ಮಳೆ ಇಳೆಗೆ ಸೋಜಿಗವೇ ಸರಿ…
Team Udayavani, Jun 7, 2021, 9:00 AM IST
“ಮುಂಗಾರುಮಳೆಯೇ ಏನು ನಿನ್ನ ಹನಿಗಳ ಲೀಲೆ, ಭುವಿಗೆ ನಿನ್ನ ಹನಿಗಳ ಕೊರಳ ಮಾಲೆ’ ಮುಂಗಾರುಮಳೆ ಚಿತ್ರದ ಹಾಡಿನ ಸಾಲುಗಳನ್ನು ಕೇಳುತ್ತಿದ್ದರೆ ಏನೋ ಒಂಥರಾ ಮನಸ್ಸಿಗೆ ಆನಂದ. ಮಳೆ ಅಂದರೆ ಹಾಗೆ ಮೈ ಮನ ಎಲ್ಲವನ್ನು ನೆನೆಯುವಂತೆ ಮಾಡುತ್ತದೆ. ಮಳೆಯಾದರೆ ಮನುಕುಲದ ಸೃಷ್ಟಿ, ಅತಿಯಾದರೆ ಅನಾವೃಷ್ಠಿಗೆ ಕಾರಣ.
ಪ್ರತಿಸಲ ಮಳೆಯಲ್ಲೂ ನೆನೆದಾಗಲೂ ಒಂದು ಹೊಸ ಅನುಭವಕ್ಕೆ ಸಾಕ್ಷಿಯಾಗಿರುತ್ತದೆ. ಸೋತ ಕಣ್ಣುಗಳಿಂದ ಕಣ್ಣೀರ ಹನಿ ಜಾರಿದಾಗಲೂ ಮಳೆ ಸಾಂತ್ವನ ಹೇಳಿದೆ. ಖುಷಿಯ ಸಮಯದಲ್ಲೂ ಮಳೆ ಜತೆಗಿದೆ. ಪ್ರಕೃತಿ ಸೌಂದರ್ಯಕ್ಕೂ ಮಳೆಯ ಸ್ಪರ್ಶಬೇಕು. ಮಳೆಯೊಂದು ಅದ್ಭುತವಾದ ಚಿತ್ಕಾರ.
ಮೊದಲ ಮಳೆ ಕಾದು ಕೆಂಡವಾದ ಭೂಮಿಗೆ ಅಪ್ಪಳಿಸಿದ ಮೇಲೆ ಭೂಮಿಯಿಂದ ಬರುವ ಸುವಾಸನೆ ಇದೆಯಲ್ಲ ಅದು ಯಾವ ಸುಗಂಧ ದ್ರವ್ಯಕ್ಕೂ ಸರಿಸಾಟಿಯಿಲ್ಲ. ಸಿಡಿಲ ಅಬ್ಬರದ ಮಿಂಚಿನ ಸಂಚಲನದಲ್ಲಿ ಮಳೆಯ ಚಿತ್ತಾರ ಮೂಡುತ್ತದೆ.
ಬಿಸಿಲ ಬೇಗೆ ಮರೆ ಮಾಚಿ ಮೋಡ ಕರಿಗೆ ಭುವಿ ಒಡಲ ಸೇರುವುದು. ಮುಂಗಾರು ಮಳೆ ಪ್ರವೇಶವಾದರೆ ಕೃಷಿ ಚಟುವಟಿಕೆಯಲ್ಲಿ ರೈತ ನಿರತನಾಗುತ್ತಾನೆ. ಮಳೆಗೆ ಹಸಿರು ಮೈದುಂಬಿ ಕಂಗೊಳಿಸುತ್ತದೆ. ಸೃಷ್ಠಿಯ ಪ್ರತಿ ಜೀವ ಜಂತುವಿಗೂ ಮಳೆಯ ಆವಶ್ಯಕತೆ ಇದೆ.
