ದೇಶಕ್ಕಾಗಿ ಮಾತ್ರವಲ್ಲ, ಬಿಜೆಪಿ ಪಕ್ಷಕ್ಕೂ ದಿ. ಮನೋಹರ್ ಪರೀಕರ್ ಅವರ ಸೇವೆ ಅನನ್ಯ
Team Udayavani, Sep 22, 2021, 9:01 PM IST
ಪಣಜಿ: ದೇಶದ ಮಾಜಿ ರಕ್ಷಣಾ ಮಂತ್ರಿ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ರವರ ಪುತ್ರ ಉತ್ಪಾಲ್ ಪರೀಕರ್ ರವರು ಪಕ್ಷ ಸಂಘಟನೆ ಸೇರಿದಂತೆ ಹಲವು ಪ್ರಮುಖ ಕಾರ್ಯಗಳನ್ನು ಮಾಡಿ ತೋರಿಸಬೇಕು. ಅವರು ಪರೀಕರ್ ರವರ ಪುತ್ರರಾಗಿದ್ದರೂ ಕೂಡ ತನಗೆ ಚುನಾವಣಾ ಉಮೇದುವಾರಿಕೆಗೆ ಟಿಕೇಟ್ ಪಡೆಯಬೇಕು ಎಂದು ಅಂದುಕೊಂಡವರಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನುಡಿದರು.
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು- ದಿ. ಮನೋಹರ್ ಪರೀಕರ್ ರವರು ದೇಶಕ್ಕಾಗಿ ಮಾತ್ರವಲ್ಲ ಬಿಜೆಪಿ ಪಕ್ಷಕ್ಕೆ ಕೂಡ ಹೆಚ್ಚಿನ ಶೃಮಪಟ್ಟು ದುಡಿದಿದ್ದಾರೆ. ಗೋವಾ ರಾಜ್ಯಕ್ಕಂತೂ ಅವರ ಹೆಸರು ಯಾವತ್ತೂ ಉಳಿದುಕೊಳ್ಳಲಿದೆ ಎಂದು ದೇವೇಂದ್ರ ಫಡ್ನವೀಸ್ ಅಭಿಪ್ರಾಯಪಟ್ಟರು.
ಗೋವಾದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಕೇಂದ್ರದಲ್ಲಿಯೂ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. ಇದರಿಂದಾಗಿ ನಮ್ಮ ಪಕ್ಷದ ನಾಯಕರಿಗೆ ಕೇವಲ ಗೋವಾದಲ್ಲಿ ಮಾತ್ರ ಅಧಿಕಾರ ಲಭಿಸಲಿದೆ ಎಂದು ಇಲ್ಲ, ಬೇರೆ ಬೇರೆ ಉನ್ನತ ಸ್ಥಾನಗಳೂ ಲಭಿಸುವ ಸಾಧ್ಯತೆಯಿದೆ. ಅಧಿಕಾರ ಹಂಚಿಕೆ ಮಾಡುವ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಎಂದೂ ಕೂಡ ಗೋವಾ ರಾಜ್ಯವನ್ನು ಮರೆತಿಲ್ಲ ಎಂದು ದೇವೇಂದ್ರ ಫಡ್ನವೀಸ್ ನುಡಿದರು.