ರಾತ್ರಿ ಕರ್ಫ್ಯೂ ಜಾರಿಗಿಂತ ಮೊದಲು ಆಸ್ಪತ್ರೆ ಸುಧಾರಣೆ ಮಾಡಿ : ವಾಟಾಳ್ ನಾಗರಾಜ್ ಆಗ್ರಹ
Team Udayavani, Apr 9, 2021, 10:50 PM IST
ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ಕರ್ಫ್ಯೂ ಜಾರಿಯಿಂದ ಯಾವುದೇ ಪ್ರಯೋಜನವಿಲ್ಲ. ಮೊದಲ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಬೇಕು. ಅಲ್ಲಿಯವರೆಗೆ ಕರ್ಫ್ಯೂ ಜಾರಿ ಬೇಡ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಆಗ್ರಹಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಯಡಿಯೂರಪ್ಪ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸುಸಜ್ಜಿತ ಆಸ್ಪತ್ರೆ, ಹಾಸಿಗೆ, ವೆಂಟಿಲೇಟರ್ ವ್ಯವಸ್ಥೆ ಇರಬೇಕು. ಅದನ್ನು ಬಿಟ್ಟು ರಾತ್ರಿ ಕರ್ಫ್ಯೂ ಜಾರಿಗೊಳಿಸಿದರೆ ಪ್ರಯೋಜನವಿಲ್ಲ. ಮುಖ್ಯಮಂತ್ರಿಗಳಿಗೆ ತಾವು ಮಾಡಿದ್ದೇ ಸರಿ, ಹೇಳಿದ್ದೇ ಸರಿ ಎಂಬಂತಾಗಿದ್ದು, ಹಿಟ್ಲರ್ ರೀತಿ ವರ್ತಿಸುತ್ತಿರುವುದು ಒಳ್ಳೆಯದಲ್ಲ ಎಂದು ಕಿಡಿ ಕಾರಿದರು.
ವಿಶೇಷ ಸಂದರ್ಭ, ಸನ್ನಿವೇಶಗಳಲ್ಲಷ್ಟೇ ಕರ್ಫ್ಯೂ, ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ. ಆದರೆ ಇದೀಗ ಮನಸ್ಸಿಗೆ ಬಂದಂತೆ ಕರ್ಫ್ಯೂ, ನಿಷೇಧಾಜ್ಞೆ ಹೇರಲಾಗುತ್ತಿದ್ದು ಸರ್ಕಾರಕ್ಕೆ ಒಂದು ರೀತಿ ಹುಡುಗಾಟಿಕೆಯಂತಾಗಿದೆ.
ಇನ್ನೊಂದೆಡೆ ಉಪಚುನಾವಣೆ ನಡೆದಿರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿರುವ ಸಚಿವರು, ಶಾಸಕರೇ ಮಾಸ್ಕ್ ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ :‘ಕೊರೊನಾ ಕರ್ಫ್ಯೂ’ ಅಪಹಾಸ್ಯ ಮಾಡಿದವರಿಗೆ ತಿರುಗೇಟು ನೀಡಿದ ಸಚಿವ ಕೆ.ಸುಧಾಕರ್
ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಪಟ್ಟಂತೆ ಮೊದಲು ಕಾರ್ಮಿಕ ಮುಖಂಡರೊಂದಿಗೆ ಚರ್ಚಿಸಬೇಕು. ಕೇವಲ ಹೇಳಕೆಗಳಿಂದ ಪ್ರಯೋಜನವಿಲ್ಲ. ಆಟೋ, ಖಾಸಗಿ ಟ್ಯಾಕ್ಸಿಯವರು ಜನರನ್ನು ಸುಲಿಗೆ ಮಾಡುತ್ತಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕೆ ಹೊರತು ನೌಕರರಿಗೆ ಬೆದರಿಕೆಯೊಡ್ಡುವುದು ಸರಿಯಲ್ಲ ಎಂದು ಹೇಳಿದರು.