ಮುಂಗಾರು ಮತ್ತೆ ಚುರುಕು: ವಿವಿಧೆಡೆ ಉತ್ತಮ ಮಳೆ
Team Udayavani, Jul 3, 2020, 6:38 AM IST
ಮಹಾನಗರ: ಕೆಲವು ದಿನಗಳಿಂದ ದುರ್ಬಲಗೊಂಡ ಮುಂಗಾರು ಗುರುವಾರ ಮತ್ತೆ ಚುರುಕುಗೊಂಡಿದೆ. ಸಂಜೆ ವೇಳೆ ನಗರಾದ್ಯಂತ ಉತ್ತಮ ಮಳೆಯಾಗಿದ್ದು, ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತಿದೆ.
ಮೂರು ದಿನ “ಆರೆಂಜ್ ಅಲರ್ಟ್’
ಭಾರತೀಯ ಹವಾಮಾನ ಇಲಾಖೆಯ ಸದ್ಯದ ಮಾಹಿತಿಯಂತೆ ಮುಂದಿನ ಮೂರು ದಿನಗಳ ಕಾಲ ರಾಜ್ಯ ಕರಾವಳಿ ಭಾಗದಲ್ಲಿ “ಆರೆಂಜ್ ಅಲರ್ಟ್’ ಘೋಷಣೆ ಮಾಡಿದೆ.
ಈ ಪ್ರಕಾರ ಕರಾವಳಿ ಭಾಗದಲ್ಲಿ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಂಭವವಿದೆ. ಈ ವೇಳೆ ಭಾರೀ ಮಳೆಯ ಜತೆ ಗಾಳಿ, ಗುಡುಗು ಕೂಡ ಇರಲಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ.
ಕೆಲವು ದಿನ ಗಳಿಂದ ಕರಾವಳಿ ಭಾಗದಲ್ಲಿ ಮುಂಗಾರು ದುರ್ಬಲಗೊಂಡಿತ್ತು. ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೆರಡು ದಿನಗಳಲ್ಲಿ ಮುಂಗಾರು ಮತ್ತೆ ಚುರುಕುಗೊಂಡು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೆಎಸ್ಎನ್ಡಿಎಂಸಿ ವಿಜ್ಞಾನಿ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಮೂಡುಬಿದಿರೆ: ಭಾರೀ ಮಳೆ
ಮೂಡುಬಿದಿರೆ: ಗುರುವಾರ ಮೂಡು ಬಿದಿರೆಯಲ್ಲಿ ಆಗಾಗ ಮಳೆ ಬೀಳುತ್ತಿದ್ದು, ಅಪರಾಹ್ನ 4 ಗಂಟೆ ವೇಳೆಗೆ ಗುಡುಗು -ಸಿಡಿಲು ಸಹಿತ ಭಾರೀ ಮಳೆ ಸುರಿಯಿತು.
ಸುರತ್ಕಲ್: ಕೆಲವೆಡೆ ಮನೆಗಳಿಗೆ ನೀರು
ಸುರತ್ಕಲ್: ಪಣಂಬೂರು, ಸುರತ್ಕಲ್ವಾÂಪ್ತಿಯಲ್ಲಿ ಗುರುವಾರ ಭಾರೀ ಮಳೆಯಾಗಿದೆ. ಕೆಲವಡೆ ತಗ್ಗು ಪ್ರದೇಶದಲ್ಲಿ ನೀರು ನಿಂತು ಹಲವು ಮನೆಗಳಿಗೆ ಸಮಸ್ಯೆಯಾಗಿದೆ.
ಈ ಭಾರೀ ಮಳೆಗೆ ಮುನ್ನ ಚರಂಡಿ ದುರಸ್ತಿ ಪಡಿಸಿದ್ದರಿಂದ ಹೆಚ್ಚಿನ ಸಮಸ್ಯೆ ಆಗದಿದ್ದರೂ ಕೃಷ್ಣಾಪುರದ ಕೆಲವೆಡೆ ತಗ್ಗು ಪ್ರದೇಶದ ಮನೆಗೆ ಚರಂಡಿ ಸಮಸ್ಯೆಯಿಂದ ನೀರು ನಿಂತಿದೆ.
ತುರ್ತು ಸಹಾಯವಾಣಿ
ಜಿಲ್ಲಾಡಳಿತ 1077
ಪಾಲಿಕೆ ಕಚೇರಿ 0824: 2220306
ಅರಣ್ಯ ಇಲಾಖೆ 0824-2423913
ಮೆಸ್ಕಾಂ 1912