ವೀಲ್ಚೇರ್ನಲ್ಲಿ ತೆರಳಿ ಫಸ್ಟ್ ಕ್ಲಾಸ್ ಪಾಸಾದ
ಅಭಿಷೇಕ್ ಸಾಧನೆ ಮತ್ತೂಂದು ಬಗೆಯದ್ದು
Team Udayavani, Apr 23, 2019, 6:20 AM IST
ಮಂಗಳೂರು: ಸಾಧನೆಗೆ ದೈಹಿಕ ನ್ಯೂನತೆಗಳು ಅಡ್ಡಿಯಲ್ಲ ಎಂಬುದನ್ನು ಈ ಹುಡುಗ ಸಾಧಿಸಿ ತೋರಿಸಿದ್ದಾನೆ. ನಡೆಯಲು ಸಾಧ್ಯವಾಗದಿದ್ದರೂ, ವೀಲ್ಚೇರ್ನಲ್ಲೇ ತೆರಳಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.
ಈತ ವಸಂತ ಮತ್ತು ಗಂಗಾರತ್ನ ದಂಪತಿಯ ಪುತ್ರ ಅಭಿಷೇಕ್. ಕೊçಲದ ಎಂಡೋಪಾಲನಾ ಕೇಂದ್ರದ ವಿದ್ಯಾರ್ಥಿ. ಸಾಧನೆಗೆ ಮನಸ್ಸಿದ್ದರೆ ಸಾಕು; ದೈಹಿಕ ನ್ಯೂನತೆಗಳು ಅಡ್ಡಿಯಾಗದು ಎಂಬುದನ್ನು ತೋರಿಸಿಕೊಟ್ಟ ಅಭಿಷೇಕ್ ಶೇ. 63 (374) ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಪಿಯುಸಿ ಪಾಸಾಗಿದ್ದಾರೆ. ವಿಶೇಷವೆಂದರೆ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿಯೂ ಅಭಿಷೇಕ್ ಶೇ. 76 ಅಂಕ ಗಳಿಸಿದ್ದರು.
ಅಭಿಷೇಕನ ಕಲಿಕಾಸಕ್ತಿಯನ್ನು ಗಮನಿಸಿದ ಹೆತ್ತವರು ಮತ್ತು ಎಂಡೋಪಾಲನಾ ಕೇಂದ್ರದ ಸಿಬಂದಿ ಸನಿಹದ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಜಿಲ್ಲಾಡಳಿತಕ್ಕೆ ಅನುಮತಿ ಕೋರಿದ್ದಾರೆ. ಅದರಂತೆ ಅಭಿಷೇಕ್ ತಮಗೆ ಸನಿಹದಲ್ಲಿರುವ ಉಪ್ಪಿನಂಗಡಿ ಸಪಪೂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾರೆ. ಅವರಿವರ ಸಹಾಯದೊಂದಿಗೆ ವೀಲ್ಚೇರ್ನಲ್ಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಎದುರಿಸಿ ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ.
ಕಲಿಕೆಯನ್ನು ಮುಂದುವರಿಸಬೇಕೆಂದಿರುವ ಅಭಿಷೇಕ್ ಮುಂದೆ ಪದವಿ ವಿದ್ಯಾಭ್ಯಾಸದತ್ತ ಆಸಕ್ತಿ ತೋರಿದ್ದಾರೆ. ಅಭಿಷೇಕ್ನ ಸಾಧನೆಗೆ ಮಂಗಳೂರು ಸೇವಾ ಭಾರತಿಯ ಕಾರ್ಯದರ್ಶಿ ನಾಗರಾಜ್ ಭಟ್ ಅಭಿನಂದಿಸಿದ್ದಾರೆ.