ರಾ.ಹೆ. 169 ಕಾಮಗಾರಿ: ಒಂದೇ ಮಳೆಗೆ ವಾಸ್ತವ ದರ್ಶನ
Team Udayavani, Jun 14, 2019, 6:10 AM IST
ಉಡುಪಿ: ಒಂದೇ ಒಂದು ಬಿರುಸಿನ ಮಳೆಗೆ ಉಡುಪಿ-ಮಣಿಪಾಲ ರಾ.ಹೆ.169ಎ ರಸ್ತೆಯಲ್ಲಿ ಅಲ್ಲಲ್ಲಿ ನಿಂತ ನೀರು ಅವೈಜ್ಞಾನಿಕ ಕಾಮಗಾರಿಯ ವಾಸ್ತವ ದರ್ಶನವನ್ನು ಜನರಿಗೆ ನೀಡಿದೆ.
ನೀರಿನ ಕೊರತೆಯಿಂದ ಕಂಗೆಟ್ಟಿದ್ದ ನಗರದ ಜನರು ಗುರುವಾರ ಸುರಿದ ಮಳೆಯಿಂದ ಒಂದಿಷ್ಟು ಖುಷಿಗೊಂಡರೂ ಮಣಿಪಾಲ-ಉಡುಪಿ ಮಾರ್ಗದ ಸ್ಥಿತಿಯನ್ನು ಕಂಡು ಕಂಗಾಲಾದರು.
ಅಲ್ಲಲ್ಲಿ ಭೂ ಕುಸಿತ !
ಮಣಿಪಾಲ- ಕಡಿಯಾಳಿ ಮಾರ್ಗದಲ್ಲಿ ಹಿಂದೆಯಿದ್ದ ಚರಂಡಿಗಳು ಮಾಯವಾಗಿದೆ. ಹೊಸದಾಗಿ ನಿರ್ಮಾಣವಾದ ಚರಂಡಿಯಲ್ಲಿ ನೀರು ಹರಿಯುತ್ತಿಲ್ಲ. ರಸ್ತೆಯ ಸಮೀಪದಲ್ಲಿ ಲಕ್ಷ್ಮೀಂದ್ರ ನಗರ ಸಮೀಪದ ಮನೆ ಆವರಣಗೋಡೆಗೆ ತಾಗಿಕೊಂಡಿರುವ ಚರಂಡಿಯಲ್ಲಿ ನೀರು ಹರಿದು ಹೋಗುತ್ತಿದೆ. ರಸ್ತೆಯಲ್ಲಿ ಭಾರೀ ಪ್ರಮಾಣ ನೀರು ಹರಿದು ಹೋಗುತ್ತಿರುವುದರಿಂದ ಅಲ್ಲಲ್ಲಿ ಭೂ ಕುಸಿತವಾಗಿದೆ.
ಕಂಡಲ್ಲಿ ನೀರು
ಮಣಿಪಾಲ ಎಂಐಟಿ ಜಂಕ್ಷನ್, ಕಡಿಯಾಳಿ, ವಿಪಿ ನಗರ, ಮಣಿಪಾಲ ಬಸ್ ನಿಲ್ದಾಣ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಳೆ ನೀರು ತುಂಬಿಕೊಂಡು ಸಾರ್ವಜನಿಕರು ನಡೆದಾಡಲು ಪರದಾಡಬೇಕಾಯಿತು.
ಮೃತ್ಯುವಿಗೆ ಆಹ್ವಾನಿಸುವ ಟ್ರಾನ್ಫಾರ್ಮರ್
ಪರ್ಕಳದಿಂದ ಮಣಿಪಾಲದವರೆಗಿನ ಮಾರ್ಗದಲ್ಲಿ ಮೂರಕ್ಕಿಂತ ಹೆಚ್ಚಿನ ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿವೆ. ಹೆ.ರಾ. ಕಾಮಗಾರಿ ಸಮಯ ಚರಂಡಿ ನಿರ್ಮಾಣಕ್ಕೆ ಯಾವುದೇ ಸುರಕ್ಷಾ ಕ್ರಮ ಕೈಗೊಳ್ಳದೆ ರಸ್ತೆಯ ಇಕ್ಕೆಲವನ್ನು ಅಗೆಯಲಾಗಿದೆ. ಇದೀಗ ಮಳೆ ಬಂದಿರುವುದರಿಂದ ಚರಂಡಿಯ ಪಕ್ಕದ ಮಣ್ಣು ಸರಿದಿದೆ. ಪರ್ಕಳ ಮಾರ್ಗದ ಪೆಟ್ರೋಲ್ ಪಂಪ್ ಬಳಿಯ ಹಾಗೂ ಪರ್ಕಳ ಪೇಟೆಯ ಸಮೀಪದ ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳು ಜೋರಾಗಿ ಮಳೆ ಬಂದರೆ ಧರೆಗೆ ಉರುಳಿ ವಾಹನ ಸವಾರರಿಗೆ ಅಪಾಯವಾಗುವ ಸಾಧ್ಯತೆ ಇದೆ.