ಹತ್ರಾಸ್ ಪ್ರಕರಣಕ್ಕೆ ಹೊಸ ತಿರುವು: ಎರಡೂ ಕುಟುಂಬಗಳ ನಡುವೆ 104 ಬಾರಿ ಫೋನ್ ಸಂಭಾಷಣೆ
Team Udayavani, Oct 7, 2020, 3:40 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಹತ್ರಾಸ್ನಲ್ಲಿ 19 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಅನಂತರ ಮಧ್ಯರಾತ್ರಿಯಲ್ಲಿ ಬಲವಂತವಾಗಿ ದಹನ ಮಾಡಿದ ಕ್ರಮ ದೇಶಾದ್ಯಂತ ಆಕ್ರೋಶವನ್ನು ಹೆಚ್ಚಿಸಿದು, ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಈ ಮಧ್ಯೆ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿದ್ದು ಮುಖ್ಯ ಆರೋಪಿ ಸಂದೀಪ್ ಮತ್ತು ಬಾಲಕಿಯ ಸಹೋದರನ ನಡುವೆ ದೂರವಾಣಿ ಕರೆಗಳು ನಡೆದಿವೆ ಎನ್ನಲಾಗಿದೆ. 2019ರ ಅಕ್ಟೋಬರ್ 13ರಿಂದ ಮಾರ್ಚ್ 2020ರ ವರೆಗೆ ಇವರಿಬ್ಬರು 104 ಬಾರಿ ಮಾತುಕತೆ ನಡೆಸಿದ್ದಾರೆ ಎಂಬ ಅಂಶ ತಿಳಿದುಬಂದಿದೆ. ಇವರು ಕರೆಯಲ್ಲಿ ಮಾತನಾಡಿದ ಒಟ್ಟು ಅವಧಿಯು ಸುಮಾರು 5 ಗಂಟೆಗಳು ಎನ್ನಲಾಗಿದೆ.
ಈ ಎರಡೂ ಕರೆಗಳ ನಡುವಿನ ಅಂತರ ಕೇವಲ 200 ಮೀಟರ್ ಆಗಿದೆ. ಸಂದೀಪ್ ಅವರಿಂದ 62 ಕರೆಗಳು ಮತ್ತು ಸಂತ್ರಸ್ತೆಯ ಸಹೋದರನಿಂದ 42 ಕರೆಗಳನ್ನು ಮಾಡಲಾಗಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಕರೆ ವಿವರ ವರದಿ (ಸಿಡಿಆರ್) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇವುಗಳು ಇದೇ ಪ್ರಕರಣಕ್ಕೆ ಸಂಬಂಧಿಸಿದ್ದಾಗಿವೆ ಅಲ್ಲವೇ ಎಂಬ ಕುರಿತಾದ ವಿವರವನ್ನು ಯಾವುದೇ ಅಧಿಕೃತ ಅಥವಾ ತನಿಖಾ ಸಂಸ್ಥೆ ದೃಢೀಕರಿಸಿಲ್ಲ.
ಸಂತ್ರಸ್ತೆಯ ಸಹೋದರನ ಫೋನ್ ಅನ್ನು ಅವರ ಪತ್ನಿ ಬಳಸಿದ್ದಾರೆ ಎಂದು ತನಿಖಾ ತಂಡದ ಮೂಲಗಳು ಹೇಳುತ್ತವೆ. ಅದೇ ಫೋನ್ ಸಂತ್ರಸ್ತೆ ಮತ್ತು ಸಂದೀಪ್ ನಡುವಿನ ಸಂಭಾಷಣೆಯ ದಾಖಲೆಯನ್ನು ನೀಡುತ್ತದೆ. ಸಿಡಿಆರ್ನಲ್ಲಿ, ಇಬ್ಬರ ನಡುವಿನ ಸಂಭಾಷಣೆಯಲ್ಲಿ ಸುಮಾರು 60 ಕರೆಗಳು ರಾತ್ರಿ ಸಮಯದಲ್ಲೇ ನಡೆದಿದ್ದು ಕಂಡುಬಂದಿದೆ. ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಗೃಹ ಇಲಾಖೆಯಿಂದ ಇನ್ನೂ 10 ದಿನ ಕಾಲಾವಕಾಶ ನೀಡಲಾಗಿದೆ. ಸಂತ್ರಸ್ತೆಯ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಘಟನೆಯಲ್ಲಿ ಏನಾಗಿತ್ತು?
ಸೆಪ್ಟೆಂಬರ್ 14 ರಂದು ಹತ್ರಾಸ್ನಲ್ಲಿ 4 ಜನರು 19 ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ಮಹಿಳೆಯ ಬೆನ್ನೆಲುಬು ಮುರಿದು ನಾಲಿಗೆ ಕೂಡ ಕತ್ತರಿಸಿದ ಗಂಭೀರ ಆರೋಪ ಅವರ ಮೇಲಿದೆ. ಸೆಪ್ಟಂಬರ್ 29ರಂದು ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಸರಕಾರ ಮಂಗಳವಾರ ಸಲ್ಲಿಸಿದ ಅಫಿಡವಿಟ್ನಲ್ಲಿ ಯಾವುದೇ ಅತ್ಯಾಚಾರದ ಬಗ್ಗೆ ಉಲ್ಲೇಖ ಇರಲಿಲ್ಲ.
ಯೋಗಿ ಸರಕಾರವು ಎಸ್ಐಟಿ ಮೂಲಕ ನಡೆಸುತ್ತಿದೆ. ಈ ನಡುವೆ ಪ್ರಕರಣವನ್ನು ಸಿಬಿಐಗೂ ಶಿಫಾರಸು ಮಾಡಲಾಗಿದೆ. ಸಂತ್ರಸ್ತೆಯ ಶವವನ್ನು ತರಾತುರಿಯಲ್ಲಿ ಮತ್ತು ನಿರ್ಲಕ್ಷ್ಯದಿಂದ ಸುಟ್ಟುಹಾಕಿದ ಆರೋಪದ ನಡುವೆ ಹತ್ರಾಸ್ನ ಎಸ್ಪಿ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ.