ಗೋವಾದತ್ತ ಬಂಡಾಯ ಶಿವಸೇನೆ ಶಾಸಕರು; ನಾಳೆ ನೇರವಾಗಿ ಸದನಕ್ಕೆ
Team Udayavani, Jun 29, 2022, 11:20 AM IST
ಗುವಾಹಟಿ : ಗುವಾಹಟಿಯಿಂದ ಎಲ್ಲಾ ಬಂಡಾಯ ಶಿವಸೇನೆ ಶಾಸಕರನ್ನು ಗೋವಾಕ್ಕೆ ಕರೆದೊಯ್ಯಲು ಸ್ಪೈಸ್ಜೆಟ್ ವಿಮಾನ ತೆರಳಲಿದೆ.
ಏಕನಾಥ್ ಶಿಂಧೆ ಇತರ ನಾಲ್ಕು ಶಿವಸೇನೆಯ ಶಾಸಕರೊಂದಿಗೆ ಗುವಾಹಟಿಯ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದು, ಮಹಾರಾಷ್ಟ್ರದ ಶಾಂತಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸಲು ನಾನು ಇಲ್ಲಿದ್ದೇನೆ. ನಾಳೆ ಮುಂಬೈಗೆ ಹೋಗುತ್ತೇನೆ ಮತ್ತು ಎಲ್ಲಾ ಪ್ರಕ್ರಿಯೆಯನ್ನು ಅನುಸರಿಸುತ್ತೇನೆ. ಬಹುಮತ ಪರೀಕ್ಷೆಗೆ ಸಿದ್ಧ ಎಂದು ಹೇಳಿದ್ದಾರೆ.
ಈ ಹಿಂದೆ ಸ್ಪೈಸ್ಜೆಟ್ ವಿಮಾನವು ವಿಶೇಷ ಚಾರ್ಟರ್ ವಿಮಾನದ ಮೂಲಕ ಅವರನ್ನು ಸೂರತ್ನಿಂದ ಗುವಾಹಟಿಗೆ ಕರೆದೊಯ್ದಿತ್ತು.
ಗೋವಾದ ತಾಜ್ ರೆಸಾರ್ಟ್ ಮತ್ತು ಕನ್ವೆನ್ಷನ್ ಸೆಂಟರ್ನಲ್ಲಿ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, ಅವರು ನಾಳೆ ಮುಂಬಯಿಗೆ ತೆರಳಿ ನೇರವಾಗಿ ಮಹಾರಾಷ್ಟ್ರ ವಿಧಾನಸಭೆಗೆ ಹೋಗುತ್ತಾರೆ ಎಂದು ತಿಳಿದು ಬಂದಿದೆ.
ಇಂದು ಸಂಜೆ ಮುಂಬೈನ ತಾಜ್ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಸಮಾವೇಶಗೊಳ್ಳುವಂತೆ ಬಿಜೆಪಿ ತನ್ನ ಶಾಸಕರಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 30 ರಂದು ಸದನದಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಿರ್ದೇಶನವನ್ನು ಪ್ರಶ್ನಿಸಿ ಶಿವಸೇನೆ ಮುಖ್ಯ ಸಚೇತಕ ಸುನಿಲ್ ಪ್ರಭು ಸಲ್ಲಿಸಿರುವ ಅರ್ಜಿಯನ್ನು ಬುಧವಾರ ಸಂಜೆ 5 ಗಂಟೆಗೆ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿದೆ.
ಶಿವಸೇನೆಯ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಇಂದು ತುರ್ತು ವಿಚಾರಣೆಯನ್ನು ಕೋರಿ ಶಿವಸೇನೆಯ ಮುಖ್ಯ ಸಚೇತಕ ಸುನಿಲ್ ಪ್ರಭು ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ಪ್ರಸ್ತಾಪಿಸಿದರು. ಬಹುಮತ ಪರೀಕ್ಷೆಯು ಕಾನೂನುಬಾಹಿರವಾಗಿದೆ ಎಂದು ಹೇಳಿದ್ದಾರೆ.