ಭಾರತದ ವಿಶ್ವ ವಿಕ್ರಮ 36ರ ಮಧುರ ಸಂಭ್ರಮ
1983, ಜೂನ್ 25; ಕಪಿಲ್ ಬಳಗ ವಿಶ್ವ ಸಾಮ್ರಾಟನಾದ ದಿನ
Team Udayavani, Jun 25, 2019, 5:13 AM IST
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ‘1983, ಜೂನ್ 25’ ಚಿನ್ನದ ಚೌಕಟ್ಟಿನಿಂದ ತೂಗುಹಾಕಲ್ಪಟ್ಟಿರುವ ದಿನ. ತೀರಾ ಸಾಮಾನ್ಯ ತಂಡವಾಗಿ 3ನೇ ವಿಶ್ವಕಪ್ ಪಂದ್ಯಾವಳಿಯನ್ನು ಆಡಲು ಇಂಗ್ಲೆಂಡಿಗೆ ತೆರಳಿದ ಕಪಿಲ್ ದೇವ್ ಸಾರಥ್ಯದ ಭಾರತ ತಂಡ ಕ್ರೀಡಾ ಜಗತ್ತನ್ನೇ ಬೆರಗುಗೊಳಿಸಿದ ಮಹಾದಿನ. ಐತಿಹಾಸಿಕ ಲಾರ್ಡ್ಸ್ ನಲ್ಲಿ 2 ಬಾರಿಯ ಚಾಂಪಿಯನ್, ಬಲಿಷ್ಠ ವೆಸ್ಟ್ ಇಂಡೀಸನ್ನು ಉರುಳಿಸಿ ಏಕದಿನ ಕ್ರಿಕೆಟಿನ ಸಾಮ್ರಾಟನಾಗಿ ಉದಯಿಸಿದ ಸ್ಮರಣೀಯ ದಿನ. ಮಂಗಳವಾರ ಈ ಮಧುರ ನೆನಪಿಗೆ 36 ವರ್ಷ!
ಸಾಟಿ ಇಲ್ಲದ ಸಾಹಸ
28 ವರ್ಷಗಳಷ್ಟು ಸುದೀರ್ಘ ಅವಧಿಯ ಬಳಿಕ ಭಾರತ 2ನೇ ಸಲ ವಿಶ್ವ ಚಾಂಪಿಯನ್ ಆಗಿ ಮೆರೆಯಿತಾದರೂ ಮೊದಲ ಕಪ್ ಗೆಲುವಿನ ಆ ರೋಮಾಂಚನವೇ ಬೇರೆ. ಇದು ಸಾಟಿ ಇಲ್ಲದ ಸಾಹಸ. ಭಾರತದಂಥ ಕಳಪೆ ತಂಡವನ್ನು ಇಂಥ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡಿಸುವುದೇ ಒಂದು ಅವಮಾನ ಎಂದು ಟೀಕಿಸಿದವರೆಲ್ಲ ‘ಕಪಿಲ್ ಡೆವಿಲ್ಸ್’ ಕೊಟ್ಟ ಉತ್ತರಕ್ಕೆ ಥಂಡಾ ಹೊಡೆದಿದ್ದರು. ಭಾರತದ ಮಹೋನ್ನತ ಸಾಧನೆಗೆ ಕ್ರೀಡಾ ಜಗತ್ತೇ ಸಲಾಂ ಹೇಳಿತ್ತು!
ಎಲ್ಲರ ಹಾರೈಕೆ ಒಂದೇ…
ಅಂದಿನಿಂದ ಪ್ರತೀ ಜೂನ್ 25 ಬಂದಾಗಲೂ ಕಪಿಲ್ ಪಡೆಯ ಯಶೋಗಾಥೆ ಮೈ ಮನವನ್ನೆಲ್ಲ ಪುಳಕಗೊಳಿಸುತ್ತದೆ. ನೆನಪುಗಳೆಲ್ಲ ಉಕ್ಕುಕ್ಕಿ ಬರುತ್ತವೆ.
ಈ ಬಾರಿ ಇದರ ಖದರ್ ಬೇರೆಯೇ ಆಗಿದೆ. ಕಾರಣ, ಮತ್ತೂಂದು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇಂಗ್ಲೆಂಡ್ನಲ್ಲೇ ಸಾಗುತ್ತಿದೆ. ವಿರಾಟ್ ಕೊಹ್ಲಿ ಸಾರಥ್ಯ ದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಸೆಮಿ ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಹೀಗಾಗಿ 1983ರ ಆ ನೆನಪು ಮತ್ತಷ್ಟು ಗಾಢವಾಗಿ, ಅಷ್ಟೇ ತೀವ್ರವಾಗಿ ಆವರಿಸಿದೆ.
ಎಲ್ಲರ ಹಾರೈಕೆ ಒಂದೇ, ಭಾರತ ಮತ್ತೂಮ್ಮೆ ಲಾರ್ಡ್ಸ್ ಬಾಲ್ಕನಿಯಲ್ಲಿ ನಿಂತು ವಿಶ್ವಕಪ್ ಎತ್ತಬೇಕು!