ಡಾ| ಬಿ.ಆರ್.ಅಂಬೇಡ್ಕರ್ ಹೆಜ್ಜೆ ಗುರುತು
Team Udayavani, Sep 24, 2022, 6:15 AM IST
ಡಾ| ಬಿ.ಆರ್.ಅಂಬೇಡ್ಕರ್ ಅವರು ಹುಟ್ಟು, ಬಾಲ್ಯ, ಶಿಕ್ಷಣ, ಜೀವನದ ಪ್ರತೀ ಹೆಜ್ಜೆಗಳನ್ನೂ ಪರಿಚಯಿಸುವುದಕ್ಕಾಗಿ ಕೇಂದ್ರ ಸರಕಾರ ಅಂಬೇಡ್ಕರ್ ಸರ್ಕ್ಯೂಟ್ ಎಂಬ ವಿಶೇಷ ಟೂರ್ ಪ್ಯಾಕೇಜ್ ಅನ್ನೂ ಘೋಷಿಸಿದೆ. ಅಂಬೇಡ್ಕರ್ ಅವರ ಜೀವನದ ವಿವಿಧ ಹಂತಗಳನ್ನು ಪರಿಚಯಿಸುವ ಸ್ಥಳಗಳಿಗೆ ವಿಶೇಷ ರೈಲಿನಲ್ಲಿ ಕರೆದೊಯ್ಯಲಾಗುತ್ತದೆ. ಹಾಗಾದರೆ ಏನಿದು ವಿಶೇಷ ಟೂರ್? ಈ ಕುರಿತ ಒಂದು ನೋಟ ಇಲ್ಲಿದೆ.
ಏನಿದು ಅಂಬೇಡ್ಕರ್ ಸರ್ಕ್ಯೂಟ್?
ಇದು ಈಗಿನ ಐಡಿಯಾವೇನಲ್ಲ. 2016 ರಲ್ಲೇ ಕೇಂದ್ರ ಸರಕಾರ ಅಂಬೇಡ್ಕರ್ ಸರ್ಕ್ಯೂಟ್ ಹೆಸರಿನಲ್ಲಿ, ಅವರು ಹುಟ್ಟಿದಾಗಿನಿಂದ ನಿರ್ವಾಣವಾಗುವವರೆಗೆ ಬದುಕು ಸಾಗಿಸಿದ್ದ ಸ್ಥಳಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿತ್ತು. ಅಂದರೆ
1. ಅಂಬೇಡ್ಕರ್ ಹುಟ್ಟೂರು – ಮಧ್ಯ ಪ್ರದೇಶದ ಮಾಹೋ – ಜನ್ಮಭೂಮಿ
2. ಬೌದ್ಧ ಧರ್ಮ ಸ್ವೀಕಾರ – ಮಹಾರಾಷ್ಟ್ರದ ನಾಗಪುರ – ದೀಕ್ಷಾಭೂಮಿ
3. ಮೃತಪಟ್ಟ ಸ್ಥಳ – ದಿಲ್ಲಿ – ಮಹಾಪರಿನಿರ್ವಾಣ ಭೂಮಿ
4. ಅಂತ್ಯಕ್ರಿಯೆ ನಡೆದ ಸ್ಥಳ – ಮಹಾರಾಷ್ಟ್ರದ ಮುಂಬಯಿ – ಚೈತ್ಯ ಭೂಮಿ
ಈ ರೀತಿಯಾಗಿ ವಿವಿಧ ಸ್ಥಳಗಳನ್ನು ಗುರುತಿಸಿ, ಇಲ್ಲಿಗೆ ಪ್ರವಾಸ ಕರೆದೊಯ್ಯುವ ಯೋಜನೆ ಹಾಕಿಕೊಳ್ಳಲಾಗಿದೆ. ಮೊದಲು ಶಿಕ್ಷಾಭೂಮಿಯಾಗಿ ಲಂಡನ್ ಬಳಸಿಕೊಳ್ಳಲಾಗಿತ್ತಾದರೂ ಈಗ ಸೇರಿಸಿಲ್ಲ.
ಪ್ರವಾಸ ವೆಚ್ಚ ಎಷ್ಟಿರಬಹುದು?
ಒಟ್ಟು 17 ದಿನಗಳ ಕಾಲ ಈ ಪ್ರವಾಸ ನಡೆಯಲಿದೆ. ಪ್ರತಿಯೊಬ್ಬರಿಗೆ 62 ಸಾವಿರ ರೂ.ಗಳಾಗಲಿವೆ. 500 ಮಂದಿ ಯನ್ನು ಪ್ರವಾಸಕ್ಕೆಂದು ವಿಶೇಷ ರೈಲಿನಲ್ಲಿ ಕರೆದುಕೊಂಡು ಹೋಗಲಾಗುತ್ತದೆ.
ಉದ್ದೇಶವೇನು?
ಸದ್ಯ ದೇಶದ ದಲಿತ ಸಮುದಾಯದ ಜನ ದೇಶದಲ್ಲಿರುವ ಈ ಎಲ್ಲ ಸ್ಥಳಗಳನ್ನು ಪುಣ್ಯಸ್ಥಳವೆಂದೇ ಪರಿಗಣಿಸಿ ಭೇಟಿ ನೀಡುತ್ತಾರೆ. ಆದರೆ ದಲಿತ ಸಮುದಾಯವನ್ನು ಮೀರಿ, ಉಳಿದವರನ್ನೂ ಈ ಸ್ಥಳಗಳಿಗೆ ಆಕರ್ಷಿಸುವುದು ಸರಕಾರದ ಪ್ರಮುಖ ಉದ್ದೇಶ. ಅಲ್ಲದೆ 2014ರಲ್ಲಿ ಮೋದಿ ಸರಕಾರ ಬಂದ ಮೇಲೆ ಅಂಬೇಡ್ಕರ್ ಅವರ ಕುರಿತಂತೆ ನಾನಾ ವಿಧವಾಗಿ ಸಂಭ್ರಮಿಸಲಾಗುತ್ತಿದೆ. ಅಲ್ಲದೆ ಮೋದಿ ಅವರು ಅಂಬೇಡ್ಕರ್ ಅವರ ದೂರದೃಷ್ಟಿಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ.