ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಅನುದಾನದ ಕೊರತೆ: ಎಸ್ಪಿ
Team Udayavani, Jun 17, 2019, 6:10 AM IST
ಉಡುಪಿ: ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಅನುದಾನದ ಕೊರತೆಯಿದೆ. ಎಷ್ಟು ಸೌಲಭ್ಯಗಳನ್ನು ನೀಡಲು ಸಾಧ್ಯವೋ ಅದನ್ನು ಪ್ರಮಾಣಿಕವಾಗಿ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದರು.
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧ ಸಂಘ ಸಹಯೋಗದಲ್ಲಿ ರವಿವಾರ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಅವರ ಕುಟುಂಬದವರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಪೊಲೀಸ್ ಸಿಬಂದಿ ಇಲ್ಲಿನ ಜನರ ಜತೆ ಉತ್ತಮ ಬಾಂಧವ್ಯದಿಂದ ಕೆಲಸ ಮಾಡಿದ್ದಾರೆ ಎಂದರು.
ಆಸ್ಪತ್ರೆ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಮಾತನಾಡಿ, ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳು ಆರೋಗ್ಯದ ಕಡೆ ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ನಿವೃತ್ತಿ ಬಳಿಕ ಅವರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಜನರಿಗೆ ತೋರಿಸುವ ಪ್ರೀತಿ ಬೇರೆಲ್ಲೂ ಕಾಣಸಿಗುವುದಿಲ್ಲ ಎಂದರು.
ಶಿಬಿರದಲ್ಲಿ ಸುಮಾರು 60ಕ್ಕೂ ಹೆಚ್ಚಿನ ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಅವರ ಕುಟುಂಬದವರ ಕಣ್ಣಿನ ತಪಾಸಣೆ ನಡೆಯಿತು.
ಸಂಘದ ವತಿಯಿಂದ ಎಸ್ಪಿ ನಿಶಾ ಜೇಮ್ಸ್ ಹಾಗೂ ಆಸ್ಪತ್ರೆಯ ನಿರ್ದೇಶಕ ಡಾ| ಕೃಷ್ಣ ಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು.
ನಿವೃತ್ತ ಪೊಲೀಸ್ ಅಧಿಕಾರಿ ಸುಧಾಕರ್ ಹೆಗ್ಡೆ ಉಪಸ್ಥಿತರಿದ್ದರು. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಡಾ| ಪ್ರಭುದೇವ ಮಾನೆ ಸ್ವಾಗತಿಸಿದರು.
ಆರೋಗ್ಯ ವಿಮೆ ಮೊತ್ತ ಹೆಚ್ಚಳವಾಗಬೇಕಿದೆ
ಆರೋಗ್ಯ ಯೋಜನೆಗಳು ಒಂದೊಂದರಲ್ಲಿ ವಿಲೀನ ಆಗುತ್ತಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಜಾರಿಗೆ ತಂದ “ಆರೋಗ್ಯ ಯೋಜನೆ’ ವಿಮೆ ಕೇವಲ 2 ಲ.ರೂ. ಮೊತ್ತವನ್ನು ಹೊಂದಿದೆ. ಇದರಿಂದಾಗಿ ದೊಡ್ಡ ಶಸ್ತ್ರ ಚಿಕಿತ್ಸೆ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿಗಳು ಕೈಯಿಂದ ಹಣ ಹಾಕಬೇಕಾಗುತ್ತದೆ. ಈ ಕುರಿತು ಮುಂದೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತನಾಡುವುದಾಗಿ ಡಾ| ಕೃಷ್ಣಪ್ರಸಾದ್ ತಿಳಿಸಿದರು.