ಜನಾದರ್ನ ರೆಡ್ಡಿ ಬ್ಯಾಕ್ ಟು ಬಳ್ಳಾರಿ
ಇಂದಿನಿಂದ 2 ವಾರಗಳ ಕಾಲ ಜಿಲ್ಲೆಯಲ್ಲಿ ಇರಲು ಸಮ್ಮತಿ
Team Udayavani, Jun 8, 2019, 6:00 AM IST
ನವದೆಹಲಿ: ಗಣಿ ಅಕ್ರಮ ಎಸಗಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಮಾವನ ಆರೋಗ್ಯ ವಿಚಾರಿಸುವ ನಿಟ್ಟಿನಲ್ಲಿ ಭೇಟಿಗೆ ಅವಕಾಶ ನೀಡಬೇಕು ಎಂದು ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ನ ರಜಾ ಕಾಲದ ನ್ಯಾಯಪೀಠ ಜು.8ರಿಂದ ಅನ್ವಯವಾಗುವಂತೆ 2 ವಾರಗಳ ಕಾಲ ಜಿಲ್ಲೆಯ ಭೇಟಿಗೆ ಅವಕಾಶ ಕೊಟ್ಟಿದೆ. ಹೀಗಾಗಿ ಬರೋಬ್ಬರಿ ಆರು ವರ್ಷಗಳ ಬಳಿಕ ಜನಾರ್ದನ ರೆಡ್ಡಿ ತವರು ಜಿಲ್ಲೆಗೆ ಪ್ರವೇಶಿಸಿದಂತಾಗುತ್ತದೆ.
ನ್ಯಾಯಪೀಠದಲ್ಲಿದ್ದ ನ್ಯಾ.ಅಜಯ್ ರಸ್ತೋಗಿ ಮತ್ತು ನ್ಯಾ.ಇಂದಿರಾ ಬ್ಯಾನರ್ಜಿ 35 ಸಾವಿರ ಕೋಟಿ ರೂ. ಮೌಲ್ಯದ ಗಣಿ ಅಕ್ರಮದ ಬಗ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿ, ವಿಚಾರಣೆ ನಡೆಸದೇ ಇರುವ ಸಿಬಿಐ ವಿರುದ್ಧ ಆಕ್ಷೇಪವನ್ನೂ ವ್ಯಕ್ತಪಡಿಸಿದೆ.
ಮಾಜಿ ಸಚಿವ ರೆಡ್ಡಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎಸ್.ಗಣೇಶ್, ‘ಹಿಂದಿನ ಹಲವು ಸಂದರ್ಭಗಳಲ್ಲಿ ತಮ್ಮ ಕಕ್ಷಿದಾರರು ಬಳ್ಳಾರಿಗೆ ಭೇಟಿ ನೀಡಿದ್ದರು. ಆ ವೇಳೆ ಜಾಮೀನು ನೀಡಿದ ನಿಬಂಧನೆಗಳು ಉಲ್ಲಂಘನೆಯಾಗಿಲ್ಲ. ಸದ್ಯ ಅವರ ಮಾವನ ವರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಅವರಿಗೆ ಮೂರು ಬೈಪಾಸ್ ಸರ್ಜರಿಗಳಾಗಿವೆ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಗಂಭೀರವಾಗಿದೆ’ ಎಂದು ಅರಿಕೆ ಮಾಡಿಕೊಂಡರು. 2016ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಪ್ರಕರಣದ ಕ್ಷಿಪ್ರ ವಿಚಾರಣೆ ನಡೆಯುತ್ತಿಲ್ಲ ಎಂದು ರೆಡ್ಡಿ ಪರ ವಕೀಲರು ದೂರಿದರು.
ಜಾಮೀನಿಗೆ ವಿರೋಧ: ಸಿಬಿಐ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್, ಗಣಿ ಅಕ್ರಮದಲ್ಲಿ ರೆಡ್ಡಿ ಯವರೇ ಪ್ರಮುಖ ಆರೋಪಿಯಾಗಿರು ವುದರಿಂದ ಅವರಿಗೆ ಬಳ್ಳಾರಿಗೆ ತೆರಳಲು ಅನುಮತಿ ನೀಡುವುದು ಸರಿಯಲ್ಲ ಎಂದರು. ಇದೇ ಸಂದರ್ಭದಲ್ಲಿ ಆರು ವರ್ಷಗಳ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಕೆ ಮಾಡಿ, ವಿಚಾರಣೆ ಏಕೆ ಶುರು ಮಾಡಿಲ್ಲ ಮತ್ತು ವಿಳಂಬದಿಂದಾಗಿ ಆತಂಕ ವಾಗಿದೆ ಎಂದು ನ್ಯಾಯಪೀಠ ಆಕ್ಷೇಪಿಸಿತು. ಅದಕ್ಕೆ ಉತ್ತರಿಸಿದ ದಿವಾನ್, ಪ್ರಕರಣದಲ್ಲಿನ ಇತರ ಆರೋಪಿಗಳು ಆರೋಪ ಮುಕ್ತಗೊಳಿಸುವಂತೆ ದಾವೆ ಹೂಡಿದ್ದಾರೆ. ಅವುಗಳು ಇನ್ನೂ ವಿಚಾರಣೆ ಹಂತದಲ್ಲಿ ಇರುವುದರಿಂದ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದರು ಎಎಸ್ಜಿ.
ಅದಕ್ಕೆ ಉತ್ತರಿಸಿದ ನ್ಯಾಯಪೀಠ ಸದ್ಯ ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿಗೆ ಅನುಮತಿ ನೀಡುವ ಬಗ್ಗೆ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ಮಾತ್ರ ಕೈಗೆತ್ತಿಕೊಳ್ಳುವುದಾಗಿ ಹೇಳಿತು.