ಮಂಗಳೂರು, ಬಂಟ್ವಾಳದಲ್ಲಿ ಕಾರ್ಯಾಚರಣೆ: 2.5 ಕಿಲೋ ಗಾಂಜಾ ಸಹಿತ ಐವರ ಸೆರೆ
Team Udayavani, Jul 14, 2019, 9:49 AM IST
ಮಂಗಳೂರು: ಮಾದಕ ವಸ್ತುಗಳ ಸಾಗಾಟ ವಿರುದ್ಧದ ಕಾರ್ಯಾಚರಣೆಯನ್ನು ಮಂಗಳೂರು ಪೊಲೀಸರು ಮುಂದುವರಿಸಿದ್ದು, ಶನಿವಾರ ನಾಲ್ವರನ್ನು ಬಂಧಿಸಿ 1 ಕೆ.ಜಿ. 200 ಗ್ರಾಂ ಗಾಂಜಾ ಮತ್ತು 5 ಮೊಬೈಲ್ ಫೋನ್ಗಳನ್ನು ವಶ ಪಡಿಸಿಕೊಂಡಿದ್ದಾರೆ.
ನಗರದ ಎಕ್ಕೂರು ಕಲ್ಕಾರ್ ನಿವಾಸಿ ಪೃಥ್ವಿ ಪಿ. ಕುಮಾರ್ (19), ವೆಲೆನ್ಸಿಯಾ 2ನೇ ಕ್ರಾಸ್ನ ಕ್ಲೆವಿನ್ ಸಲ್ಡಾನ್ಹಾ (21), ಅತ್ತಾವರ ಬಾಬುಗುಡ್ಡೆ 1ನೇ ಕ್ರಾಸ್ನ ವಿ.ಎಸ್. ನಿಖೀಲ್ (21) ಮತ್ತು ಬೋಳಾರ ದೇವರಾಜ್ ಕಾಂಪೌಂಡ್ನ ಸಾಗರ್ ಅಮೀನ್ (23) ಬಂಧಿತರು. ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಭಾಸ್ಕರ್ ವಿ. ಬಿ. ಮತ್ತವರ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ.
ಬಂಟ್ವಾಳ ವರದಿ
ಬಂಟ್ವಾಳ: ಗಾಂಜಾ ಹೊಂದಿದ ಪ್ರಕರಣದಲ್ಲಿ ಬಿ. ಮೂಡ ಗ್ರಾಮದ ತುಂಬೆ ನಿವಾಸಿ ತುಂಬೆ ಆಮಿರ್ ಹುಸೈನ್ (45)ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತನಿಂದ 39 ಸಾ.ರೂ. ಮೌಲ್ಯದ 1.330 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಗಾಂಜಾವನ್ನು ಮಂಗಳೂರಿನ ಮೂಡುಶೆಡ್ಡೆಯ ವ್ಯಕ್ತಿಯೊಬ್ಬರಿಂದ ಪಡೆದಿರುವುದಾಗಿ ಆರೋಪಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ.