ಹೆತ್ತವರ ಸೇವೆ ಮಾಡಿ, ಋಣ ತೀರಿಸಿ
Team Udayavani, Mar 19, 2022, 3:15 PM IST
ಬೀದರ: ತಂದೆ-ತಾಯಿ ನಿಮಗಾಗಿ ಆಸ್ತಿ-ಅಂತಸ್ತು ಅಲ್ಲದೇ ಜೀವನವೇ ತ್ಯಾಗ ಮಾಡಿದ್ದಾರೆ. ಅವರ ಋಣ ತೀರಿಸಲು ಸೇವೆ ಮಾಡಲೇಬೇಕು ಎಂದು ಮಲ್ಲಯ್ಯಗಿರಿ ಆಶ್ರಮದ ಪೀಠಾ ಧಿಪತಿ ಡಾ| ಬಸವಲಿಂಗ ಅವಧೂತರು ನುಡಿದರು.
ಚಿಟ್ಟಗುಪ್ಪಾ ತಾಲೂಕಿನ ಬೆಳಕೇರಾ ಬೆಟ್ಟದಲ್ಲಿ ನಡೆದ ಜಗದ್ಗರು ರೇಣುಕಾಚಾರ್ಯ ಜಯಂತಿ ನಿಮಿತ್ತ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಂದೆ-ತಾಯಿ ಮನಸ್ಸು ನೋಯಿಸಬಾರದು. ಅವರೊಂದಿಗೆ ಪ್ರೀತಿ, ಗೌರವದಿಂದ ನಡೆದುಕೊಳ್ಳಬೇಕು. ವೃದ್ಧಾಪ್ಯದಲ್ಲಿ ಅವರ ಸೇವೆ ಮಾಡಬೇಕು ಎಂದು ಸಲಹೆ ಮಾಡಿದರು.
ಅಧ್ಯಾತ್ಮಿಕ ಜಾಗೃತಿ, ಮಾನವೀಯ ಮೌಲ್ಯಗಳ ಬೋಧನೆ ಸೇರಿದಂತೆ ದೇಶಕ್ಕೆ ಜಗದ್ಗರು ಸೇವೆ ಅಪಾರವಾಗಿದೆ. ವಚನ ಸಾಹಿತ್ಯ, ದಾರ್ಶನಿಕರ ಪುಸ್ತಕಗಳ ಅಧ್ಯಯನದಿಂದ ಜೀವನದ ಸತ್ಯ ಅರಿಯಲು ಸಾಧ್ಯವಿದೆ ಎಂದು ತಿಳಿಸಿದ ಅವರು, ಬೀದರ ಜಿಲ್ಲೆ ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿ. ಇಲ್ಲಿ ನೆಲೆಸಿರುವ ಎಲ್ಲರೂ ಪುಣ್ಯವಂತರು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಬೇಕು. ಚಟಗಳಿಂದ ಆರೋಗ್ಯ ಹಾಳಾಗುತ್ತದೆ. ಪೋಷಕರು ಮಕ್ಕಳನ್ನೂ ಪೊಷಿಸಿಕೊಳ್ಳಬೇಕು ಎಂದು ನುಡಿದರು.
ಶಿವಕುಮಾರ ಪಾಟೀಲ, ವೀರಶೆಟ್ಟಿ ಮೂಲಗೆ, ರಾಜಕುಮಾರ ಪಾಟೀಲ, ಮಂಜುನಾಥ ಸಲಗಾರ, ಚನ್ನು ಕೋರಿ ಇದ್ದರು. ಇದಕ್ಕೂ ಮುನ್ನ ಅವಧೂತರು ಜಗದ್ಗರು ರೇಣುಕಾಚಾರ್ಯ ಮೂರ್ತಿಗೆ ಪೂಜೆ ಸಲ್ಲಿಸಿದರು.