ಜಿಲ್ಲೆಯ ರೈಲು ನಿಲ್ದಾಣಗಳು ಅಭಿವೃದ್ಧಿಯತ್ತ
Team Udayavani, Jun 9, 2019, 6:10 AM IST
ಬಂಟ್ವಾಳ: ಜೋಡುಮಾರ್ಗ ರೈಲು ನಿಲ್ದಾಣ ಪ್ಲಾಟ್ಫಾರ್ಮ್ ಅಭಿವೃದ್ಧಿ ಕಾಮಗಾರಿ ಶೇ. 60ರಷ್ಟು ಮುಕ್ತಾಯ ಆಗಿದೆ. ಪ್ಲಾಟ್ಫಾರ್ಮ್ ಒಂದಕ್ಕೆ 1.57 ಕೋಟಿ ರೂ. ಮತ್ತು ಪ್ಲಾಟ್ಫಾರಂ ಎರಡಕ್ಕೆ 2.60 ಕೋಟಿ ರೂ. ಅನುದಾನ ಸಹಿತ ಜಿಲ್ಲೆಯ ಹತ್ತಾರು ರೈಲ್ವೆ ನಿಲ್ದಾಣಗಳು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಸಾರ್ವಜನಿಕರ ಬೇಡಿಕೆಯಂತೆ ಜೂ. 8ರಂದು ಬಿ.ಸಿ. ರೋಡ್ ನಗರದ ಜೋಡುಮಾರ್ಗ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಅಭಿವೃದ್ಧಿ ಕಾಮಗಾರಿವೀಕ್ಷಣೆ ನಡೆಸಿ ಮಾತನಾಡಿದರು.
ನಿಲ್ದಾಣದಿಂದ ಹತ್ತಿರದ ನಗರ ಸಂಪರ್ಕದ ಫೂಟ್ಬ್ರಿಡ್ಜ್ ಅವಕಾಶ ಕೊಡಬೇಕೆಂಬ ಬೇಡಿಕೆ ಯಂತೆ 78 ಲಕ್ಷ ರೂ. ಕಾಮಗಾರಿ ಆರಂಭವಾ ಗಿದೆ. ಸ್ಥಳೀಯ ಸಮಸ್ಯೆ ಪರಿಶೀಲಿಸಿ ಕ್ರಮ ಕೈಗೊಳ್ಳ ಲಾಗುತ್ತಿದೆ. ಅಭಿವೃದ್ಧಿ ಸಂದರ್ಭ ಸ್ವಾಭಾವಿಕವಾಗಿ ಹೊಸ ಸಮಸ್ಯೆಗಳು ಕಾಣುತ್ತವೆ ಎಂದರು.
ಬಂಟ್ವಾಳ ತಾ| ಕೇಂದ್ರ ಜೋಡು ಮಾರ್ಗ ರೈಲು ನಿಲ್ದಾಣಕ್ಕೆ 5.56 ಕೋ.ರೂ. ನೀಡಿದ್ದಕ್ಕೆ ಕೇಂದ್ರ ಸರಕಾರಕ್ಕೆ ಹಾಗೂ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಡಾ| ವಸಂತ ಬಾಳಿಗಾ, ಮೆಲ್ಕಾರ್ ಶ್ರೀನಿವಾಸ್ ಸಹಿತ ಇತರರು ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಸದರಿಗೆ ಮನವಿ ಮಾಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ. ಭಟ್, ರಮಾನಾಥ ರಾಯಿ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಪುರುಷೋತ್ತಮ ಶೆಟ್ಟಿ, ಸ್ಥಳೀಯರಾದ ಫ್ರಾನ್ಸಿಸ್, ರೈಲ್ವೇ ಸೆಕ್ಷನ್ ಎಂಜಿನಿಯರ್ ಕೆ.ಪಿ. ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.