ಬಹುತೇಕ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ರಜೆ
Team Udayavani, Jul 10, 2019, 5:00 AM IST
ಮಹಾನಗರ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಭಯ ಜಿಲ್ಲೆಯ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರು ಮಂಗಳವಾರ ತರಗತಿಗಳನ್ನು ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ಬಹುತೇಕ ಸರಕಾರಿ ಶಾಲೆಗಳು ಮುಚ್ಚಿದ್ದವು.
ತಮ್ಮ ವಿವಿಧ ಬೇಡಿಕೆಗಳು ಈಡೇರಿ ಸುವಂತೆ ಆಗ್ರಹಿಸಿ ಅವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ದ್ದರು. ಈ ಬಗ್ಗೆ ಮಾಹಿತಿ ಇದ್ದ ಕೆಲವು ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಆದರೆ ಕೆಲವು ವಿದ್ಯಾರ್ಥಿಗಳು ಶಾಲೆಗೆ ಬಂದು ವಿಷಯ ತಿಳಿದ ಬಳಿಕ ಹಿಂದಿರುಗಿದ್ದಾರೆ. ಬೆರಳಣಿಕೆಯಷ್ಟು ಶಾಲೆಗಳಲ್ಲಿ ಒಂದೆರಡು ಶಿಕ್ಷಕರು ತರಗತಿ ನಡೆಸಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಿಕ್ಷಕರು ಸಿಎಲ್ ಹಾಕಿದ್ದರು. ಹಾಗಾಗಿ ತರಗತಿಗಳು ನಡೆಸಿರಲಿಲ್ಲ. ಆದರೆ ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳು ಎಂದಿನಂತೆ ಕಾರ್ಯಾಚರಿಸಿದ್ದವು.
ಹಳೆಯಂಗಡಿ: ಶಿಕ್ಷಕರ ಪ್ರತಿಭಟನೆ, ಮಿಶ್ರ ಪ್ರತಿಕ್ರಿಯೆ
ಹಳೆಯಂಗಡಿ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ, ದ.ಕ.ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರು ನಡೆಸಿದ ಪ್ರತಿಭಟನೆಗೆ ಹಳೆಯಂಗಡಿ ವ್ಯಾಪ್ತಿಯ ಶಾಲೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಹಳೆಯಂಗಡಿಯ ಒಂದು ಶಾಲೆಯು ಬಂದ್ ಮಾಡಲಾಗಿದ್ದು ಮಕ್ಕಳಿಗೆ ರಜೆಯನ್ನು ಘೋಷಿಸಲಾಗಿತ್ತು. ಇನ್ನುಳಿದ ಮೂರು ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರು ಪ್ರತಿಭಟನೆಗೆ ಬೆಂಬಲ ಇಲ್ಲದಿದ್ದುದರಿಂದ ಶಾಲೆಯು ಎಂದಿನಂತೆ ತೆರೆದಿತ್ತು.