ಮಾತು ಆಡುವ ಮುನ್ನ ಎಚ್ಚರವಿರಲಿ!
Team Udayavani, Jun 1, 2020, 8:05 PM IST
ಸೌಮ್ಯಾ ತುಂಟ ಹುಡುಗಿ. ಪಟ, ಪಟ ಅಂತ ಮಾತನಾಡಿ ಬಿಡುತ್ತಾಳೆ. ಸ್ವಲ್ಪವೂ ಯೋಚಿಸುವುದಿಲ್ಲ. ಅಷ್ಟೇ ಯಾಕೆ ಅವಳು “ಇದ್ದದ್ದನ್ನೇ ನೇರವಾಗಿ ಹೇಳುತ್ತೇನೆ’ ಎಂಬ ದಾಷ್ಟ್ಯಧೈರ್ಯ ಅವಳಿಗಿದೆ. ಆದರೆ ಒಂದು ಸಾರಿ ಏನಾಯಿತು ಎಂದರೆ, ತನ್ನ ಮನೆಯಲ್ಲಿ ಕೌಟುಂಬಿಕ ವಿಚಾರವಾಗಿ ಮಾತನಾಡುವಾಗ ಮಾತುಕತೆ ತೀರಾ ವೈಯಕ್ತಿಕ ವಿಚಾರಕ್ಕೆ ಎಳೆದುಕೊಂಡು ಹೋಯಿತು. ಆ ಒಂದು ಕ್ಷಣದಲ್ಲಿ ಯೋಚಿಸದ ಸೌಮ್ಯಾ ತನ್ನ ಬಾವನಿಗೆ ಮನಬಂದಂತೆ ಮಾತನಾಡಿ, ಇಡೀ ಸಂಬಂಧವನ್ನು ಕಳೆದುಕೊಳ್ಳುತ್ತಾಳೆ. ಅಂದು ತುಂಡರಿಸಿದ ಸಂಬಂಧ ಇಂದಿಗೂ ಒಂದಾಗಿಲ್ಲ. ಆ ಸಮಯದ ಒಂದು ಮಾತು ಇಷ್ಟೆಲ್ಲಾ ಅವಾಂತರಕ್ಕೆ ಎಳೆದುಕೊಂಡು ಹೋಯಿತು.
ಈ ವಿಚಾರವಾಗಿ! ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ನಮ್ಮ ಜೀವನದಲ್ಲಿ ತುಂಬಾ ಹಾಸುಹೊಕ್ಕಾಗಿದೆ. ಈ ಮೇಲಿನ ಘಟನೆಯನ್ನು ತಿಳಿದಾಗ ನಮಗೆ ಹಾಗೆಯೇ ಅನಿಸುತ್ತದೆ. ತನ್ನಲ್ಲಿ ಆಗುತ್ತಿರುವ ಭಾವನೆ, ತುಡಿತಗಳಿಗೆ ಅಭಿವ್ಯಕ್ತಿ ರೂಪ ಕೊಡುವುದೇ ಮಾತು. ಹೀಗಾಗಿ ಬುದ್ಧಿಜೀವಿ ಮನುಷ್ಯನಿಗೆ ಮಾತು ಅವಶ್ಯ. ಮಾತು ಇಲ್ಲವಾದರೆ ಮನುಷ್ಯ ತುಂಬಾ ಹೆಣಗಾಡ ಬೇಕಾಗುತ್ತಿತ್ತು.
ನಮ್ಮ ಹಿರಿಯರು ನೀಡುವ ಸಲಹೆಗಳಲ್ಲಿ ಮಾತಿನ ಕುರಿತದ್ದೇ ಮೊದಲು ಆಗಿರುತ್ತದೆ. ನೀನು ಮಾತನಾಡುವಾಗ ಸರಿಯಾಗಿ, ಯೋಚಿಸಿ ಮಾತನಾಡು, ಇಲ್ಲವಾದರೆ ಆಡಿದ ಮಾತು ತಿರುಗಿ ಬರುವುದಿಲ್ಲ ಎಂಬುದನ್ನು ಕೇಳಿರುತ್ತೀರಿ. ಹೀಗಾಗಿ ಜವಾಬ್ದಾರಿ ನಾಗರಿಕನ ಲಕ್ಷಣಗಳಲ್ಲಿ ಮಾತಿಗೂ ಮಣೆಯಿದೆ.
ಈ ಹಿನ್ನೆಲೆಯಲ್ಲಿ ಮಾತನಾಡುವಾಗ ನಾವು ಅನುಸರಿಸಬೇಕಾದ ಅಂಶಗಳ ಬಗ್ಗೆ ನಾವು ಮಾತನಾಡೋಣಾ ಬನ್ನಿ…
ಯೋಚಿಸಿ ಮಾತನಾಡುವುದು
ವಿದ್ಯಾರ್ಥಿಗಳು ಅಥವಾ ನಾಗರಿಕರು ತಾವುಗಳು ಮಾತನಾಡುವ ಮುಂಚೆ ಸರಿಯಾಗಿ ಯೋಚಿಸಿ ಮಾತನಾಡಬೇಕಾಗುತ್ತದೆ. ನಮ್ಮ ಮಾತಿನಿಂದ ಆಗುವ ಅಪಾಯಗಳನ್ನು ನಾವು ಈ ಮೊದಲೇ ಗ್ರಹಿಸಿರಬೇಕಾಗುತ್ತದೆ. ಇಲ್ಲವಾದರೆ ತುಂಬಾ ತೊಂದರೆಗಳಿಗೆ ನಾವು ಒಳಗಾಗಬೇಕಾಗುತ್ತದೆ. ಈ ಕಾರಣಕ್ಕಾಗಿ ನಾವು ಯೋಚಿಸಿ ಮಾತನಾಡಬೇಕಾಗುತ್ತದೆ.
