ದಿಗ್ವಿಜಯ್ ಸಿಂಗ್ ಹಿಂದುತ್ವ ಜಪ!
Team Udayavani, May 12, 2019, 10:12 AM IST
ದೇಶದ ಅತಿ ಚರ್ಚಿತ ಸೀಟುಗಳಲ್ಲಿ ಮಧ್ಯಪ್ರದೇಶದ ಭೋಪಾಲವೂ ಒಂದು. ಈ ಬಾರಿ ಇಲ್ಲಿ ಕಾಂಗ್ರೆಸ್ನ ದಿಗ್ಗಜ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್( 72) ಮತ್ತು ಬಿಜೆಪಿಯ ಫಯರ್ ಬ್ರಾಂಡ್ ನಾಯಕಿ ಸಾಧ್ವಿ ಪ್ರಜ್ಞಾ ಠಾಕೂರ್(49) ನಡುವೆ ಪ್ರಬಲ ಪೈಪೋಟಿ ಇದೆ.
ಪ್ರಜ್ಞಾ ಸಿಂಗ್ರ ಪ್ರವೇಶದ ನಂತರ ಸಹಜವಾಗಿಯೇ ಈ ಬಾರಿ ಭೋಪಾಲದಲ್ಲಿ ಹಿಂದುತ್ವವೇ ಪ್ರಮುಖ ವಿಷಯವಾಗಿ ಬದಲಾಗಿದ್ದು. ಅಚ್ಚರಿದಾಯಕ ಸಂಗತಿಯೆಂದರೆ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಂತೂ ತಮ್ಮ “ಅಲ್ಪಸಂಖ್ಯಾತ ಪರ’ ಇಮೇಜ್ ತಗ್ಗಿಸಿಕೊಳ್ಳುವುದಕ್ಕಾಗಿ ಹಿಂದುತ್ವದ ಧ್ವನಿ ಜಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅವರು ಭರ್ಜರಿಯಾಗಿಯೇ ಹೋಮ ಹವನಗಳಲ್ಲಿ ಪಾಲ್ಗೊಂಡಿದ್ದಾರೆ, ಅಲ್ಲದೇ ಸಾಧು-ಸಂತರನ್ನು ತಮ್ಮ ಪರ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಅದರಲ್ಲೂ ಕಂಪ್ಯೂಟರ್ ಬಾಬಾ ಎಂದೇ ಖ್ಯಾತರಾದ ನಾಮದೇವ್ ದಾಸ್ ತ್ಯಾಗಿ ಬಾಬಾ ಈಗ ದಿಗ್ವಿಜಯ್ ಪರ ನಿಂತಿದ್ದಾರೆ. ದಿಗ್ವಿಜಯ್ ಸಿಂಗ್ ಅವರ ರ್ಯಾಲಿಗಳೆಲ್ಲವೂ ಕೇಸರಿ ಧ್ವಜಗಳಿಂದ ಕಂಗೊಳಿಸಿವೆ!
