲ್ಲಿರುತ್ತದೆ. ತಪ್ಪು ದಾರಿಯಲ್ಲಿ ಆ ಸಾಹಸಪ್ರವೃತ್ತಿಯನ್ನು ತೃಪ್ತಿಪಡಿಸುವ ಬದಲು ಉಪಯೋಗಕಾರಿ ಕೆಲಸಗಳಿಗೆ ಅದನ್ನು ವಿನಿಯೋಗಿಸಿ ಎನ್ಎಸ್ಎಸ್, ಎನ್ಸಿಸಿ ಇತ್ಯಾದಿ ಸಂಘಗಳಿಗೆ ಸದಸ್ಯರಾಗಿ. ಕಾಲೇಜಿನ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ. ನಿಮ್ಮಲ್ಲಿರುವ ಪ್ರತಿಭೆಗಳನ್ನು ಬೆಳೆಸಲು ಅದಕ್ಕೆ ಸಂಬಂಧಿಸಿದ ವಿಶೇಷ ತರಗತಿಗೆ ಸೇರ್ಪಡೆಗೊಳ್ಳಿ. ಉತ್ತಮ ಪುಸ್ತಕಗಳನ್ನು ಓದಿ. ಇದರಿಂದ ತಪ್ಪು ದಾರಿಯಲ್ಲಿ ಹರಿದು ಪೋಲಾಗಬಹುದಾದ ನಿಮ್ಮ ಯುವಶಕ್ತಿ ಸರಿದಾರಿಯಲ್ಲಿ ಸಾಗಿ ಶೈಕ್ಷಣಿಕವಾಗಿಯೂ, ಇತರ ರೀತಿಗಳಲ್ಲೂ ಉತ್ತಮ ಫಲವನ್ನು ನೀಡುತ್ತದೆ.
– ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್