ಅಡ್ಯಾಲು ನಿವಾಸಿಗಳ ಮನವೊಲಿಸಿದ ಎಸಿ
ರಸ್ತೆ ಸಮಸ್ಯೆ ಶೀಘ್ರ ಪರಿಹಾರ: ಭರವಸೆ
Team Udayavani, Apr 17, 2019, 6:00 AM IST
ಕುಳ: ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಮಾಡದೆ ನೋಟಾ ಚಲಾಯಿಸುವುದಾಗಿ ಹೇಳಿದ್ದ ಅಡ್ಯಾಲು ನಿವಾಸಿಗಳನ್ನು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಭೇಟಿ ಮಾಡಿ, ಅಹವಾಲು ಆಲಿಸಿದ್ದಾರೆ.
ಸಂಪರ್ಕ ರಸ್ತೆ ಒದಗಿಸದ ರಾಜಕೀಯ ಪಕ್ಷಗಳ ಮೇಲೆ ಮುನಿಸಿಕೊಂಡಿರುವ ಇಲ್ಲಿನ ಅಡ್ಯಾಲು ನಿವಾಸಿಗಳು ಲೋಕಸಭಾ ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕುವುದಾಗಿ ಫ್ಲೆಕ್ಸ್ ಅಳವಡಿಸಿದ್ದರು. ಇದು ಚುನಾವಣೆ ಗೌಪ್ಯತೆಯ ಉಲ್ಲಂಘನೆ ಎಂದು ಬಂಟ್ವಾಳ ತಹಶೀಲ್ದಾರ್ ಹಾಗೂ ಗ್ರಾ.ಪಂ. ಅಧಿಕಾರಿಗಳು ನೀತಿ ಸಂಹಿತೆ ಹಿನ್ನೆಲೆ ಹಾಗೂ ಪಂಚಾಯತ್ ಪರವಾನಿಗೆ ಪಡೆಯದ ಹಿನ್ನೆಲೆಯಲ್ಲಿ ಫ್ಲೆಕ್ಸ್ ತೆರವುಗೊಳಿಸಿದ್ದರು.
ಸಮಾಧಾನ ತಂದಿದೆ
ಚುನಾವಣೆ ಬಳಿಕ ಅಧಿಕಾರಿಗಳು ರಸ್ತೆ ಸಮಸ್ಯೆ ಪರಿಹರಿಸಲು ಶ್ರಮಿಸುವರು ಎಂದು ಭರವಸೆ ನೀಡಿದ ಸಹಾಯಕ ಆಯುಕ್ತರು, ಸ್ಥಳೀಯರಲ್ಲಿ ಧೈರ್ಯ ತುಂಬಿದ್ದಾರೆ. ಈ ವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿರಲಿಲ್ಲ. ನಮ್ಮ ಹೋರಾಟಕ್ಕೆ ಅಂಬೇಡ್ಕರ್ ತಣ್ತೀರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಸಹಕರಿಸುತ್ತಿದ್ದು, ಸಹಾಯಕ ಆಯುಕ್ತರು ನಮ್ಮನ್ನು ಭೇಟಿಯಾಗಿ, ಪರಿಶೀಲಿಸಿ, ಸಮಸ್ಯೆ ಆಲಿಸಿದ್ದಾರೆ. ರಸ್ತೆ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ಗೆ ಸೂಚಿಸಿದ್ದಾರೆ. ಈ ಕ್ರಮ ನಮಗೆ ಸಮಾಧಾನ ತಂದಿದೆ ಎಂದು ಜಯ ಪೂಜಾರಿ ಹೇಳಿದರು.
ಗ್ರಾಮ ಲೆಕ್ಕಿಗರಾದ ಮಂಜುನಾಥ್, ಪ್ರಕಾಶ್ ವಿಟ್ಲ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಕಂದಾಯ ಉಪನಿರೀಕ್ಷಕ ದಿವಾಕರ್, ಕುಳ ಗ್ರಾಮ ಸಹಾಯಕ ರಾಘವ ಗೌಡ ಉಪಸ್ಥಿತರಿದ್ದರು.