ಮಾತು ಎಂದರೆ ಅಮೂಲ್ಯವಾದುದು. ನಾವು ಗಂಭೀರವಾದ ವಿಷಯಗಳ ಬಗ್ಗೆ ಚರ್ಚೆ ಮಾಡುವಾಗ ಅದಕ್ಕೆ ತಕ್ಕಂತೆ ಕೂಡ ಪೂರ್ವ ತಯಾರಿಗೆ ಆಗಿರಬೇಕು. ಅನಗತ್ಯ, ಗೊತ್ತಿಲ್ಲದ ವಿಷಯಗಳನ್ನು ನಾವು ಪ್ರಸ್ತಾಪಿಸಬಾರದು. ಒಂದು ವೇಳೆ ಪ್ರಸ್ತಾಪಿಸಿದರೆ ಅದಕ್ಕೆ ಕನಿಷ್ಠ ಉತ್ತರವಾದರೂ ಇಟ್ಟುಕೊಂಡಿರಬೇಕಾಗುತ್ತದೆ. ಇಲ್ಲವಾದರೆ ನಗೆಪಾಟಲಿಗೆ ಗುರಿಯಾಗುತ್ತೇವೆ.
ಮಾತು ಬೇರೆಯವರನ್ನು ನೋವಿಸದಿರಲಿ
ನಾಲಗೆ ಎಂಬುವುದು ಜಗತ್ತಿನ ಶತ್ರುವಿದ್ದಂತೆ. ನಮ್ಮ ನಾಲಿಗೆಯಿಂದ ಹೊರಡಿದ ಒಂದು ಕುಹಕ ಮಾತಿನಿಂದ ನಮ್ಮ ಇಡೀ ವ್ಯಕ್ತಿತ್ವವನ್ನು ಅಳೆಯುವಂತಾಗುತ್ತದೆ. ಹೀಗಾಗಿ ನಮ್ಮ ಮಾತಿನಿಂದ ಇತರರನ್ನು ನೋಯಿಸದಂತೆ ಮಾತನಾಡಬೇಕು. ಈ ಮೇಲಿನ ಕಥೆಯಲ್ಲಿ ಸೌಮ್ಯಾ ಮಾತನಾಡುವಾಗ ಹಿರಿಯರು ಎಂಬ ಭಾವನೆ ತೋರಿ, ಸಮಾಧಾನದಿಂದ ಮಾತನಾಡಿದ್ದರೆ ಗೊಂದಲಆಗುತ್ತಿರಲಿಲ್ಲ. ಹಾಗಾಗಿ ನಾವು ಗೊಂದಲ ಮಾಡಿಕೊಳ್ಳಬಾರದಾದರೆ ನಾವು ಸೌಮ್ಯದಿಂದ ಇತರರನ್ನು ನೋವಿಸದಂತೆ ಮಾತನಾಡಿದಾಗ ನಮ್ಮ ವ್ಯಕ್ತಿತ್ವವೂ ಕೂಡ ಪ್ರಜ್ವಲಿಸುತ್ತದೆ.
ಮಾತು ವ್ಯಕ್ತಿತ್ವದ ಕೈಗನ್ನಡಿ
ನಮ್ಮ ಮಾತುಗಳು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಹಾಗಾಗಿ ನಾವು ತುಂಬಾಗೌರವ,ತಾಳ್ಮೆ ಮತ್ತು ಸೂಕ್ಷ್ಮವಾಗಿ ಮಾತನಾಡಬೇಕಾಗುತ್ತದೆ. ಸಂದರ್ಶನ, ಕುಶಲೋಪಚಾರ ಮಾಡುವಾಗ ನಮ್ಮ ಮಾತು ತುಂಬಾ ಪ್ರಾಮುಖ್ಯವಹಿಸುತ್ತದೆ. ಹೀಗಾಗಿ ನಮ್ಮ ವ್ಯಕ್ತಿತ್ವ ಪ್ರೇರಕವಾಗುವಂತೆ ಯಾವುದೇ ಗೊಂದಲ ಮಾಡಿಕೊಳ್ಳದೇ ಮಾತನಾಡಿ. ಇದು ವ್ಯಕ್ತಿತ್ವ ಕೈಗನ್ನಡಿಯಾಗಬಲ್ಲದು.
ಮಾತಿನ ಮುಂಚೆ ಅರಿಯಿರಿ
ಅರಿವು ಎಂಬುವುದು ನಮಗೆ ಮುಖ್ಯ. ಏಕೆಂದರೆ ಅರಿವು ಇದ್ದಲ್ಲಿ ಕೇಡು ಇರುವುದಿಲ್ಲ. ಹೀಗಾಗಿ ಅರಿವಿನಿಂದ ಮಾತನಾಡಿದಾಗ ನಮ್ಮ ಪ್ರಬುದ್ಧತೆಯನ್ನು ತೋರಿಸುತ್ತದೆ. ನಮ್ಮ ಮಾತು ಇನ್ನೊಬ್ಬರಿಗೆ ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅರಿವು ಇದ್ದಾಗ ನಮ್ಮ ಮಾತಿನಲ್ಲಿ ತೂಕ ಇರುತ್ತದೆ. ಇದರಿಂದ ನಮ್ಮ ವ್ಯಕ್ತಿತ್ವ ಹೊಳೆಯುತ್ತದೆ.
-ವೀರಭದ್ರ ರಾಮತ್ನಾಳ್,
ನ್ಯಾಶನಲ್ ಕಾಲೇಜು, ಸಿಂಧನೂರು (ರಾಯಚೂರು)