ಸೋಲಿನ ಭೀತಿಯಿಂದ ಖರ್ಗೆ ಟೆಂಪಲ್ ರನ್
Team Udayavani, Apr 22, 2019, 2:11 PM IST
ಬೆಳಗಾವಿ: ಮಲ್ಲಿಕಾರ್ಜುನ ಖರ್ಗೆ ಸೋಲಿನ ಭೀತಿಯಿಂದ ಇದೇ ಮೊದಲ ಬಾರಿಗೆ ಟೆಂಪಲ್ ರನ್ ಮಾಡುತ್ತಿದ್ದಾರೆ. ಬಿಜೆಪಿಯ ಉಮೇಶ ಜಾಧವ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿ ಆಗಲೆಂದು ಎಲ್ಲ ವರ್ಗದ ಜನರು ಬಯಸಿದ್ದಾರೆ. ದೇಶದಲ್ಲಿ ನಡೆದಿರುವ ಮಹಾಘಟಬಂಧನ ಎಲ್ಲಿ ಇದೆ ಎಂಬುದೇ ಗೊತ್ತಿಲ್ಲ. ಇವರು ಮೋದಿಯ ಆಡಳಿತ ನೋಡಿ ಈಗ ಒಂದಾಗಿದ್ದಾರೆ. ಆ ಗುಂಪಿನಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ ಎಂದರು.
ಕರ್ನಾಟಕ ರಾಜ್ಯದಲ್ಲಿ ಎರಡಕ್ಕಿಂತ ಹೆಚ್ಚು ಸೀಟುಗಳಿದ್ದರೂ ನಾವು ಗೆಲ್ಲುತ್ತಿದ್ದೇವು. ಸದ್ಯ ಎರಡಂಕಿಯಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ. 22ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ. ಒಂದಂಕಿಯಲ್ಲಿ ಇರುವ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಲಿದೆ. ಬಿಜೆಪಿ ಪರವಾಗಿ ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ. ರಾಜ್ಯದಲ್ಲಿ ಮೊದಲನೆಯ ಹಂತದ ಚುನಾವಣೆಯಲ್ಲಿ 9 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ. ಎರಡನೇ ಹಂತದಲ್ಲಿ 13 ಸೀಟುಗಳನ್ನು ಗೆಲ್ಲಲಾಗುವುದು ಎಂದರು.
ನರೇಂದ್ರ ಮೋದಿ ಬಗ್ಗೆ ಇಡೀ ದೇಶದಲ್ಲಿ ಗೌರವ ಭಾವನೆ ಹೆಚ್ಚಾಗುತ್ತಿದೆ. ಕಳೆದ ಸಲಕ್ಕಿಂತಲೂ ಈ ಬಾರಿ ಬಿಜೆಪಿ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ವಿರೋಧ ಪಕ್ಷದವರು ಸುಳ್ಳು ಭಾಷಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮೋದಿ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಸಂಸ್ಕೃತಿ ಇಲ್ಲದ ಸಿದ್ದರಾಮಯ್ಯ ಚೋರರು ಎಂದು ಟೀಕಿಸಿದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಭಾರತ ಗೆಲ್ಲಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಬಿಜೆಪಿ ಪರ ಮತ ಚಲಾಯಿಸುವ ಮೂಲಕ ನನ್ನನ್ನು ಮತ್ತೂಮ್ಮೆ ಸಂಸದರನ್ನಾಗಿ ಆಯ್ಕೆ ಮಾಡಿ ಮೋದಿ ಪ್ರಧಾನಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ಮುಖಂಡರಾದ ಎಂ.ಬಿ. ಜಿರಲಿ, ರಾಜು ಚಿಕ್ಕನಗೌಡರ, ಸುದ್ದಿಗೋಷ್ಠಿಯಲ್ಲಿದ್ದರು.