ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಿ
Team Udayavani, Oct 8, 2020, 12:07 PM IST
ಗದಗ: ಕಳೆದ ವರ್ಷ ಭೀಕರ ನೆರೆ, ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರಕಾರ
ವಿಫಲವಾಗಿದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ವೇದಿಕೆ ರೈತ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ
ಪ್ರತಿಭಟನೆ ನಡೆಯಿತು.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ, ಹೊಳೆಆಲೂರಿನಲ್ಲಿ ಸಂಪೂರ್ಣ ಬಿದ್ದ ಮನೆಗಳಿಗೆ “ಸಿ’ ಗ್ರೇಡ್
ನೀಡಿದ್ದಾರೆ. ಅನೇಕ ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ದೊರಕಿಲ್ಲ. ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡಿದ್ದೇವೆಂದು ಜಾಹೀರಾತು ನೀಡಿ ಮುಗ್ಧರನ್ನು ವಂಚಿಸುತ್ತಿದೆ. ಒಂದು ವರ್ಷದಿಂದ ಬಿದ್ದ ಮನೆಯ ಪರಿಹಾರಕ್ಕೆ ಕಚೇರಿಗೆ ಅಲೆದಾಡಿ ಬೇಸತ್ತಿದ್ದಾರೆ.
ಸಂತ್ರಸ್ತರು, ದಿನನಿತ್ಯ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಅತಿವೃಷ್ಟಿಯಿಂದ ಬೆಳೆ ಹಾಳಾಗಿದೆ. ಇರಲು ಮನೆ ಇಲ್ಲ. ಸರ್ಕಾರ ಕೂಡಲೇ ಸಂತ್ರಸ್ತರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಇದನ್ನೂ ಓದಿ :ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
ರೈತ ಘಟಕದ ರಾಜ್ಯಾಧ್ಯಕ್ಷ ಪ್ರಭುರಾಜಗೌಡ ವಿ. ಪಾಟೀಲ ಮಾತನಾಡಿ, ನೆರೆ ಸಂತ್ರಸ್ತರ ಬಗ್ಗೆ ಸರಕಾರಕ್ಕೆ ಕಾಳಜಿ ಇದ್ದರೆ,
ಅಗತ್ಯ ಪರಿಹಾರ ನೀಡಲಿ. ಇಲ್ಲವೇ ವಿಷ ಕೊಡಿ ಆಕ್ರೋಶ ವ್ಯಕ್ತಪಡಿಸಿದರು. ಕ್ರಾಂತಿಸೇನಾ ಅಧ್ಯಕ್ಷ ಬಾಬು ಬಾಕಳೆ, ಸಾಮಾಜಿಕ ಹೋರಾಟಗಾರ ಚಂದ್ರಶೇಖರ ಹರಿಜನ, ಹೊಳೆಆಲೂರಿನ ಯುವ ರೈತ ಮುಖಂಡ ವೀರೇಶ ಹಿರೇಮಠ, ಸಂತೋಷ ಪಾಟೀಲ, ಪ್ರಶಾಂತ ದಾಸರ, ಮಹೇಶ ಕೆಂಚನಗೌಡ್ರ, ಬಸವರಾಜ ಪಾಟೀಲ, ಶ್ರೀದೇವಿ ಹಿರೇಮಠ, ಈರಯ್ಯ ಕುರುಡಗಿ, ಶಾವಕ್ಕ ಹೂಗಾರ, ಶಿವನಗೌಡ ಬೆಳದಡಿ, ಬಸವರಾಜ ಮುಗಳಿ ಇತರರಿದ್ದರು.