ಇನ್ನೊಂದೆಡೆ ಸಾಧ್ವಿ ಪ್ರಜ್ಞಾ ಠಾಕೂರ್ ಬಂಧನದಲ್ಲಿ ತಾವು ಅನುಭವಿಸಿದ ಯಾತನೆಗಳನ್ನು ಜನರಿಗೆ ಹೇಳುತ್ತಿದ್ದಾರೆ. 2008ರ ಮಾಲೇಗಾಂವ್ ಸ್ಫೋಟದ ಆರೋಪಿ ಆಗಿರುವ ಪ್ರಜ್ಞಾ ಅವರು, ಮೊದಲಿನಿಂದಲೂ ಕೃತ್ಯದಲ್ಲಿ ತಮ್ಮ ಪಾತ್ರವಿಲ್ಲ ಎಂದೇ ಹೇಳುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೇ ಅವರು ದಿವಂಗತ ಹೇಮಂತ್ ಕರ್ಕರೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ನಂತರ ಕ್ಷಮಾ ಪಣೆ ಕೋರಿದ್ದರು. ಬಾಬ್ರಿ ಮಸೀದಿಯ ಧ್ವಂಸ ವಿಚಾರದಲ್ಲಿ ಅವರು ಆಡಿದ ಮಾತುಗಳಿಂದಾಗಿ ಚುನಾವಣಾ ಆಯೋಗದಿಂದ 72 ಗಂಟೆಗಳ
ಕಾಲ ಪ್ರಚಾರದಿಂದ ನಿಷೇಧಕ್ಕೆ ಒಳಗಾಗಿದ್ದರು. ಪ್ರಜ್ಞಾ ಸಿಂಗ್ ಅವರಿಗೆ ಉಮಾ ಭಾರತಿ, ನರೇಂದ್ರ ಮೋದಿ, ಅಮಿತ್ ಶಾರಂಥ ಹಿರಿಯ ನಾಯಕರ ಬೆಂಬಲ ಸಿಕ್ಕಿದೆ.
ಬಿಜೆಪಿಯದ್ದೇ ಹಿಡಿತ: ಭೋಪಾಲ್ ಸಂಸದೀಯ ಕ್ಷೇತ್ರವು 1984ರಿಂದ ಬಿಜೆಪಿಯ ಹಿಡಿತದಲ್ಲೇ ಇದೆ. ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ನಡೆದ 16 ಚುನಾವಣೆಗಳಲ್ಲಿ ಕಾಂಗ್ರೆಸ್ ಕೇವಲ 6 ಬಾರಿಯಷ್ಟೇ ಗೆದ್ದಿದೆ. ಒಟ್ಟು 16 ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದು ಇವರಲ್ಲಿ 4 ಲಕ್ಷ ಮುಸಲ್ಮಾನರು, 4 ಲಕ್ಷ ಬ್ರಾಹ್ಮಣರು, 5 ಲಕ್ಷ ಹಿಂದುಳಿದ ವರ್ಗಗಳು, 2 ಲಕ್ಷ ಕಾಯಸ್ಥರು ಮತ್ತು 1 ಲಕ್ಷ ಕ್ಷತ್ರಿಯ ವರ್ಗದ ಮತದಾರರು ಇದ್ದಾರೆ. ಮುಸಲ್ಮಾನರ ಮತಗಳು ದಿಗ್ವಿಜಯ್ ಪರ ಇವೆ ಎನ್ನಲಾಗುತ್ತದಾದರೂ, ಈ ಬಾರಿ ದಿಗ್ವಿಜಯ್ “ಹಿಂದುತ್ವದ ಹಾದಿ’ ಹಿಡಿದಿರುವುದನ್ನು ನೋಡಿ, ಆ ವರ್ಗದ ಮತದಾರರೂ ಗೊಂದಲದಲ್ಲಿದ್ದಾರೆ ಎನ್ನಲಾಗುತ್ತದೆ. ಸಾಧ್ವಿ ಪ್ರಜ್ಞಾ ಠಾಕೂರ್ ಅಂತೂ ಈ ಚುನಾವಣೆಯನ್ನು ಧರ್ಮಯುದ್ಧ ಎಂದೇ ಕರೆಯುತ್ತಾರೆ. “”ಕೇಸರಿ ಭಯೋತ್ಪಾದನೆ ಎಂಬ ಪದವನ್ನು ಹುಟ್ಟುಹಾಕಿ ಸನಾತನ ಧರ್ಮದ ಹೆಸರು ಕೆಡಿಸಿದವರ, ನನ್ನನ್ನು ಜೈಲಿಗೆ ಕಳುಹಿಸಿ ಕಿರುಕುಳ ಕೊಟ್ಟವರ ವಿರುದ್ಧದ ಧರ್ಮಯುದ್ಧವಿದು” ಎನ್ನುತ್ತಿದ್ದಾರೆ ಪ್ರಜ್ಞಾ.