ಕಡೆಗೂ ಬೋನಿಗೆ ಬಿದ್ದ ಚಿರತೆ : ಬಡಾವಣೆ ನಿವಾಸಿಗರು ನಿಟ್ಟುಸಿರು
Team Udayavani, Nov 19, 2020, 3:42 PM IST
ಹುಣಸೂರು: ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿದ್ದ ಸುಮಾರು 4 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಬೋನಿನಲ್ಲಿ ಬಂಧಿಯಾಗಿಸುವಲ್ಲಿ ಯಶಸ್ವಿಯಾಗಿದೆ.
ನಗರ ಸಮೀಪದ ಬಾಚಹಳ್ಳಿ ರಸ್ತೆಯ ಆದರ್ಶ ಶಾಲೆ ಸುತ್ತಮುತ್ತಲಿನ ಹಂದಿ ಜೋಗಿಗಳ ಬಡಾವಣೆ, ಅಂಬೇಡ್ಕರ್ ಕಾಲೋನಿ, ಬಾಚಹಳ್ಳಿ ಕ್ರಾಸ್ನಲ್ಲಿನ ಮನೆಗಳ ಸಾಕು ನಾಯಿಗಳನ್ನು ಕೊಂದು ತಿಂದು ಹಾಕುತ್ತಿದ್ದ ಚಿರತೆ ಬೋನ್ನಲ್ಲಿ ಸೆರೆಯಾಗಿದೆ.
ಆದರ್ಶ ಶಾಲೆಯ ಪಕ್ಕದ ಕಲ್ಲು ಮಂಟಿ ಬಳಿಯಿಂದ ಹೊರಬರುತ್ತಿದ್ದ ಚಿರತೆಯು ನಾಯಿಗಳನ್ನು ಕೊಂದು ಹಾಕುತ್ತಿದ್ದು, ಹಂದಿ ಜೋಗಿಗಳ ಕಾಲೋನಿಯ ಬಳಿಯಲ್ಲೂ ಕಾಣಿಸಿ ಕೊಂಡಿತ್ತು. ಚಿರತೆ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಲ್ಲು ಮಂಟಿ ಬಳಿಯ ಚಂದ್ರಶೇಖರ್ ಅವರ ಜಮೀನಿನಲ್ಲಿ ಬೋನ್
ಇರಿಸಲಾಗಿತ್ತು. ಬುಧವಾರ ಮುಂಜಾನೆ ನಾಯಿ ತಿನ್ನುವ ಆಸೆಯಿಂದ ಬೋನ್ ನೊಳಕ್ಕೆ ಹೊಕ್ಕಿದ್ದ ಚಿರತೆಯು ಸೆರೆಯಾಗಿದ್ದು, ಸೆರೆ ಸಿಕ್ಕಿರುವ ಚಿರತೆಯನ್ನು ನಾಗರ ಹೊಳೆ ಉದ್ಯಾನ ಡಿ.ಬಿ.ಕುಪ್ಪೆ ವಲಯದಲ್ಲಿ ಬಿಡಲಾಗುವುದೆಂದು ಹುಣಸೂರು
ವಲಯದ ಆರ್ಎಫ್ಓ ಸಂದೀಫ್ “ಉದಯವಾಣಿ’ಗೆ ಮಾಹಿತಿ ನೀಡಿದರು.