ಈ ವರ್ಷದ ಮೊದಲ ಮಳೆ ಹಾನಿ; ತಡೆಗೋಡೆ ಕುಸಿತ
Team Udayavani, Jul 9, 2019, 5:56 AM IST
ನಗರ: ಪುತ್ತೂರು ನಗರದಲ್ಲಿ ಈ ಬಾರಿ ಇದೇ ಮೊದಲ ಬಾರಿಗೆ ಮಳೆ ಅವಾಂತರ ಸೃಷ್ಟಿಸಿದ್ದು, ರವಿವಾರ ರಾತ್ರಿ ಪುತ್ತೂರು ನಗರದ ವಿವಿಧೆಡೆ ಸಣ್ಣ ಪುಟ್ಟ ವಿಕೋಪಗಳು ಸಂಭವಿಸಿದೆ.
ಇಲ್ಲಿನ ಪಾಂಗಳಾಯಿ ಬೆಥನಿ ಶಾಲೆಯ ಬಳಿ ಇಂಟರ್ಲಾಕ್ ರಸ್ತೆ 10 ಮೀ. ಉದ್ದಕ್ಕೆ ಕುಸಿದಿದ್ದು, ಖಾಸಗಿಯವರ ಆವರಣ ಗೋಡೆ ಕುಸಿದಿದೆ. ಹೀಗಾಗಿ ಶಾಲೆಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಇಂಟರ್ಲಾಕ್ ರಸ್ತೆಯು ನಗರಸಭೆಯ ನಿಧಿಯಿಂದ ನಿರ್ಮಾಣ ಗೊಂಡಿದ್ದು, ಸ್ಥಳೀಯ ನಗರಸಭಾ ಸದಸ್ಯೆ ವಿದ್ಯಾ ಆರ್. ಗೌರಿ ಅವರು ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಗಾಳಿಯ ಪರಿಣಾಮ ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ರಸ್ತೆ, ಪಶುಸಂಗೋಪನ ಆಸ್ಪತ್ರೆಯ ಬಳಿ, ಮುಕ್ರಂಪಾಡಿ ಪ್ರದೇಶದಲ್ಲಿ ಮರಗಳು ಉರುಳಿ ಬಿದ್ದಿವೆ. ನಗರಸಭೆಯ ಆರೋಗ್ಯ ಇಲಾಖೆಯ ಸಿಬಂದಿ ಮತ್ತು ಎಂಜಿನಿಯರ್ಗಳು ಮರಗಳನ್ನು ರಸ್ತೆಯಿಂದ ತೆರವುಗೊಳಿಸುವ ಕಾಮಗಾರಿ ನಡೆಸಿದ್ದಾರೆ.ನಗರದಲ್ಲಿ ಇನ್ನಷ್ಟು ಅಪಾಯಕಾರಿ ಮರಗಳಿದ್ದು, ತೆರವುಗೊಳಿಸುವಂತೆ ಆಗ್ರಹಗಳು ಕೇಳಿ ಬರುತ್ತಿವೆ. ನಗರಸಭಾ ವ್ಯಾಪ್ತಿಯಲ್ಲಿ ಮಳೆನೀರು ಹರಿದು ಹೋಗುವ ಚರಂಡಿಗಳು ಪೂರ್ತಿ ದುರಸ್ತಿಯಾಗಿಲ್ಲ. ರಾಜಕಾಲುವೆಗಳಲ್ಲಿ ನೀರು ಹರಿದು ಹೋಗುತ್ತಿಲ್ಲ. ಕೃತಕ ನೆರೆಯೂ ಸೇರಿದಂತೆ ಪ್ರಾಕೃತಿಕ ವಿಕೋಪಗಳು ನಡೆಯುವ ಸಾಧ್ಯತೆಗಳಿವೆ.