ಉಳ್ತೂರು: ಯಾಂತ್ರೀಕೃತ ಭತ್ತದ ಬೀಜ ಬಿತ್ತನೆಗೆ ಮೊರೆ ಹೋದ ಗ್ರಾಮೀಣ ರೈತರು
ಕರಾವಳಿಯಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ
Team Udayavani, May 31, 2019, 6:10 AM IST
ತೆಕ್ಕಟ್ಟೆ : ಬದಲಾದ ಕಾಲದಲ್ಲಿ ಕರಾವಳಿಯ ಸಾಂಪ್ರದಾಯಿಕ ಕೃಷಿಕರಿಗೆ ಎದುರಾದ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯ ಪರಿಣಾಮವಾಗಿ ಯಾಂತ್ರೀಕೃತ ಬೀಜ ಬಿತ್ತನೆ ಕಾರ್ಯಕ್ಕೆ ಮೊರೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಮುಂಗಾರು ಮಳೆಯ ಆಗಮನದ ನಿರೀಕ್ಷೆಯಲ್ಲಿದ್ದ ರೈತರು ಗದ್ದೆಗಳಿಗೆ ಗೊಬ್ಬರ ಬಿತ್ತಿ ಹದವಾಗಿರಿಸಿದ್ದು ಕಳೆದೆರಡು ದಿನಗಳಿಂದ ಯಾಂತ್ರೀಕೃತ ಬೀಜ ಬಿತ್ತನೆ ಮಾಡುತ್ತಿದ್ದಾರೆ.
ಭತ್ತದ ನೇರ ಕೂರಿಗೆ ಬಿತ್ತನೆ
ಸಾಂಪ್ರದಾಯಿಕ ಕೃಷಿಕರು ಮಳೆಯ ಆಗಮನದ ಮೊದಲೇ ಬೀಜ ಬಿತ್ತಬೇಕು ಎನ್ನುವ ತವಕದಲ್ಲಿದ್ದಾರೆ. ಈ ಹಿಂದೆ ಸಾಂಪ್ರದಾಯಿಕವಾಗಿ ಬೀಜ ಬಿತ್ತನೆ ಮಾಡಿ 20 ದಿನಗಳ ನಂತರ ನೇಜಿ ಕಾರ್ಯ ಮಾಡುವ ಪದ್ಧತಿ ಇತ್ತು.
ಆದರೆ ಬದಲಾದ ಕಾಲಕ್ಕೆ ಹೊಂದಿಕೊಂಡ ಗ್ರಾಮೀಣ ರೈತ ಸಮುದಾಯ ಮಾನವ ಶಕ್ತಿಯ ಬಳಕೆ ಕಡಿಮೆ ಮಾಡಿ ಯಾಂತ್ರೀಕೃತ ಬೀಜ ಬಿತ್ತನೆ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ.
ಹವಾಮಾನದ ವರದಿಯ ಅಧ್ಯಯನದ ಆಧಾರದ ಮೇಲೆ ಯಂತ್ರಗಳ ಸಹಾಯದಿಂದ ತಂತ್ರಜ್ಞಾನವನ್ನು ಬಳಸಿಕೊಂಡು ಭತ್ತದ ನೇರ ಕೂರಿಗೆ ಬಿತ್ತನೆಯ ಪರಿಣಾಮ ಕೃಷಿ ಕಾರ್ಮಿಕರ ಕೂಲಿಗಳು ಸಂಪೂರ್ಣ ಉಳಿತಾಯವಾಗಿ ಬೀಜ ಹಾಗೂ ಗೊಬ್ಬರಗಳು ಮಿತವಾಗಿ ಬಳಕೆಯಾಗುವುದು ಎನ್ನುವುದು ಕೃಷಿ ಇಲಾಖೆಯ ತ್ರಿವೇಣಿ ಅವರ ಅಭಿಪ್ರಾಯ.
ಕೃಷಿ ಚಟುವಟಿಕೆಯಲ್ಲಿ ಹೊಸತನ
ಕೃಷಿ ಇಲಾಖೆ, ಇಕ್ರಿಸ್ಯಾಟ್ ಸಿಮ್ಮಿಟ್ ಸಹಯೋಗದೊಂದಿಗೆ ಭೂ ಸಮೃದ್ಧಿ ಯೋಜನೆ ಅಡಿಯಲ್ಲಿ ಟ್ಯಾಕ್ಟರ್ನಿಂದ ಭತ್ತದ ನೇರ ಕೂರಿಗೆ ಬಿತ್ತನೆಯ ಪ್ರಾತ್ಯಕ್ಷಿಕೆಗಳ ಮೂಲಕ ಕರಾವಳಿಗೆ ಮುಂಗಾರು ಮಳೆ ಆಗಮಿಸುವ ಮೊದಲೇ ಬೀಜ ಬಿತ್ತನೆ ಮಾಡಲಾಗುತ್ತಿದೆ. ಅಲ್ಲದೆ ರೈತರಲ್ಲಿ ಕೃಷಿ ಚಟುವಟಿಕೆಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲು ಸಹಾಯಕವಾಗುತ್ತಿದೆ.
ಗಂಟೆಗೆ 1 ಎಕರೆ ಕೃಷಿ ಭೂಮಿಗೆ ಬೀಜ ಬಿತ್ತನೆ
ಟ್ರ್ಯಾಕ್ಟರ್ ಭತ್ತದ ನೇರ ಕೂರಿಗೆ ಬಿತ್ತನೆಯಿಂದಾಗಿ ನೀರು, ಬೀಜ,ಗೊಬ್ಬರ ಹಾಗೂ ಕೃಷಿ ಕೂಲಿಕಾರ್ಮಿಕರ ಸಂಬಳಗಳು ಉಳಿತಾಯವಾಗುತ್ತವೆೆ. ಏಕ ಕಾಲದಲ್ಲಿ ಟ್ರ್ಯಾಕ್ಟರ್ 9 ಕಿರಿದಾದ ನೇಗಿಲಗಳು ಉಳುತ್ತಾ ಸುಮಾರು 9 ಇಂಚು ಅಂತರದಲ್ಲಿ ಬೀಜ ಬಿತ್ತನೆಯಾಗುವುದು.
ಒಟ್ಟಿನಲ್ಲಿ ಗಂಟೆಗೆ ಸುಮಾರು 1 ಎಕರೆ ವಿಸೀರ್ಣದ ಕೃಷಿ ಭೂಮಿಗೆ ಬೀಜ ಬಿತ್ತನೆ ಮಾಡುವ ಸಾಮರ್ಥ್ಯವನ್ನು ಈ ಪದ್ಧತಿ ಹೊಂದಿದೆ.