ಇಡೀ ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿ ಸೇರುತ್ತಿದ್ದಾರಂತೆ : ಕಾಂಗ್ರೆಸ್ ಆರೋಪ
13 ಸಚಿವರ ಮೇಲೆ ಸೆಕ್ಸುವಲ್ ಸಿಡಿ ಸ್ಟೇ ಇದೆ.... . ಸಮಯ ಬಂದಾಗ ಎಲ್ಲ ಬಿಡುಗಡೆ
Team Udayavani, Dec 1, 2022, 3:43 PM IST
ಬೆಂಗಳೂರು : ಇಡೀ ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿ ಸೇರುತ್ತಿದ್ದಾರಂತೆ, ಈ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯೂ ಆಗಿದೆಯಂತೆ ಎಂದು ಕಾಂಗ್ರೆಸ್ ಗುರುವಾರ ಗಂಭೀರ ಆರೋಪ ಮಾಡಿ ಭಾರಿ ಆರೋಪಗಳನ್ನು ಮಾಡಿ ಸಮರ ಸಾರಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹಾಗೂ ರಮೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ 47 ಜನ ಬಿಜೆಪಿ ಎಂಎಲ್ಎ ಗಳ ಮೇಲೆ ಕ್ರಿಮಿನಲ್ ಕೇಸ್ ಗಳಿವೆ, ಮೂರು ಜನ ಎಂಪಿಗಳ ಮೇಲೆ ಕ್ರಿಮಿನಲ್ ಕೇಸ್ ಗಳಿವೆ. 13 ಸಚಿವರ ಸೆಕ್ಸುವಲ್ ಸಿಡಿ ಸ್ಟೇ ಇದೆ. ಇದು ಬಿಜೆಪಿ ನಾಯಕರ ಸ್ಥಿತಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮೇಲೆ ನಾಲ್ಕು ಕ್ರಿಮಿನಲ್ ಕೇಸ್ ಇವೆ. ಕೇಂದ್ರೆ ಸಚಿವ ಜೋಶಿ ಮೇಲೆ ಒಂದು ಕ್ರಿಮಿನಲ್ ಕೇಸ್ ಇದೆ. ಸಚಿವ ಶ್ರೀರಾಮುಲು ಕ್ರಿಮಿನಲ್ ಕೇಸ್ ಇದೆ. ಸಚಿವ ಗೋಪಾಲಯ್ಯ ಮೇಲೆ ಮರ್ಡರ್ ಕೇಸ್ ಇದೆ. ಮೈಸೂರು ಸಂಸದ ಪ್ರತಾಪ್ ಸಿಂಹ ನಾಲ್ಕು ಕೇಸ್ ಸ್ಟೇ ತಂದಿದ್ದಾರೆ. ಪ್ರತಾಪ್ ಸಿಂಹರದ್ದು 26 ಎಪಿಸೋಡ್ ಇದ್ದಾವೆ. ಸಮಯ ಬಂದಾಗ ಎಲ್ಲ ಬಿಡುಗಡೆ ಮಾಡುತ್ತೇನೆ. ಸದಾನಂದ ಗೌಡ ಸೆಕ್ಸ್ ಕೇಸ್ ನಲ್ಲಿ ಬೆಲ್ ಪಡೆದಿದ್ದಾರೆ ಎಂದು ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ಸಿ.ಟಿ ರವಿ ವಿರುದ್ಧ ಕಿಡಿ ಕಾರಿ, ಆ್ಯಕ್ಸಿಡೆಂಟ್ ಮಾಡಿ ನಾಲ್ವರನ್ನ ಸಿ.ಟಿ ರವಿ ಕೊಂದಿದ್ದರು. ಈಗ ಸತ್ಯ ಹರಿಶ್ಚಂದ್ರನ ರೀತಿ ಮಾತಾಡುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಅವರ ಬಗ್ಗೆ ಮಾತಾನಾಡುವ ನೈತಿಕತೆ ಒಂದೇ ಒಂದು ಪರ್ಸೆಂಟ್ ಬಿಜೆಪಿ ನಾಯಕರಿಗೆ ಇಲ್ಲ ಎಂದು ಕಿಡಿ ಕಾರಿದ್ದಾರೆ.
ಸರಣಿ ಟ್ವೀಟ್
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ”ನಮ್ಮ ಅವಧಿಯಲ್ಲಿ ಸಮಾಜ ಕಂಟಕರಾಗಿದ್ದ ರೌಡಿಗಳ ಎನ್ಕೌಂಟರ್ಗಳಾಗಿದ್ದವು, ರೌಡಿಗಳನ್ನು ಮಟ್ಟಹಾಕಲು ಪೊಲೀಸರಿಗೆ ಸ್ವತಂತ್ರ ನೀಡಲಾಗಿತ್ತು.ಆದರೆ ಈಗ ಬಿಜೆಪಿಗರ ಸಖ್ಯದಿಂದ ರೌಡಿಗಳು ಪೊಲೀಸರೆದುರು ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದಾರೆ,ಪೊಲೀಸರೇ ರೌಡಿಗಳೆದುರು ತಲೆ ತಗ್ಗಿಸಿ ನಿಲ್ಲುವಂತೆ ಅವರ ನೈತಿಕ ಸ್ಥೈರ್ಯ ಕುಸಿದಿದೆ” ಎಂದು ಆಕ್ರೋಶ ಹೊರ ಹಾಕಿದೆ.
”ಮೊದಲೆಲ್ಲ ರೌಡಿ ಶೀಟರ್ಗಳು ಪೊಲೀಸರೆದುರು ಪರೇಡ್ ನಡೆಸುತ್ತಿದ್ದರು. ಈಗ ಬಿಜೆಪಿ ಕಚೇರಿ ಮುಂದೆ ಪಕ್ಷ ಸೇರಲು ಪರೇಡ್ ನಡೆಸಲು ಸಜ್ಜಾಗಿದ್ದಾರೆ!. ರೌಡಿಗಳೊಂದಿಗೆ ಬಿಜೆಪಿಗರ ಬಾಂಧವ್ಯ ಹೊರಬರುತ್ತಿರುವಾಗ ಮತ್ತೊಬ್ಬ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸಚಿವ ಸೊಮ್ಮಣ್ಣನವರ ಮನೆಗೆ ಭೇಟಿ ನೀಡಿದ್ದು ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ನೀಡವುದಕ್ಕಾ?” ಎಂದು ಪ್ರಶ್ನಿಸಿದೆ.
”ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಏನು ವ್ಯವಹಾರ? ಯಾವ ನಂಟು? ಸೈಲೆಂಟ್ ಸುನೀಲ, ಫೈಟರ್ ರವಿ, ಬೆತ್ತನಗೆರೆ ಶಂಕರ ಬಿಜೆಪಿ ಜೊತೆಗೆ ಗುರುತಿಸಿಕೊಂಡ ನಂತರ ವಿಲ್ಸನ್ ಗಾರ್ಡನ್ ನಾಗ ಎಂಬ ರೌಡಿ ಶೀಟರ್ ನಿನ್ನೆ ರಾತ್ರಿ ಸಚಿವ ವಿ.ಸೋಮಣ್ಣ ಮನೆಗೆ ಬಂದಿದ್ದೇಕೆ? ಆತನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ” ಎಂದು ಪ್ರಶ್ನಿಸಿದೆ.