ಎಲ್ಲರ ಬಾಲ್ಯದಲ್ಲೂ ಮಳೆಗೆ ತಮ್ಮದೆಯಾದ ಕಲ್ಪಿತ ಕಥೆಗಳನ್ನು ಸೃಷ್ಟಿಸಿದ್ದೆವು. ಶಿವ ಪಾರ್ವತಿಯನ್ನು ತವರು ಮನೆಗೆ ಹೋಗುತ್ತಾಳೆಂದು ಎರಡೇಟು ಕಾಪಾಳ ಮೋಕ್ಷ ಮಾಡಿದ್ದರಿಂದ ಪಾರ್ವತಿ ಇಡಿ ದಿನ ಅತ್ತದ್ದರಿಂದ .. ಆಕೆಯ ಕಣ್ಣೀರು ಮಳೆ ಎಂದು ಹೇಳು ತ್ತವೆ ಪುರಾ ಣ. ಇಂತಹ ಹಲವಾರು ಪುರಾಣ ಕಥೆ ಗಳು ಮಳೆಯ ಮೇಲೆ ಸೃಷ್ಠಿಯಾಗಿವೆ.
ಜಗದ ಸೋಜಿಗದಲಿ ಮಳೆ ಅದ್ಭುತ ಮಾಯೆ. ಸಮುದ್ರ ನೀರು ಆವಿಯಾಗಿ ಹೋಗಿ ಮೋಡ ನಿರ್ಮಾಣವಾಗಿ, ಅದೇ ಮೋಡ ಕರಿಗೆ ಮಳೆ ಸುಯ್ಯನೇ ಸುರಿಯುತ್ತದೆ.
ಜೀವ ಸಂಕುಲವೆಲ್ಲವೂ ವರ್ಷದಿಂದ ಮಳೆಗೆ ಕಾದು ಕುಳಿತಿರುತ್ತವೆ. ರೈತ ಹಣೆಗೆ ಕೈ ಹೊತ್ತು ನಿರಾಶಾತನದ ಕಣ್ಣುಗಳಿಂದ ಆಕಾಶ ದಿಟ್ಟಿ ನೋಡುತ್ತಾ ಕುಳಿತಾಗ ಹನಿ ಮೂಡಿ ಮಳೆ ಸುರಿದರೆ ಆ ರೈತನ ಮೊಗದಲಿ ಕಾಣುವ ಸಂಭ್ರಮ ವರ್ಣಿಸಲು ಅಸಾಧ್ಯ. ಶಾಲೆಯಿಂದ ಬರುವಾಗ ಮಳೆಯಲ್ಲಿ ನೆನೆಯುತ್ತಾ ಮನೆ ಸೇರುವುದೆ ಒಂದು ರೋಮಾಂಚನ. ಈಗಲೂ ಮಳೆಗೆ ಗೋತ್ತಿಲ್ಲದೆ ನಮ್ಮ ನಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಶಕ್ತಿಯಿದೆ. ಪ್ರತಿಯೊಬ್ಬರ ಜೀವನದಲ್ಲಿ ಮಳೆ ತನ್ನದೆಯಾದ ಪಾತ್ರ ನಿರ್ಮಿಸಿದೆ. ರಭಸದಿಂದ ಸುರಿಯುವ ಮಳೆ ಎಲ್ಲರಗೂ ಇಷ್ಟ. ಅದೆ ಜಿಟಿ ಜಿಟಿ ಜಿಟ್ಟು ಹಿಡಿಯುವ ಮಳೆ ಎಲ್ಲರಿಗೂ ತೊಂದರೆ. ಶಾಲೆ-ಕಾಲೇಜು ಆಫೀಸ್ ಕೆಲಸಕ್ಕೆ ಹೋಗುವವರಿಗೆ ಜಿಟಿ ಜಿಟಿ ಮಳೆ ತಲೆನೋವು. ಆದರೂ ಮಳೆ ಖುಷಿ ದುಃಖಕ್ಕೆ ಮೂಲವಾದರೂ, ಮಳೆ ಇಲ್ಲದೆ ಜೀವ ಸಂಕುಲ ಉಳಿಯಲಾರದು.
ನವೀನ್ ಕತ್ತಿ
ಎಸ್.ಸಿ.ಎಸ್.ಎಂ. ಕಾಲೇಜು,
ಧಾರವಾಡ