ಉಪ್ಪಿನಂಗಡಿ: ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳ ಹೆತ್ತವರ ಮುತ್ತಿಗೆ
ಶಾಲಾ ವಾಹನಗಳ ಮೇಲಿನ ಕಠಿನ ನಿಯಮಗಳಿಗೆ ಆಕ್ಷೇಪ, ಪ್ರತಿಭಟನ ಸಭೆ
Team Udayavani, Jul 9, 2019, 5:47 AM IST
ಉಪ್ಪಿನಂಗಡಿ: ಶಾಲಾ ಮಕ್ಕಳ ಸಾಗಾಟ ವಾಹನದಲ್ಲಿ ಮಕ್ಕಳ ಸಂಖ್ಯೆಯ ಮಿತಿಯನ್ನು ಕಡ್ದಾಯಗೊಳಿಸಿ ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವ ಕಾನೂನು ಕ್ರಮವನ್ನು ಬಲವಾಗಿ ಆಕ್ಷೇಪಿಸಿ, ‘ಬಡ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಅವಕಾಶ ನೀಡಿ’ ಎಂಬ ಬೇಡಿಕೆಯೊಂದಿಗೆ ವಿದ್ಯಾರ್ಥಿಗಳ ಹೆತ್ತವರು ಸೋಮವಾರ ಪ್ರತಿಭಟನ ಸಭೆ ನಡೆಸಿ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಇಲ್ಲಿನ ಶ್ರೀಗುರು ಸುಧೀಂದ್ರ ಕಲಾ ಮಂದಿರದಲ್ಲಿ ನಡೆದ ಶಾಲಾ ಮಕ್ಕಳ ಹೆತ್ತವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಂತ ಪುರೋಳಿ, ಮಕ್ಕಳ ಭವಿಷ್ಯವನ್ನು ಹಾಗೂ ಹಿತವನ್ನು ಕಾಯ್ದುಕೊಂಡು ನಿಯಮಾವಳಿಗಳು ಅನುಷ್ಠಾನವಾಗಲಿ. ಶಾಲಾ ಮಕ್ಕಳ ಸಾಗಾಟ ವಾಹನದ ಚಾಲಕರ ದಾಖಲೆಗಳನ್ನು ವಶಕ್ಕೆ ಪಡೆದು ಅವರ ಪರವಾನಿಗೆಯನ್ನು ರದ್ದುಪಡಿಸುವುದು ಬಡಪಾಯಿ ಚಾಲಕರ ಬದುಕಿನ ಮೇಲಿನ ಸವಾರಿಯಾದೀತು ಎಂದು ತಿಳಿಸಿದರು.
ಗ್ರಾ.ಪಂ. ಸದಸ್ಯ ಸುರೇಶ್ ಅತ್ರಮಜಲು, ಶಾಲಾ ವಾಹನಗಳಲ್ಲಿ ಮಕ್ಕಳ ಸಂಚಾರ ಮಿತಿಯನ್ನು ಇಲ್ಲಿ ಮಾತ್ರ ಅನುಷ್ಠಾನ ಮಾಡಿದ್ದು ವಿಸ್ಮಯ ತಂದಿದೆ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರವೇ ಸಂಚಾರ ವ್ಯವಸ್ಥೆ ಯನ್ನು ಕಲ್ಪಿಸುವವರೆಗೆ ಈ ನಿಯಮಾವಳಿ ಅನುಷ್ಠಾನ ಸಲ್ಲದು ಎಂದರು.